ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
14ನೇ ಅಧ್ಯಾಯ
- Verse 1: ಒಂದು ದಿನ ಸೌಲನ ಮಗ ಯೋನಾತಾನನು ತನ್ನ ಆಯುಧಗಳನ್ನು ಹೊರುವ ಸೇವಕನಿಗೆ, “ಆಚೆ ಇರುವ ಫಿಲಿಷ್ಟಿಯರ ಕಾವಲು ದಂಡಿಗೆ ವಿರೋಧವಾಗಿ ಹೋಗೋಣ ಬಾ,” ಎಂದು ಹೇಳಿದನು. ಆದರೆ ಈ ಸಂಗತಿಯನ್ನು ತನ್ನ ತಂದೆಗೆ ತಿಳಿಸಲಿಲ್ಲ.
- Verse 2: ಸೌಲನಾದರೋ ಗಿಬೆಯ ಪ್ರಾಂತ್ಯದ ಅಂತ್ಯಭಾಗವಾಗಿರುವ ಮಿಗ್ರೋನಿನಲ್ಲಿನ ಒಂದು ದಾಳಿಂಬ ವೃಕ್ಷದ ಅಡಿಯಲ್ಲಿ ಇಳಿದುಕೊಂಡಿದ್ದನು. ಅವನ ಜೊತೆಯಲ್ಲಿ ಸುಮಾರು ಆರುನೂರು ಮಂದಿ ಸೈನಿಕರು ಇದ್ದರು.
- Verse 3: ‘ಏಫೋದ’ನ್ನು ಧರಿಸಿಕೊಂಡಿದ್ದ ಅಹೀಯನೂ ಇದ್ದನು. ಈ ಅಹೀಯನು ಶಿಲೋವಿನಲ್ಲಿ ಸರ್ವೇಶ್ವರನ ಯಾಜಕನಾಗಿದ್ದ ಏಲಿಯ ಮರಿಮಗನೂ ಫೀನೆಹಾಸನ ಮೊಮ್ಮಗನೂ ಈಕಾಬೋದನ ಅಣ್ಣನಾದ ಅಹೀಟೂಬನ ಮಗನೂ ಆಗಿದ್ದನು. ಯೋನಾತಾನನು ಹೋದದ್ದು ಜನರಿಗೂ ಗೊತ್ತಿರಲಿಲ್ಲ.
- Verse 4: ಫಿಲಿಷ್ಟಿಯರ ದಂಡಿನ ಸ್ಥಳಕ್ಕೆ ಹೋಗಲು ಅವನು ಮಿಕ್ಮಾಷಿನ ಕಣಿವೆಯ ಮೂಲಕ ಹೋಗಬೇಕಾಗಿತ್ತು. ಕಣಿವೆಯ ಎರಡು ಬದಿಗಳಲ್ಲಿ ಒಂದೊಂದು ಕೋಡು ಕಲ್ಲುಗಳಿದ್ದವು. ಒಂದಕ್ಕೆ ‘ಬೋಚೇಚ್’ ಎಂದೂ ಇನ್ನೊಂದಕ್ಕೆ ‘ಸೆನೆ’ ಎಂದೂ ಹೆಸರು.
- Verse 5: ಒಂದು ಮಿಕ್ಮಾಷಿಗೆ ಮುಖಮಾಡಿ ಉತ್ತರಕ್ಕಿತ್ತು. ಇನ್ನೊಂದು ಗೆಬಕ್ಕೆ ಮುಖಮಾಡಿ ದಕ್ಷಿಣಕ್ಕಿತ್ತು.
- Verse 6: ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ಸುನ್ನತಿಯಿಲ್ಲದ ಈ ಕಾವಲುದಂಡಿನವರೆಗೆ ನೇರವಾಗಿ ಹೋಗೋಣ ಬಾ; ಬಹುಶಃ ಸರ್ವೇಶ್ವರ ತಾವೇ ನಮ್ಮ ಪರವಾಗಿ ಕಾರ್ಯಸಾಧಿಸುವರು. ಬಹುಜನರಿಂದಾಗಲಿ, ಸ್ವಲ್ಪಜನರಿಂದಾಗಲಿ, ರಕ್ಷಿಸುವುದು ಸರ್ವೇಶ್ವರಸ್ವಾಮಿಗೆ ಅಸಾಧ್ಯವಲ್ಲ,” ಎಂದು ಹೇಳಿದನು.
- Verse 7: ಆಯುಧಗಳನ್ನು ಹೊರುವವನು, “ನಿಮ್ಮ ಇಷ್ಟದಂತೆ ಮಾಡಿ; ನಿಮ್ಮ ಕೋರಿಕೆಯ ಹಾಗೆ ನಾನೂ ನಿಮ್ಮನ್ನು ಹಿಂಬಾಲಿಸುತ್ತೇನೆ,” ಎಂದನು.
- Verse 8: ಆಗ ಯೋನಾತಾನನು, “ಅವರು ನಮ್ಮನ್ನು ಕಾಣುವಂತೆ ಸಮೀಪಕ್ಕೆ ಹೋಗೋಣ.
- Verse 9: ‘ನಾವು ನಿಮ್ಮ ಬಳಿಗೆ ಬರುವ ತನಕ ಅಲ್ಲೇ ನಿಲ್ಲಿ’ ಎಂದು ಅವರು ನಮಗೆ ಹೇಳಿದರೆ, ಮೇಲೆ ಹತ್ತದೆ, ಇದ್ದ ಸ್ಥಳದಲ್ಲೇ ಇರೋಣ.
- Verse 10: ಆದರೆ ಅವರು, ‘ಮೇಲೆ ಹತ್ತಿ ನಮ್ಮ ಬಳಿಗೆ ಬನ್ನಿ’ ಎಂದು ಕರೆದರೆ ಸರ್ವೇಶ್ವರ ಅವರನ್ನು ನಮ್ಮ ಕೈಗೆ ಒಪ್ಪಿಸಿದ್ದಾರೆಂಬುದಕ್ಕೆ ಇದೇ ಗುರುತೆಂದು ತಿಳಿದು ಮೇಲೆ ಹೋಗೋಣ,” ಎಂದನು.
- Verse 11: ಇವರಿಬ್ಬರೂ ಫಿಲಿಷ್ಟಿಯರ ಕಾವಲುದಂಡಿನವರಿಗೆ ಕಾಣಿಸಿಕೊಂಡಾಗ ಅವರು, “ಇಗೋ, ಹಿಬ್ರಿಯರು ತಾವು ಅಡಗಿಕೊಂಡಿದ್ದ ಕಿಂಡಿಗಳಿಂದ ಹೊರಗೆ ಬರುತ್ತಲಿದ್ದಾರೆ,” ಎಂದು ತಮ್ಮೊಳಗೆ ಮಾತಾಡಿಕೊಂಡರು.
- Verse 12: ಆ ಫಿಲಿಷ್ಟಿಯರು ಯೋನಾತಾನನಿಗೂ ಅವನ ಆಯುಧಗಳನ್ನು ಹೊರುವವನಿಗೂ, “ಹತ್ತಿ ನಮ್ಮ ಬಳಿಗೆ ಬನ್ನಿ; ನಿಮಗೆ ತೋರಿಸಬೇಕಾದದ್ದೊಂದಿದೆ,” ಎಂದರು. ಯೋನಾತಾನನು ತನ್ನ ಆಯುಧಗಳನ್ನು ಹೊರುವ ಸೇವಕನಿಗೆ, “ನೀನೂ ನನ್ನ ಸಂಗಡ ಹತ್ತಿ ಬಾ; ಸರ್ವೇಶ್ವರ ಅವರನ್ನು ಇಸ್ರಯೇಲರ ಕೈಗೆ ಒಪ್ಪಿಸಿದ್ದಾರೆ,” ಎಂದು ಹೇಳಿದನು.
- Verse 13: ಯೋನಾತಾನನೂ ಅವನ ಆಯುಧಗಳನ್ನು ಹೊರುವ ಸೇವಕನೂ ತಮ್ಮ ಮೊಣಕಾಲನ್ನು ಹಾಗು ಕೈಗಳನ್ನು ಊರುತ್ತಾ ಕಣಿವೆಯಿಂದ ಮೇಲೆ ಬಂದರು. ಯೋನಾತಾನನು ಫಿಲಿಷ್ಟಿಯರನ್ನು ನೆಲಕ್ಕೆ ಉರುಳಿಸುತ್ತಾ ಹೋದನು; ಅವನ ಸೇವಕನು ಹಿಂದಿನಿಂದ ಅವರನ್ನು ಕೊಲ್ಲುತ್ತಾ ನಡೆದನು.
- Verse 14: ಹೀಗೆ ಒಂದು ಜೋಡಿ ಎತ್ತು ಒಪ್ಪೊತ್ತಿನಲ್ಲಿ ಉಳುವಷ್ಟು ಭೂಮಿಯಲ್ಲೇ ಸುಮಾರು ಇಪ್ಪತ್ತು ಮಂದಿಯನ್ನು ಅವರು ವಧಿಸಿದರು.
- Verse 15: ಇದರಿಂದಾಗಿ ಪಾಳೆಯದಲ್ಲಿದ್ದವರು, ಕಾವಲುಗಾರರಾಗಿ ಠಾಣದಲ್ಲಿದ್ದವರು, ಸುಲಿಗೆಗಾಗಿ ಹೊರಗೆ ಹೋಗಿದ್ದವರು, ಹಾಗು ಉಳಿದ ಎಲ್ಲಾ ಜನರು ಭಯದಿಂದ ನಡುಗತೊಡಗಿದರು. ಇದಲ್ಲದೆ, ದೇವರು ಭೂಕಂಪವನ್ನುಂಟು ಮಾಡಿದರು. ಈ ಕಾರಣ ಜನರಲ್ಲಿ ಮಹಾಭೀತಿಯುಂಟಾಯಿತು.
- Verse 16: ಬೆನ್ಯಾಮೀನ್ಯರ ಗಿಬೆಯದಲ್ಲಿ ಕಾವಲಿದ್ದ ಸೌಲನ ಸೈನಿಕರು ಫಿಲಿಷ್ಟಿಯರ ದಂಡು ಹೀಗೆ ಕಳವಳಗೊಂಡು ಚದರಿಹೋಗುತ್ತಿರುವುದನ್ನು ಕಂಡರು.
- Verse 17: ಸೌಲನು ತನ್ನ ಜೊತೆಯಲ್ಲಿದ್ದವರಿಗೆ, “ನಮ್ಮನ್ನು ಬಿಟ್ಟುಹೋದವರು ಯಾರೆಂಬುದನ್ನು ಲೆಕ್ಕಮಾಡಿ ನೋಡಿ,” ಎಂದು ಆಜ್ಞಾಪಿಸಿದನು. ಅವರು ಲೆಕ್ಕಮಾಡಿ ನೋಡುವಾಗ ಯೋನಾತಾನನೂ ಅವನ ಆಯುಧಗಳನ್ನು ಹೊರುವ ಸೇವಕನೂ ಇಲ್ಲದಿರುವುದು ತಿಳಿದುಬಂದಿತು.
- Verse 18: ಅನಂತರ ಸೌಲನು ಅಹೀಯನಿಗೆ, “’ಏಫೋದ’ನ್ನು ತೆಗೆದುಕೊಂಡು ಬಾ,” ಎಂದು ಆಜ್ಞಾಪಿಸಿದನು. (ಆ ದಿನದಂದು ಅಹೀಯನು ಇಸ್ರಯೇಲರ ಮುಂದೆ ಏಫೋದನ್ನು ಹೊತ್ತು ನಡೆಯುತ್ತಿದ್ದನು).
- Verse 19: ಸೌಲನು ಯಾಜಕನೊಡನೆ ಮಾತಾಡುತ್ತಿರುವಷ್ಟರಲ್ಲೆ ಫಿಲಿಷ್ಟಿಯರ ಸೈನ್ಯದ ಗದ್ದಲವು ಹೆಚ್ಚು ಹೆಚ್ಚಾಯಿತು. ಆದುದರಿಂದ ಅವನು ದಾಳಹಾಕುವ ಕೈ ನಿಲ್ಲಿಸೆಂದು ಯಾಜಕನಿಗೆ ಹೇಳಿ,
- Verse 20: ತನ್ನ ಜೊತೆಯಲ್ಲಿದ್ದವರನ್ನು ಕೂಡಿಕೊಂಡು ಯುದ್ಧಕ್ಕೆ ಹೋದನು; ಅಷ್ಟರಲ್ಲಿ ಫಿಲಿಷ್ಟಿಯರ ಸೈನ್ಯದಲ್ಲಿ ಗಲಿಬಿಲಿಯುಂಟಾಗಿ ಒಬ್ಬನನ್ನೊಬ್ಬನು ಕೊಂದುಹಾಕುತ್ತಿದ್ದನು.
- Verse 21: ಇದಲ್ಲದೆ, ಮುಂದಿನಿಂದಲೇ ಫಿಲಿಷ್ಟಿಯರನ್ನು ಸೇರಿಕೊಂಡು ಅವರೊಡನೆ ಪಾಳೆಯದಲ್ಲಿದ್ದ ಹಿಬ್ರಿಯರು, ಸೌಲ-ಯೋನಾತಾನರ ಜೊತೆಯಲ್ಲಿ ಬಂದ ಇಸ್ರಯೇಲರನ್ನು ಕೂಡಿಕೊಂಡರು.
- Verse 22: ಎಫ್ರಯಿಮ್ ಪರ್ವತಪ್ರಾಂತ್ಯದಲ್ಲಿ ಅಡಗಿಕೊಂಡಿದ್ದ ಇಸ್ರಯೇಲರಿಗೆ ಫಿಲಿಷ್ಟಿಯರು ಓಡಿಹೋದರೆಂಬ ಸಮಾಚಾರ ಮುಟ್ಟಿದಾಗ ಅವರೂ ಯುದ್ಧಕ್ಕೆ ಬಂದು ಅವರನ್ನು ಬೆನ್ನಟ್ಟಿದರು.
- Verse 23: ಹೀಗೆ ಸರ್ವೇಶ್ವರ ಆ ದಿನದಲ್ಲಿ ಇಸ್ರಯೇಲರಿಗೆ ಜಯವನ್ನುಂಟುಮಾಡಿದರು. ಯುದ್ಧ ಬೇತಾವೆನಿನ ಆಚೆಯ ತನಕ ನಡೆಯಿತು.
- Verse 24: ಆ ದಿವಸ ಸೌಲನು ಇಸ್ರಯೇಲರಿಗೆ, “ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕಾಗಿ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತ,” ಎಂದು ಆಣೆಯಿಟ್ಟಿದ್ದರಿಂದ ಅಂದು ಅವರೆಲ್ಲರೂ ಬಹಳವಾಗಿ ಬಳಲಿಹೋಗಿದ್ದರು. ಒಬ್ಬನಾದರೂ ಆಹಾರಪದಾರ್ಥವನ್ನು ರುಚಿಸಿರಲಿಲ್ಲ.
- Verse 25: ಜನರೆಲ್ಲರೂ ನೆಲಜೇನು ಇರುವ ಕಾಡಿಗೆ ಬಂದರು.
- Verse 26: ಅವರು ಅಲ್ಲಿ ಜೇನುತುಪ್ಪ ಹರಿಯುವುದನ್ನು ಕಂಡರೂ ಶಾಪಕ್ಕೆ ಭಯಪಟ್ಟು ಯಾವನೂ ಅದನ್ನು ಬಾಯಿಗೆ ಹಾಕಲಿಲ್ಲ.
- Verse 27: ಯೋನಾತಾನನಿಗೆ ತನ್ನತಂದೆ ಜನರಿಗೆ ಆಣೆಯಿಟ್ಟು ಹೇಳಿದ್ದು ಗೊತ್ತಿರಲಿಲ್ಲವಾದ್ದರಿಂದ ಅವನು ತನ್ನ ಕೋಲನ್ನು ಜೇನುಹುಟ್ಟಿನಲ್ಲಿ ಚುಚ್ಚಿ ಕೈಯಿಂದ ತೆಗೆದು ತಿಂದನು. ಕೂಡಲೆ ಅವನ ಕಣ್ಣುಗಳು ಕಳೆಗೊಂಡವು.
- Verse 28: ಒಡನೆ ಒಬ್ಬನು ಅವನಿಗೆ, “ಈ ದಿನ ಊಟಮಾಡುವಂಥವರು ಶಾಪಗ್ರಸ್ಥರಾಗುವರೆಂದು ನಿನ್ನ ತಂದೆ ಆಣೆಯಿಟ್ಟು ಹೇಳಿದ್ದಾರೆ,” ಎಂದು ತಿಳಿಸಿದನು. ಜನರು ಬಹಳವಾಗಿ ಬಳಲಿಹೋದುದನ್ನು ಕಂಡು ಯೋನಾತಾನನು ಆ ವ್ಯಕ್ತಿಗೆ,
- Verse 29: “ನನ್ನ ತಂದೆ ನಾಡಿಗೆ ನಷ್ಟವನ್ನುಂಟುಮಾಡಿದ್ದಾರೆ; ನಾನು ಸ್ವಲ್ಪ ಜೇನುತುಪ್ಪವನ್ನು ತಿಂದುದರಿಂದ ನನ್ನ ಕಣ್ಣುಗಳು ಹೇಗೆ ಕಳೆಗೊಂಡಿರುತ್ತವೆ ನೋಡು;
- Verse 30: ಜನರು ತಾವು ಇಂದು ಶತ್ರುಗಳಿಂದ ಸುಲಿದುಕೊಂಡ ಆಹಾರವನ್ನು ಯಥೇಚ್ಛವಾಗಿ ಊಟಮಾಡಿದ್ದರೆ ಅವರು ಇನ್ನಷ್ಟು ಬಲಗೊಳ್ಳುತ್ತಿದ್ದರು. ಫಿಲಿಷ್ಟಿಯರಲ್ಲಿ ಹತರಾಗದವರು ಇನ್ನೂ ಹೆಚ್ಚುಮಂದಿ ಇದ್ದಾರೆ,” ಎಂದನು.
- Verse 31: ಆ ದಿನ ಜನರು ಮಿಕ್ಮಾಷಿನಿಂದ ಅಯ್ಯಾಲೋನಿನವರೆಗೆ ಫಿಲಿಷ್ಟಿಯರನ್ನು ಹೊಡೆದು ಬಹಳವಾಗಿ ದಣಿದಿದ್ದರು.
- Verse 32: ಆದ್ದರಿಂದ ಅವರು ತಾವು ಕೊಳ್ಳೆಮಾಡಿದ ಎತ್ತು, ಕುರಿ, ಕರು ಇವುಗಳನ್ನು ಹಿಡಿದು ನೆಲದ ಮೇಲೆಯೇ ಕೊಂದು ಮಾಂಸದೊಡನೆ ರಕ್ತವನ್ನೂ ತಿಂದರು.
- Verse 33: ಆಗ ಕೆಲವರು ಸೌಲನಿಗೆ, “ನೋಡಿ, ಜನರು ರಕ್ತವನ್ನು ಭುಜಿಸಿ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡುತ್ತಿದ್ದಾರೆ,” ಎಂದು ತಿಳಿಸಿದರು. ಅವನು, “ಇದು ಮಹಾಪಾತಕವೇ ಸರಿ; ನೀವು ಬೇಗನೆ ನನ್ನ ಬಳಿಗೆ ಒಂದು ದೊಡ್ಡ ಕಲ್ಲನ್ನು ಹೊರಳಿಸಿ ತಂದಿಡಿ;
- Verse 34: ಬಳಿಕ ಜನರ ಬಳಿಗೆ ಹೋಗಿ ಅವರಿಗೆ, ‘ರಕ್ತವನ್ನು ಭುಜಿಸಿ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಬೇಡಿ, ನಿಮ್ಮ ನಿಮ್ಮ ಎತ್ತು ಕುರಿಗಳನ್ನು ಇಲ್ಲಿಗೆ ತಂದು ಕೊಂದು ತಿನ್ನಿ,’ ಎಂದು ಹೇಳಿ,” ಎಂದನು. ಹಾಗೆಯೇ ಜನರೆಲ್ಲರು ತಮ್ಮ ತಮ್ಮ ಎತ್ತು ಕುರಿಗಳನ್ನು ಅದೇ ರಾತ್ರಿ ಅಲ್ಲಿಗೆ ತಂದು ಕೊಂದು ತಿಂದರು.
- Verse 35: ಸೌಲನು ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು; ಅವನು ಕಟ್ಟಿಸಿದ ಬಲಿಪೀಠಗಳಲ್ಲಿ ಇದೇ ಮೊದಲನೆಯದು.
- Verse 36: ಸೌಲನು ತನ್ನ ಸೈನಿಕರನ್ನು, “ಬನ್ನಿ, ನಾವು ಈ ರಾತ್ರಿಯಲ್ಲೇ ಫಿಲಿಷ್ಟಿಯರನ್ನು ಬೆನ್ನಟ್ಟಿ ಬೆಳಗಾಗುವವರೆಗೆ ಅವರನ್ನು ಸುಲಿದುಕೊಂಡು ಒಬ್ಬನನ್ನೂ ಉಳಿಸದೆ ಕೊಂದುಹಾಕೋಣ,” ಎಂದು ಕರೆದನು. ಅವರು, “ನಿಮ್ಮ ಇಷ್ಟದಂತೆ ಆಗಲಿ,” ಎಂದು ಹೇಳಿದರು. ಆದರೆ ಯಾಜಕನು, “ಇತ್ತ ಬನ್ನಿ; ನಾವು ದೇವರನ್ನು ವಿಚಾರಿಸೋಣ,” ಎಂದನು.
- Verse 37: ಸೌಲನು, “ದೇವಾ, ನಾವು ಫಿಲಿಷ್ಟಿಯರನ್ನು ಬೆನ್ನಟ್ಟಬಹುದೇ? ನೀವು ಅವರನ್ನು ಇಸ್ರಯೇಲರ ಕೈಗೆ ಒಪ್ಪಿಸಿಕೊಡುವಿರೋ?” ಎಂದು ಕೇಳಿಕೊಂಡನು. ಆದರೆ ಸರ್ವೇಶ್ವರ ಅವನಿಗೆ ಆ ದಿನ ಉತ್ತರಕೊಡಲೇ ಇಲ್ಲ.
- Verse 38: ಆಗ ಸೌಲನು ಜನರ ಮುಖಂಡರಿಗೆ, “ನೀವೆಲ್ಲರೂ ಇಲ್ಲಿಗೆ ಬಂದು, ಈ ದಿನ ಎಲ್ಲಿ ಪಾಪಕೃತ್ಯ ನಡೆದಿದೆ ಎಂದು ವಿಚಾರಿಸಿ ಗುರುತು ಹಚ್ಚಿರಿ.
- Verse 39: ಇಸ್ರಯೇಲರ ರಕ್ಷಕನಾದ ಸರ್ವೇಶ್ವರನ ಆಣೆ, ಪಾಪಮಾಡಿದವರು ಯಾರೇ ಆಗಿರ಼ಲಿ, ಮಗನಾದ ಯೋನಾತಾನನಾಗಿದ್ದರೂ ಸರಿಯೇ, ಅವನು ಸಾಯಲೇಬೇಕು,” ಎಂದು ಹೇಳಿದನು. ಜನರು ಏನೂ ಮಾತಾಡದೆ ಮೌನವಾಗಿದ್ದರು.
- Verse 40: ಆಗ ಸೌಲನು ಅವರಿಗೆ, “ನೀವೆಲ್ಲರೂ ಒಂದು ಕಡೆ ನಿಲ್ಲಿರಿ; ನಾನೂ ನನ್ನ ಮಗ ಯೋನಾತಾನನೂ ಮತ್ತೊಂದು ಕಡೆಯಲ್ಲಿರುವೆವು,” ಎಂದನು. ಅವರು, “ನಿಮ್ಮ ಇಷ್ಟದಂತೆ ಆಗಲಿ,” ಎಂದರು.
- Verse 41: ಅನಂತರ ಸೌಲನು, “ಇಸ್ರಯೇಲ್ ದೇವರೇ, ಸತ್ಯವನ್ನು ತಿಳಿಸಿ,” ಎಂದು ಸರ್ವೇಶ್ವರನನ್ನು ಪ್ರಾರ್ಥಿಸಿ ಚೀಟುಹಾಕಿದನು. ಅದು ಅವನಿಗೂ ಯೋನಾತಾನನಿಗೂ ಬಂದಿತು. ಜನರು ಪಾರಾದರು.
- Verse 42: ಸೌಲನು ಮತ್ತೆ, “ನಮ್ಮಿಬ್ಬರೊಳಗೆ ಚೀಟುಹಾಕಿ,” ಎಂದು ಹೇಳಿದನು. ಹಾಗೆಯೇ ಮಾಡಿದಾಗ ಚೀಟು ಯೋನಾತಾನನಿಗೆ ಬಿದ್ದಿತು.
- Verse 43: ಆಗ ಸೌಲನು ಯೋನಾತಾನನನ್ನು, “ನೀನು ಏನು ಮಾಡಿದೆ, ಹೇಳು,” ಎಂದು ಕೇಳಿದನು. ಅವನು, “ನಾನು ಕೋಲಿನಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ತಿಂದೆ; ಸಾಯುವುದಕ್ಕೆ ಸಿದ್ಧನಾಗಿದ್ದೇನೆ,” ಎಂದು ಉತ್ತರಕೊಟ್ಟನು.
- Verse 44: ಅದಕ್ಕೆ ಸೌಲನು, “ಯೋನಾತಾನನೇ, ನಾನು ನಿನ್ನನ್ನು ಕೊಲ್ಲದೆ ಬಿಟ್ಟರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ,” ಎಂದನು.
- Verse 45: ಜನರು ಅವನಿಗೆ, “ದೇವರ ಸಹಾಯದಿಂದ ಈ ದಿನ ಇಸ್ರಯೇಲರಿಗೆ ಮಹಾಜಯವನ್ನುಂಟುಮಾಡಿದ ಯೋನಾತಾನನು ಸಾಯಬೇಕೇ? ಕೂಡದು; ಸರ್ವೇಶ್ವರನಾಣೆ. ಅವನ ತಲೆಗೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಿಸಬಾರದು,” ಎಂದು ಹೇಳಿ ಪ್ರಾಯಶ್ಚಿತ್ತವನ್ನು ಕೊಟ್ಟು ಅವನನ್ನು ಬಿಡಿಸಿದರು.
- Verse 46: ಸೌಲನು ಆಮೇಲೆ ಫಿಲಿಷ್ಟಿಯರನ್ನು ಹಿಂದಟ್ಟದೆ ತನ್ನ ಮನೆಗೆ ಹೋದನು. ಫಿಲಿಷ್ಟಿಯರೂ ತಮ್ಮ ಪ್ರಾಂತ್ಯಕ್ಕೆ ಹೋದರು.
- Verse 47: ಸೌಲನು ಇಸ್ರಯೇಲರ ಅರಸನಾದ ಮೇಲೆ ಅವನು ಸುತ್ತಲಿನ ವೈರಿಗಳಾದ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೋಬದ ಅರಸರು, ಫಿಲಿಷ್ಟಿಯರು ಇವರೊಡನೆ ಯುದ್ಧಮಾಡಿದನು. ಹೋದಕಡೆಯಲ್ಲೆಲ್ಲಾ ಜಯವನ್ನೇ ಹೊಂದಿದನು.
- Verse 48: ಇದಲ್ಲದೆ ಅವನು ಸುಲಿಗೆ ಮಾಡುವವರಾದ ಅಮಾಲೇಕ್ಯರಿಗೆ ವಿರೋಧವಾಗಿ ದಂಡೆತ್ತಿ ಹೋಗಿ, ಅವರನ್ನು ಸದೆಬಡಿದು ಇಸ್ರಯೇಲರನ್ನು ಅವರ ಕೈಗೆ ಸಿಕ್ಕದಂತೆ ತಪ್ಪಿಸಿದನು.
- Verse 49: ಸೌಲನ ಗಂಡುಮಕ್ಕಳ ಹೆಸರು ಇವು: ಯೋನಾತಾನ್, ಇಷ್ವಿ ಹಾಗು ಮಲ್ಕೀಷೂವ; ಅವನ ಹೆಣ್ಣುಮಕ್ಕಳ ಹೆಸರು ಮೇರಬ್ ಹಾಗು ಮೀಕಲ್.
- Verse 50: ಅಹೀಮಾಚನ ಮಗಳಾದ ಅಹೀನೋವಮಳು ಅವನ ಹೆಂಡತಿ; ನೇರನ ಮಗನಾದ ಅಬ್ನೇರನು ಅವನ ಸೇನಾಪತಿ; ನೇರನು ಸೌಲನ ಚಿಕ್ಕಪ್ಪನು.
- Verse 51: ಸೌಲನ ತಂದೆಯಾದ ಕೀಷನೂ ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.
- Verse 52: ಸೌಲನ ಜೀವಮಾನದಲ್ಲೆಲ್ಲಾ ಫಿಲಿಷ್ಟಿಯರಿಗೂ ಇಸ್ರಯೇಲರಿಗೂ ಘೋರ ಯುದ್ಧ ಇದ್ದುದರಿಂದ ಅವನು ಎಲ್ಲಿಯಾದರೂ ಒಬ್ಬ ಬಲಿಷ್ಠನೂ ಪರಾಕ್ರಮಶಾಲಿಯೂ ಆದ ಮನುಷ್ಯನನ್ನು ಕಂಡಕೂಡಲೆ, ಅವನನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದನು.