ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
24ನೇ ಅಧ್ಯಾಯ
- Verse 1: ಯೆಹೋವಾಷನು ಅರಸನಾದಾಗ ಅವನಿಗೆ ಏಳು ವರ್ಷ ವಯಸ್ಸು. ಅವನು ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದವಳಾದ ಚಿಬ್ಯಳು ಅವನ ತಾಯಿ.
- Verse 2: ಯಾಜಕ ಯೆಹೋಯಾದನ ಜೀವಮಾನದಲ್ಲೆಲ್ಲಾ ಅವನು ಸರ್ವೇಶ್ವರನ ಚಿತ್ತಾನುಸಾರ ನಡೆದುಕೊಳ್ಳುತ್ತಿದ್ದನು.
- Verse 3: ಯೆಹೋಯಾದನು ಅರಸನಿಗೆ ಇಬ್ಬರು ಕನ್ಯೆಯರನ್ನು ಮದುವೆಮಾಡಿ ಕೊಟ್ಟನು; ಅವರಿಂದ ಗಂಡು ಹೆಣ್ಣು ಮಕ್ಕಳು ಜನಿಸಿದರು.
- Verse 4: ಕ್ರಮೇಣ ಯೆಹೋವಾಷನು ಸರ್ವೇಶ್ವರನ ಆಲಯವನ್ನು ದುರಸ್ತಿಮಾಡಿಸುವುದಕ್ಕೆ ಮನಸ್ಸುಮಾಡಿದನು.
- Verse 5: ಯಾಜಕರನ್ನೂ ಲೇವಿಯರನ್ನೂ ಕೂಡಿಸಿ ಅವರಿಗೆ, “ನೀವು ಜುದೇಯದ ಪಟ್ಟಣಗಳಿಗೆ ಹೋಗಿ ನಿಮ್ಮ ದೇವರಾದ ಸರ್ವೇಶ್ವರನ ಆಲಯದ ವಾರ್ಷಿಕ ದುರಸ್ತಿಯ ಖರ್ಚಿಗಾಗಿ ಎಲ್ಲ ಇಸ್ರಯೇಲರಿಂದ ಹಣ ಕೂಡಿಸಿರಿ; ಈ ಕಾರ್ಯವನ್ನು ಶೀಘ್ರವಾಗಿ ನೆರವೇರಿಸಿರಿ,” ಎಂದು ಆಜ್ಞಾಪಿಸಿದನು.
- Verse 6: ಆದರೂ ಆ ಲೇವಿಯರು ಅವಸರಪಡಲಿಲ್ಲ. ಆದುದರಿಂದ ಅರಸನು ಅವರ ಮುಖ್ಯಸ್ಥನಾದ ಯೆಹೋಯಾದನನ್ನು ಕರೆಯಿಸಿ, “ಸರ್ವೇಶ್ವರನ ದಾಸನಾದ ಮೋಶೆಯ ವಿಧಿಗನುಸಾರ ಇಸ್ರಯೇಲ್ ಸಮಾಜದವರೆಲ್ಲರು ದೇವದರ್ಶನದ ಗುಡಾರಕ್ಕೆ ಕೊಡಬೇಕಾದ ಕಾಣಿಕೆಯನ್ನು ಈ ಲೇವಿಯರು ಯೆಹೂದ್ಯರಿಂದಲೂ ಜೆರುಸಲೇಮಿನ ಜನರಿಂದಲೂ ವಸೂಲಿ ಮಾಡುವಂತೆ ನೀನೇಕೆ ನೋಡಿಕೊಳ್ಳಲಿಲ್ಲ?
- Verse 7: ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಸರ್ವೇಶ್ವರನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳ್ದೇವತೆಗಳಿಗಾಗಿ ಕೊಟ್ಟುಬಿಟ್ಟಿದ್ದಾರಲ್ಲವೇ?,” ಎಂದು ಹೇಳಿದನು.
- Verse 8: ಅನಂತರ ಅರಸನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ಸರ್ವೇಶ್ವರನ ಆಲಯದ ಬಾಗಿಲಿನ ಹೊರಗೆ ಇರಿಸಿದನು.
- Verse 9: ದೇವರ ದಾಸ ಮೋಶೆಯು ಮರುಭೂಮಿಯಲ್ಲಿ ವಿಧಿಸಿದಂತೆ ಇಸ್ರಯೇಲರು ಸರ್ವೇಶ್ವರನಿಗೆ ಕೊಡಬೇಕಾದ ಕಾಣಿಕೆಯನ್ನು ತಂದುಕೊಡಬೇಕು ಎಂಬುದಾಗಿ ಜುದೇಯದಲ್ಲೂ ಜೆರುಸಲೇಮಿನಲ್ಲೂ ಪ್ರಕಟಿಸಿದನು.
- Verse 10: ಎಲ್ಲ ಮುಖ್ಯಸ್ಥರೂ ಜನಸಾಮಾನ್ಯರೂ ಸಂತೋಷದಿಂದ, ಬೇಕಾಗುವಷ್ಟು ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕಿದರು.
- Verse 11: ಪೆಟ್ಟಿಗೆ ತುಂಬಾ ಹಣವಿರುತ್ತದೆಂದು ಕಂಡುಬಂದಾಗಲೆಲ್ಲಾ ಲೇವಿಯರು ಪೆಟ್ಟಿಗೆಯನ್ನು ಆಸ್ಥಾನದ ಅಧಿಕಾರಿಗಳ ಬಳಿಗೆ ತರುತ್ತಿದ್ದರು. ಆಗ ಅರಸನ ಕಾರ್ಯದರ್ಶಿಯೂ ಮಹಾಯಾಜಕನ ಪ್ರತಿನಿಧಿಯೂ ಬಂದು ಅದನ್ನು ತೆರವು ಮಾಡಿ ಮತ್ತೆ ಅದರ ಸ್ಥಳದಲ್ಲಿಡುತ್ತಿದ್ದರು. ಅವರು ಪ್ರತಿದಿನವೂ ಈ ಪ್ರಕಾರ ಮಾಡುತ್ತಿದ್ದುದರಿಂದ ಬಹಳ ಹಣವನ್ನು ಸಂಗ್ರಹಿಸಲಾಯಿತು.
- Verse 12: ಅರಸನೂ ಯೆಹೋಯಾದನೂ ಅದನ್ನು ಸರ್ವೇಶ್ವರನ ಆಲಯದ ಕೆಲಸವನ್ನು ನಡೆಸುವವರಿಗೆ ಒಪ್ಪಿಸಿದರು. ಇವರು ಸರ್ವೇಶ್ವರನ ಆಲಯದ ದುರಸ್ತಿ ಕೆಲಸಕ್ಕಾಗಿ, ಶಿಲ್ಪಿಗಾರರನ್ನೂ ಬಡಗಿಯರನ್ನೂ ಅದನ್ನು ಭದ್ರಪಡಿಸುವುದಕ್ಕಾಗಿ ಕಮ್ಮಾರರನ್ನೂ ಕಂಚುಗಾರರನ್ನೂ ಹಚ್ಚಿದರು.
- Verse 13: ಕೆಲಸ ಮಾಡುವವರು ಬಹು ಶ್ರಮವಹಿಸಿದ್ದರಿಂದ ದುರಸ್ತಿ ಕೆಲಸ ಮುಂದುವರೆಯಿತು. ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು.
- Verse 14: ಕೆಲಸ ಮುಗಿದಾಗ ಅವರು ಉಳಿದ ಹಣವನ್ನು ಅರಸನಿಗೂ ಯೆಹೋಯಾದನಿಗೂ ಒಪ್ಪಿಸಿದರು. ಇವರು ಅದರಿಂದ ಸರ್ವೇಶ್ವರನ ಆಲಯದಲ್ಲಿ ನಡೆವ ಆರಾಧನೆಗೆ ಹಾಗು ಬಲಿಯರ್ಪಣೆಗೆ ಉಪಯೋಗವಾಗುವ ಧೂಪಾರತಿ, ಬೆಳ್ಳಿಬಂಗಾರದ ಪಾತ್ರೆ, ಮೊದಲಾದ ಸಾಮಾನುಗಳನ್ನು ಮಾಡಿಸಿದರು. ಯೆಹೋಯಾದನ ಜೀವಮಾನದಲ್ಲೆಲ್ಲಾ ಸರ್ವೇಶ್ವರನ ಆಲಯದಲ್ಲಿ ಪ್ರತಿನಿತ್ಯವೂ ದಹನಬಲಿ ಸಮರ್ಪಣೆ ಆಗುತ್ತಿತ್ತು.
- Verse 15: ಅವನು ಮುಪ್ಪಿನ ಮುದುಕನಾಗಿ ಮರಣಹೊಂದಿದನು. ಸಾಯುವಾಗ ಅವನಿಗೆ ನೂರಮೂವತ್ತು ವರ್ಷವಾಗಿತ್ತು.
- Verse 16: ಅವನು ಇಸ್ರಯೇಲರ ವಿಷಯದಲ್ಲೂ ದೇವರ ಮತ್ತು ದೇವಾಲಯದ ವಿಷಯದಲ್ಲೂ ಹಲವಾರು ಸತ್ಕಾರ್ಯಗಳನ್ನು ಮಾಡಿದ್ದರಿಂದ ಅವನ ಶವವನ್ನು ದಾವೀದ ನಗರದೊಳಗೆ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು.
- Verse 17: ಯೆಹೋಯಾದನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು.
- Verse 18: ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸ ತೊಡಗಿದರು. ಅವರ ಈ ಅಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವಕೋಪ ಎರಗಿತು.
- Verse 19: ಸರ್ವೇಶ್ವರ ಅವರನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಇವರ ಮುಖಾಂತರ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ.
- Verse 20: ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನುದೇವಾತ್ಮನಿಂದ ಆವೇಶ ಉಳ್ಳವನಾದನು. ಅವನು ಜನರ ಎದುರಿಗೆ ಉನ್ನತಸ್ಥಾನದಲ್ಲಿ ನಿಂತು, “ದೇವರ ಮಾತನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ನಾಶಮಾಡಿಕೊಳ್ಳುತ್ತೀರಿ? ನೀವು ಸರ್ವೇಶ್ವರಸ್ವಾಮಿಯನ್ನು ಬಿಟ್ಟದ್ದರಿಂದ ಅವರೂ ನಿಮ್ಮನ್ನು ಬಿಟ್ಟುಬಿಟ್ಟಿದ್ದಾರೆ,” ಎಂದನು.
- Verse 21: ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ,ಸರ್ವೇಶ್ವರನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು.
- Verse 22: ಜೆಕರ್ಯನ ತಂದೆ ಯೆಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಸರ್ವೇಶ್ವರಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ,” ಎಂದನು.
- Verse 23: ವರ್ಷಾಂತ್ಯದಲ್ಲಿ ಸಿರಿಯಾದ ಸೈನ್ಯ ಯೆಹೋವಾಷನ ಮೇಲೆ ದಾಳಿಮಾಡಲು ಹೊರಟಿತು. ಆ ಸೈನ್ಯದವರು ಜುದೇಯ ನಾಡಿನೊಳಗೆ ನುಗ್ಗಿ ಜೆರುಸಲೇಮಿಗೆ ಬಂದು, ಇಸ್ರಯೇಲರ ಎಲ್ಲ ಜನಾಧಿಪತಿಗಳನ್ನು ನಿರ್ನಾಮಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.
- Verse 24: ಸಿರಿಯಾದ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟುಬಿಟ್ಟದ್ದರಿಂದ ಶಿಕ್ಷೆಗೆ ಗುರಿಯಾದರು. ತಮ್ಮದು ಮಹಾಸೈನ್ಯವಾಗಿದ್ದರೂ ಸಿರಿಯಾದವರ ಕೈಯಲ್ಲಿ ಸೋಲನ್ನು ಅನುಭವಿಸಿದರು; ಯೆಹೋವಾಷನಿಗೆ ದಂಡನೆಯಾಯಿತು.
- Verse 25: ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದನಗರದೊಳಗೆ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.
- Verse 26: ಅಮ್ಮೋನ್ದೇಶದ ಶಿಮ್ಯಾತೆಂಬಾಕೆಯ ಮಗ ಜಾಬಾದ್, ಮೋವಾಬ್ ದೇಶದ ಶಿಮ್ರೀತೆಂಬಾಕೆಯ ಮಗ ಯೆಹೋಜಾಬಾದ್ ಎಂಬವರೇ ಅವನಿಗೆ ವಿರೋಧವಾಗಿ ಒಳಸಂಚು ಮಾಡಿದವರು.
- Verse 27: ಅವನ ಮಕ್ಕಳ ವಿವರ, ಅವನಿಗೆ ವಿರುದ್ಧ ಹೇಳಲಾದ ಅನೇಕ ದೈವೋಕ್ತಿಗಳು ಹಾಗು ದೇವಾಲಯದ ದುರಸ್ತಿಯ ವೃತ್ತಾಂತ ಇವು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಅಮಚ್ಯನು ಅರಸನಾದನು.