ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
15ನೇ ಅಧ್ಯಾಯ
1 : ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:
2 : “ನರಪುತ್ರನೇ, ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷದ ವಿಶಿಷ್ಟತೆಯೇನು? ಕಾಡುಗಿಡಗಳ ಕಟ್ಟಿಗೆಗಿಂತ ದ್ರಾಕ್ಷಿಯ ಕಟ್ಟಿಗೆಯಲಿ ಹೆಚ್ಚಾದುದೇನು?
3 : ದ್ರಾಕ್ಷಿಯ ಕಟ್ಟಿಗೆಯನ್ನು ಬಳಸಿ ಮಾಡುತ್ತಾರೆಯೆ ಏನನ್ನಾದರು? ಸಾಮಗ್ರಿಗಳನ್ನು ತಗಲಿಹಾಕಲು ಅದರಿಂದ ಮಾಡುತ್ತಾರೆಯೇ ಗೂಟವನ್ನಾದರು?
4 : ಇಲ್ಲ, ಬೆಂಕಿಗೆ ಹಾಕುತ್ತಾರೆ. ಸೌದೆಯಾಗಿ, ಅದನ್ನು ಬೆಂಕಿ ಸುಟ್ಟುಬಿಡುತ್ತದೆ. ಅದರ ಎರಡು ಕೊನೆಗಳೂ ಇದ್ದಲಾಗುತ್ತವೆ. ಅದರ ಮಧ್ಯಭಾಗವು ಬಾರದು ಯಾವ ತರದ ಬಳಕೆಗು.
5 : ಇದ್ದ ಹಾಗೆಯೆ ಇದ್ದಾಗ ಅದು ಬಾರಲಿಲ್ಲ ಯಾವ ಕೆಲಸಕ್ಕು. ಬೆಂಕಿಯಲ್ಲಿ ಸುಟ್ಟು ಇದ್ದಲಾದಾಗ ಯಾವುದಕ್ಕೆ ಬಂದೀತು?”
6 : ಇಂತಿರಲು ಸರ್ವೇಶ್ವರನಾದ ದೇವರು ಹೇಳುವುದಿದು: “ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷವನ್ನೆ ಅಗ್ನಿಗೆ ನಾನು ಸೌದೆಯನ್ನಾಗಿಸಿರುವಂತೆ ಕೊಟ್ಟಿರುವೆನು ಜೆರುಸಲೇಮನ್ನು ವಿನಾಶಕ್ಕೆ.
7 : ನಾನವರ ಮೇಲಿಡುವೆನು ಕೋಪ ದೃಷ್ಟಿಯನ್ನು; ಬೆಂಕಿಯಿಂದ ತಪ್ಪಿಸಿಕೊಂಡರೂ ನುಂಗಿಬಿಡುವುದು ಅದು ಅವರನ್ನು. ನಾನವರ ಮೇಲೆ ಕೋಪ ದೃಷ್ಟಿಯನ್ನಿಟ್ಟಾಗ ನಾನೇ ಸರ್ವೇಶ್ವರನೆಂದು ನಿಮಗೆ ಮನದಟ್ಟಾಗುವುದು.
8 : ಅವರು ದ್ರೋಹ ಮಾಡಿದ್ದರಿಂದ ನಾಡು ಕಾಡಾಗುವುದು ನನ್ನಿಂದ.” ಇದು ಸರ್ವೇಶ್ವರನಾದ ದೇವರ ನುಡಿ.