ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
13ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ನನಗೆ : “ನೀನು ಹೋಗಿ ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು.
- Verse 2: ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
- Verse 3: ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,” ಎಂಬುದಾಗಿ ಸರ್ವೇಶ್ವರ ಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು.
- Verse 4: ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,” ಎಂಬುದಾಗಿ ಸರ್ವೇಶ್ವರ ಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು.
- Verse 5: ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
- Verse 6: ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.
- Verse 7: ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
- Verse 8: ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ :
- Verse 9: “ಇದು ಸರ್ವೇಶ್ವರನಾದ ನನ್ನ ನುಡಿ - ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು.
- Verse 10: ಈ ದುಷ್ಟಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬರುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು.
- Verse 11: ಇಸ್ರಯೇಲ್ ವಂಶವೆಲ್ಲವು ಹಾಗು ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕ್ಟಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನಗೆ ಕಿವಿಗೊಡದೆಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 12: “ಯೆರೆಮೀಯನೇ, ನೀನು ಅವರಿಗೆ ಹೀಗೆಂದು ಸಾರು : ಇಸ್ರಯೇಲಿನ ದೇವರಾದ ಸರ್ವೇಶ್ವರ ಸ್ವಾಮಿಯ ಸಂದೇಶವನ್ನು ಕೇಳಿ - ‘ಪ್ರತಿಯೊಂದು ಕುಡಿಕೆಯು ದ್ರಾಕ್ಷಾರಸದಿಂದ ತುಂಬಿರುವುದು.’ ಆಗ ಅವರು ನಿನಗೆ - ‘ಪ್ರತಿಯೊಂದು ಕುಡಿಕೆ ದ್ರಾಕ್ಷಾರಸದಿಂದ ತುಂಬಿರುವುದು ಎಂಬುದು ನಮಗೆ ಗೊತ್ತಿಲ್ಲವೆ?’ ಎಂದು ಹೇಳುವರು.
- Verse 13: ಆಗ ನೀನು ಅವರಿಗೆ - ಸರ್ವೇಶ್ವರ ಸ್ವಾಮಿಯ ಈ ಸಂದೇಶವನ್ನು ಕೇಳಿ : ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಜೆರುಸಲೇಮಿನ ಎಲ್ಲ ನಿವಾಸಿಗಳನ್ನೂ, ಅಂತು ನಾಡಿನ ಜನರೆಲ್ಲರನ್ನೂ ಅಮಲಿನಿಂದ ಮತ್ತರಾಗುವಂತೆ ಮಾಡುವೆನು.
- Verse 14: ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ಹಾಗು ನಾಶಮಾಡದೆ ಬಿಡೆನು,’ ಇದು ಸರ್ವೇಶ್ವರನಾದ ನನ್ನ ನುಡಿ.”
- Verse 15: ಜನರೇ, ಕಿವಿಗೊಡಿ, ಹೆಮ್ಮೆಪಡಬೇಡಿ, ಸರ್ವೇಶ್ವರನೇ ನಿಮಗೆ ಕೊಡುವ ಆದೇಶ ಇದು :
- Verse 16: ನಿಮ್ಮ ದೇವರಾದ ಸರ್ವೇಶ್ವರನಿಗೆ ಸಲ್ಲಿಸಿ ಗೌರವವನ್ನು ಇಲ್ಲವಾದರೆ ಆತ ಬರಮಾಡುವನು ಸ್ವಲ್ಪಕಾಲದಲ್ಲೇ ಕತ್ತಲನ್ನು. ನಿಮ್ಮ ಕಾಲುಗಳು ಮುಗ್ಗರಿಸುವುವು ಮಬ್ಬಿನ ಗುಡ್ಡಗಳ ನಡುವೆ.
- Verse 17: ನೀವು ಕಿವಿಗೊಡದಿದ್ದರೆ ನಿಮ್ಮ ಗರ್ವದ ನಿಮಿತ್ತ ನನ್ನ ಮನ ಗೋಳಾಡುವುದು ಗುಟ್ಟಾಗಿ. ನೀವು ಸೆರೆಯಾಗಿ ಹೋಗುವುದರಿಂದ ಅಳುವೆನು ಸರ್ವೇಶ್ವರನ ಮುಂದೆ ಬಹಳವಾಗಿ. ನನ್ನ ಕಣ್ಣುಗಳಿಂದ ಕಂಬನಿ ಹರಿವುದು ಧಾರಾಕಾರವಾಗಿ.
- Verse 18: ಸರ್ವೇಶ್ವರ ನನಗೆ ಹೀಗೆಂದರು : “ರಾಜನಿಗೂ ರಾಜಮಾತೆಗೂ ಈ ವರ್ತಮಾನವನ್ನು ತಿಳಿಸು - ‘ನೀವು ಇಳಿದುಬಂದು ನೆಲದಲ್ಲಿ ಕುಳಿತುಕೊಳ್ಳಿ. ನಿಮ್ಮ ಚೆಲುವಾದ ಕಿರೀಟ ಬಿದ್ದುಹೋಗಿದೆ ತಲೆಯಿಂದ.
- Verse 19: ದಕ್ಷಿಣ ನಾಡಿನ ನಗರಗಳು ಮುತ್ತಿಗೆಗೆ ತುತ್ತಾಗಿವೆ. ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಜುದೇಯವೆಲ್ಲ ಸೆರೆಹೋಗಿದೆ; ಸಂಪೂರ್ಣವಾಗಿ ಸೆರೆಯಾಗಿದೆ’.”
- Verse 20: “ಜೆರುಸಲೇಮ್, ಕಣ್ಣೆತ್ತಿ ನೋಡು, ಉತ್ತರದಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ಅಂದವಾದ ಆ ನಿನ್ನ ಹಿಂಡು ಎಲ್ಲಿ?
- Verse 21: ನಿನ್ನೊಡನೆ ಗೆಳೆಯರಂತೆ ಬಾಳಲು ನೀನೇ ಪಳಗಿಸಿದವರನ್ನು ನಿನಗೆ ಒಡೆಯರನ್ನಾಗಿ ನಾನು ನೇಮಿಸುವಾಗ ಏನು ಹೇಳುವೆ? ಹೆರುವವಳಿಗೆ ಬರುವಂಥ ವೇದನೆ ಆಗ ನಿನಗೆ ಬರದೆ ಇರುವುದೆ?
- Verse 22: ಇವು ನನಗೇಕೆ ಸಂಭವಿಸಿದವು ಎಂದು ಮನದೊಳಗೇ ನೀನು ಅಂದುಕೊಳ್ಳುವೆ. ನೀನು ಮಾಡಿದುದು ಮಹಾಪಾಪ ! ಆದ್ದರಿಂದ ನಿನ್ನ ಉಡುಗೆಯನ್ನೇ ಕೀಳಲಾಗುವುದು. ನೀನು ಅತ್ಯಾಚಾರಕ್ಕೆ ಈಡಾಗುವೆ.
- Verse 23: ಎಥಿಯೋಪಿಯದವನು ತನ್ನ ಚರ್ಮದ ಬಣ್ಣವನ್ನು ಮಾರ್ಪಡಿಸಬಲ್ಲನೆ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸೀತೆ? ಅಂತೆಯೇ ದುಷ್ಟತನದಲ್ಲಿ ಅಷ್ಟಾಗಿ ನುರಿತ ನೀನು ಶಿಷ್ಟತನದಲ್ಲಿ ನಡೆಯಲಾರೆ.
- Verse 24: ಆದಕಾರಣ ಬಿರುಗಾಳಿ ಬಡಿದುಕೊಂಡುಹೋಗುವ ಒಣಹುಲ್ಲೋ ಎಂಬಂತೆ ಸರ್ವೇಶ್ವರನಾದ ನಾನು ನಿನ್ನನ್ನು ಚದರಿಸಿಬಿಡುವೆನು.
- Verse 25: ನೀನು ನನ್ನನ್ನು ಮರೆತುಬಿಟ್ಟು ಸುಳ್ಳನ್ನು ನಂಬಿದ್ದರಿಂದ ಇದೇ ನಿನಗೆ ಒದಗಲಿರುವ ಗತಿ. ಇದೇ ನಾನು ನಿನಗೆ ಅಳೆದುಕೊಡುವ ಪ್ರತೀಕಾರ.
- Verse 26: ನಿನ್ನ ಉಡುಗೆಯನ್ನು ನಿನ್ನ ಕಣ್ಮುಂದೆಯೇ ಕೀಳಿಸುವೆನು. ನೀನು ಅತ್ಯಾಚಾರಕ್ಕೆ ಈಡಾಗುವೆ.
- Verse 27: ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಕಾಮುಕತನವನ್ನು, ಕೀಳಾದ ನಿನ್ನ ಸೂಳೆಗಾರಿಕೆಯನ್ನು, ಗುಡ್ಡೆ, ಕಣಿವೆಗಳಲ್ಲಿ ನೀನು ನಡೆಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಜೆರುಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲಬೇಕು?”