ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಹಬಕ್ಕೂಕ
1ನೇ ಅಧ್ಯಾಯ
- Verse 1: ಪ್ರವಾದಿ ಹಬಕ್ಕೂಕನಿಗೆ ಪ್ರಕಟಿಸಲಾದ ದೈವೋಕ್ತಿ:
- Verse 2: ನಾನೆಷ್ಟು ಕಾಲ ಸರ್ವೇಶ್ವರಾ, ಮೊರೆ ಇಡುತ್ತಿರಬೇಕು ನಿನಗೆ? ನೀನೆಷ್ಟು ಕಾಲ ಸುಮ್ಮನಿರುವೆ ಕಿವಿಗೊಡದೆ ನನಗೆ? ಹಿಂಸೆಯಾಗುತ್ತಿದೆಯೆಂದು ನಾ ಕೂಗಿದೆ; ಆದರೂ ನೀ ಸುಮ್ಮನಿರುವೆ, ರಕ್ಷಣೆ ನೀಡದೆ.
- Verse 3: ಕೇಡನ್ನು ನಾ ನೋಡುವಂತೆ ಮಾಡಿದೆಯೇಕೆ? ಕಷ್ಟವನ್ನು ನಾ ಕಾಣುವಂತೆ ಮಾಡಿದೆಯೇಕೆ? ಹಿಂಸೆಬಾಧೆಗಳು ಇವೆ ನನ್ನ ಕಣ್ಣ ಮುಂದೆ. ಇಗೋ, ಜಗಳ ನಡೆಯುತಿದೆ, ವ್ಯಾಜ್ಯವೇಳುತಿದೆ.
- Verse 4: ಜಡವಾಗಿಹೋಗಿದೆ ಧರ್ಮಶಾಸ್ತ್ರ; ಸ್ತಬ್ಧವಾಗಿದೆ ನ್ಯಾಯನೀತಿಯ ಚಕ್ರ. ಸಜ್ಜನರಿಗಿಂತ ದುರ್ಜನರ ಕೈ ಮೇಲಾಗಿದೆ; ಎಂದೇ ನ್ಯಾಯನೀತಿ ತಲೆಕೆಳಗಾಗಿದೆ.
- Verse 5: ಆಗ ಸರ್ವೇಶ್ವರ ತಮ್ಮ ಜನರಿಗೆ ಇಂತೆಂದರು: “ಜನಾಂಗಗಳ ಮಧ್ಯೆ ನಡೆಯುವುದನ್ನು ನೋಡಿರಿ. ನೋಡಿದರೆ ಬೆಕ್ಕಸಬೆರಗಾಗುವಿರಿ. ನಿಮ್ಮ ಕಾಲದಲ್ಲೇ ನಾನೊಂದು ಕಾರ್ಯವನ್ನು ಮಾಡುವೆನು. ಅದನ್ನು ಕುರಿತು ನೀವು ಕಿವಿಯಾರೆ ಕೇಳಿದರೂ ನೀವು ನಂಬುವುದಿಲ್ಲ.
- Verse 6: ಇಗೋ, ಬಾಬಿಲೋನಿನವರನ್ನು ಹುರಿದುಂಬಿಸಲಿದ್ದೇನೆ. ಅವರು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳು. ಅವರು ಜಗದ ಉದ್ದಗಲಕ್ಕೂ ಹರಡಿ ತಮ್ಮದಲ್ಲದ ನಾಡುಗಳನ್ನು ಆಕ್ರಮಿಸಿಕೊಳ್ಳಲು ಸಂಚರಿಸುವರು.
- Verse 7: ಅವರು ಕ್ರೂರಿಗಳು, ಭಯಂಕರರು. ತಮ್ಮದೇ ಆದ ನ್ಯಾಯನೀತಿಯನ್ನು ರೂಪಿಸಿಕೊಳ್ಳುವಂಥವರು; ತಮ್ಮನ್ನು ತಾವೇ ಗೌರವಿಸಿಕೊಳ್ಳುವ ಅಹಂಭಾವಿಗಳು.
- Verse 8: “ಅವರ ಕುದುರೆಗಳು ಚಿರತೆಗಳಿಗಿಂತ ಬಿರುಸು; ಹಸಿದ ತೋಳಗಳಿಗಿಂತ ಚುರುಕು. ಅವರ ರಾಹುತರು ರಭಸದಿಂದ ಹಾರಿಬರುವರು. ಬೇಟೆಯನ್ನು ಕಬಳಿಸಲು ಕಾತರದಿಂದ ಹಾರುವ ರಣಹದ್ದಿನಂತೆ ದೂರದಿಂದ ಧಾವಿಸಿಬರುವರು.
- Verse 9: ಹಿಂಸೆ ಬಾಧೆಯನ್ನು ಗುರಿಯಾಗಿ ಇಟ್ಟುಕೊಂಡೇ ಮುನ್ನುಗ್ಗಿಬರುವರು. ಮರಳಿನ ಕಣಗಳಂತೆ ಲೆಕ್ಕವಿಲ್ಲದಷ್ಟು ಜನರನ್ನು ಸೆರೆ ಹಿಡಿಯುವರು.
- Verse 10: “ಅವರು ಅರಸರನ್ನು ಅಪಹಾಸ್ಯಮಾಡುವರು; ಅಧಿಪತಿಗಳನ್ನು ಪರಿಹಾಸ್ಯಕ್ಕೆ ಗುರಿಮಾಡುವರು. ಕೋಟೆಗಳನ್ನು ಧೂಳೀಪಟ ಮಾಡುವರು. ಮಣ್ಣುಗುಡ್ಡೆ ಹಾಕಿ ಆಕ್ರಮಿಸಿಕೊಳ್ಳುವರು.
- Verse 11: ಬಿರುಗಾಳಿಯಂತೆ ಬಂದು ಮಾಯವಾಗುವವರು ಅವರು; ಸ್ವಂತ ಶಕ್ತಿಯೇ ದೈವ ಎಂದೆಣಿಸುವಂಥ ಅಪರಾಧಿಗಳು.”
- Verse 12: ಸರ್ವೇಶ್ವರಾ, ನನ್ನ ದೇವರೇ, ಪರಮಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ.
- Verse 13: ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಸ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ?
- Verse 14: ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ?
- Verse 15: ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ.
- Verse 16: ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ.
- Verse 17: ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶಮಾಡುತ್ತಿರಬೇಕೋ?