ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
6ನೇ ಅಧ್ಯಾಯ
- Verse 1: ಬೆನ್ಯಮೀನ್ ಕುಲದವರೇ, ಜೆರುಸಲೇಮಿನಿಂದ ವಲಸೆಹೋಗಿರಿ. ತೆಕೋವದಲ್ಲಿ ಕೊಂಬನ್ನೂದಿರಿ. ಬೇತ್ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ. ಏಕೆಂದರೆ ಅತಿ ವಿನಾಶಕರವಾದ ವಿಪತ್ತು ಉತ್ತರದಿಂದ ತಲೆದೋರುತ್ತಿದೆ.
- Verse 2: ಸುಂದರವೂ, ಸೊಂಪಾದ ಹಸಿರುಗಾವಲಿಗೆ ಸಮಾನವೂ ಆದ ಸಿಯೋನ್ ನಗರ ನಾಶವಾಗಲಿದೆ.
- Verse 3: ವೈರಿಗಳಾದ ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರ ಎದುರಿಗೆ ಹಾಗೂ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು. ಪ್ರತಿಯೊಬ್ಬನೂ ತನಗೆ ಇಷ್ಟಬಂದ ಸ್ಥಳದಲ್ಲೇ ಮೇಯಿಸಿಬಿಡುವನು.
- Verse 4: ಅವರು : “ಸಿಯೋನಿಗೆ ವಿರುದ್ಧ ಯುದ್ಧಸನ್ನದ್ಧರಾಗಿರಿ. ಏಳಿ, ನಡುಮಧ್ಯಾಹ್ನದಲ್ಲೆ ಅದರ ಮೇಲೆ ನುಗ್ಗುವ. ಅಯ್ಯೋ, ಇದೇನು ಹೊತ್ತುಮೀರಿ ಹೋಗುತ್ತಿದೆ ಅಲ್ಲಾ, ಸಂಜೆಯ ನೆರಳು ಉದ್ದುದ್ದವಾಗುತ್ತಿದೆಯಲ್ಲಾ !
- Verse 5: ಎದ್ದು ರಾತ್ರಿಯಲ್ಲೆ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ,” ಎಂದುಕೊಳ್ಳುತ್ತಿದ್ದಾರೆ.
- Verse 6: ಸರ್ವಶಕ್ತನಾದ ಸರ್ವೇಶ್ವರ ಸ್ವಾಮಿ ಹೀಗೆ ಎನ್ನುತ್ತಾರೆ : “ಸಿಯೋನ್ ಸುತ್ತಣ ಮರಗಳನ್ನು ಕಡಿದುಬಿಡಿ. ಜೆರುಸಲೇಮ್ ಎದುರಿಗೆ ದಿಬ್ಬಗಳನ್ನು ಎಬ್ಬಿಸಿರಿ. ನೀವು ದಂಡಿಸಬೇಕಾದ ನಗರ ಇದುವೆ. ದರೋಡೆ ದಬ್ಬಾಳಿಕೆಗಳಿಂದ ಅದು ತುಂಬಿದೆ.
- Verse 7: ತೊಟ್ಟಿ ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ನಗರ ತನ್ನಲ್ಲಿನ ನೀಚತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ. ಇಲ್ಲಿಂದ ಕೇಳಿಬರುವುದೆಲ್ಲ ಹಿಂಸಾಚಾರದ ಹಾಗೂ ಕೊಳ್ಳೆಯ ಸುದ್ದಿಯೆ. ರೋಗ ರುಜಿನಗಳೂ ಗಾಯಹುಣ್ಣುಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತಿವೆ.
- Verse 8: ಜೆರುಸಲೇಮ್, ಎಚ್ಚರಿಕೆಯಿಂದ ನಡೆದುಕೊ. ಇಲ್ಲವಾದರೆ ನಾನು ನಿನ್ನನ್ನು ಅಗಲಿಬಿಡುವೆನು. ನಿನ್ನನ್ನು ಪಾಳುಬಿದ್ದ ನಿರ್ಜನ ಪ್ರದೇಶವಾಗಿಸುವೆನು.”
- Verse 9: ಸರ್ವಶಕ್ತರಾದ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದರು : “ಇಸ್ರಯೇಲಿನ ಅಳಿದುಳಿದವರನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯ್ದುಕೊ. ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನಿನ್ನ ಕೈಯನ್ನು ಮತ್ತೆ ರೆಂಬೆಗಳಿಗೆ ಹಾಕು.”
- Verse 10: ಅದಕ್ಕೆ ನಾನು, “ಅಯ್ಯೋ ! ಯಾರ ಸಂಗಡ ನಾನು ಮಾತಾಡಿ ಅವರು ಗಮನಿಸುವಂತೆ ಮಾಡಲಿ? ಅವರ ಕಿವಿ ಮಂದ . ಅವರು ಕೇಳಿಸಿಕೊಳ್ಳುವುದಿಲ್ಲ . ಸರ್ವೇಶ್ವರ ಆದ ನಿಮ್ಮ ಮಾತು ಎಂದರೆ ಅವರಿಗೆ ತಿರಸ್ಕಾರ. ಅದು ಅವರಿಗೆ ರುಚಿಸುವುದಿಲ್ಲ.
- Verse 11: ಆದಕಾರಣವೇ ನಿಮ್ಮ ಕೋಪ ನನ್ನಲ್ಲೂ ತುಂಬಿತುಳುಕುತ್ತಿದೆ. ಅದನ್ನು ತಡೆದು ನನಗೆ ಸಾಕಾಗಿದೆ,” ಎಂದೆನು. ಆಗ ಸರ್ವೇಶ್ವರ ನನಗೆ : “ಹಾಗಾದರೆ ಆ ಕೋಪವನ್ನು ಬೀದಿಯಲ್ಲಿನ ಮಕ್ಕಳ ಮೇಲೂ ಯುವಕರ ಕೂಟ಼ಗಳ ಮೇಲೂ ಕಾರಿಬಿಡು. ಗಂಡಹೆಂಡತಿಯರನ್ನೂ ಮುದುಕರನ್ನೂ ವಯೋವೃದ್ಧರನ್ನೂ ಅಪಹರಿಸಲಾಗುವುದು.
- Verse 12: ಅವರ ಹೆಂಡತಿ, ಮನೆ, ಹೊಲ, ಗದ್ದೆ ಎಲ್ಲವೂ ಅನ್ಯರ ಪಾಲಾಗುವುದು.” “ನಾಡಿನ ನಿವಾಸಿಗಳ ಮೇಲೆ ಕೈಮಾಡುವೆನೆಂಬುದು ಖಚಿತ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 13: ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಅನ್ಯಾಯವಾಗಿ ದೋಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರು ಮೋಸಮಾಡುತ್ತಾ ಇದ್ದಾರೆ.
- Verse 14: ಅವರು, ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಕೇವಲ ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ.
- Verse 15: ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾಗಿದ್ದರೂ ಎಳ್ಳಷ್ಟೂ ನಾಚಿಕೆ ಇಲ್ಲದಿದ್ದಾರೆ. ಅವರಿಗೆ ಲಜ್ಜೆಯ ಗಂಧವೂ ಇಲ್ಲ. ಆದಕಾರಣ ಬೇರೆಯವರಂತೆ ಅವರೂ ಬೀಳುವರು. ನಾನು ದಂಡಿಸುವಾಗ ಅವರು ಏಳಲಾಗದಂತೆ ಮುಗ್ಗರಿಸಿ ಬೀಳುವರು. ಇದು ಸರ್ವೇಶ್ವರನಾದ ನನ್ನ ನುಡಿ,” ಎಂದರು.
- Verse 16: ಸರ್ವೇಶ್ವರ ಸ್ವಾಮಿ ತಮ್ಮ ಜನರಿಗೆ : “ನೀವು ದಾರಿಗಳು ಕೂಡುವ ಸ್ಥಳಗಳಲ್ಲಿ ನಿಂತು ನೋಡಿ. ಸನಾತನ ಮಾರ್ಗಗಳು ಯಾವುವು? ಸನ್ಮಾರ್ಗ ಎಲ್ಲಿದೆ? ಎಂದು ವಿಚಾರಿಸಿರಿ. ಅದರಲ್ಲೆ ಮುನ್ನಡೆಯಿರಿ. ಆಗ ನಿಮಗೆ ಮನನೆಮ್ಮದಿ ದೊರಕುವುದು.” ಆದರೆ ಆ ಜನರು : “ಇಲ್ಲ, ನಾವು ಅದರಲ್ಲಿ ನಡೆಯುವುದೇ ಇಲ್ಲ” ಎಂದರು.
- Verse 17: ಸರ್ವೇಶ್ವರ ಸ್ವಾಮಿ ಕಾವಲುಗಾರರನ್ನು ನೇಮಿಸಿ, “ಕಹಳೆಯ ಕೂಗನ್ನು ಕೇಳಿ” ಎಂದರು. ಅವರು “ಇಲ್ಲ, ಕೇಳುವುದಿಲ್ಲ” ಎಂದು ಉತ್ತರಿಸಿದರು.
- Verse 18: ಆದುದರಿಂದ ಸರ್ವೇಶ್ವರ : “ರಾಷ್ಟ್ರಗಳೇ ಆಲಿಸಿ. ನನ್ನ ಜನರಿಗೆ ಸಂಭವಿಸಲಿರುವುದನ್ನು ಗಮನಿಸಿ.
- Verse 19: ಜಗವೇ ಕೇಳು. ಇದೋ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕೇಡನ್ನು ಬರಮಾಡುವೆನು. ಅವರ ಯೋಜನೆಗಳಿಗೆ ಅದೇ ತಕ್ಕ ಪ್ರತಿಫಲ.
- Verse 20: ಅವರು ಶೆಬದ ಧೂಪವನ್ನಾಗಲಿ, ದೂರದೇಶದ ಒಳ್ಳೆಯ ಸುಗಂಧವನ್ನಾಗಲಿ ತಂದು ನನಗೆ ಅರ್ಪಿಸುವುದರಿಂದ ನನಗೆ ಏನೂ ಪ್ರಯೋಜನವಿಲ್ಲ. ಅವರು ಒಪ್ಪಿಸುವ ದಹನಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಯಜ್ಞಬಲಿಗಳೂ ನನಗೆ ಇಷ್ಟವಿಲ್ಲ.
- Verse 21: ಆದಕಾರಣ ಈ ಜನರಿಗೆ ಅಡ್ಡಿಆತಂಕಗಳನ್ನು ಒಡ್ಡುವೆನು. ಹೆತ್ತವರೂ ಮಕ್ಕಳೂ ಎಡವಿಬೀಳುವರು, ನೆಂಟರಿಷ್ಟರೂ ನಾಶವಾಗಿ ಹೋಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”
- Verse 22: ಮತ್ತೆ ಸರ್ವೇಶ್ವರ ಸ್ವಾಮಿ, “ಇಗೋ, ಉತ್ತರದಿಂದ ಒಂದು ರಾಷ್ಟ್ರ ಬರುತ್ತಿದೆ. ಅದು ಮಹಾ ಬಲಿಷ್ಠ ರಾಷ್ಟ್ರ. ಜಗದ ಕಟ್ಟಕಡೆಯಿಂದ ಹೊರಟುಬರುತ್ತಿದೆ.
- Verse 23: ಅವರು ಬಿಲ್ಲನ್ನೂ ಈಟಿಯನ್ನೂ ಹಿಡಿದಿದ್ದಾರೆ. ಅವರು ಕ್ರೂರಿಗಳು, ನಿಷ್ಕರುಣಿಗಳು. ಅವರ ಧ್ವನಿ ಸಮುದ್ರದಂತೆ ಭೋರ್ಗರೆಯುತ್ತಿದೆ. ಕುದುರೆಗಳನ್ನು ಏರಿದ್ದಾರೆ. ಎಲೌ ಸಿಯೋನ್ ನಗರಿಯೇ, ಆ ಶತ್ರುಸೈನ್ಯ ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.”
- Verse 24: ಜೆರುಸಲೇಮಿನ ಜನರು : “ಈ ಸುದ್ದಿಯನ್ನು ಕೇಳಿದಾಗ ನಮ್ಮ ಕೈಗಳು ಜೋಲುಬಿದ್ದುವು. ಪ್ರಸವವೇದನೆಯಂಥ ಯಾತನೆ ನಮ್ಮನ್ನು ಆವರಿಸಿತು.
- Verse 25: ಊರ ಹೊರಗೆ ಹೋಗುವಂತಿಲ್ಲ, ದಾರಿಯಲ್ಲಿ ನಡೆಯುವಂತಿಲ್ಲ. ಸುತ್ತಮುತ್ತಲೂ ಶತ್ರುವಿನ ಕತ್ತಿ, ಎಲ್ಲೆಲ್ಲೂ ದಿಗಿಲು ಎಂದರೆ ದಿಗಿಲು!”
- Verse 26: ಸರ್ವೇಶ್ವರ ಜನರಿಗೆ : “ನನ್ನ ಪ್ರಜೆಯೆಂಬ ಕುವರಿಯೇ, ಗೋಣಿತಟ್ಟನ್ನು ಸುತ್ತಿಕೊ, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡವಳಂತೆ ದುಃಖಪಟ್ಟು ಘೋರವಾಗಿ ಪ್ರಲಾಪಮಾಡು. ಕೊಳ್ಳೆಗಾರ ತಟ್ಟನೆ ನಿನ್ನ ಮೇಲೆ ಬೀಳಲಿದ್ದಾನೆ ಎಂಬುದನ್ನು ಮನದಲ್ಲಿಡು.”
- Verse 27: ಸರ್ವೇಶ್ವರ ಯೆರೆಮೀಯನಿಗೆ ಹೀಗೆ ಎಂದರು : “ನಿನ್ನನ್ನು ನನ್ನ ಜನವೆಂಬ ಅದುರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ. ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.
- Verse 28: ಅವರೆಲ್ಲರು ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ತಾಮ್ರ, ಕಬ್ಬಿಣಕ್ಕೆ ಸಮಾನರು, ಎಲ್ಲರೂ ಕೇಡಿಗರು.
- Verse 29: ತಿದಿ ಬುಸುಬುಸುಗುಟ್ಟುತ್ತದೆ. ಸೀಸ ಉರಿಯಿಂದ ಸುಟ್ಟುಹೋಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ಅವನ ಶ್ರಮವೆಲ್ಲ ವ್ಯರ್ಥ. ಏಕೆಂದರೆ ಕಲ್ಮಷವನ್ನು ಅವನಿಂದ ತೆಗೆಯಲಾಗಲಿಲ್ಲ.
- Verse 30: ಸರ್ವೇಶ್ವರ ಆದ ನಾನು ಅವರನ್ನು ತಳ್ಳಿಬಿಟ್ಟಿರುವುದರಿಂದ ಅವರು ಕಂದುಬೆಳ್ಳಿ ಎನಿಸಿಕೊಳ್ಳುವರು.”