ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
25ನೇ ಅಧ್ಯಾಯ
- Verse 1: ಸಮುವೇಲನು ಮರಣಹೊಂದಿದನು. ಇಸ್ರಯೇಲರೆಲ್ಲರೂ ಕೂಡಿಬಂದು ಅವನಿಗಾಗಿ ಸಂತಾಪಸೂಚಿಸುತ್ತಾ ಅವನ ಶವವನ್ನು ರಾಮಾದಲ್ಲಿದ್ದ ಅವನ ಮನೆಯ ಅಂಗಳದಲ್ಲೇ ಸಮಾಧಿಮಾಡಿದರು. ದಾವೀದನು ಹೊರಟು ಪಾರಾನ್ ಮರುಭೂಮಿಗೆ ಹೋದನು.
- Verse 2: ಕರ್ಮೆಲಿನಲ್ಲಿ ಸ್ವಂತ ಸೊತ್ತು ಪಡೆದಿದ್ದ ಒಬ್ಬ ಮನುಷ್ಯ ಮಾವೋನಿನಲ್ಲಿ ವಾಸಿಸುತ್ತಿದ್ದನು. ಅವನ ಹೆಸರು ನಾಬಾಲ.
- Verse 3: ಅವನ ಹೆಂಡತಿಯ ಹೆಸರು ಅಬೀಗೈಲ್. ಆಕೆ ಬಹು ಬುದ್ಧಿವಂತೆ ಹಾಗು ಸುಂದರಿ. ಕಾಲೇಬನ ವಂಶದವನಾದ ಆ ಮನುಷ್ಯನಾದರೊ ನಿಷ್ಠುರನು ಹಾಗು ದುಷ್ಕರ್ಮಿ. ಅವನು ಬಹು ಧನವಂತನೂ ಆಗಿದ್ದ. ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಆಡುಗಳೂ ಇದ್ದವು. ಅವನು ಒಮ್ಮೆ ಕರ್ಮೆಲಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿದ್ದನು.
- Verse 4: ನಾಬಾಲನು ಉಣ್ಣೆ ಕತ್ತರಿಸುತ್ತಿದ್ದಾನೆ ಎಂಬ ಸಮಾಚಾರ ಅಲ್ಲಿನ ಮರುಭೂಮಿಯಲ್ಲಿದ್ದ ದಾವೀದನಿಗೆ ಮುಟ್ಟಿತು.
- Verse 5: ಅವನು ಹತ್ತುಮಂದಿ ಸೇವಕರನ್ನು ಕರೆದು ಅವರಿಗೆ, “ನೀವು ಕರ್ಮೆಲಿನಲ್ಲಿರುವ ನಮ್ಮ ಸಂಬಂಧಿಕನಾದ ನಾಬಾಲನ ಬಳಿಗೆ ಹೋಗಿ ಅವನ ಕ್ಷೇಮಸಮಾಚಾರವನ್ನು ವಿಚಾರಿಸಿರಿ.
- Verse 6: ಅವನಿಗೆ ನನ್ನ ಹೆಸರಿನಲ್ಲಿ, ‘ನಿನಗೂ ನಿನ್ನ ಕುಟುಂಬಕ್ಕೂ ನಿನ್ನ ಸರ್ವಸಂಪತ್ತಿಗೂ ಶುಭವಾಗಲಿ!
- Verse 7: ನಿನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವ ಕೆಲಸ ನಡೆಯುತ್ತಿದೆಯೆಂಬ ಸುದ್ದಿಯನ್ನು ಕೇಳಿದ್ದೇನೆ. ನಿನ್ನ ಕುರುಬರು ನಮ್ಮೊಡನೆ ಕರ್ಮೆಲಿನಲ್ಲಿದ್ದ ಕಾಲವೆಲ್ಲಾ ನಾವು ಅವರನ್ನು ತೊಂದರೆಪಡಿಸಲಿಲ್ಲ; ಅವರಿಗೇನೂ ನಷ್ಟಮಾಡಲಿಲ್ಲ.
- Verse 8: ನಿನ್ನ ಆಳುಗ಼ಳನ್ನೇ ಕೇಳು, ಅವರೇ ಹೇಳುವರು. ಹೀಗಿರುವುದರಿಂದ ಶುಭಕಾಲದಲ್ಲಿ ನಿನ್ನ ಬಳಿಗೆ ಬಂದಿರುವ ನನ್ನ ಸೇವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಕೃಪೆಮಾಡಿ ನಿನ್ನ ಸೇವಕರಿಗೂ ಮಗನಾದ ದಾವೀದನಿಗೂ ನಿನಗಿರುವುದರಲ್ಲಿ ಸಾಧ್ಯವಾದುದ್ದನ್ನು ಕೊಡು,’ ಎಂದು ಅವನಿಗೆ ಹೇಳಿರಿ,” ಎಂದು ಅವರನ್ನು ಕಳುಹಿಸಿದನು.
- Verse 9: ದಾವೀದನ ಸೇವಕರು ಹೋಗಿ ಅವನ ಹೆಸರಿನಲ್ಲಿ ಈ ಮಾತುಗಳನ್ನೆಲ್ಲಾ ನಾಬಾಲನಿಗೆ ತಿಳಿಸಿದರು. ಅಲ್ಲೇ ಉತ್ತರಕ್ಕಾಗಿ ಕಾಯುತ್ತಿದ್ದರು.
- Verse 10: ನಾಬಾಲನು ಅವರಿಗೆ, “ದಾವೀದನಾರು? ಜೆಸ್ಸೆಯನ ಮಗನಾರು? ಯಜಮಾನರನ್ನು ಬಿಟ್ಟು ಓಡಿಹೋದ ಗುಲಾಮರು ಈಗಿನ ಕಾಲದಲ್ಲಿ ಎಷ್ಟುಮಂದಿಯಿಲ್ಲ.
- Verse 11: ಉಣ್ಣೆ ಕತ್ತರಿಸುವವರಿಗಾಗಿ ನಾನು ಸಿದ್ಧಮಾಡಿಸಿದ ಮಾಂಸವನ್ನೂ ಆಹಾರಪಾನಗಳನ್ನೂ ಎತ್ತಿ ಎಲ್ಲಿಂದಲೋ ಬಂದವರಿಗೆ ಕೊಡಲಾಗದು,” ಎಂದು ಉತ್ತರಕೊಟ್ಟನು.
- Verse 12: ಆ ಸೇವಕರು ಹಿಂದಿರುಗಿ ತಮ್ಮ ದಾರಿಹಿಡಿದು ದಾವೀದನ ಬಳಿಗೆ ಬಂದು ಅವನಿಗೆ ಎಲ್ಲವನ್ನು ತಿಳಿಸಿದರು.
- Verse 13: ಆಗ ದಾವೀದನು ತನ್ನ ಜನರಿಗೆ, “ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿ,” ಎಂದು ಆಜ್ಞಾಪಿಸಿದನು; ಅವರೆಲ್ಲರೂ ಕಟ್ಟಿಕೊಂಡರು. ದಾವೀದನೂ ಕಟ್ಟಿಕೊಂಡನು. ಹೆಚ್ಚುಕಡಿಮೆ ನಾನೂರುಮಂದಿ ದಾವೀದನ ಜೊತೆಯಲ್ಲಿ ಹೋದರು; ಇನ್ನೂರುಮಂದಿ ಸಾಮಾಗ್ರಿಗಳನ್ನು ಕಾಯುತ್ತಾ ಅಲ್ಲೇ ಇದ್ದರು.
- Verse 14: ನಾಬಾಲನ ಸೇವಕರಲ್ಲೊಬ್ಬನು ಅವನ ಹೆಂಡತಿಯಾದ ಅಬೀಗೈಲಳಿಗೆ, “ಮರುಭೂಮಿಯಲ್ಲಿರುವ ದಾವೀದನು ನಮ್ಮ ದಣಿಯ ಕ್ಷೇಮ ವಿಚಾರಕ್ಕಾಗಿ ದೂತರನ್ನು ಕಳುಹಿಸಿದ್ದನು. ದಣಿಯವರು ಬಂದವರನ್ನು ಚೆನ್ನಾಗಿ ಬೈದು ಕಳಿಸಿದರು.
- Verse 15: ಆ ಜನರು ನಮಗೆ ಬಹಳ ಉಪಕಾರ ಮಾಡಿದವರು; ನಾವು ಅವರೊಡನೆ ಅಡವಿಯಲ್ಲಿದ್ದ ಕಾಲವೆಲ್ಲಾ ಏನೂ ತೊಂದರೆಪಡಲಿಲ್ಲ, ನಷ್ಟಹೊಂದಲಿಲ್ಲ.
- Verse 16: ನಾವು ಕುರಿಗಳನ್ನು ಮೇಯಿಸುವವರಾಗಿ ಅವರೊಡನಿದ್ದಾಗ ಅವರು ಹಗಲೂ ಇರುಳೂ ನಮಗೆ ಕಾವಲುಗೋಡೆಯಂತಿದ್ದರು.
- Verse 17: ಈಗ ಮಾಡಬೇಕಾದುದ್ದನ್ನು ನೀವೇ ಆಲೋಚಿಸಿ ತೀರ್ಮಾನಿಸಿ. ನಮ್ಮ ಯಜಮಾನರಿಗೂ ಅವರ ಕುಟುಂಬದವರೆಲ್ಲರಿಗೂ ಕೇಡು ಹತ್ತಿರವಾಗಿದೆ; ಮಂದಮತಿಯಾದ ಅವರೊಡನೆ ಮಾತಾಡುವುದು ಅಸಾಧ್ಯ,” ಎಂದು ಹೇಳಿದನು.
- Verse 18: ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿ, ಎರಡು ಬುದ್ದಲಿ ದ್ರಾಕ್ಷಾರಸ, ಸಿದ್ಧಮಾಡಿದ ಐದು ಕುರಿಗಳ ಮಾಂಸ, ಐವತ್ತು ಸೇರು ಹುರಿಗಾಳು, ಒಣಗಿದ ನೂರು ದ್ರಾಕ್ಷೀ ಗೊಂಚಲುಗಳು, ಅಂಜೂರ ಹಣ್ಣುಗಳ ಇನ್ನೂರು ಉಂಡೆಗಳು, ಇವುಗಳನ್ನೆಲ್ಲ ಕತ್ತೆಗಳ ಮೇಲೆ ಹೇರಿಸಿದಳು.
- Verse 19: ಅನಂತರ ತನ್ನ ಸೇವಕರಿಗೆ, “ನೀವು ಮುಂದೆ ನಡೆಯಿರಿ, ನಾನು ಹಿಂದೆ ಬರುತ್ತೇನೆ,” ಎಂದು ಹೇಳಿ ಅವರನ್ನು ಕಳುಹಿಸಿದಳು. ಗಂಡನಾದ ನಾಬಾಲನಿಗೆ ಏನೂ ತಿಳಿಸಲಿಲ್ಲ.
- Verse 20: ಆಕೆ ಕತ್ತೆಯ ಮೇಲೆ ಕೂತು ಗುಡ್ಡದ ಮರೆಯಲ್ಲಿ ಹೋಗುತ್ತಿರುವಾಗ ದಾವೀದನೂ ಅವನ ಜನರೂ ಆ ಕಡೆಯಿಂದ ಗುಡ್ಡ ಇಳಿದು ಬಂದರು. ಆಕೆ ಅವರನ್ನು ಎದುರುಗೊಂಡಳು.
- Verse 21: ಅಷ್ಟರಲ್ಲಿ ದಾವೀದನು, “ನಾನು ಅಡವಿಯಲ್ಲಿ ಈ ಮನುಷ್ಯನ ಆಸ್ತಿಯಲ್ಲಿ ಏನೂ ನಷ್ಟವಾಗದಂತೆ ಕಾಪಾಡಿದ್ದು ವ್ಯರ್ಥ ಆಯಿತು. ಅವನು ಉಪಕಾರಕ್ಕೆ ಅಪಕಾರ ಮಾಡಿದ್ದಾನೆ.
- Verse 22: ಬೆಳಗಾಗುವಷ್ಟರಲ್ಲಿ ಅವನ ಜನರೊಳಗೆ ಒಬ್ಬ ಗಂಡಸಾದರೂ ಉಳಿದರೆ ದೇವರು ದಾವೀದನಿಗೆ ಬೇಕಾದದ್ದನ್ನು ಮಾಡಲಿ!” ಎಂದು ಪ್ರತಿಜ್ಞೆ ಮಾಡಿದ್ದನು.
- Verse 23: ಅಬೀಗೈಲಳು ದಾವೀದನನ್ನು ಕಂಡ ಕೂಡಲೆ ಕತ್ತೆಯಿಂದಿಳಿದು ಅವನಿಗೆ ಸಾಷ್ಟಾಂಗ ನಮಸ್ಕರಿಸಿದಳು.
- Verse 24: ಆಮೇಲೆ ಅವನ ಪಾದಗಳ ಮೇಲೆ ಬಿದ್ದು, “ಒಡೆಯಾ, ಅಪರಾಧವು ನನ್ನ ಮೇಲಿರಲಿ; ನಿಮ್ಮ ದಾಸಿಯಾದ ನಾನು ಮಾತಾಡುವುದಕ್ಕೆ ಅಪ್ಪಣೆಯಾಗಲಿ. ನನ್ನ ಮಾತನ್ನು ಆಲಿಸಬೇಕು;
- Verse 25: ಒಡೆಯಾ, ಮಂದಮತಿಯಾದ ಆ ನಾಬಾಲನನ್ನು ತಾವು ಲಕ್ಷಿಸಬೇಡಿ. ಅವನ ಹೆಸರು ನಾಬಾಲ್; ಅದಕ್ಕೆ ತಕ್ಕಂತೆ ಮೂರ್ಖನೇ ಆಗಿರುತ್ತಾನೆ. ನಿಮ್ಮ ದಾಸಿಯಾದ ನಾನು, ತಾವು ಕಳುಹಿಸಿದ ಸೇವಕರನ್ನು ನೋಡಲಿಲ್ಲ.
- Verse 26: ಒಡೆಯಾ, ತಾವು ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಸರ್ವೇಶ್ವರ ತಮ್ಮನ್ನು ಕಾಪಾಡಿದ್ದಾರೆ. ಸರ್ವೇಶ್ವರನಾಣೆ, ನಿಮ್ಮ ಜೀವದಾಣೆ, ನಿಮ್ಮ ವಿರೋಧಿಗಳೂ ನಿಮಗೆ ಕೇಡು ಬಗೆಯುವವರೂ ನಾಬಾಲನ ಗತಿಯನ್ನು ಹೊಂದಲಿ!
- Verse 27: ನಿಮ್ಮ ದಾಸಿ ತಂದ ಈ ಕಾಣಿಕೆಯನ್ನು ಅಂಗೀಕರಿಸಿರಿ. ಅದು ತಮ್ಮ ಸೇವಕರಿಗೆ ಸಲ್ಲಲಿ.
- Verse 28: ನಿಮ್ಮ ದಾಸಿಯ ಅಪರಾಧಕ್ಕೆ ಕ್ಷಮಾಪಣೆಯಾಗಲಿ; ಒಡೆಯಾ, ತಾವು ಸರ್ವೇಶ್ವರನ ಶತ್ರುಗಳೊಡನೆ ಯುದ್ಧಮಾಡುವುದರಿಂದ ಅವರು ನಿಮ್ಮ ಮನೆಯನ್ನು ಶಾಶ್ವತವಾಗಿ ಸ್ಥಿರಪಡಿಸುವರು. ಆದುದರಿಂದ ನಿಮ್ಮ ಜೀವಮಾನದಲ್ಲೆಲ್ಲಾ ನಮ್ಮಲ್ಲಿ ಕೆಟ್ಟತನ ಕಾಣದಿರಲಿ;
- Verse 29: ಯಾವನಾದರೂ ನನ್ನ ಒಡೆಯರಾದ ನಿಮ್ಮನ್ನು ಹಿಂಸಿಸಿ ಜೀವತೆಗೆಯಬೇಕೆಂದು ಇರುವಾಗ, ಆ ನಿಮ್ಮ ಜೀವ, ತಮ್ಮ ದೇವರಾದ ಸರ್ವೇಶ್ವರನ ರಕ್ಷಣೆಯಲ್ಲಿರುವ ಜೀವನಿಕ್ಷೇಪದಲ್ಲಿ ಸುಭದ್ರವಾಗಿರಲಿ; ಆದರೆ ನಿಮ್ಮ ಶತ್ರುಗಳ ಜೀವವನ್ನು ಕವಣೆಯ ಕಲ್ಲನ್ನೋ ಎಂಬಂತೆ ಎಸೆದುಬಿಡಲಿ.
- Verse 30: ಸರ್ವೇಶ್ವರ ನನ್ನ ಒಡೆಯರಾದ ನಿಮಗೆ ವಾಗ್ದಾನಮಾಡಿದ ಎಲ್ಲಾ ಸೌಭಾಗ್ಯವನ್ನು ದಯಪಾಲಿಸಿ, ನಿಮ್ಮನ್ನು ಇಸ್ರಯೇಲಿನ ಅರಸರನ್ನಾಗಿ ಮಾಡಲಿ.
- Verse 31: ಆಗ ನಿರಪರಾಧಿಯ ರಕ್ತವನ್ನು ಸುರಿಸಿ ಸೇಡುತೀರಿಸಿಕೊಂಡದ್ದಕ್ಕಾಗಿ ವಿಷಾದ, ಪಶ್ಚಾತ್ತಾಪಗಳಿಗೆ ಕಾರಣವಿರುವುದಿಲ್ಲ. ಸರ್ವೇಶ್ವರ ನಿಮ್ಮನ್ನು ಮಹಾಪದವಿಗೆ ಏರಿಸುವಾಗ ನಿಮ್ಮ ದಾಸಿಯಾದ ನನ್ನನ್ನು ಮರೆತುಬಿಡಬೇಡಿ,” ಎಂದಳು.
- Verse 32: ಆಗ ದಾವೀದನು ಅಬೀಗೈಲಳಿಗೆ, “ಈ ದಿನ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!
- Verse 33: ಸ್ವಹಸ್ತದಿಂದ ಸೇಡುತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಜಾಣ್ಮೆಯೂ ಸ್ತುತ್ಯರ್ಹವೇ ಸರಿ.
- Verse 34: ನಿನಗೆ ಕೇಡುಮಾಡದಂತೆ ನನ್ನನ್ನು ತಡೆದ ಇಸ್ರಯೇಲ್ ದೇವರಾದ ಸರ್ವೇಶ್ವರನ ಆಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದಿದ್ದರೆ ಖಂಡಿತವಾಗಿ ನಾಳೆ ಬೆಳಗಾಗುವಷ್ಟರಲ್ಲಿ ನಾಬಾಲನವರಲ್ಲಿ ಒಬ್ಬ ಗಂಡಸಾದರೂ ಖಂಡಿತವಾಗಿ ಉಳಿಯುತ್ತಿರಲಿಲ್ಲ!” ಎಂದು ಹೇಳಿದನು.
- Verse 35: ಆಕೆ ತಂದ ಪದಾರ್ಥಗಳನ್ನು ತೆಗೆದುಕೊಂಡು ಆಕೆಗೆ, “ಸಮಾಧಾನದಿಂದ ಮನೆಗೆ ಹೋಗು; ನಿನ್ನನ್ನು ಕಟಾಕ್ಷಿಸಿ, ನಿನ್ನ ವಿಜ್ಞಾಪನೆಯನ್ನು ಆಲಿಸಿದ್ದೇನೆ,” ಎಂದನು.
- Verse 36: ಅಬೀಗೈಲಳು ನಾಬಾಲನ ಬಳಿಗೆ ಬಂದಳು. ಅವನು ತನ್ನ ಮನೆಯಲ್ಲಿ ರಾಜರಂತೆ ಒಂದು ದೊಡ್ಡ ಔತಣವನ್ನು ಮಾಡಿಸಿ, ಬಹಳವಾಗಿ ಕುಡಿದು, ಬಹು ಸಂಭ್ರಮದಿಂದಿದ್ದ ಕಾರಣ ಈಕೆ ಮರುದಿವಸದವರೆಗೆ ಇದರ ವಿಷಯವಾಗಿ ಏನೂ ಹೇಳಲಿಲ್ಲ.
- Verse 37: ಮರುದಿನ ಅಮಲಿಳಿದ ನಂತರ ಈಕೆ ಈ ಸಮಾಚಾರವನ್ನು ಅವನಿಗೆ ತಿಳಿಸಿದಳು. ಆಗ ಅವನ ಗುಂಡಿಗೆ ಒಡೆಯಿತು. ಅವನು ಕಲ್ಲಿನಂತಾದನು.
- Verse 38: ಸರ್ವೇಶ್ವರ ವಿಧಿಸಿದ ದಂಡನೆಯ ನಿಮಿತ್ತ ಸುಮಾರು ಹತ್ತು ದಿನಗಳಾದ ನಂತರ ನಾಬಾಲನು ಸತ್ತುಹೋದನು.
- Verse 39: ನಾಬಾಲನು ಸತ್ತನೆಂಬ ವರ್ತಮಾನವನ್ನು ದಾವೀದನು ಕೇಳಿದನು. “ನನಗೆ ಅಪಮಾನ ಮಾಡಿದ ನಾಬಾಲನಿಗೆ ಮುಯ್ಯಿ ತೀರಿಸಿದಂಥ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ನನ್ನನ್ನು ಕೆಟ್ಟತನದಿಂದ ದೂರಮಾಡಿ ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆಯೇ ಹೊರಿಸಿದ್ದಾರೆ,” ಎಂದನು. ಅನಂತರ ಅವನು, ಅಬೀಗೈಲಳು ತನಗೆ ಹೆಂಡತಿಯಾಗಬೇಕೆಂದು ದೂತರನ್ನು ಕಳುಹಿಸಿದನು.
- Verse 40: ಅವರು ಕರ್ಮೆಲಿನಲ್ಲಿದ್ದ ಅಬೀಗೈಲಳ ಬಳಿಗೆ ಹೋಗಿ ಆಕೆಗೆ, “ದಾವೀದ ಅವರು ನಿನ್ನನ್ನು ತಮಗೆ ಹೆಂಡತಿಯಾಗುವುದಕ್ಕೆ ಕರೆದುಕೊಂಡು ಬರಬೇಕೆಂದು ನಮ್ಮನ್ನು ಕಳುಹಿಸಿದ್ದಾರೆ,” ಎಂದರು.
- Verse 41: ಆಕೆ ಎದ್ದು ನಮಸ್ಕಾರ ಮಾಡಿ, ಮಾತಾಡಿಸಿದವನಿಗೆ, “ನಿನ್ನ ದಾಸಿಯಾದ ನಾನು ನನ್ನ ಒಡೆಯರ ಕೈಕೆಳಗಿರುವ ಸೇವಕರ ಪಾದ ತೊಳೆಯುವುದಕ್ಕೂ ಸಿದ್ಧಳಾಗಿದ್ದೇನೆ,” ಎಂದು ಉತ್ತರಕೊಟ್ಟಳು.
- Verse 42: ಅಲ್ಲದೆ ಬೇಗನೆ ಒಂದು ಕತ್ತೆಯನ್ನು ಹತ್ತಿ ತನ್ನ ಐದುಮಂದಿ ದಾಸಿಯರ ಸಹಿತವಾಗಿ ದಾವೀದನ ಸೇವಕರ ಜೊತೆಯಲ್ಲೆ ಹೊರಟುಹೋಗಿ ಅವನ ಹೆಂಡತಿಯಾದಳು.
- Verse 43: ದಾವೀದನು ಜೆಸ್ರೀಲಿನವಳಾದ ಅಹೀನೋವಮಳನ್ನು ಮದುವೆಮಾಡಿಕೊಂಡಿದ್ದನು. ಈಗ ಅಬೀಗೈಲಳೂ ಅವನ ಹೆಂಡತಿಯಾದಳು.
- Verse 44: ಈ ಮಧ್ಯೆ ಸೌಲನು, ದಾವೀದನ ಹೆಂಡತಿಯಾಗಿದ್ದ ಮೀಕಲಳೆಂಬ ತನ್ನ ಮಗಳನ್ನು ಗಲ್ಲೀಮ್ ಊರಿನ ಲಯಿಷನ ಮಗನಾದ ಪಲ್ಟೀ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದನು.