ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಅರಸುಗಳು
12ನೇ ಅಧ್ಯಾಯ
- Verse 1: ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಇಸ್ರಯೇಲರೆಲ್ಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.
- Verse 2: ಅರಸ ಸೊಲೊಮೋನನಿಂದ ತಪ್ಪಿಸಿಕೊಂಡು ಈಜಿಪ್ಟಿಗೆ ಓಡಿಹೋಗಿದ್ದ ನೆಬಾಟನ ಮಗ ಯಾರೊಬ್ಬಾಮನನ್ನು ಕರೆಸಿಕೊಂಡಿದ್ದರು.
- Verse 3: ಯಾರೊಬ್ಬಾಮನು ನಡೆದ ಸಂಗತಿಗಳನ್ನು ಕೇಳಿ, ಎಲ್ಲಾ ಇಸ್ರಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,
- Verse 4: “ನಿಮ್ಮ ತಂದೆ ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದ್ದರು; ಅವರು ನೇಮಿಸಿದ್ದ ಬಿಟ್ಟೀ ಕೆಲಸವನ್ನು ನೀನು ಕಡಿಮೆಮಾಡಿ, ನಮ್ಮ ಮೇಲಿರುವ ಭಾರವನ್ನು ಹಗುರಮಾಡುವುದಾದರೆ ನಾವು ನಿನಗೆ ಸೇವೆಮಾಡುತ್ತೇವೆ,” ಎಂದನು.
- Verse 5: ಅವನು, “ನೀವು ಈಗ ಹೋಗಿ ಮೂರು ದಿನಗಳಾದ ನಂತರ ಮತ್ತೆ ಬನ್ನಿ,” ಎಂದು ಉತ್ತರಕೊಟ್ಟನು. ಜನರು ಹೊರಟುಹೋದರು.
- Verse 6: ಆಗ ಅರಸ ರೆಹಬ್ಬಾಮನು ತನ್ನ ತಂದೆ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ, ತಾನು ಜನರಿಗೆ ಕೊಡಬೇಕಾದ ಉತ್ತರದ ಬಗ್ಗೆ ಅವರ ಆಲೋಚನೆಯನ್ನು ಕೇಳಿದನು.
- Verse 7: ಅವರು, “ನೀವು ಈ ದಿನ ಜನರ ಮಾತನ್ನು ಕೇಳಿ ಅವರಿಗೆ ವಿನಯರಾಗಿ, ಒಳ್ಳೆಯ ಉತ್ತರಕೊಟ್ಟರೆ ಅವರು ಯಾವಾಗಲೂ ನಿಮಗೆ ಅಧೀನರಾಗಿರುವರು,” ಎಂದರು.
- Verse 8: ಆದರೆ ಅವನು ಆ ಹಿರಿಯರ ಆಲೋಚನೆಯನ್ನು ನಿರಾಕರಿಸಿದನು. ತನ್ನ ಸಂಗಡ ಬೆಳೆದು ತನ್ನ ಮಂತ್ರಿಗಳಾದ ಯೌವನಸ್ಥರನ್ನು ಕರೆಸಿದನು.
- Verse 9: ನನ್ನ ತಂದೆ ಹೇರಿದ ನೊಗವನ್ನು ಹಗುರ ಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
- Verse 10: ಅವರು ಅವನಿಗೆ, “ನಿಮ್ಮ ತಂದೆ ನಮ್ಮ ಮೇಲೆ ಹೇರಿರುವ ನೊಗವನ್ನು ಹಗುರ ಮಾಡು ಎಂದು ನಿಮ್ಮನ್ನು ಬೇಡಿಕೊಂಡ ಜನರಿಗೆ ನೀವು, ‘ನನ್ನ ತಂದೆಯ ಸೊಂಟಕ್ಕಿಂತ ನನ್ನ ಈ ಕಿರಿಬೆರಳು ದಪ್ಪ;
- Verse 11: ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ. ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು,’ ಎಂಬುದಾಗಿ ಹೇಳಬೇಕು,” ಎಂದು ಉತ್ತರಕೊಟ್ಟರು.
- Verse 12: ಯಾರೊಬ್ಬಾಮನೂ ಜನರೆಲ್ಲರೂ ಅರಸ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನ ಪುನಃ ಅವನ ಬಳಿಗೆ ಬಂದರು.
- Verse 13: ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು. ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ, ಯೌವನಸ್ಥರ ಆಲೋಚನೆಗನುಸಾರ ಜನರಿಗೆ,
- Verse 14: “ನನ್ನ ತಂದೆ ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು; ಅವರು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ಮುಳ್ಳುಕೊರಡೆಗಳಿಂದ ದಂಡಿಸುವೆನು,” ಎಂದು ನುಡಿದನು.
- Verse 15: ಅವನು ಜನರ ಮಾತನ್ನು ಕೇಳದೆಹೋದದ್ದು ಸರ್ವೇಶ್ವರನಿಂದಲೇ ಸಂಭವಿಸಿತ್ತು. ಹೀಗೆ ಸರ್ವೇಶ್ವರ ಶಿಲೋವಿನವನಾದ ಅಹೀಯನ ಮುಖಾಂತರ ನೆಬಾಟನ ಮಗ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು.
- Verse 16: ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲ ಎಂದು ನೋಡಿ ಇಸ್ರಯೇಲರೆಲ್ಲರೂ ಅವನಿಗೆ, “ದಾವೀದನಿಗೂ ನಮಗೂ ಏನೂ ಸಂಬಂಧವಿಲ್ಲ; ಜೆಸ್ಸೆಯ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ; ಇಸ್ರಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿರಿ; ದಾವೀದನವರು ತಮ್ಮ ಕುಲವನ್ನು ತಾವೇ ನೋಡಿಕೊಳ್ಳಲಿ!” ಎಂದು ಹೇಳಿ ತಮ್ಮ ಮನೆಗಳಿಗೆ ಹೊರಟುಹೋದರು.
- Verse 17: ಜುದೇಯ ಪ್ರಾಂತ್ಯದಲ್ಲಿದ್ದ ಇಸ್ರಯೇಲರಾದರೋ ರೆಹಬ್ಬಾಮನ ಅಧೀನದಲ್ಲಿದ್ದರು.
- Verse 18: ರೆಹಬ್ಬಾಮನು ಬಿಟ್ಟೀ ಕೆಲಸದವರ ಮೇಲ್ವಿಚಾರಕನಾದ ಅದೋರಾಮನನ್ನು ಇಸ್ರಯೇಲರ ಬಳಿಗೆ ಕಳುಹಿಸಿದಾಗ ಅವರು ಅವನನ್ನು ಕಲ್ಲೆಸೆದು ಕೊಂದರು. ಅರಸ ರೆಹಬ್ಬಾಮನು ಬೇಗನೇ ರಥವನ್ನೇರಿ ಜೆರುಸಲೇಮಿಗೆ ಓಡಿಹೋದನು.
- Verse 19: ಇಸ್ರಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.
- Verse 20: ಯಾರೊಬ್ಬಾಮನು ಹಿಂದಿರುಗಿ ಬಂದು ಇದ್ದಾನೆಂಬ ಸಮಾಚಾರ ಇಸ್ರಯೇಲರಿಗೆ ಗೊತ್ತಾದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರೆಸಿ ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.
- Verse 21: ಸೊಲೊಮೋನನ ಮಗ ರೆಹಬ್ಬಾಮನು ಜೆರುಸಲೇಮನ್ನು ಮುಟ್ಟಿದನಂತರ ಇಸ್ರಯೇಲರಿಗೆ ವಿರುದ್ಧ ಯುದ್ಧಮಾಡುವುದಕ್ಕೂ ರಾಜ್ಯವನ್ನು ಮರಳಿ ತನಗೆ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಒಂದು ಲಕ್ಷದ ಎಂಬತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು.
- Verse 22: ಆಗ ದೈವಪುರುಷನಾದ ಶೆಮಾಯನಿಗೆ ಈ ದೈವವಾಣಿ ಕೇಳಿಸಿತು.
- Verse 23: “ನೀನು ಹೋಗಿ ಸೊಲೊಮೋನನ ಮಗನೂ ಜುದೇಯದ ಅರಸನೂ ಆದ ರೆಹಬ್ಬಾಮನಿಗೂ ಯೆಹೂದ ಬೆನ್ಯಾಮೀನ್ ಕುಲಗಳವರಿಗೂ ಹಾಗು ಉಳಿದ ಜನರಿಗೂ ಹೀಗೆಂದು ಹೇಳು: ಸರ್ವೇಶ್ವರನ ಮಾತನ್ನು ಕೇಳಿರಿ:
- Verse 24: ನೀವು ನಿಮ್ಮ ಸಹೋದರರಾದ ಇಸ್ರಯೇಲರೊಡನೆ ಯುದ್ಧಮಾಡಲು ಹೋಗಬಾರದು; ಎಲ್ಲರೂ ಹಿಂದಿರುಗಿ ಹೋಗಿರಿ; ಈ ವಿಭಜನಾಕಾರ್ಯ ಸರ್ವೇಶ್ವರನಿಂದಾಗಿದೆ, ಎಂದು ಹೇಳಬೇಕು.” ಅಂತೆಯೇ ಆ ಜನರು ಸರ್ವೇಶ್ವರನ ಮಾತನ್ನು ಕೇಳಿ ಹಿಂದಿರುಗಿ ಹೋದರು.
- Verse 25: ಯಾರೊಬ್ಬಾಮನು ಎಫ್ರಯಿಮ್ ಮಲೆನಾಡಿನ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ ಅಲ್ಲಿ ವಾಸಿಸಿದನು. ಅಲ್ಲಿಂದ ಪೆನೂವೇಲಿಗೆ ಹೋಗಿ ಅದನ್ನೂ ಭದ್ರಪಡಿಸಿದನು.
- Verse 26: ಅವನು ತನ್ನಲ್ಲೇ, “ರಾಜ್ಯವು ಮತ್ತೆ ದಾವೀದನ ಕುಟುಂಬದವರಿಗೆ ಆಗುವುದೋ ಏನೋ;
- Verse 27: ಜನರು ಜೆರುಸಲೇಮಿನಲ್ಲಿರುವ ಸರ್ವೇಶ್ವರನ ಆಲಯಕ್ಕೆ ಬಲಿಯರ್ಪಣೆಗಾಗಿ ಹೋದರೆ ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗಬಹುದು; ಅವರು ನನ್ನನ್ನು ಕೊಂದು ಅವನ ಬಳಿಗೆ ಹೋಗಬಹುದು,” ಎಂದುಕೊಂಡನು.
- Verse 28: ಬಹಳವಾಗಿ ಆಲೋಚಿಸಿ, ಕಡೆಗೆ ಬಂಗಾರದ ಎರಡು ಹೋರಿಕರುಗಳ ಮೂರ್ತಿಗಳನ್ನು ಮಾಡಿಸಿ, ಇಸ್ರಯೇಲರಿಗೆ, “ನೀವು ಜಾತ್ರೆಗಾಗಿ ಜೆರುಸಲೇಮಿಗೆ ಹೋದದ್ದು ಇನ್ನು ಸಾಕು. ಇಗೋ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರುಗಳು ಇಲ್ಲಿರುತ್ತವೆ,” ಎಂದು ಹೇಳಿ
- Verse 29: ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿದನು; ಇನ್ನೊಂದನ್ನು ದಾನಿಗೆ ಕಳುಹಿಸಿದನು.
- Verse 30: ಇದು ಪಾಪಕ್ಕೆ ಕಾರಣವಾಯಿತು. ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಿಂದ ದಾನಿಗೆ ಒಯ್ದರು.
- Verse 31: ಇದಲ್ಲದೆ, ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಜನಸಾಮಾನ್ಯರನ್ನು ಯಾಜಕರನ್ನಾಗಿ ನೇಮಿಸಿದನು.
- Verse 32: ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ, ನಾಡಿನ ಜಾತ್ರೆಗೆ ಸಮನಾದ ಜಾತ್ರೆ ಬೇತೇಲಿನಲ್ಲಿ ನಡೆಯಬೇಕೆಂದು ಅಪ್ಪಣೆ ಮಾಡಿದನು. ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಹೋರಿಕರುಗಳ ಮೂರ್ತಿಗಳಿಗೆ, ಪೀಠದ ಮೇಲೆ ಬಲಿ ಅರ್ಪಿಸಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು.
- Verse 33: ಎಂಟನೆಯ ತಿಂಗಳ ಹದಿನೈದನೆಯ ದಿನ ಇಸ್ರಯೇಲರು ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವೇಚ್ಛೆಯಿಂದ ಗೊತ್ತುಮಾಡಿದನು. ಆ ಸಮಯಕ್ಕೆ ತಾನೂ ಬೇತೇಲಿನ ಬಲಿಪೀಠದ ಬಳಿಗೆ ಹೋಗಿ ಧೂಪಾರತಿ ಎತ್ತಲು ಅದರ ಮೆಟ್ಟಲುಗಳನ್ನು ಹತ್ತುತ್ತಿದ್ದನು.