P. O. C ബൈബിള്
ಹಳೆಯ ಒಡಂಬಡಿಕೆ
ನ್ಯಾಯಸ್ಥಾಪಕರು
5ನೇ ಅಧ್ಯಾಯ
- Verse 1: ಆ ದಿನ ದೆಬೋರಳು ಮತ್ತು ಅಬೀನೋವಮನ ಮಗ ಬಾರಾಕನು ಈ ಗೀತೆಯನ್ನು ಹಾಡಿದರು:
- Verse 2: ಪಣತೊಟ್ಟಿದ್ದರು ಇಸ್ರಯೇಲಿನ ವೀರರು ಸೈನ್ಯಸೇರಿದ್ದಾರೆ ಸ್ವೇಚ್ಛೆಯಿಂದಾ ಜನರು ಮಾಡಿರಿ ನೀವು ಸರ್ವೇಶ್ವರನಾ ಗುಣಗಾನವನು;
- Verse 3: ಅರಸರೇ, ಕೇಳಿ! ಪ್ರಭುಗಳೇ, ಕಿವಿಗೊಡಿ; ನಾ ಕಟ್ಟುವೆನು ಕವಿತೆಯನು ಸರ್ವೇಶ್ವರನಿಗೆ ನಾ ಭಜಿಸಿ ಹಾಡುವೆನು ಇಸ್ರಯೇಲರಾ ದೇವನಿಗೆ;
- Verse 4: ಎದೋಮ್ಯರ ಪ್ರಾಂತ್ಯದಿಂದ, ಸೇಯೀರ ಗುಡ್ಡದಿಂದ ಹೇ ಸರ್ವೇಶ್ವರಾ, ನೀ ಹೊರಟು ಬರುವಾಗ ಕಂಪಿಸಿತು ಭೂಮಿ, ಹನಿಗರೆಯಿತು ಆಗಸ ಮಳೆಸುರಿಸಿತು ಮೇಘಮಂಡಲ.
- Verse 5: ಕರಗಿಹೋದವು ಬೆಟ್ಟಗುಡ್ಡಗಳು ಆ ಸರ್ವೇಶ್ವರನ ಮುಂದೆ ನೀರಾಗಿ ಹೋಯಿತು ಸೀನಾಯಿ ಪರ್ವತವು ಇಸ್ರಯೇಲರ ದೇವನೆದುರಿಗೆ.
- Verse 6: ಅನಾತನ ಮಗ ಶಮ್ಗರನ ಕಾಲದಲ್ಲಿ, ಯಾಯೇಲನ ದಿನಗಳಲಿ ನಿಂತುಹೋಯಿತು ಸಂಚಾರ ರಾಜಮಾರ್ಗಗಳಲಿ, ನಡೆದರು ಪಯಣಿಗರು ಸೀಳುದಾರಿಗಳಲಿ.
- Verse 7: ದೆಬೋರಾ, ಇಸ್ರಯೇಲರ ತಾಯಿಯಂತೆ ನೀ ಬರುವ ಮುನ್ನ ಪಾಳುಬಿದ್ದಿದ್ದವು ಇಸ್ರಯೇಲ ಗ್ರಾಮಗಳೆಲ್ಲ.
- Verse 8: ಆರಿಸಿಕೊಂಡಿದ್ದರು ಜನರು ಅನ್ಯ ದೇವತೆಗಳನು ಊರಬಾಗಿಲವರೆಗೆ ಬಂದಿತು ಕದನಕಾಳಗಗಳು ಇರಲಿಲ್ಲ ಗುರಾಣಿ, ಭರ್ಜಿಗಳಾವು ಓರ್ವರಲ್ಲೂ ಇಸ್ರಯೇಲರಾ ನಾಲ್ವತ್ತು ಸಾವಿರ ಸೈನಿಕರಲ್ಲೂ.
- Verse 9: ಇಸ್ರಯೇಲಿನಾ ನಾಯಕರೊಡನೆ ಸೇರಿ ಸ್ವೇಚ್ಛೆಯಿಂದ ಸೈನ್ಯಸೇರಿದಾ ಜನರೊಡಗೂಡಿ ನಾ ನಲಿದು ಹಾಡುವೆನು, ಮಾಡಿರಿ ನೀವು ಸರ್ವೇಶ್ವರನ ಗುಣಗಾನವನು;
- Verse 10: ಬಿಳೀ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾಡಿರಿ ಗಾನ, ಮಾಡಿರಿ ಗುಣಗಾನ, ಓ ಪಯಣಿಗರೇ.
- Verse 11: ಸೇದುವ ಬಾವಿಗಳ ಬಳಿ ಕುಳಿತು ಕೊಳ್ಳೆಹಂಚಿಕೊಳ್ಳುವವರ ಧ್ವನಿಯನಾಲಿಸು! ವರ್ಣಿಸುತಿಹರವರು ಸರ್ವೇಶ್ವರ ಸಾಧಿಸಿದ ನೀತಿಯನು, ತನ್ನ ಪ್ರಜೆ ಇಸ್ರಯೇಲ್ ಊರುಗಳಲ್ಲಾತನು ಸ್ಥಾಪಿಸಿದ ನ್ಯಾಯವನು.
- Verse 12: ಎಚ್ಚರಗೊಳ್ಳು, ಎಚ್ಚರಗೊಳ್ಳು, ದೆಬೋರಾ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಮಾಡು ನೀ ಗುಣಗಾನ, ಬಾರಾಕನೇ, ಏಳು; ಅಬೀನೋವಮನ ಮಗನೇ, ಏಳು, ಸೆರೆಹಿಡಿದವರನು ನೀ ಸಾಗಿಸಿಕೊಂಡು ಹೋಗು.
- Verse 13: ಚದರಿಹೋದವರು ಕೂಡಿಬಂದರು ನಾಯಕರ ಬಳಿಗೆ ಸರ್ವೇಶ್ವರನ ಶೂರಜನರು ವೀರರಂತೆ ನೆರೆದುಬಂದರು ನನ್ನ ಸಹಾಯಕ್ಕೆ.
- Verse 14: ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯೀಮ್ಯರು, ಅವರೊಂದಿಗೆ ಬಂದರು ಬೆನ್ಯಾಮೀನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.
- Verse 15: ಇಸ್ಸಾಕಾರ್ ಕುಲಪ್ರಭುಗಳು ಬಂದರು ದೆಬೋರಳ ಜೊತೆಯಲ್ಲಿ, ಆಗಮಿಸಿದನು ಬಾರಾಕನು ಇಸ್ಸಾಕಾರ್ಯರ ಸಂಗಡದಲಿ, ಇವನ ಹೆಜ್ಜೆಹಿಡಿದು ಬಂದರು ಅವರೆಲ್ಲರು ತವಕದಲಿ.
- Verse 16: ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು: ರೂಬೇನ್ಯರೇ, ನೀವೇಕೆ ಕೂತಿರಿ ಕುರಿಹಟ್ಟಿಗಳಲಿ? ಮಂದೆಗಳ ಮಧ್ಯೆಯಲಿ ಕೇಳಬೇಕೆಂದೋ ಅಪಾಯದ ಸಿಳ್ಳು ಸದ್ದನು? ಹೌದು ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು.
- Verse 17: ಗಿಲ್ಯಾದರು ಉಳಿದರು ಜೋರ್ಡನಿನ ಆಚೆಯಲ್ಲೇ ದಾನ್ ಕುಲದವರು ಉಳಿಯರೇಕೆ, ಹಡಗುಗಳಲ್ಲೇ? ಅಶೇರ್ ಕುಲದವರೋ ಅಂಟುಕೊಂಡರು ತಮ್ಮ ರೇವುಗಳಿಗೇ ನೆಮ್ಮದಿಯಾಗಿ ಕೂತುಬಿಟ್ಟರು ಸಮುದ್ರತೀರದಲ್ಲೆ.
- Verse 18: ಅಂಥವರಲ್ಲ ಈ ಜೆಬುಲೂನ್ಯರು, ನಫ್ತಾಲ್ಯರು ಪ್ರಾಣವನ್ನೇ ಮುಡಿಪಾಗಿಟ್ಟರು ರಣಭೂಮಿಯೊಳು.
- Verse 19: ಎದ್ದುಬಂದು ಯುದ್ಧ ಮಾಡಿದರು ಅರಸುಗಳು ಕೂಡಿಬಂದು ಕಾದಾಡಿದರು ಕಾನಾನ್ಯ ರಾಜರುಗಳು ಮೆಗಿದ್ದೋ ನದಿಗಳ ಬಳಿ ತಾನಾಕದೊಳು ಆದರೆ ಗಿಟ್ಟಲಿಲ್ಲ ಅವರಿಗೆ ಬೆಳ್ಳಿದ್ರವ್ಯಗಳೇನು!
- Verse 20: ಕದನವಾಡಿದವು ತಾರೆಗಳು ಆಗಸದಿಂದಲೆ ಯುದ್ಧಮಾಡಿದವು ಸೀಸೆರನ ವಿರುದ್ಧ ತಮ್ಮಾ ಪಥದಿಂದಲೆ.
- Verse 21: ಶತ್ರುಗಳನು ಕೊಚ್ಚಿಕೊಂಡು ಹೋಯಿತು ಪೂರ್ವಪ್ರಸಿದ್ಧವಾದ ಆ ಕೀಷೋನ್ ಹೊಳೆಯು. ನನ್ನ ಮನವೇ, ನೀ ಧೈರ್ಯದಿಂದ ಮುಂದೆ ಸಾಗು.
- Verse 22: ನೆಲ ಕಂಪಿಸಿತು ಕುದುರೆಗಳ ಭರದೌಡಿನಿಂದ ಸುತ್ತಿಗೆಯಂತಹ ಆ ಕಾಲುಗಳ ಪೆಟ್ಟಿನಿಂದ
- Verse 23: ‘ಶಾಪಹಾಕಿರಿ ಮೇರೋಜ್ ಊರಿಗೆ, ಅದರ ನಿವಾಸಿಗಳಿಗೆ ಬರಲಿಲ್ಲ ಅವರು ಯುದ್ಧವೀರರ ಜೊತೆಗೆ ಸರ್ವೇಶ್ವರನ ಸಹಾಯಕ್ಕೆ. ಶಪಿಸಿರಿ ಅವರನ್ನು’ ಎಂದು ಕರೆಗೊಟ್ಟನು ಸರ್ವೇಶ್ವರನ ದೂತನೆ.
- Verse 24: ಗುಡಾರಗಳಲಿ ವಾಸಿಸುವ ಸ್ತ್ರೀಯರಲ್ಲಿ ಯಾಯೇಲಳೆ ಭಾಗ್ಯವತಿ, ಹೌದು, ಅವಳೇ ಭಾಗ್ಯವತಿ, ಕೇನ್ಯನಾದ ಹೆಬೆರನ ಆ ಹೆಂಡತಿ.
- Verse 25: ನೀರು ಕೇಳಲು ಹಾಲು ಕೊಟ್ಟಳು ಉತ್ತಮ ಪಾತ್ರೆಯಲ್ಲಿ ಮೊಸರು ಕೊಟ್ಟಳು.
- Verse 26: ಗೂಟ ತೆಗೆದುಕೊಂಡಳು ಕೈಚಾಚಿ ಹಿಡಿದಳು ಬಲಗೈಯಲಿ ದೊಡ್ಡಕೊಡತಿ ಜಡಿದಳು ಸೀಸೆರನ ತಲೆಯನು ಬಡಿದಳಾ ಕೊಡತಿಯಿಂದ ಕಣತಲೆಗೇ ತಿವಿದು.
- Verse 27: ಬೊಗ್ಗಿಬಿದ್ದನು, ಉರುಳಿಬಿದ್ದನು, ಮುದುರಿಬಿದ್ದನವನು ಅವಳ ಕಾಲುಗಳ ಬಳಿ ಅಲ್ಲೆ ಸತ್ತುಬಿದ್ದನು.
- Verse 28: ಸೀಸೆರನ ತಾಯಿ ಇಣುಕಿ ನೋಡಿದಳು ಕಿಟಕಿಯಿಂದ ಕೂಗಿದಳು ಆ ಕಿಟಕಿಯ ಜಾಲರಿಗಳಿಂದ; ‘ಇಷ್ಟು ಹೊತ್ತಾಗಬೇಕೆ ರಥ ಬರುವುದಕ್ಕೆ? ಕುದುರೆಗಳ ಕಾಲುಗಳಿಗೆ ಇಷ್ಟು ಸಾವಕಾಶವೇಕೆ?’
- Verse 29: ಸಭ್ಯಸ್ತ್ರೀಯರೊಳು ಬುದ್ಧಿವಂತೆಯರು ಕೊಟ್ಟ ಉತ್ತರವನು ತನ್ನೊಳಗೇ ಮೆಲಕು ಹಾಕಿದ್ದಳು ಇಂತೆಂದುಕೊಂಡು:
- Verse 30: ‘ನಿಶ್ಚಯವಾಗಿ ಸಿಕ್ಕಿರಬೇಕು ಅವರಿಗೆ ಕೊಳ್ಳೆ ಹಂಚಿಕೊಳ್ಳುತ್ತಿರಬೇಕು ಅದನು ತಮ್ಮತಮ್ಮಲ್ಲೆ ಪ್ರತಿಯೊಬ್ಬ ಸೈನಿಕನಿಗೆ ಒಬ್ಬೊಬ್ಬ ದಾಸಿಯರು ಸೀಸೆರನಿಗೊ, ಬಣ್ಣಬಣ್ಣವಾದ ಬಟ್ಟೆಬರೆಗಳು ವಿಚಿತ್ರ ಕಸೂತಿಹಾಕಿದ ಒಂದೆರಡು ವಸ್ತ್ರಗಳು, ಕಂಠಮಾಲೆಗಳು’.
- Verse 31: ಸರ್ವೇಶ್ವರನ ಶತ್ರುಗಳೆಲ್ಲರು ನಾಶವಾಗಲಿ ಇವರಂತೆ ಆತನ ಭಕ್ತರು ಬೆಳಗಲಿ ಉದಯಕಾಲದ ಸೂರ್ಯನಂತೆ! ನಾಡಿನಲಿ ನಾಲ್ವತ್ತು ವರ್ಷಕಾಲ ಶಾಂತಿ ನೆಲಸಿತ್ತು!