पवित्र बाइबिल
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
28ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದೇನೆಂದರೆ:
- Verse 2: “ನನಗೆ ಸಮರ್ಪಿಸಬೇಕಾದ ಬಲಿಗಳನ್ನು, ಅಂದರೆ ದಹನಬಲಿಗಾಗಿ ಇಸ್ರಯೇಲರು ನನಗೆ ತರುವ ಆಹಾರವನ್ನು ತಕ್ಕ ಕಾಲದಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ವಿಧಿಸು.
- Verse 3: ಆ ವಿಷಯದಲ್ಲಿ ನೀನು ಅವರಿಗೆ ಹೀಗೆಂದು ಅಪ್ಪಣೆಮಾಡು:
- Verse 4: ‘ಪ್ರತಿದಿನ ನೀವು ಸರ್ವೇಶ್ವರನಿಗೆ ದಹನಬಲಿಗಾಗಿ ಬೆಳಿಗ್ಗೆ ಒಂದು ಕುರಿ, ಸಂಜೆ ಒಂದು ಕುರಿ ಹೀಗೆ ಎರಡು ಕಳಂಕರಹಿತವಾದ ಒಂದು ವರ್ಷದ ಕುರಿಗಳನ್ನು ಸಮರ್ಪಿಸಬೇಕು.
- Verse 5: ಬೆಳಿಗ್ಗೆ ಆ ಕುರಿಯೊಂದಿಗೆ ಧಾನ್ಯ ನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನು ಮತ್ತು ಮೂರು ಸೇರು ಗೋದಿಹಿಟ್ಟನ್ನು ಬೆರೆಸಿ ಸಮರ್ಪಿಸಬೇಕು.
- Verse 6: ನೀವು ಪ್ರತಿನಿತ್ಯವು ಸರ್ವೇಶ್ವರನಿಗೆ ಸುಗಂಧಕರವಾದ ಈ ದಹನಬಲಿಯನ್ನು ಮಾಡಬೇಕೆಂದು ಸೀನಾಯಿ ಬೆಟ್ಟದಲ್ಲೇ ನೇಮಕವಾಯಿತು.
- Verse 7: ಆ ಕುರಿಯೊಂದಿಗೆ ಪಾನದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ಮದ್ಯವನ್ನು ಪವಿತ್ರಸ್ಥಾನದಲ್ಲಿ ಪೀಠದ ಮೇಲೆ ಸುರಿಯಬೇಕು.
- Verse 8: ಸಂಜೆ ಎರಡನೇ ಕುರಿಯನ್ನು ದಹನಬಲಿ ಕೊಡುವಾಗ ಬೆಳಿಗ್ಗೆ ಮಾಡಿದಂತೆಯೇ ಅದರೊಂದಿಗೆ ಧಾನ್ಯ ಹಾಗು ಪಾನದ್ರವ್ಯಗಳನ್ನು ಸಮರ್ಪಿಸಬೇಕು.
- Verse 9: ‘ಪ್ರತಿದಿನ ಅರ್ಪಿಸಬೇಕಾದ ದಹನಬಲಿ ಹಾಗು ಅದಕ್ಕೆ ಸಂಬಂಧಿಸಿದ ಪಾನದ್ರವ್ಯ ಇವುಗಳ ಜೊತೆಗೆ
- Verse 10: ನೀವು ಸಬ್ಬತ್ ದಿನದಂದು ಹೆಚ್ಚಾಗಿ ಎರಡು ಕಳಂಕರಹಿತವಾದ ವರ್ಷದ ಕುರಿಗಳನ್ನು ಮತ್ತು ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಆರು ಸೇರು ಗೋದಿಹಿಟ್ಟನ್ನು ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು.
- Verse 11: ‘ಅಮಾವಾಸ್ಯೆಯಲ್ಲಿ ದಹನಬಲಿಗಾಗಿ ಕಳಂಕರಹಿತವಾದ ಟಗರು, ವರ್ಷದ ಎರಡು ಹೋರಿ, ಒಂದು ಟಗರು, ವರ್ಷದ ಏಳು ಕುರಿಗಳು - ಇವುಗಳನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 12: ಇವುಗಳ ಜೊತೆಗೆ ಧಾನ್ಯನೈವೇದ್ಯಕ್ಕಾಗಿ ಪ್ರತಿಯೊಂದು ಹೋರಿಗೆ ಒಂಬತ್ತು ಸೇರು, ಟಗರಿಗೆ ಆರು ಸೇರು,
- Verse 13: ಕುರಿಯೊಂದಕ್ಕೆ ಮೂರು ಸೇರು - ಈ ಮೇರೆಗೆ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಸಮರ್ಪಿಸಬೇಕು. ಇದು ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಯಾಗುವುದು.
- Verse 14: ಇವುಗಳಿಗೆ ತಕ್ಕ ಪಾನಾರ್ಪಣೆ ಯಾವುವೆಂದರೆ - ಒಂದೊಂದು ಹೋರಿಯೊಡನೆ ಮೂರು ಸೇರು, ಟಗರಿನೊಡನೆ ಎರಡು ಸೇರು, ಕುರಿಯೊಡನೆ ಒಂದು ಸೇರು ದ್ರಾಕ್ಷಾರಸ. ವರ್ಷದ ಪ್ರತಿ ಅಮಾವಾಸ್ಯೆಯಲ್ಲಿ ಹೀಗೆ ದಹನಬಲಿಯನ್ನು ಕೊಡಬೇಕು.
- Verse 15: ಅಮಾವಾಸ್ಯೆಯಲ್ಲಿ ದಹನಬಲಿಯನ್ನೂ ಅರ್ಪಿಸುವುದಲ್ಲದೆ ಪಾಪಪರಿಹಾರಕಬಲಿಗಾಗಿ ಒಂದು ಹೋತವನ್ನು ಸರ್ವೇಶ್ವರನಿಗೆ ಹೆಚ್ಚಾಗಿ ಸಮರ್ಪಿಸಬೇಕು.
- Verse 16: ‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಂದು ಸರ್ವೇಶ್ವರಸ್ವಾಮಿ ನೇಮಿಸಿದ ಪಾಸ್ಕಹಬ್ಬವಾಗಬೇಕು.
- Verse 17: ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಜಾತ್ರೆ ಆರಂಭವಾಗಬೇಕು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.
- Verse 18: ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನೂ ಮಾಡಬಾರದು.
- Verse 19: ಸರ್ವೇಶ್ವರನಿಗೆ ದಹನಬಲಿಗಾಗಿ ಎರಡು ಹೋರಿಗಳನ್ನೂ ಒಂದು ಟಗರನ್ನೂ ಹಾಗು ವರ್ಷದ ಏಳು ಕುರಿಗಳನ್ನೂ ಸಮರ್ಪಿಸಬೇಕು. ಈ ಪ್ರಾಣಿಗಳು ಕಳಂಕರಹಿತವಾಗಿರಬೇಕು.
- Verse 20: ಇವುಗಳ ಜೊತೆಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ತಂದುಕೊಡಬೇಕು. ಹೋರಿಗೆ ಒಂಬತ್ತು ಸೇರು, ಟಗರಿಗೆ ಆರು ಸೇರು,
- Verse 21: ಒಂದೊಂದು ಕುರಿಗೆ ಮೂರು ಸೇರು ಹೀಗೆ ತಂದುಕೊಡಬೇಕು.
- Verse 22: ಇದಲ್ಲದೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
- Verse 23: ನಿತ್ಯಗಟ್ಟಲೆಯಾಗಿ ಪ್ರತಿದಿನ ಬೆಳಿಗ್ಗೆ ಒಪ್ಪಿಸಲಾಗುವ ದಹನಬಲಿಯ ಜೊತೆಗೆ ಇವುಗಳನ್ನು ಸೇರಿಸಿ ಸಮರ್ಪಿಸಬೇಕು.
- Verse 24: ಆ ಏಳು ದಿನಗಳಲ್ಲೂ ದೈನಿಕ ದಹನಬಲಿಯನ್ನು ಮತ್ತು ಅದಕ್ಕೆ ಸೇರಿದ ಪಾನಾರ್ಪಣೆಯನ್ನು ಒಪ್ಪಿಸಬೇಕಲ್ಲದೆ ಮೇಲೆ ಹೇಳಿದ ಕ್ರಮದ ಮೇರೆಗೆ ಪ್ರತಿದಿನವೂ ದಹನಬಲಿ ರೂಪವಾಗಿ ಸರ್ವೇಶ್ವರನಿಗೆ ಅನ್ನಾರ್ಪಣೆ ಮಾಡಿ ಅವರಿಗೆ ಸುಗಂಧ ಸುವಾಸನೆಯನ್ನು ಉಂಟುಮಾಡಬೇಕು.
- Verse 25: ಏಳನೆಯ ದಿನದಲ್ಲೂ ಸಭೆ ಕೂಡಬೇಕು. ಆ ದಿನದಂದು ಯಾವ ದುಡಿಮೆಯನ್ನೂ ಮಾಡಬಾರದು.
- Verse 26: ‘ಪಾಸ್ಕವಾದ ಏಳು ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ನೈವೇದ್ಯ ಮಾಡಬೇಕು. ಆ ಪ್ರಥಮ ಫಲಾರ್ಪಣೆಯ ದಿನ ನೀವು ಯಾವ ದುಡಿಮೆಯನ್ನೂ ಮಾಡದೆ ದೇವಾರಾಧನೆಗಾಗಿ ಸಭೆಸೇರಬೇಕು.
- Verse 27: ಆ ದಿನ ಸರ್ವೇಶ್ವರನಿಗೆ ಸುಗಂಧ ಸುವಾಸನೆಯುಂಟು ಮಾಡುವುದಕ್ಕಾಗಿ ಎರಡು ಹೋರಿ, ಒಂದು ಟಗರು, ಹಾಗು ವರ್ಷದ ಏಳು ಕುರಿ ಇವುಗಳನ್ನು,
- Verse 28: ಹಾಗು ಧಾನ್ಯನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಹಿಟ್ಟನ್ನು ಅಂದರೆ, ಪ್ರತಿಯೊಂದು ಹೋರಿಗೆ ಒಂಬತ್ತು ಸೇರು,
- Verse 29: ಟಗರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನು;
- Verse 30: ಮತ್ತು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
- Verse 31: ಈ ಪ್ರಾಣಿಗಳೆಲ್ಲಾ ಕಳಂಕರಹಿತವಾಗಿರಬೇಕು. ದೈನಿಕ ದಹನಬಲಿ ಮತ್ತು ಅದಕ್ಕೆ ಸೇರಿದ ಧಾನ್ಯನೈವೇದ್ಯ ಇವುಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನಾರ್ಪಣೆಗಳನ್ನೂ ಸೇರಿಸಿ ಸಮರ್ಪಿಸಬೇಕು.