ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
26ನೇ ಅಧ್ಯಾಯ
- Verse 1: ಜೀಫ್ಯರಲ್ಲಿ ಕೆಲವರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ದಾವೀದನು ಮರುಭೂಮಿಯ ಮೂಡಣ ದಿಕ್ಕಿನಲ್ಲಿರುವ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ; ಇದು ನಿಮಗೆ ಗೊತ್ತೇ?’ ಎಂದರು.
- Verse 2: ಆಗ ಸೌಲನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರಮಂದಿ ಸೈನಿಕರನ್ನು ಆರಿಸಿಕೊಂಡು ದಾವೀದನನ್ನು ಹುಡುಕುವುದಕ್ಕಾಗಿ ಜೀಫ್ ಮರುಭೂಮಿಗೆ ಹೋದನು.
- Verse 3: ಅದರ ಪೂರ್ವದಿಕ್ಕಿನಲ್ಲಿ ದಾರಿಯ ಬಳಿಯಲ್ಲಿರುವ ಹಕೀಲಾ ಬೆಟ್ಟದಲ್ಲಿ ಪಾಳೆಯ ಮಾಡಿಕೊಂಡನು. ಸೌಲನು ತನ್ನನ್ನು ಹಿಡಿಯುವುದಕ್ಕಾಗಿ ಮರುಭೂಮಿಗೆ ಬಂದಿದ್ದಾನೆಂಬ ಸುದ್ದಿ ಅಲ್ಲಿಯೇ ಇದ್ದ ದಾವೀದನಿಗೆ ಮುಟ್ಟಿತು.
- Verse 4: ಅವನು ಕೂಡಲೆ ಗೂಢಚಾರರನ್ನು ಕಳುಹಿಸಿ ಸೌಲನು ಇಳಿದುಕೊಂಡಿದ್ದ ಸ್ಥಳವನ್ನು ಖಚಿತಪಡಿಸಿಕೊಂಡನು.
- Verse 5: ಅನಂತರ ತಾನಾಗಿಯೇ ಸೌಲನ ಪಾಳೆಯದ ಹತ್ತಿರಕ್ಕೆ ಹೋಗಿ, ಸೌಲನು ಹಾಗು ನೇರನ ಮಗನಾದ ಅವನ ಸೇನಾಪತಿ ಅಬ್ನೇರನು ಮಲಗಿದ್ದ ಸ್ಥಳಗಳನ್ನು ಕಂಡುಹಿಡಿದನು. ಸೌಲನು ಬಂಡಿಗಳನ್ನು ಬಿಡುವ ಸ್ಥಳ ಮಧ್ಯದಲ್ಲಿ ಮಲಗಿದ್ದನು. ಅವನ ಸುತ್ತಲೂ ಸೈನಿಕರು ಇದ್ದರು.
- Verse 6: ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನು ಹಾಗು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಯನ್ನು ಉದ್ದೇಶಿಸಿ, “ನಿಮ್ಮಲ್ಲಿ ನನ್ನ ಸಂಗಡ ಸೌಲನ ಪಾಳೆಯಕ್ಕೆ ಯಾರು ಬರುವಿರಿ?” ಎಂದು ಕೇಳಿದನು. ಅದಕ್ಕೆ ಅಬೀಷೈಯು, “ನಾನು ಬರುತ್ತೇನೆ,” ಎಂದು ಉತ್ತರಕೊಟ್ಟನು.
- Verse 7: ದಾವೀದನು ಮತ್ತು ಅಬೀಷೈಯು, ರಾತ್ರಿಯಲ್ಲಿ ಆ ಪಾಳೆಯಕ್ಕೆ ಹೋದಾಗ ಸೌಲನು ಬಂಡಿಗಳ ಗುಂಪಿನ ಮಧ್ಯೆ ಮಲಗಿಕೊಂಡು ನಿದ್ರೆಮಾಡುತ್ತಿದ್ದನು. ಅವನ ಭರ್ಜಿಯನ್ನು ಅವನ ತಲೆಯ ಹತ್ತಿರ ನೆಲಕ್ಕೆ ತಿವಿದು ನಿಲ್ಲಿಸಲಾಗಿತ್ತು. ಅಬ್ನೇರನೂ ಸೈನಿಕರೂ ಅವನ ಸುತ್ತಲೂ ಮಲಗಿದ್ದರು.
- Verse 8: ಅಬೀಷೈಯು ದಾವೀದನಿಗೆ, “ದೇವರು ಈ ದಿನ ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾರೆ; ಅಪ್ಪಣೆಯಾಗಲಿ, ನಾನು ಭರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಕಚ್ಚಿಕೊಳ್ಳುವಂತೆ ತಿವಿಯುತ್ತೇನೆ. ಎರಡನೆಯ ಸಾರಿ ಹೊಡೆಯುವ ಅವಶ್ಯಕತೆ ಇರುವುದಿಲ್ಲ,” ಎಂದು ಹೇಳಿದನು.
- Verse 9: ಆದರೆ ದಾವೀದನು, “ಅವನನ್ನು ಕೊಲ್ಲಬೇಡ; ಸರ್ವೇಶ್ವರನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನೂ ನಿರಪರಾಧಿ ಎಂದು ಎಣಿಸಲ್ಪಡನು,” ಎಂದನು.
- Verse 10: ಇದಲ್ಲದೆ ದಾವೀದನು, “ಸರ್ವೇಶ್ವರನಾಣೆ, ಅವನು ಸರ್ವೇಶ್ವರನಿಂದಲೇ ಸಾಯುವನು; ಇಲ್ಲವೆ ಕಾಲತುಂಬಿ ಮರಣಹೊಂದುವನು; ಅಥವಾ ಯುದ್ಧದಲ್ಲಿ ಮಡಿಯುವನು.
- Verse 11: ತಮ್ಮ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಸರ್ವೇಶ್ವರನೇ ನನ್ನನ್ನು ತಡೆಯಲಿ. ಈಗ ಬಾ, ಅವನ ತಲೆಯ ಬಳಿಯಲ್ಲಿರುವ ಭರ್ಜಿಯನ್ನೂ ತಂಬಿಗೆಯನ್ನೂ ತೆಗೆದುಕೊಂಡು ಹೋಗೋಣ,” ಎಂದು ಹೇಳಿದನು.
- Verse 12: ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಭರ್ಜಿ ಹಾಗೂ ತಂಬಿಗೆಗಳನ್ನು ತೆಗೆದುಕೊಂಡು ಹೋದರು. ಯಾರೂ ಕಾಣಲಿಲ್ಲ; ಯಾರಿಗೂ ಗೊತ್ತಾಗಲಿಲ್ಲ, ಯಾರಿಗೂ ಎಚ್ಚರವಾಗಲಿಲ್ಲ. ಏಕೆಂದರೆ ಸರ್ವೇಶ್ವರ ಅವರಿಗೆ ಗಾಢನಿದ್ರೆಯನ್ನು ಬರಮಾಡಿದ್ದರು; ಒಬ್ಬರಿಗೂ ಎಚ್ಚರವಿಲ್ಲದೆ ಎಲ್ಲರು ಮೈಮರೆತು ನಿದ್ರೆಯಲ್ಲಿ ಮಗ್ನರಾಗಿದ್ದರು.
- Verse 13: ದಾವೀದನು ತನಗೂ ಪಾಳೆಯಕ್ಕೂ ತಕ್ಕಷ್ಟು ಅಂತರವಿರುವ ಹಾಗೆ ಸುರಕ್ಷಿತವಾದ ದೂರ ಸ್ಥಳಕ್ಕೆ ಹೋಗಿ ಗುಡ್ಡವನ್ನೇರಿ ತುದಿಯಲ್ಲಿ ನಿಂತನು.
- Verse 14: ಅಲ್ಲಿಂದ, “ಅಬ್ನೇರನೇ, ನನ್ನ ಮಾತು ಕೇಳಿಸುತ್ತಿದ್ದೇಯೋ?” ಎಂದು ನೇರನ ಮಗನಾದ ಅಬ್ನೇರನಿಗೂ ಸೈನಿಕರಿಗೂ ಕೇಳಿಸುವಂತೆ ಕೂಗಿದನು. ಅಬ್ನೇರನು, “ಅರಸನನ್ನು ಕೂಗುವ ನೀನಾರು?” ಎಂದು ಕೇಳಿದನು.
- Verse 15: ದಾವೀದನು ಅಬ್ನೇರನಿಗೆ, “ನೀನು ಶೂರನಲ್ಲವೇ? ಇಸ್ರಯೇಲರಲ್ಲಿ ನಿನಗೆ ಸಮನಾರು? ನೀನು ನಿನ್ನ ಒಡೆಯನಾದ ಅರಸನನ್ನು ಏಕೆ ಕಾಯಲಿಲ್ಲ? ಜನರಲ್ಲಿ ಒಬ್ಬನು ಒಳಗೆ ಹೊಕ್ಕು ನಿನ್ನ ಒಡೆಯನಾದ ಅರಸನನ್ನು ಕೊಲ್ಲಬೇಕೆಂದಿದ್ದನು.
- Verse 16: ನೀನು ಹೀಗೆ ಮಾಡುವುದು ಸರಿಯಲ್ಲ. ಸರ್ವೇಶ್ವರನಾಣೆ, ಅವರ ಅಭಿಷಿಕ್ತನಾಗಿರುವ ನಿಮ್ಮ ಒಡೆಯನನ್ನು ಕಾಯದಿರುವ ನೀವು ಮರಣಕ್ಕೆ ಪಾತ್ರರೆಂಬುದೇನೋ ನಿಜ. ಅರಸನ ತಲೆಯ ಬಳಿಯಲ್ಲಿದ್ದ ಭರ್ಜಿ, ತಂಬಿಗೆ ಏನಾದವೋ, ನೋಡು,” ಎಂದು ಕೂಗಿ ಹೇಳಿದನು.
- Verse 17: ಸೌಲನು ದಾವೀದನ ಸ್ವರದ ಗುರುತು ಹಿಡಿದನು. “ದಾವೀದನೇ, ನನ್ನ ಪುತ್ರನೇ, ಇದು ನಿನ್ನ ಸ್ವರವೇ?” ಎಂದು ಕೇಳಿದನು. ಅವನು, “ಅರಸನೇ, ನನ್ನ ಒಡೆಯನೇ, ಹೌದು, ನನ್ನ ಸ್ವರವೇ;
- Verse 18: ನನ್ನ ಒಡೆಯ, ತಮ್ಮ ಸೇವಕನನ್ನು ಈ ಪ್ರಕಾರ ಹಿಂಸಿಸುವುದೇಕೆ? ನಾನೇನು ಮಾಡಿದೆ? ಯಾವ ಪಾಪಕ್ಕೆ ಕೈಹಾಕಿದೆ?
- Verse 19: ನನ್ನ ಅರಸನಾದ ಒಡೆಯರು ದಯವಿಟ್ಟು ತಮ್ಮ ಸೇವಕನ ಮಾತುಗಳನ್ನು ಆಲಿಸಬೇಕು. ನಿಮ್ಮನ್ನು ನನಗೆ ವಿರೋಧವಾಗಿ ಎತ್ತಿ ಕಟ್ಟಿದವರು ಸರ್ವೇಶ್ವರನೇ ಆಗಿರುವ ಪಕ್ಷದಲ್ಲಿ ಅವರಿಗೆ ಗಮಗಮಿಸುವ ನೈವೇದ್ಯವನ್ನು ಸಮರ್ಪಿಸಬೇಕು. ಮನುಷ್ಯರಾಗಿದ್ದರೆ, ಈಗ ಅವರು ನನಗೆ ಸರ್ವೇಶ್ವರನ ಸೌಭಾಗ್ಯದಲ್ಲಿ ಪಾಲುಸಿಕ್ಕದಂತೆ, ‘ಹೋಗಿ ಅನ್ಯದೇವತೆಗಳನ್ನು ಪೂಜಿಸು’ ಎಂದು ನನ್ನನ್ನು ತಳ್ಳಿಬಿಟ್ಟಿದ್ದಾರೆ. ಆದುದರಿಂದ ಸರ್ವೇಶ್ವರನ ದೃಷ್ಟಿಯಲ್ಲಿ ಅವರು ಶಾಪಗ್ರಸ್ತರಾಗಲಿ!
- Verse 20: ಸರ್ವೇಶ್ವರನ ಸಾನ್ನಿಧ್ಯವಿಲ್ಲದಿರುವ ಈ ದೇಶದಲ್ಲಿ ನಾನು ರಕ್ತ ಚೆಲ್ಲಿ ಸಾಯುವಂಥಾಗದಿರಲಿ. ಅಕಟಾ, ಗುಡ್ಡಗಳಲ್ಲಿ ಕೌಜುಗವನ್ನು ಹಿಡಿಯಹೊರಟ ಬೇಟೆಗಾರನೋ ಎಂಬಂತೆ ಇಸ್ರಯೇಲರ ಅರಸ ಹೊರಟುಬಂದು ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾರಲ್ಲಾ!” ಎಂದನು.
- Verse 21: ಆಗ ಸೌಲನು, “ನಾನು ಪಾಪಮಾಡಿದೆ, ದಾವೀದನೇ, ನನ್ನ ಪುತ್ರನೇ, ಹಿಂದಿರುಗಿ ಬಾ; ಈ ದಿನ ನನ್ನ ಜೀವ ನಿನ್ನ ದೃಷ್ಟಿಯಲ್ಲಿ ಬಲು ಬೆಲೆಯುಳ್ಳದೆಂದು ಮಾನ್ಯವಾಯಿತು. ಆದುದರಿಂದ ನಾನು ಇನ್ನು ಮುಂದೆ ನಿನಗೆ ಕೇಡು ಮಾಡುವುದಿಲ್ಲ. ಈವರೆಗೆ ನಾನು ಮಾಡಿದ್ದು ಹುಚ್ಚುತನ ಹಾಗೂ ದೊಡ್ಡ ತಪ್ಪು,” ಎಂದು ಹೇಳಿದನು.
- Verse 22: ದಾವೀದನು, “ಅರಸರೇ, ಇಗೋ, ನಿಮ್ಮ ಭರ್ಜಿ ಇಲ್ಲಿದೆ; ಸೇವಕರಲ್ಲೊಬ್ಬನು ಬಂದು ತೆಗೆದುಕೊಂಡು ಹೋಗಲಿ.
- Verse 23: ಸರ್ವೇಶ್ವರ ಪ್ರತಿಯೊಬ್ಬನಿಗೂ ಅವನವನ ನೀತಿಸತ್ಯತೆಗಳಿಗೆ ಅನುಸಾರ ಫಲವನ್ನು ಕೊಡುವರು. ಅವರು ಈ ದಿನ ನಿಮ್ಮನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ ನೀವು ಸರ್ವೇಶ್ವರನ ಅಭಿಷಿಕ್ತರೆಂದು ನಾನು ನಿಮ್ಮ ಮೇಲೆ ಕೈಹಾಕಲಿಲ್ಲ.
- Verse 24: ನಾನು ಈ ದಿನ ನಿಮ್ಮ ಜೀವವನ್ನು ಮಾನ್ಯವಾದದ್ದೆಂಣಿಸಿದಂತೆ ಸರ್ವೇಶ್ವರ ನನ್ನ ಜೀವವನ್ನೂ ಮಾನ್ಯವಾದದ್ದೆಂದೆಣಿಸಿ ನನ್ನನ್ನು ಎಲ್ಲ ಇಕ್ಕಟ್ಟಿನಿಂದ ಬಿಡಿಸಲಿ,” ಎಂದನು.
- Verse 25: ಆಗ ಸೌಲನು ದಾವೀದನಿಗೆ, “ಪುತ್ರನೇ, ದಾವೀದನೇ, ದೇವರು ನಿನ್ನನ್ನು ಹರಸಲಿ! ನೀನು ಮಹಾಕಾರ್ಯಗಳನ್ನು ಸಾಧಿಸಿ ಯಶಸ್ವಿಯಾಗು,” ಎಂದು ಹೇಳಿ ತನ್ನ ಊರಿಗೆ ಹೊರಟನು; ದಾವೀದನು ತನ್ನ ದಾರಿ ಹಿಡಿದನು.