पवित्र बाइबिल
ಹಳೆಯ ಒಡಂಬಡಿಕೆ
2 ಅರಸುಗಳು
1ನೇ ಅಧ್ಯಾಯ
- Verse 1: ಅಹಾಬನು ಮರಣಹೊಂದಿದ ನಂತರ ಮೋವಾಬ್ಯರು ಇಸ್ರಯೇಲರ ವಿರುದ್ಧ ದಂಗೆ ಎದ್ದರು.
- Verse 2: ಅಹಜ್ಯನು ಸಮಾರಿಯದಲ್ಲಿದ್ದ ತನ್ನ ಮೇಲುಪ್ಪರಿಗೆಯ ಕಿಟಕಿಯೊಂದರಿಂದ ಬಿದ್ದು ಅಸ್ವಸ್ಥನಾಗಿದ್ದನು. ಅವನು ತನ್ನ ಸೇವಕರನ್ನು ಕರೆದು, “ನೀವು ಎಕ್ರೋನಿನ ದೇವರಾದ ‘ಬಾಳ್ಜೆಬೂಬ’ನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ಗುಣವಾಗುವೆನೋ ಇಲ್ಲವೋ, ಎಂದು ವಿಚಾರಿಸಿ ಬನ್ನಿ,” ಎಂದು ಹೇಳಿ ಕಳುಹಿಸಿದನು.
- Verse 3: ಆದರೆ ಸರ್ವೇಶ್ವರ ಸ್ವಾಮಿಯ ದೂತನು ತಿಷ್ಬೀಯನಾದ ಎಲೀಯನಿಗೆ, “ನೀನು ಹೋಗಿ ಸಮಾರಿಯದ ಅರಸನ ಆ ಸೇವಕರನ್ನು ಭೇಟಿಯಾಗು. ಅವರಿಗೆ, ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವ ಅಗತ್ಯವಾದರೂ ಏನು? ಇಸ್ರಯೇಲರಲ್ಲಿ ದೇವರಿಲ್ಲವೆ?
- Verse 4: ಈ ಕಾರಣ ಅಹಜ್ಯನು ತಾನು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು,” ಎಂದು ಆಜ್ಞಾಪಿಸಿದರು. ಎಲೀಯನು ಹಾಗೆಯೇ ಮಾಡಿದನು.
- Verse 5: ದೂತರು ಅರಸನ ಬಳಿಗೆ ಹಿಂದಿರುಗಿ ಬಂದಾಗ ಅರಸನು, “ನೀವು ಹಿಂದಿರುಗಿದ್ದೇಕೆ?” ಎಂದು ಕೇಳಿದನು.
- Verse 6: ಅದಕ್ಕೆ ಅವರು, “ಒಬ್ಬ ವ್ಯಕ್ತಿ ನಮ್ಮನ್ನು ಎದುರುಗೊಂಡು, “ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ಹಿಂದಿರುಗಿರಿ. ಸರ್ವೇಶ್ವರನ ಹೆಸರಿನಲ್ಲಿ ಅವನಿಗೆ ಹೀಗೆಂದು ಹೇಳಿರಿ: ‘ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವ ಅಗತ್ಯವಾದರೂ ಏನು? ಇಸ್ರಯೇಲರಲ್ಲಿ ದೇವರಿಲ್ಲವೆ? ಹೀಗೆ ಮಾಡಿದ್ದರಿಂದ ನೀವು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎಂಬುದಾಗಿ ಹೇಳಿರಿ’ ಎಂದು ಆಜ್ಞಾಪಿಸಿದನು,” ಎಂದು ಉತ್ತರಕೊಟ್ಟರು.
- Verse 7: ಅದಕ್ಕೆ ಅರಸನು, “ನಿಮ್ಮನ್ನು ಭೇಟಿಯಾಗಿ ಹೀಗೆಂದು ನುಡಿದ ಆ ವ್ಯಕ್ತಿ ಹೇಗಿದ್ದನು?” ಎಂದು ವಿಚಾರಿಸಿದನು.
- Verse 8: ಅವರು, “ಅವನು ಕಂಬಳಿಯನ್ನು ಹೊದ್ದುಕೊಂಡಿದ್ದ; ಅವನ ಸೊಂಟಕ್ಕೆ ತೊಗಲಿನ ನಡುಕಟ್ಟು ಇತ್ತು,” ಎಂದರು. ಆಗ ಅರಸನು, “ಆ ವ್ಯಕ್ತಿ ತಿಷ್ಬೀಯನಾದ ಎಲೀಯನೇ ಆಗಿರಬೇಕು,” ಎಂದುಕೊಂಡನು.
- Verse 9: ಬಳಿಕ ಅರಸನು ಎಲೀಯನನ್ನು ಕರೆದುತರುವುದಕ್ಕಾಗಿ ಒಬ್ಬ ಪಂಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು ಎಲೀಯನು ಬೆಟ್ಟದ ತುದಿಯಲ್ಲಿ ಕುಳಿತಿರುವುದನ್ನು ಕಂಡನು. “ದೈವಪುರುಷರೇ, ಇಳಿದು ಬನ್ನಿ, ಅರಸರು ತಮ್ಮನ್ನು ಕರೆಯುತ್ತಿದ್ದಾರೆ,” ಎಂದು ಆಮಂತ್ರಿಸಿದನು.
- Verse 10: ಅದಕ್ಕೆ ಎಲೀಯನು, “ನಾನು ದೈವಪುರುಷನಾಗಿ ಇರುವುದು ನಿಜವಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ,” ಎಂದನು. ಕೂಡಲೆ ಆಕಾಶದಿಂದ ಬೆಂಕಿಬಿದ್ದು ಅವನನ್ನೂ ಅವನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.
- Verse 11: ಆಮೇಲೆ ಅರಸನು ಇನ್ನೊಬ್ಬ ಪಂಶಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳ ಸಮೇತ ಕಳುಹಿಸಿದನು. ಇವನು ಬಂದು ಎಲೀಯನಿಗೆ, “ದೈವಪುರುಷರೇ, ಬೇಗನೆ ಇಳಿದು ಬನ್ನಿ; ಅರಸರು ನಿಮ್ಮನ್ನು ಕರೆಯುತ್ತಾರೆ,” ಎಂದು ಹೇಳಿದನು.
- Verse 12: ಅದಕ್ಕೆ ಎಲೀಯನು, “ನಾನು ದೈವಪುರುಷ ಹೌದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತುಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ,” ಎಂದನು. ಕೂಡಲೆ ದೇವರು ಆಕಾಶದಿಂದ ಕಳುಹಿಸಿದ ಬೆಂಕಿ ಬಂದು ಅವನನ್ನೂ ಅವನ ಐವತ್ತುಮಂದಿ ಸಿಪಾಯಿಗಳನ್ನೂ ಸುಟ್ಟುಬಿಟ್ಟಿತು.
- Verse 13: ಅರಸನು ಮತ್ತೊಬ್ಬ ಪಚಾಶದಧಿಪತಿಯನ್ನು ಅವನ ಐವತ್ತುಮಂದಿ ಸಿಪಾಯಿಗಳೊಡನೆ ಕಳುಹಿಸಿದನು. ಇವನು ಬಂದು, ಎಲೀಯನ ಮುಂದೆ ಮೊಣಕಾಲೂರಿ, “ದೈವಪುರುಷರೇ, ನನ್ನ ಮತ್ತು ನನ್ನ ಸೇವಕರಾದ ಈ ಐವತ್ತುಮಂದಿಯ ಪ್ರಾಣ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದ್ದಾಗಿರಲಿ;
- Verse 14: ಆಕಾಶದಿಂದ ಬೆಂಕಿಬಿದ್ದು ನನಗೆ ಮುಂದೆ ಬಂದ ಆ ಇಬ್ಬರು ಪಂಚಾಶದಧಿಪತಿಗಳನ್ನೂ ಅವರ ಸಿಪಾಯಿಗಳನ್ನೂ ದಹಿಸಿಬಿಟ್ಟಿತಲ್ಲವೆ? ನನ್ನ ಪ್ರಾಣವಾದರೂ ನಿಮ್ಮ ದೃಷ್ಟಿಯಲ್ಲಿ ಮೌಲ್ಯವುಳ್ಳದೆಂದು ಮಾನ್ಯವಾಗಲಿ,” ಎಂದು ಬೇಡಿಕೊಂಡನು.
- Verse 15: ಆಗ ಸರ್ವೇಶ್ವರನ ದೂತನು ಎಲೀಯನಿಗೆ, “ನೀನು ಇವನ ಸಂಗಡ ಹೋಗು; ಹೆದರಬೇಡ,” ಎಂದು ಹೇಳಿದನು. ಆದ್ದರಿಂದ ಎಲೀಯನು ಎದ್ದು ಇವನ ಜೊತೆಯಲ್ಲೇ ಅರಸನ ಬಳಿಗೆ ಹೋದನು.
- Verse 16: ಅರಸನಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ದೂತರನ್ನು ಕಳುಹಿಸಿದ್ದೇಕೆ? ಇಸ್ರಯೇಲರಲ್ಲಿ ದೇವರಿಲ್ಲವೆ? ಹೀಗೆ ಮಾಡಿದ್ದರಿಂದ ನೀವು ಹಿಡಿದ ಹಾಸಿಗೆಯಿಂದ ಏಳದೆ ಸಾಯಲೇಬೇಕು ಎಂಬುದಾಗಿ ಸರ್ವೇಶ್ವರ ಹೇಳಿದ್ದಾರೆ,” ಎಂದನು.
- Verse 17: ಸರ್ವೇಶ್ವರ ಎಲೀಯನ ಮುಖಾಂತರ ಮುಂತಿಳಿಸಿದಂತೆಯೇ ಅರಸನು ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. ಅವನ ಸ್ಥಾನದಲ್ಲಿ ಅವನ ತಮ್ಮ ಯೋರಾಮನು, ಯೆಹೂದ್ಯರ ಅರಸ ಯೆಹೋಷಾಫಾಟನ ಮಗ ಯೆಹೋರಾಮನ ಅಳ್ವಿಕೆಯ ಎರಡನೆಯ ವರ್ಷದಲ್ಲಿ, ಅರಸನಾದನು.
- Verse 18: ಅಹಜ್ಯನ ಉಳಿದ ಚರಿತ್ರೆ ಹಾಗು ಕಾರ್ಯಕಲಾಪಗಳು ಇಸ್ರಯೇಲ್ ಅರಸುಗಳ ಇತಿಹಾಸ ಗ್ರಂಥದಲ್ಲಿ ಲಿಖಿತವಾಗಿವೆ.