ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಎಜ್ರನು
9ನೇ ಅಧ್ಯಾಯ
- Verse 1: ಇದಾದನಂತರ ಮುಖ್ಯಸ್ಥರು ನನ್ನ ಬಳಿಗೆ ಬಂದು, “ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಈಜಿಪ್ಟರು, ಅಮೋರಿಯರು ಎಂಬ ಅನ್ಯದೇಶಗಳವರ ಪದ್ಧತಿಯನ್ನು ತೊರೆಯದೆ, ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿ,
- Verse 2: ಇಸ್ರಯೇಲರಲ್ಲಿ ಸಾಧಾರಣಜನರು, ಯಾಜಕರು, ಲೇವಿಯರು ತಮಗೆ ಹಾಗು ತಮ್ಮ ಗಂಡುಮಕ್ಕಳಿಗೆ ಅವರಿಂದ ಹೆಣ್ಣುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಗುತ್ತಿದೆ; ನಾಯಕರೇ, ಮುಖ್ಯಸ್ಥರೇ, ಈ ದ್ರೋಹಕ್ಕೆ ಮುಂದಾಳುಗಳಾಗುತ್ತಿದ್ದಾರೆ,” ಎಂದು ತಿಳಿಸಿದರು.
- Verse 3: ಈ ಸಮಾಚಾರವನ್ನು ಕೇಳಿದೊಡನೆ ನಾನು ಸಿಟ್ಟಿನಿಂದ ಬಟ್ಟೆಗಳನ್ನೂ ಮೇಲಂಗಿಯನ್ನೂ ಹರಿದುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆ.
- Verse 4: ಇಸ್ರಯೇಲ್ ದೇವರ ವಿಧಿಗಳ ಬಗ್ಗೆ ಗೌರವವಿದ್ದವರೆಲ್ಲರು ಸೆರೆಯಿಂದ ಬಂದವರ ದ್ರೋಹದ ಸಲುವಾಗಿ ಕಳವಳಗೊಂಡು, ನನ್ನನ್ನು ಕೂಡಿಕೊಂಡರು. ನಾನು ಸಂಧ್ಯಾನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಸ್ತಬ್ಧವಾಗಿ ಕುಳಿತುಕೊಂಡಿದ್ದೆ;
- Verse 5: ಆಮೇಲೆ ದೇಹದಂಡನೆ ಮಾಡುವುದನ್ನು ಬಿಟ್ಟು, ಹರಿದ ಬಟ್ಟೆವಸ್ತ್ರಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ, ನನ್ನ ದೇವರಾದ ಸರ್ವೇಶ್ವರನ ಕಡೆಗೆ ಕೈಗಳನ್ನೆತ್ತಿ ಹೀಗೆಂದು ಪ್ರಾರ್ಥಿಸಿದೆ:
- Verse 6: “ನನ್ನ ದೇವರೇ, ನಾನು ಮನಗುಂದಿದವನು ಆಗಿದ್ದೇನೆ; ನಿಮ್ಮ ಕಡೆಗೆ ಮುಖವನ್ನು ಎತ್ತುವುದಕ್ಕೆ ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ; ನಮ್ಮ ಅಪರಾಧ ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ!
- Verse 7: ನಾವು ನಮ್ಮ ಪಿತೃಗಳ ಕಾಲದಿಂದ ಇಂದಿನವರೆಗೂ ಮಹಾಪರಾಧಿಗಳೇ; ನಮ್ಮ ಪಾಪಗಳ ನಿಮಿತ್ತ ನಾವೂ ನಮ್ಮ ಅರಸರೂ ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಸಿಕ್ಕಿಬಿದ್ದೆವು. ಈಗಿರುವಂತೆ, ಕತ್ತಿಗೂ ಸೆರೆಗೂ ಸುಲಿಗೆಗೂ ಅಪಮಾನಕ್ಕೂ ಗುರಿ ಆದೆವು.
- Verse 8: ಆದರೂ ನಮ್ಮ ದೇವರಾದ ಸರ್ವೇಶ್ವರಾ, ಒಂದು ಕ್ಷಣ ನಮಗೆ ನೀವು ಪ್ರಸನ್ನರಾಗಿ ನಮ್ಮಲ್ಲಿ ಸ್ವಲ್ಪ ಜನರನ್ನಾದರೂ ರಕ್ಷಣೆಗಾಗಿ ಉಳಿಸಿ, ತಮ್ಮ ಪರಿಶುದ್ಧಸ್ಥಳದಲ್ಲಿ ಮೊಳೆಯುವಂತೆ, ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಬೆಳಗಿಸಿ, ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪಮಟ್ಟಿಗೆ ನವಜೀವವನ್ನು ಅನುಗ್ರಹಿಸಿದಿರಿ.
- Verse 9: ನಾವು ಗುಲಾಮರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವಾಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕಾಗಿ, ನಮಗೆ ನವಜೀವನ ಪ್ರಾಪ್ತವಾಗುವಂತೆ ಹಾಗು ಜುದೇಯದಲ್ಲೂ ಜೆರುಸಲೇಮಿನಲ್ಲೂ ನಮಗೆ ಅಭಯಾಶ್ರಯ ಸಿಕ್ಕುವಂತೆ, ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದೀರಿ.
- Verse 10: ಇಷ್ಟು ಉಪಕಾರವನ್ನು ಪಡೆದ ನಾವು ಬೇರೆ ಏನನ್ನು ತಾನೆ ಅರಿಕೆಮಾಡಿಕೊಳ್ಳೋಣ! ನಮ್ಮ ದೇವರೇ, ನಿಮ್ಮ ಆಜ್ಞೆಗಳನ್ನು ಉಲ್ಲಂಘಿಸಿದ್ದೇವೆ, ಅಕಟಾ!
- Verse 11: ನೀವು ನಿಮ್ಮ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ, ‘ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ನಾಡು ಅನ್ಯದೇಶಗಳವರ ಅಶುದ್ಧತ್ವದಿಂದಲೂ ಅವರ ವಿಗ್ರಹಗಳಿಂದಲೂ ಮಲಿನವಾಗಿದೆ. ಅದು ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಆ ವಿಗ್ರಹಗಳ ಅಸಹ್ಯತೆಯಿಂದ ತುಂಬಿದೆ.
- Verse 12: ಹೀಗಿರಲಾಗಿ, ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂಬಾರದು, ನಿಮ್ಮ ಗಂಡುಮಕ್ಕಳಿಗಾಗಿ ಅವರ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಲೂಬಾರದು. ಅವರಿಗೆ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ, ನೀವು ಬಲಗೊಂಡು, ಆ ನಾಡಿನ ಸಮೃದ್ಧಿಯನ್ನು ಅನುಭವಿಸಿ ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತ ಸೊತ್ತನ್ನಾಗಿ ಬಿಡುವಿರಿ’ ಎಂದು ಹೇಳಿದಿರಲ್ಲವೆ?
- Verse 13: ನಮ್ಮ ದುಷ್ಕರ್ಮ ಹಾಗು ಮಹಾಪರಾಧಗಳ ನಿಮಿತ್ತ ಇಷ್ಟೆಲ್ಲಾ ಕೇಡು ಬಂದಿದ್ದರೂ, ನಮ್ಮ ದೇವರಾದ ನೀವು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ, ನಮ್ಮಲ್ಲಿ ಇಷ್ಟುಮಂದಿಯನ್ನು ಉಳಿಸಿದ್ದೀರಿ;
- Verse 14: ಹೀಗಿರುವಲ್ಲಿ, ನಾವು ಪುನಃ ನಿಮ್ಮ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ವಿವಾಹ ಸಂಬಂಧ ಬೆಳೆಸುವುದು ಯೋಗ್ಯವೇ? ಹಾಗೆ ಮಾಡಿದರೆ, ನೀವು ನಮ್ಮ ಮೇಲೆ ರೌದ್ರಾವೇಶವುಳ್ಳವರಾಗಿ, ಯಾರೂ ತಪ್ಪಿಸಿಕೊಳ್ಳದಂತೆ ನಮ್ಮನ್ನು ಮುಗಿಸಿಬಿಡುವಿರಲ್ಲವೇ?
- Verse 15: ಸರ್ವೇಶ್ವರಾ, ಇಸ್ರಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀವು ಧರ್ಮಸ್ವರೂಪರೆಂದು ಸ್ಪಷ್ಟವಾಯಿತು. ನಾವಾದರೋ ನಿಮ್ಮ ದೃಷ್ಟಿಯಲ್ಲಿ ಅಪರಾಧಿಗಳು, ಈ ನಮ್ಮ ದುಷ್ಕೃತ್ಯದ ಸಲುವಾಗಿ ನಿಮ್ಮೆದುರಿನಲ್ಲಿ ನಿಲ್ಲಲಾರೆವು.”