வேதாகமம்
ಹಳೆಯ ಒಡಂಬಡಿಕೆ
2 ಅರಸುಗಳು
23ನೇ ಅಧ್ಯಾಯ
1 : ಅನಂತರ ಅರಸನು ದೂತರ ಮುಖಾಂತರ ಜೆರುಸಲೇಮಿನ ಮತ್ತು ಜುದೇಯ ಪ್ರಾಂತ್ಯದ ಬೇರೆ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು.
2 : ಜೆರುಸಲೇಮಿನವರನ್ನೂ ಪ್ರವಾದಿಗಳನ್ನೂ ಬೇರೆ ಎಲ್ಲಾ ಯೆಹೂದ್ಯರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಕರೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು. ಚಿಕ್ಕವರೂ ದೊಡ್ಡವರೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು.
3 : ಕಂಬದ ಬಳಿಯಲ್ಲಿ ನಿಂತು ತಾನು ಸರ್ವೇಶ್ವರನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞಾನಿಯಮವಿಧಿಗಳನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಕೈಕೊಳ್ಳುವುದಾಗಿಯೂ ಮತ್ತು ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಸರ್ವೇಶ್ವರನಿಗೆ ಪ್ರಮಾಣ ಮಾಡಿದನು. ಎಲ್ಲಾ ಜನರೂ ಹಾಗೆಯೇ ಪ್ರಮಾಣ ಮಾಡಿದರು.
4 : ತರುವಾಯ ಅವನು ಪ್ರಧಾನ ಯಾಜಕ ಹಿಲ್ಕೀಯನ, ಮುಖ್ಯ ಯಾಜಕರ ಹಾಗು ದ್ವಾರಪಾಲಕರ ಮುಖಾಂತರ ಬಾಳ್, ಅಶೇರ ಎಂಬ ದೇವತೆಗಳಿಗಾಗಿ ಹಾಗು ಆಕಾಶಸೈನ್ಯಗಳಿಗಾಗಿ ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಸರ್ವೇಶ್ವರನ ಆಲಯದಿಂದ ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಬೈಲಿನಲ್ಲಿ ಅವುಗಳನ್ನು ಸುಡಿಸಿ, ಆ ಬೂದಿಯನ್ನು ಬೇತೇಲಿಗೆ ಕಳುಹಿಸಿದನು.
5 : ಅದಲ್ಲದೆ, ಜುದೇಯ ಪ್ರಾಂತ್ಯದ ಪಟ್ಟಣಗಳಲ್ಲೂ ಜೆರುಸಲೇಮಿನ ಸುತ್ತಣ ಪ್ರದೇಶದಲ್ಲೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳ್ ದೇವತೆಗೂ ಸೂರ್ಯ ಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಾರತಿಯೆತ್ತುವುದಕ್ಕಾಗಿ ಜುದೇಯದ ರಾಜರಿಂದ ನೇಮಿತರಾಗಿದ್ದ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.
6 : ಸರ್ವೇಶ್ವರನ ಆಲಯದಲ್ಲಿದ್ದ ಅಶೇರವಿಗ್ರಹಸ್ತಂಭವನ್ನು ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅದನ್ನು ಸುಡಿಸಿ, ಪುಡುಪುಡಿಮಾಡಿಸಿ, ಆ ಪುಡಿಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಹಾಕಿಸಿದನು.
7 : ಸರ್ವೇಶ್ವರನ ಆಲಯದ ಪ್ರಾಕಾರದೊಳಗಿದ್ದ ವೇಶ್ಯಾವೃತ್ತಿಯವರ ಮನೆಗಳನ್ನು ಕೆಡವಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ ದೇವತೆಗಾಗಿ ಬಟ್ಟೆಬರೆಗಳನ್ನು ನೇಯುತ್ತಿದ್ದರು.
8 : ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಜುದೇಯದ ಪಟ್ಟಣಗಳ ಯಾಜಕರನ್ನೆಲ್ಲಾ ಕರೆಯಿಸಿಕೊಂಡು ಅವರು ಧೂಪಸುಡುತ್ತಿದ್ದ ಪೂಜಾಸ್ಥಳಗಳನ್ನು ಹೊಲೆಮಾಡಿದನು. ಪುರಾಧಿಕಾರಿ ಯೆಹೋಶುವನ ಬಾಗಿಲಿನ ಎಡಗಡೆಯಲ್ಲಿದ್ದ ದ್ವಾರದೇವತೆಗಳ ಪೂಜಾ ಸ್ಥಳಗಳನ್ನು ಕೆಡವಿಬಿಟ್ಟನು.
9 : ಆ ಪೂಜಾಸ್ಥಳಗಳಿಂದ ಬಂದ ಯಾಜಕರಿಗೆ, ಇತರ ಯಾಜಕರೊಡನೆ ಹುಳಿಯಿಲ್ಲದ ರೊಟ್ಟಿಗಳಲ್ಲಿ ಪಾಲುಸಿಕ್ಕುತ್ತಿದ್ದರೂ ಜೆರುಸಲೇಮಿನಲ್ಲಿ ಇದ್ದ ಸರ್ವೇಶ್ವರನ ಬಲಿಪೀಠದ ಸಮೀಪಕ್ಕೆ ಹೋಗುವುದಕ್ಕೆ ಅಪ್ಪಣೆಯಿರಲಿಲ್ಲ.
10 : ತಮ್ಮ ಗಂಡುಹೆಣ್ಣುಮಕ್ಕಳನ್ನು ಯಾರೂ ಮೋಲೆಕನಿಗಾಗಿ ಬಲಿಯಗ್ನಿಪರೀಕ್ಷೆಗೆ ಈಡುಮಾಡದಂತೆ ಬೆನ್ಹಿನ್ನೋಮ್ ಕಣಿವೆಯಲ್ಲಿದ್ದ ತೋಫೆತ್ ಎಂಬ ಸ್ಥಳವನ್ನು ಹೊಲೆಮಾಡಿದನು.
11 : ಜುದೇಯದ ರಾಜರು ಸೂರ್ಯದೇವತೆಗಾಗಿ ಪ್ರತಿಷ್ಠಿಸಿದ್ದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಡಿಸಿಬಿಟ್ಟನು. ಅವು ಸರ್ವೇಶ್ವರನ ಆಲಯದ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲಾಗಿದ್ದವು.
12 : ಇದಲ್ಲದೆ ಜುದೇಯದ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಬಲಿಪೀಠಗಳನ್ನು ಹಾಗು ಮನಸ್ಸೆಯು ಸರ್ವೇಶ್ವರನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ್ದ ಬಲಿಪೀಠಗಳನ್ನು ಕೆಡವಿ ಪುಡಿಪುಡಿಮಾಡಿ ಅವುಗಳ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು.
13 : ಇಸ್ರಯೇಲರ ಅರಸ ಸೊಲೊಮೋನನು ಸಿದೋನ್ಯರ ಅಷ್ಟೋರೆತ್, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಜೆರುಸಲೇಮಿನ ಎದುರಿನಲ್ಲೂ ಎಘ್ನಪರ್ವತದ ದಕ್ಷಿಣದಿಕ್ಕಿನಲ್ಲೂ ಸ್ಥಾಪಿಸಿದ ಪೂಜಾಸ್ಥಳಗಳನ್ನು ಇವನು ಹೊಲೆಮಾಡಿದನು.
14 : ಕಲ್ಲುಗಂಬಗಳನ್ನು ಒಡೆದುಹಾಕಿ, ಅಶೇರ ವಿಗ್ರಹಸ್ತಂಭಗಳನ್ನು ಕಡಿದುಬಿಟ್ಟು, ಅವುಗಳಿದ್ದ ಸ್ಥಳವನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.
15 : ಇದಲ್ಲದೆ ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನು ಬೇತೇಲಿನಲ್ಲಿ ಏರ್ಪಡಿಸಿದ ಪೂಜಾಸ್ಥಳವನ್ನೂ ಅದರಲ್ಲಿದ್ದ ಬಲಿಪೀಠವನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನೂ ಸುಟ್ಟು ಬೂದಿಮಾಡಿದನು.
16 : ಅವನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡದಲ್ಲಿ ಸಮಾಧಿಗಳನ್ನು ಕಂಡು ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ, ಆ ಬಲಿಪೀಠದ ಮೇಲೆ ಸುಡಿಸಿ ಅದನ್ನು ಹೊಲೆಮಾಡಿದನು. ಹೀಗೆ ದೈವಪುರುಷನೊಬ್ಬನು ಪ್ರಕಟಿಸಿದ ಸರ್ವೇಶ್ವರನ ವಾಕ್ಯ ನೆರವೇರಿತು.
17 : ಇದಲ್ಲದೆ, ಅವನು ಒಂದು ಸಮಾಧಿ ಶಿಲೆಯನ್ನು ಕಂಡು ಅದೇನೆಂದು ವಿಚಾರಿಸಿದನು. ಆ ಊರಿನವರು, “ನೀವು ಈಗ ಬೇತೇಲಿನ ಬಲಿಪೀಠಕ್ಕೆ ಮಾಡಿದ್ದನ್ನು ಮುಂತಿಳಿಸಿದ್ದ ಜುದೇಯ ನಾಡಿನವನಾದ ದೈವಪುರುಷನ ಸಮಾಧಿ ಇದು,” ಎಂದು ಉತ್ತರಕೊಟ್ಟನು.
18 : ಆಗ ಅವನು, “ಬಿಡಿ, ಆ ಪುರುಷನ ಎಲುಬುಗಳನ್ನು ಯಾರೂ ಮುಟ್ಟಬಾರದು,” ಎಂದು ಹೇಳಿದನು. ಆದುದರಿಂದ ಅವರು ಅವನ ಮತ್ತು ಸಮಾರಿಯ ನಾಡಿನ ಪ್ರವಾದಿಯ ಎಲುಬುಗಳನ್ನು ಮುಟ್ಟಲಿಲ್ಲ.
19 : ಇಸ್ರಯೇಲ್ ರಾಜರು ಸಮಾರಿಯ ಪಟ್ಟಣಗಳಲ್ಲಿ ಕಟ್ಟಿಸಿದಂಥ ಹಾಗು ಸರ್ವೇಶ್ವರನ ಕೋಪಕ್ಕೆ ಕಾರಣವಾಗಿದ್ದಂಥ ಪೂಜಾಸ್ಥಳಗಳಲ್ಲಿದ್ದ ಗುಡಿಗಳಿಗೆ ಬೇತೇಲಿಗಾದ ಗತಿಯೇ ಆಯಿತು.
20 : ಯೋಷೀಯನು ಅವುಗಳನ್ನು ಕೆಡವಿಬಿಟ್ಟು, ಅವುಗಳ ಪೂಜಾರಿಗಳನ್ನು ಬಲಿಪೀಠಗಳ ಮೇಲೆ ವಧಿಸಿ ಮನುಷ್ಯರ ಎಲುಬುಗಳನ್ನು ಅವುಗಳ ಮೇಲೆ ಸುಡಿಸಿ ಜೆರುಸಲೇಮಿಗೆ ಹಿಂದಿರುಗಿ ಹೋದನು.
21 : ಅನಂತರ ಅರಸನು ಜನರೆಲ್ಲರಿಗೆ, ನಿಬಂಧನ ಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೋಸ್ಕರ ಪಾಸ್ಕಹಬ್ಬವನ್ನು ಆಚರಿಸಬೇಕು ಎಂದು ಆಜ್ಞಾಪಿಸಿದನು.
22 : ಇಂಥ ಪಾಸ್ಕಹಬ್ಬವು ಇಸ್ರಯೇಲರನ್ನು ಪಾಲಿಸಿದ ನ್ಯಾಯಸ್ಥಾಪಕರ ಕಾಲದಲ್ಲಾಗಲಿ ಇಸ್ರಯೇಲರ ಮತ್ತು ಜುದೇಯದ ಅರಸರ ಕಾಲದಲ್ಲಾಗಲಿ ನಡೆದಿರಲಿಲ್ಲ.
23 : ಈ ಹಬ್ಬವನ್ನು ಅರಸ ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಜೆರುಸಲೇಮಿನಲ್ಲಿ ಸರ್ವೇಶ್ವರನಿಗೋಸ್ಕರ ಆಚರಿಸಲಾಯಿತು.
24 : ಇದಲ್ಲದೆ, ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನೂ ಬೈತಾಳಿಕರನ್ನೂ ಜೆರುಸಲೇಮ್, ಜುದೇಯ ಪ್ರಾಂತ್ಯಗಳಲ್ಲಿದ್ದ ಎಲ್ಲಾ ತೆರಫೀಮ್ ಎಂಬ ಮನೆದೇವರುಗಳು, ಮೂರ್ತಿಗಳು ಹಾಗು ಎಲ್ಲ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ, ಯಾಜಕ ಹಿಲ್ಕೀಯನಿಗೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ಧರ್ಮೋಪದೇಶ ಗ್ರಂಥದ ವಾಕ್ಯಗಳನ್ನು ನೆರವೇರಿಸಿದನು.
25 : ಸರ್ವೇಶ್ವರನಿಗೆ ಅಭಿಮುಖನಾಗಿ, ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಈ ಯೋಷೀಯನಿಗೆ ಸಮಾನನಾದ ಅರಸನು ಹಿಂದೆಯೂ ಅನಂತರವೂ ಇರಲಿಲ್ಲ.
26 : ಆದರೂ ಮನಸ್ಸೆಯ ದುಷ್ಕೃತ್ಯಗಳ ನಿಮಿತ್ತ ಯೆಹೂದ್ಯರ ಮೇಲಿದ್ದ ಸರ್ವೇಶ್ವರನ ಉಗ್ರಕೋಪ ಇಳಿದಿರಲಿಲ್ಲ.
27 : ಸರ್ವೇಶ್ವರ, “ಇಸ್ರಯೇಲರನ್ನು ತೆಗೆದುಹಾಕಿದಂತೆ ಯೆಹೂದ್ಯರನ್ನೂ ನನ್ನ ಸನ್ನಿಧಿಯಿಂದ ತೆಗೆದುಹಾಕುವೆನು; ನಾನು ಆರಿಸಿಕೊಂಡ ಜೆರುಸಲೇಮ್ ಪಟ್ಟಣವನ್ನೂ ನನ್ನ ನಾಮಮಹತ್ತಿಗಾಗಿ ಸ್ವೀಕರಿಸಿಕೊಂಡಾ ದೇವಾಲಯವನ್ನೂ ತಿರಸ್ಕರಿಸುವೆನು,” ಎಂದು ಹೇಳಿದರು.
28 : ಯೋಷೀಯನ ಉಳಿದ ಚರಿತ್ರೆ ಹಾಗು ಅವನ ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
29 : ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ವಿರುದ್ಧ ಯುದ್ಧಮಾಡುವುದಕ್ಕಾಗಿ ಯೂಫ್ರಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು, ಕೂಡಲೆ ಅವನಿಂದ ಹತನಾದನು.
30 : ಅವನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಮೆಗಿದ್ದೋವಿನಿಂದ ಜೆರುಸಲೇಮಿಗೆ ತಂದು ಅವನ ಸ್ವಂತ ಸಮಾಧಿಯಲ್ಲಿ ಇಟ್ಟರು. ಜನರು ಅವನ ಸ್ಥಾನದಲ್ಲಿ ಅವನ ಮಗ ಯೆಹೋವಾಹಾಜನನ್ನು ಅಭಿಷೇಕಿಸಿ ಅರಸನನ್ನಾಗಿ ಮಾಡಿದರು.
31 : ಯೆಹೋವಾಹಾಜನು ಅರಸನಾದಾಗ ಅವನಿಗೆ ಇಪ್ಪತ್ತಮೂರು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಲಿಬ್ನದವಳೂ ಯೆರೆಮೀಯನ ಮಗಳೂ ಆದ ಹಮೂಟಲ್ ಎಂಬಾಕೆ ಇವನ ತಾಯಿ.
32 : ಇವನು ತನ್ನ ಪೂರ್ವಜರಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
33 : ಫರೋಹ ನೆಕೋವನು ಇವನನ್ನು ಜೆರುಸಲೇಮಿನಲ್ಲಿ ಬಹುದಿನಗಳವರೆಗೆ ಆಳಗೊಡಲಿಲ್ಲ. ಅವನು ಹಮಾತ್ ದೇಶದ ದಿಬ್ಲಾ ಎಂಬ ಊರಲ್ಲಿ ಇವನನ್ನು ಸೆರೆಯಲ್ಲಿಟ್ಟನು. ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ ಮೂವತ್ತನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರಬೇಕಾಯಿತು.
34 : ಫರೋಹ ನೆಕೋವನು, ಯೋಷೀಯನಿಗೆ ಬದಲಾಗಿ ಅವನ ಮಗ ಎಲ್ಯಾಕೀಮನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೊಸ ಹೆಸರನ್ನಿಟ್ಟು, ಯೆಹೋವಾಹಾಜನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದನು; ಯೆಹೋವಾಹಾಜನು ಅಲ್ಲೆ ಮೃತನಾದನು.
35 : ಫರೋಹನು ಗೊತ್ತುಮಾಡಿದಷ್ಟು ಬೆಳ್ಳಿಬಂಗಾರವನ್ನು ಕೊಡುವುದಕ್ಕಾಗಿ ಯೆಹೋಯಾಕೀಮನು ತನ್ನ ನಾಡಿನಲ್ಲಿ ತೆರಿಗೆಯನ್ನು ವಿಧಿಸಿದನು. ತೆರಿಗೆ ಕೊಡಬೇಕಾದ ಪ್ರತಿಯೊಬ್ಬನು ತನಗೆ ನೇಮಕವಾದಷ್ಟು ಬೆಳ್ಳಿಬಂಗಾರವನ್ನು ನಾಡಿನ ಜನರಿಂದ ಕೂಡಿಸಿ ಫರೋಹನಿಗೆ ತಂದೊಪ್ಪಿಸಿದನು.
36 : ಯೆಹೋಯಾಕೀಮನು ಅರಸನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ರೂಮದವಳೂ ಪೆದಾಯನ ಮಗಳೂ ಆದ ಜೆಬೂದಾ ಎಂಬಾಕೆ ಅವನ ತಾಯಿ.
37 : ಅವನು ತನ್ನ ಪೂರ್ವಜರಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ಅವನ ಕಾಲದಲ್ಲಿ ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ಬಂದನು.