ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
32ನೇ ಅಧ್ಯಾಯ
- Verse 1: ಜುದೇಯದ ಅರಸನಾದ ಚಿದ್ಕೀಯನ ಆಳ್ವಿಕೆಯ ಹತ್ತನೇ ವರ್ಷದಲ್ಲಿ, ಅಂದರೆ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ತಮ್ಮ ವಾಕ್ಯವನ್ನು ದಯಪಾಲಿಸಿದರು.
- Verse 2: ಆ ಸಮಯದಲ್ಲಿ ಬಾಬಿಲೋನಿಯದ ಅರಸನ ಸೈನ್ಯ ಜೆರುಸಲೇಮನ್ನು ಮುತ್ತಿತ್ತು. ಪ್ರವಾದಿ ಯೆರೆಮೀಯನು ಜುದೇಯದ ರಾಜನ ಮನೆಗೆ ಸೇರಿದ ಕಾರಾಗೃಹದಲ್ಲಿ ಸೆರೆಯಾಗಿದ್ದನು.
- Verse 3: ಜುದೇಯದ ಅರಸ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಸರ್ವೇಶ್ವರನೇ ಹೀಗೆಂದಿದ್ದಾರೆ: ನಾನು ಈ ನಗರವನ್ನು ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಸುವೆನು. ಅವನು ಇದನ್ನು ಆಕ್ರಮಿಸುವನು.
- Verse 4: ಈ ಜುದೇಯದ ಅರಸ ಚಿದ್ಕೀಯನು ಬಾಬಿಲೋನಿಯರ ಕೈಯಿಂದ ತಪ್ಪಿಸಿಕೊಳ್ಳಲಾಗದೆ ಅದರ ಅರಸನ ವಶವಾಗುವುದು ಖಂಡಿತ. ಅವನ ಮುಂದೆ ಸಾಕ್ಷಾತ್ತಾಗಿ ನಿಂತು ಮುಖಾಮುಖಿಯಾಗಿ ಮಾತಾಡುವನು.
- Verse 5: ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರುವ ತನಕ ಅಲ್ಲೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಸರ್ವೇಶ್ವರನ ನುಡಿ’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.
- Verse 6: ಯೆರೆಮೀಯನು ಆಗ ತಿಳಿಸಿದ್ದು ಇದು: ಸರ್ವೇಶ್ವರನು ನನಗೆ ಈ ವಾಕ್ಯವನ್ನು ದಯಪಾಲಿಸಿದರು -
- Verse 7: “ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನು ನಿನ್ನ ಬಳಿಗೆ ಬಂದು - ‘ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ಪರರ ಪಾಲಾಗದಂತೆ ಅದನ್ನು ಕೊಂಡುಕೊಳ್ಳುವ ಹಕ್ಕು ನಿನಗಿದೆ,’ - ಎಂದು ಹೇಳುವನು.”
- Verse 8: ಸರ್ವೇಶ್ವರನ ಈ ವಾಕ್ಯಾನುಸಾರ ನನ್ನ ಚಿಕ್ಕಪ್ಪನ ಮಗ ಹನಮೇಲನು ಕಾರಾಗೃಹದ ಅಂಗಳದಲ್ಲಿ ಇದ್ದ ನನ್ನ ಬಳಿಗೆ ಬಂದು, ‘ಬೆನ್ಯಾಮೀನ್ ನಾಡಿನ ಅನಾತೋತಿನಲ್ಲಿರುವ ನನ್ನ ಹೊಲವನ್ನು ದಯಮಾಡಿ ಕೊಂಡುಕೋ. ಅದಕ್ಕೆ ನೀನೆ ಬಾಧ್ಯನು, ನಿನಗಾಗಿಯೇ ಕೊಂಡುಕೊ’ ಎಂದು ಕೇಳಿಕೊಂಡನು. ಕೂಡಲೆ ಇದು ಸರ್ವೇಶ್ವರನ ನುಡಿ ಎಂದು ನನಗೆ ಗೊತ್ತಾಯಿತು.
- Verse 9: ನನ್ನ ಚಿಕ್ಕಪ್ಪನ ಮಗ ಹನಮೇಲನಿಂದ ಅನಾತೋತಿನಲ್ಲಿರುವ ಆ ಹೊಲವನ್ನು ಕೊಂಡುಕೊಂಡೆ. ಅದರ ಕ್ರಯವಾಗಿ ಹದಿನೇಳು ತೊಲ ಬೆಳ್ಳಿಯನ್ನು ತೂಕಮಾಡಿ ಅವನಿಗೆ ಕೊಟ್ಟೆ.
- Verse 10: ಪತ್ರಕ್ಕೆ ರುಜುಹಾಕಿ, ಮುದ್ರೆ ಒತ್ತಿ, ಸಾಕ್ಷಿಗಳನ್ನು ಹಾಕಿಸಿ, ತಕ್ಕಡಿಯಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆ.
- Verse 11: ಆಮೇಲೆ ನಾನು ಕ್ರಯಪತ್ರವನ್ನು, ಅಂದರೆ ಚಕ್ಕುಬಂದಿ ಷರತ್ತುಗಳಿಂದ ಕೂಡಿ ಮುದ್ರಿತವಾದ ಪತ್ರವನ್ನೂ ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು
- Verse 12: ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆ. ನನ್ನ ಚಿಕ್ಕಪ್ಪನ ಮಗ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ, ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲ ಯೆಹೂದ್ಯರ ಎದುರಿನಲ್ಲಿ, ಆ ಕ್ರಯಪತ್ರವನ್ನು ಕೊಟ್ಟೆ.
- Verse 13: ಅವರೆಲ್ಲರ ಮುಂದೆ ಬಾರೂಕನಿಗೆ,
- Verse 14: “ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: ನೀನು ಈ ಕ್ರಯಪತ್ರಗಳನ್ನು, ಅಂದರೆ ಮುದ್ರಿತಪತ್ರವನ್ನೂ ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಒಂದು ಮಡಕೆಯಲ್ಲಿ ಬಚ್ಚಿಡು. ಅದು ಬಹಳ ದಿನ ಸುರಕ್ಷಿತವಾಗಿರಲಿ.
- Verse 15: ಈ ನಾಡಿನಲ್ಲಿ ಜನರು ಮನೆ-ಹೊಲ-ತೋಟಗಳನ್ನು ಮತ್ತೆ ಕೊಳ್ಳುವರು ಹಾಗೂ ಕೊಡುವರು. ಇದು ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ,” ಎಂದು ಸ್ಪಷ್ಟವಾಗಿ ಹೇಳಿದೆ.
- Verse 16: ಕ್ರಯಪತ್ರವನ್ನು ನೇರೀಯನ ಮಗ ಬಾರೂಕನ ಕೈಗೆ ಕೊಟ್ಟಮೇಲೆ ನಾನು ಸ್ವಾಮಿಗೆ ಹೀಗೆ ಪ್ರಾರ್ಥನೆಮಾಡಿದೆ:
- Verse 17: “ಸ್ವಾಮಿ ಸರ್ವೇಶ್ವರಾ, ನೀವು ನಿಮ್ಮ ಭುಜಬಲದಿಂದಲೂ ಮಹಾಶಕ್ತಿಯಿಂದಲೂ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದೀರಿ. ನಿಮಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ.
- Verse 18: ನೀವು ಸಾವಿರಾರು ತಲಾಂತರಗಳವರೆಗೂ ದಯೆತೋರುವವರು. ಆದರೆ ಹೆತ್ತವರ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವರು. ನೀವು ಮಹಾಪರಾಕ್ರಮಿಯಾದ ದೇವರು, ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದು ನಿಮ್ಮ ನಾಮಧೇಯ.
- Verse 19: ನೀವು ಆಲೋಚನೆಯಲ್ಲಿ ಶ್ರೇಷ್ಟರು, ಕಾರ್ಯದಲ್ಲಿ ಸಮರ್ಥರು. ನರಮಾನವರ ಮಾರ್ಗಗಳನ್ನೆಲ್ಲ ಕಣ್ಣಾರೆ ನೋಡುವವರು. ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೂ ನಡತೆಗೂ ತಕ್ಕ ಫಲಕೊಡುವವರು.
- Verse 20: ಈಜಿಪ್ಟ್ ದೇಶದಲ್ಲಿ ಮಾಡಿದ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಇಸ್ರಯೇಲರಲ್ಲೂ ಇತರ ಜನಾಂಗಗಳಲ್ಲೂ ಈ ದಿನದವರೆಗೂ ಮಾಡಿ ಹೆಸರುವಾಸಿಯಾದವರು.
- Verse 21: ಆ ಹೆಸರು ಈಗಲೂ ಸುಸ್ಥಿರವಾಗಿದೆ. ನೀವು ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ನಡೆಸಿ, ಭುಜಪರಾಕ್ರಮವನ್ನು ತೋರ್ಪಡಿಸಿ, ಶಿಕ್ಷಾಹಸ್ತವನ್ನೂ ಪ್ರಯೋಗಿಸಿ, ಮಹಾಭೀತಿಯನ್ನು ಉಂಟುಮಾಡಿ, ನಿಮ್ಮ ಜನರಾದ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಿರಿ.
- Verse 22: ಅವರ ಪೂರ್ವಜರಿಗೆ ವಾಗ್ದಾನ ಮಾಡಿದ ಪ್ರಕಾರ ಹಾಲೂ ಜೇನೂ ಹರಿಯುವ ಈ ನಾಡನ್ನು ಅವರಿಗೆ ಅನುಗ್ರಹಿಸಿದಿರಿ.
- Verse 23: ಅವರು ಈ ನಾಡನ್ನು ಸೇರಿದರು, ಅದನ್ನು ಅನುಭವಿಸಿದರು. ಆದರೆ ನಿಮ್ಮ ಮಾತಿಗೆ ಕಿವಿಗೊಡಲಿಲ್ಲ. ನಿಮ್ಮ ಧರ್ಮಶಾಸ್ತ್ರದ ಅನುಸಾರ ನಡೆಯಲಿಲ್ಲ. ನೀವು ಆಜ್ಞಾಪಿಸಿದವುಗಳಲ್ಲಿ ಒಂದನ್ನೂ ಮಾಡಲಿಲ್ಲ. ಆದಕಾರಣ ನೀವು ಈ ಕೇಡನ್ನೆಲ್ಲ ಅವರ ಮೇಲೆ ಬರಮಾಡಿದ್ದೀರಿ.
- Verse 24: “ಇಗೋ, ಮುತ್ತಿಗೆಯ ದಿಬ್ಬಗಳು! ನಗರವನ್ನು ಆಕ್ರಮಿಸಲು ಬಂದುಬಿಟ್ಟಿದ್ದಾರೆ. ಖಡ್ಗ-ಕ್ಷಾಮ-ವ್ಯಾಧಿಗಳಿಂದ ನಗರವು ವಿರೋಧಿಗಳಾದ ಬಾಬಿಲೋನಿಯರ ಕೈ ಹಿಡಿತಕ್ಕೆ ಸಿಕ್ಕಿಹೋಗಿದೆ. ನೀವು ನುಡಿದಂತೆ ನೆರವೇರಿದೆ. ನಿಮ್ಮ ಕಣ್ಣಿಗೆ ಎಲ್ಲ ಬಟ್ಟಬಯಲಾಗಿದೆ.
- Verse 25: ದೇವರಾದ ಸರ್ವೇಶ್ವರಾ, ಸಾಕ್ಷಿಗಳನ್ನು ಕರೆಯಿಸಿ, ಕ್ರಯಕೊಟ್ಟು ಹೊಲವನ್ನು ಕೊಂಡುಕೊ ಎಂದು ನೀವು ನನಗೆ ಆಜ್ಞಾಪಿಸಿದಿರಿ. ಆದರೆ ನೋಡಿ, ನಗರವು ಬಾಬಿಲೋನಿಯರ ಕೈವಶವಾಗಲಿದೆ.”
- Verse 26: ಆಗ ಸರ್ವೇಶ್ವರ ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದರು:
- Verse 27: “ನೋಡು, ನಾನು ಸರ್ವೇಶ್ವರ, ನರಪ್ರಾಣಿಗಳಿಗೆ ದೇವರು. ನನಗೆ ಅಸಾಧ್ಯವಾದುದು ಯಾವುದು?
- Verse 28: ಆದಕಾರಣ, ಸರ್ವೇಶ್ವರನಾದ ನಾನು ಹೇಳುತ್ತೇನೆ, ಕೇಳು: ಈ ನಗರವನ್ನು ಕಸ್ದೀಯರ ವಶಕ್ಕೆ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಕೈಗೆ ಸಿಕ್ಕಿಸಲಿದ್ದೇನೆ. ಅವನು ಇದನ್ನು ಆಕ್ರಮಿಸುವನು.
- Verse 29: ಈ ನಗರಕ್ಕೆ ಮುತ್ತಿಗೆಹಾಕಲಿರುವ ಬಾಬಿಲೋನಿಯರು ಇದರೊಳಗೆ ನುಗ್ಗಿ ಬೆಂಕಿಯಿಕ್ಕುವರು. ಯಾವ ಮನೆಗಳ ಮಾಳಿಗೆಗಳಲ್ಲಿ ನನ್ನ ಜನರು ಬಾಳ್ದೇವತೆಗೆ ಧೂಪಾರತಿ ಎತ್ತಿದ್ದಾರೋ, ಅನ್ಯದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದ್ದಾರೋ, ನನ್ನನ್ನು ಕೆಣಕಿದ್ದಾರೋ, ಆ ಮನೆಗಳಿರುವ ಈ ನಗರವನ್ನು ಸುಟ್ಟುಬಿಡುವರು.
- Verse 30: ಇಸ್ರಯೇಲ್ ವಂಶವೂ ಯೆಹೂದ ವಂಶವೂ ಚಿಕ್ಕಂದಿನಿಂದ ನನ್ನ ಚಿತ್ತಕ್ಕೆ ವಿರುದ್ಧವಾಗಿಯೇ ನಡೆಯುತ್ತಾ ಬಂದಿದೆ. ಹೌದು, ಇಸ್ರಯೇಲ್ ವಂಶದವರು ತಮ್ಮ ಕೈಕೆಲಸದ ವಿಗ್ರಹಗಳಿಂದ ನನ್ನನ್ನು ರೇಗಿಸುತ್ತಲೇ ಬಂದಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.
- Verse 31: ಈ ನಗರವು ಕಟ್ಟಿದಂದಿನಿಂದ ಇಂದಿನವರೆಗೂ ನನ್ನ ಕೋಪತಾಪಗಳಿಗೆ ಕಾರಣವಾಗಿದೆ.
- Verse 32: ಅದರ ಅರಸರು, ಮಂತ್ರಿಗಳು, ಯಾಜಕರು, ಪ್ರವಾದಿಗಳು, ಜುದೇಯದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು, ಹೀಗೆ ಎಲ್ಲ ಇಸ್ರಯೇಲರೂ ಯೆಹೂದ್ಯರೂ ಅಧರ್ಮವನ್ನು ಹೇರಳವಾಗಿಮಾಡಿ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ಈ ನಗರವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂದಿದೆ.
- Verse 33: ಅವರು ನನಗೆ ಅಭಿಮುಖರಾಗದೆ ಬೆನ್ನುಮಾಡಿದ್ದಾರೆ. ನಾನು ಅವರಿಗೆ ಎಡೆಬಿಡದೆ ಬೋಧಿಸುತ್ತಾ ಬಂದರೂ ನನ್ನ ಉಪದೇಶವನ್ನು ಅಂಗೀಕರಿಸಲಿಲ್ಲ, ನನಗೆ ಕಿವಿಗೊಡಲೂ ಇಲ್ಲ.
- Verse 34: ನನ್ನ ಹೆಸರಿನಿಂದ ಪ್ರಖ್ಯಾತವಾಗಿರುವ ದೇವಾಲಯದಲ್ಲಿ ತಮ್ಮ ಅಸಹ್ಯ ವಸ್ತುಗಳನ್ನು ಇಟ್ಟು ಹೊಲೆಮಾಡಿದ್ದಾರೆ.
- Verse 35: ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗೆ ಆಹುತಿಕೊಡುವುದಕ್ಕಾಗಿ ಬೆನ್ಹಿನ್ನೋಮ್ ಕಣಿವೆಯಲ್ಲಿ ಬಾಳ್ದೇವತೆಗೆ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಹೀಗೆ ಯೆಹೂದ ಕುಲವನ್ನೆ ಪಾಪಕ್ಕೆ ಸಿಕ್ಕಿಸಿದ್ದಾರೆ. ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ. ಅದರ ಯೋಚನೆಕೂಡ ನನ್ನ ಮನಸ್ಸಿನಲ್ಲಿ ಸುಳಿಯಲಿಲ್ಲ.”
- Verse 36: “ಖಡ್ಗ-ಕ್ಷಾಮ-ವ್ಯಾಧಿ ಇವುಗಳಿಂದ ಈ ನಗರವು ಬಾಬಿಲೋನಿನ ಅರಸನ ಕೈ ಹಿಡಿತಕ್ಕೆ ಸಿಕ್ಕಲಿದೆ ಎಂದು ನೀವು ಹೇಳುವ ವಿಷಯದಲ್ಲಿ ಇಸ್ರಯೇಲರ ದೇವರಾದ ಸರ್ವೇಶ್ವರ ಈಗ ಇಂತೆನ್ನುತ್ತಾರೆ:
- Verse 37: ‘ಇಗೋ, ನಾನು ಕಡುಕೋಪದಿಂದಲೂ ರೋಷಾವೇಶದಿಂದಲೂ ಈ ಜನರನ್ನು ಯಾವ ದೇಶಗಳಿಗೆ ಅಟ್ಟಿದೆನೋ ಆ ಎಲ್ಲ ದೇಶಗಳಿಂದ ಈ ಸ್ಥಳಕ್ಕೆ ಮರಳಿ ಕರೆತಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.
- Verse 38: ಅವರು ನನಗೆ ಪ್ರಜೆಯಾಗಿರುವರು. ನಾನು ಅವರಿಗೆ ದೇವರಾಗಿರುವೆನು.
- Verse 39: ಅವರಿಗೆ ಒಂದೇ ಮನಸ್ಸನ್ನೂ ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು. ಇದರಿಂದ ಅವರು ತಮ್ಮ ಹಿತಕ್ಕಾಗಿಯೂ ತಮ್ಮ ಅನಂತರ ತಮ್ಮ ಸಂತಾನದ ಹಿತಕ್ಕಾಗಿಯೂ ನನ್ನಲ್ಲಿ ಸದಾ ಭಯಭಕ್ತಿ ಉಳ್ಳವರಾಗಿರುವರು.
- Verse 40: ನಾನು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡುವೆನು. ಹೀಗೆ ನಾನು ಅವರಿಗೆ ಒಳಿತನ್ನು ಮಾಡುವುದನ್ನು ಬಿಡೆನು. ನನ್ನ ಬಗ್ಗೆ ಅವರ ಹೃದಯದಲ್ಲಿ ಭಯಭಕ್ತಿ ನೆಲಸುವಂತೆ ಮಾಡುವೆನು. ಆಗ ಅವರು ನನ್ನನ್ನು ಬಿಟ್ಟು ಅಗಲಿಹೋಗರು.
- Verse 41: ಅವರಿಗೆ ಒಳಿತನ್ನು ಮಾಡುವುದರಲ್ಲಿ ಸಂತೋಷಿಸುವೆನು.
- Verse 42: “ಸರ್ವೇಶ್ವರನಾದ ನನ್ನ ಮಾತು ಇವು: ಇಂಥ ಕಠಿಣವಾದ ಕಷ್ಟದುಃಖಗಳನ್ನು ಈ ಜನರ ಮೇಲೆ ಬರಮಾಡಿದಂತೆಯೇ ನಾನು ಇವರಿಗೆ ವಾಗ್ದಾನಮಾಡಿದ ಎಲ್ಲ ಒಳಿತನ್ನೂ ಬರಮಾಡುವೆನು.
- Verse 43: ಜನರಿಲ್ಲದೆ, ಪ್ರಾಣಿಗಳಿಲ್ಲದೆ, ಪಾಳುಬಿದ್ದು ಬಾಬಿಲೋನಿಯರ ಕೈವಶವಾಗಿದೆ ಎನ್ನಲಾಗುವ ಈ ನಾಡಿನಲ್ಲಿ ಹೊಲಗದ್ದೆಗಳ ವ್ಯವಹಾರ ನಡೆಯುವುದು.
- Verse 44: ಬೆನ್ಯಾಮಿನ್ ನಾಡು, ಜೆರುಸಲೇಮಿನ ಸುತ್ತಮುತ್ತಣ ಪ್ರದೇಶ, ಜುದೇಯದ ಊರುಗಳು, ಮಲೆನಾಡಿನ, ಕೆಳನಾಡಿನ, ದಕ್ಷಿಣ ಪ್ರಾಂತ್ಯದ ಊರುಗಳು ಈ ಎಲ್ಲ ಸ್ಥಳಗಳಲ್ಲಿ ಜನರು ಹೊಲಗದ್ದೆಗಳಿಗೆ ಕ್ರಯಕೊಟ್ಟು, ಪತ್ರಕ್ಕೆ ರುಜುಹಾಕಿ, ಮುದ್ರೆ ಒತ್ತಿ, ಸಾಕ್ಷಿ ಹಾಕಿಸಿ ಕೊಂಡುಕೊಳ್ಳುವರು. ನಾನು ನನ್ನ ಜನರನ್ನು ಗುಲಾಮಗಿರಿಯಿಂದ ಬಿಡಿಸಿ ಬರಮಾಡುವೆನು.