पवित्र बाइबिल
ಹಳೆಯ ಒಡಂಬಡಿಕೆ
2 ಸಮುವೇಲನು
12ನೇ ಅಧ್ಯಾಯ
- Verse 1: ಸರ್ವೇಶ್ವರಸ್ವಾಮಿ ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದರು. ಅವನು ದಾವೀದನ ಬಳಿಗೆ ಬಂದು ಹೀಗೆಂದು ಹೇಳಿದನು: “ಒಂದು ಊರಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬನು ಐಶ್ವರ್ಯವಂತ, ಇನ್ನೊಬ್ಬನು ಬಡವ.
- Verse 2: ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು.
- Verse 3: ಬಡವನಿಗೆ ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅದೂ ಕೊಂಡು ತಂದದ್ದು. ಅದನ್ನು ಅಕ್ಕರೆಯಿಂದ ಸಾಕುತ್ತಿದ್ದ. ಅದು ದೊಡ್ಡದಾಗುವವರೆಗೆ ಮಗುವಿನಂತೆ ಅವನ ಸಂಗಡ ಹಾಗೂ ಅವನ ಮಕ್ಕಳ ಸಂಗಡವೆ ಬೆಳೆಯುತ್ತಿತ್ತು. ಅವನೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು. ಅವನ ಎದೆಯ ಮೇಲೆಯೇ ಒರಗಿಕೊಂಡು ನಿದ್ರೆಮಾಡುತ್ತಿತ್ತು.
- Verse 4: ಒಂದು ದಿನ ಆ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕ ಬಂದ. ಆಗ ತನ್ನ ಕುರಿದನಗಳಿಂದ ಏನನ್ನೂ ಕೊಲ್ಲಲು ಆ ಐಶ್ವರ್ಯವಂತನಿಗೆ ಮನಸ್ಸಿಲ್ಲದೆ ಹೋಯಿತು. ಆ ಬಡವನ ಕುರಿಮರಿಯನ್ನೇ ಹಿಡಿದುಕೊಂಡು ಅತಿಥಿಗೋಸ್ಕರ ಅಡಿಗೆ ಮಾಡಿಸಿದ.”
- Verse 5: ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡುಕೋಪಗೊಂಡು ನಾತಾನನಿಗೆ, “ಸರ್ವೇಶ್ವರನಾಣೆ, ಆ ವ್ಯಕ್ತಿ ಸಾಯಲೇ ಬೇಕು.
- Verse 6: ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು,” ಎಂದನು.
- Verse 7: ಆಗ ನಾತಾನನು ದಾವೀದನನ್ನು ದಿಟ್ಟಿಸಿ, “ಆ ಮನುಷ್ಯ ನೀನೇ. ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಹೇಳುವುದು ಇದು: ‘ನಿನ್ನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದವನು ನಾನು; ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನೂ ನಾನೇ.
- Verse 8: ಇದಲ್ಲದೆ, ನಾನು ನಿನಗೆ ನಿನ್ನ ಯಜಮಾನನ ಮನೆಯನ್ನೂ ಅವನ ಮಡದಿಯರನ್ನೂ ನಿನ್ನ ಮಡಿಲಿಗೆ ಹಾಕಿದೆ. ಇಸ್ರಯೇಲ್ ಮತ್ತು ಯೆಹೂದ ಕುಲಗಳನ್ನು ನಿನ್ನ ವಶಕ್ಕೆ ಕೊಟ್ಟೆ. ಇದೂ ಸಾಲದಿದ್ದರೆ, ನಾನು ನಿನಗೆ ಇನ್ನೂ ಬೇಕಾದದ್ದನ್ನು ಕೊಡುತ್ತಿದ್ದೆ.
- Verse 9: ಹೀಗಿರಲು, ನೀನು ಸರ್ವೇಶ್ವರನಾದ ನನ್ನ ಆಜ್ಞೆಯನ್ನು ತಿರಸ್ಕರಿಸಿ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದೇಕೆ? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡೆ.
- Verse 10: ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದೆ; ಹಾಗು ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡೆ. ಆದ್ದರಿಂದ ಕತ್ತಿ ನಿನ್ನ ಮನೆಯನ್ನು ಬಿಟ್ಟು ತೊಲಗುವುದಿಲ್ಲ.
- Verse 11: ಸರ್ವೇಶ್ವರನಾದ ನನ್ನ ಮಾತನ್ನು ಕೇಳು: ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ನಿನ್ನೆದುರಿನಲ್ಲೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲೇ ಅವರ ಕೂಡ ಮಲಗುವನು.
- Verse 12: ನೀನು ಅದನ್ನು ಗುಪ್ತವಾಗಿ ಮಾಡಿದೆ. ನಾನು ಹೇಳುವ ಮಾತಾದರೋ ಇಸ್ರಯೇಲರೆಲ್ಲರ ಮುಂದೆ ಬಹಿರಂಗವಾಗಿ ನೆರವೇರುವುದು,’” ಎಂದನು.
- Verse 13: ಆಗ ದಾವೀದನು ನಾತಾನನಿಗೆ, “ನಾನು ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದ್ದೇನೆ,” ಎಂದು ಹೇಳಿದನು. ನಾತಾನನು ಅವನಿಗೆ, “ಸರ್ವೇಶ್ವರ ನಿನ್ನ ಪಾಪವನ್ನು ಕ್ಷಮಿಸಿದ್ದಾರೆ; ನೀನು ಸಾಯುವುದಿಲ್ಲ.
- Verse 14: ಆದರೂ ನೀನು ಈ ಕೃತ್ಯದಿಂದ, ಸರ್ವೇಶ್ವರನ ವೈರಿಗಳು ಅವರನ್ನು ಬಹಳವಾಗಿ ನಿಂದಿಸುವುದಕ್ಕೆ ಆಸ್ಪದಕೊಟ್ಟೆ. ಆದುದರಿಂದ ನಿನ್ನಿಂದ ಹುಟ್ಟಲಿರುವ ಮಗು ಸತ್ತುಹೋಗುವುದು,”
- Verse 15: ಎಂದು ಹೇಳಿ ಮನೆಗೆ ಹೊರಟು ಹೋದನು. ಊರೀಯನ ಹೆಂಡತಿಯಲ್ಲಿ ದಾವೀದನಿಗೆ ಹುಟ್ಟಿದ ಮಗು ಸರ್ವೇಶ್ವರನ ಶಿಕ್ಷೆಯಿಂದಾಗಿ ಬಹು ಅಸ್ವಸ್ಥವಾಯಿತು.
- Verse 16: ಆದುದರಿಂದ ದಾವೀದನು ಮಗುವಿಗಾಗಿ ದೇವರನ್ನು ಪ್ರಾರ್ಥಿಸುತ್ತಾ ಉಪವಾಸ ಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿ ಕಳೆಯುತ್ತಿದ್ದ.
- Verse 17: ಆಸ್ಥಾನದ ಅಧಿಕಾರಿಗಳು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ, ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
- Verse 18: ಏಳನೆಯ ದಿನದಲ್ಲಿ ಮಗು ಸತ್ತಿತು. ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು, “ಹುಡುಗನು ಜೀವದಿಂದಿದ್ದಾಗಲೇ ಅವರು ನಮ್ಮ ಸಂತಾಪವನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣವಾರ್ತೆಯನ್ನು ಅವರಿಗೆ ತಿಳಿಸಿದರೆ ಅವರು ತನಗೆ ಏನಾದರೂ ಕೇಡುಮಾಡಿಕೊಂಡಾರಲ್ಲವೇ?”, ಎಂದು ಮಾತಾಡಿಕೊಳ್ಳುತ್ತಿದ್ದರು.
- Verse 19: ಸೇವಕರು ಈ ಪ್ರಕಾರ ಗುಜುಗುಜು ಮಾತಾಡುವುದನ್ನು ದಾವೀದನು ಕಂಡು ಮಗು ಸತ್ತು ಹೋಯಿತೆಂದು ತಿಳಿದು, ಸೇವಕರನ್ನು, “ಮಗು ತೀರಿಕೊಂಡಿತೋ?,” ಎಂದು ಕೇಳಿದನು. ಅವರು “ಹೌದು, ತೀರಿಕೊಂಡಿತು,” ಎಂದು ಉತ್ತರಕೊಟ್ಟರು.
- Verse 20: ಆಗ ದಾವೀದನು ನೆಲದಿಂದೆದ್ದು, ಸ್ನಾನ ಮಾಡಿ ತೈಲ ಹಚ್ಚಿಕೊಂಡು, ತನ್ನ ಬಟ್ಟೆಗಳನ್ನು ಬದಲಿಸಿ, ಸರ್ವೇಶ್ವರನ ಮಂದಿರಕ್ಕೆ ಹೋಗಿ ಆರಾಧನೆ ಮಾಡಿದನು. ಅನಂತರ ಮನೆಗೆ ಬಂದು ಆಹಾರ ತರಿಸಿ ಊಟಮಾಡಿದನು.
- Verse 21: ಇದನ್ನು ನೋಡಿದ ಸೇವಕರು ಅವನಿಗೆ, “ಇದೇನು ನೀವು ಮಾಡಿದ್ದು? ಹುಡುಗ ಜೀವದಿಂದಿದ್ದಾಗ ಅಳುತ್ತಾ ಉಪವಾಸವಾಗಿದ್ದಿರಿ. ಹುಡುಗ ಸತ್ತ ನಂತರ ಎದ್ದು ಊಟಮಾಡಿದಿರಿ!” ಎಂದರು.
- Verse 22: ದಾವೀದನು ಅವರಿಗೆ, “ಹುಡುಗ ಜೀವದಿಂದಿದ್ದಾಗ ಒಂದು ವೇಳೆ ಸರ್ವೇಶ್ವರ ಕೃಪೆಮಾಡಿ ಅವನನ್ನು ಉಳಿಸಾರು ಎಂದುಕೊಂಡು ಉಪವಾಸ ಮಾಡಿದೆ, ಕಣ್ಣೀರಿಟ್ಟೆ.
- Verse 23: ಈಗ ಸತ್ತಿದ್ದಾನೆ ಅಲ್ಲವೆ? ನಾನೇಕೆ ಉಪವಾಸ ಮಾಡಬೇಕು? ಅವನನ್ನು ಹಿಂದಕ್ಕೆ ತರಲು ನನ್ನಿಂದಾದೀತೇ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವುದಿಲ್ಲ,” ಎಂದು ಉತ್ತರಕೊಟ್ಟನು.
- Verse 24: ದಾವೀದನು ತನ್ನ ಹೆಂಡತಿ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆ ಮಗನನ್ನು ಹೆತ್ತಾಗ ಅವನಿಗೆ ಸೊಲೊಮೋನೆಂದು ಹೆಸರಿಟ್ಟನು. ಸರ್ವೇಶ್ವರಸ್ವಾಮಿ ಆ ಹುಡುಗನನ್ನು ಪ್ರೀತಿಸಿದರು;
- Verse 25: ಪ್ರವಾದಿ ನಾತಾನನು, ಸರ್ವೇಶ್ವರನಿಂದ ಪಡೆದ ಆಜ್ಞೆಯಂತೆ ಅವರಿಗೋಸ್ಕರ, ಆ ಹುಡುಗನಿಗೆ ‘ಯೆದೀದ್ಯ’ ಎಂದು ಹೆಸರಿಟ್ಟನು.
- Verse 26: ಯೋವಾಬನು ಅಮ್ಮೋನಿಯರ ಪಟ್ಟಣವಾದ ರಬ್ಬಕ್ಕೆ ಮುತ್ತಿಗೆ ಹಾಕಿದನು. ಅರಮನೆ ಇದ್ದ ಭಾಗವನ್ನು ಸ್ವಾಧೀನಮಾಡಿಕೊಂಡನು.
- Verse 27: ದಾವೀದನಿಗೆ ದೂತರ ಮುಖಾಂತರ, “ನಾನು ರಬ್ಬಕ್ಕೆ ಮುತ್ತಿಗೆಹಾಕಿ ನೀರು ಪೂರೈಕೆಯ ಭಾಗವನ್ನು ಸ್ವಾಧೀನಮಾಡಿಕೊಂಡಿದ್ದೇನೆ.
- Verse 28: ನೀವು ಉಳಿದ ಸೈನ್ಯವನ್ನು ಬೇಗನೆ ಕೂಡಿಸಿಕೊಂಡು ಬಂದು ಪಟ್ಟಣಕ್ಕೆ ಮುತ್ತಿಗೆಹಾಕಿ ಉಳಿದ ಭಾಗವನ್ನು ಸ್ವಾಧೀನಪಡಿಸಿಕೊಳ್ಳಿ; ಅದನ್ನು ನಾನೇ ಹಿಡಿದುಕೊಂಡೆನೆಂಬ ಕೀರ್ತಿ ನನಗೆ ಬೇಡ,” ಎಂದು ಹೇಳಿಕಳುಹಿಸಿದನು.
- Verse 29: ಆಗ ದಾವೀದನು ಜನರೆಲ್ಲರನ್ನೂ ಕೂಡಿಸಿಕೊಂಡು ಹೋಗಿ ರಬ್ಬಕ್ಕೆ ಮುತ್ತಿಗೆಹಾಕಿ ಅದನ್ನು ವಶಮಾಡಿಕೊಂಡನು.
- Verse 30: ಇದಲ್ಲದೆ ಅವನು ಅವರ ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಮೂವತ್ತೈದು ಕಿಲೊಗ್ರಾಂ ತೂಕದ್ದು. ಅದರಲ್ಲಿದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು.
- Verse 31: ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಕೆಲಸ ಮಾಡುವುದಕ್ಕೂ ಇಟ್ಟಿಗೆಗಳನ್ನು ಸುಡುವುದಕ್ಕೂ ಹಚ್ಚಿದನು. ಅಮ್ಮೋನಿಯರ ಉಳಿದೆಲ್ಲ ಪಟ್ಟಣದವರಿಗೂ ಇದೇ ಗತಿ ಆಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಜೆರುಸಲೇಮಿಗೆ ಮರಳಿದನು.