ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಎಸ್ತೇರಳು
4ನೇ ಅಧ್ಯಾಯ
- Verse 1: ನಡೆದ ಸಂಗತಿಯನ್ನೆಲ್ಲಾ ಕೇಳಿದಾಗ, ಮೊರ್ದೆಕೈ ತನ್ನ ಬಟ್ಟೆಗಳನ್ನು ಹರಿದು ಗೋಣಿತಟ್ಟನ್ನು ಉಟ್ಟು, ಬೂದಿಯನ್ನು ಸುರಿದುಕೊಂಡು ನಗರದ ಮಧ್ಯೆ ಹೋಗುತ್ತಾ ಅಪಾರ ದುಃಖದಿಂದ ಗೋಳಾಡಿದನು.
- Verse 2: ಅದೇ ಸ್ಥಿತಿಯಲ್ಲಿ ಅರಮನೆಯ ಹೆಬ್ಬಾಗಿಲವರೆಗೂ ಬಂದನು. ಗೋಣಿತಟ್ಟನ್ನು ಉಟ್ಟವರು ಯಾರೂ ಒಳಗೆ ಪ್ರವೇಶಿಸಕೂಡದೆಂಬ ನಿಷೇಧಾಜ್ಞೆ ಜಾರಿಯಲ್ಲಿ ಇತ್ತು.
- Verse 3: ಅರಸನ ಆಜ್ಞೆಯೂ ನಿರ್ಣಯವೂ ಪ್ರಕಟವಾದ ಸಂಸ್ಥಾನಗಳಲ್ಲೆಲ್ಲಾ ಯೆಹೂದ್ಯರೊಳಗೆ ಅತೀವ ದುಃಖವುಂಟಾಗಿ ಅನೇಕರು ಉಪವಾಸ ಕೈಗೊಂಡರು. ರೋದನ-ಆಕ್ರಂದನಗಳೊಡನೆ ಗೋಣಿತಟ್ಟನ್ನು ಹೊದ್ದು ಬೂದಿಯಲ್ಲಿ ಕುಳಿತುಕೊಂಡರು.
- Verse 4: ಎಸ್ತೇರಳ ದಾಸಿಯರೂ ಕಂಚುಕಿಗಳೂ ಈ ವಿಷಯವನ್ನು ಆಕೆಗೆ ತಿಳಿಸಿದಾಗ ಆಕೆ ಬಹು ವ್ಯಸನಾಕ್ರಾಂತಳಾದಳು. ಉಟ್ಟ ಗೋಣಿತಟ್ಟನ್ನು ತೆಗೆದುಹಾಕಿ, ವಸ್ತ್ರಗಳನ್ನು ಧರಿಸಿಕೊಳ್ಳುವಂತೆ ಮೊರ್ದೆಕೈಗೆ ಉಡುಪನ್ನು ಕಳುಹಿಸಿಕೊಟ್ಟಳು. ಅವನಾದರೋ ಅವುಗಳನ್ನು ಸ್ವೀಕರಿಸಲಿಲ್ಲ.
- Verse 5: ಆಗ ಎಸ್ತೇರಳು ತನ್ನ ಸೇವೆಗಾಗಿ ನೇಮಿಸಲಾಗಿದ್ದ ರಾಜಕಂಚುಕಿಗಳಲ್ಲಿ ಒಬ್ಬನಾದ ಹತಾಕನನ್ನು ಕರೆದು, ಮೊರ್ದೆಕೈ ಬಳಿಗೆ ಕಳುಹಿಸಿ, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ಈ ವರ್ತನೆಗೆ ಕಾರಣವಾದರೂ ಯಾವುದೆಂದು ವಿಚಾರಿಸಿಕೊಂಡು ಬರುವಂತೆ ಹೇಳಿದಳು.
- Verse 6: ಅಂತೆಯೆ, ಹತಾಕನು ಅರಮನೆಯ ಹೆಬ್ಬಾಗಿಲ ಮುಂದಿರುವ ನಗರದ ಬಯಲಿಗೆ, ಮೊರ್ದೆಕೈಯನ ಬಳಿಗೆ ಹೋದಾಗ,
- Verse 7: ಅವನು, ನಡೆದ ಎಲ್ಲಾ ವಿಷಯಗಳನ್ನು ಮತ್ತು ಯೆಹೂದ್ಯರನ್ನು ನಾಶಮಾಡಲು ಅನುಮತಿ ಪಡೆದುಕೊಳ್ಳುವುದಕ್ಕಾಗಿ ಹಾಮಾನನು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿದ ನಿಗದಿತ ಹಣದ ವಿಷಯವನ್ನು ಅವನಿಗೆ ವಿವರಿಸಿ ಹೇಳಿದನು.
- Verse 8: ಅಲ್ಲದೆ ಯೆಹೂದ್ಯರನ್ನೆಲ್ಲಾ ಸಂಹರಿಸಬಿಡುವುದಕ್ಕೋಸ್ಕರ ಶೂಷನ್ ನಗರದಲ್ಲಿ ಪ್ರಕಟಗೊಂಡ ರಾಜಶಾಸನದ ಒಂದು ಪ್ರತಿಯನ್ನು ಅವನ ಕೈಗಿತ್ತನು. ಅದನ್ನು ಎಸ್ತೇರಳಿಗೆ ತೋರಿಸಿ ವಿವರಿಸುವಂತೆಯೂ ಆಕೆ ಅರಸನ ಸಮ್ಮುಖಕ್ಕೆ ಹೋಗಿ, ಆತ ದಯೆತೋರುವಂತೆ ಆತನ ಸನ್ನಿಧಿಯಲ್ಲಿ ತನ್ನ ಜನರಿಗೋಸ್ಕರ ಬಿನ್ನಹಮಾಡುವಂತೆ ಆಕೆಗೆ ತಿಳಿಸಬೇಕೆಂತಲೂ ಹೇಳಿಕಳುಹಿಸಿದನು.
- Verse 9: ಹತಾಕನು ಎಸ್ತೇರಳ ಬಳಿಗೆ ಹಿಂದಿರುಗಿ ಆಕೆಗೆ ಮೊರ್ದೆಕೈ ಹೇಳಿದ ಎಲ್ಲಾ ಮಾತುಗಳನ್ನು ತಿಳಿಸಿದನು.
- Verse 10: ಎಸ್ತೇರಳು ಮತ್ತೊಮ್ಮೆ, ಅವನನ್ನು ಮೊರ್ದೆಕೈಯ ಬಳಿಗೆ ಕಳುಹಿಸಿ,
- Verse 11: “ಅರಸನು ಹೇಳಿಕಳುಹಿಸಿದ ಹೊರತು ಅವನ ಬಳಿಗೆ ಅರಮನೆಯ ಒಳಾಂಗಣಕ್ಕೆ ಹೋಗುವವರು ಮರಣದಂಡನೆಗೆ ಗುರಿಯಾಗುವರು ಎಂಬ ನಿಷೇಧಾಜ್ಞೆ ಸ್ತ್ರೀಪುರುಷರೆನ್ನದೆ ಎಲ್ಲರಿಗೂ ಅನ್ವಯಿಸುತ್ತದೆ. ಯಾರ ಕಡೆಗೆ ಅವನು ತನ್ನ ಸ್ವರ್ಣದಂಡವನ್ನು ಚಾಚುವನೋ ಅವರು ಮಾತ್ರ ಜೀವದಿಂದುಳಿಯುವರು. ಇದು ಅರಸನ ಎಲ್ಲಾ ಸೇವಕರಿಗೂ ಸಂಸ್ಥಾನಗಳ ಎಲ್ಲಾ ನಿವಾಸಿಗಳಿಗೂ ತಿಳಿದ ವಿಷಯ; ನನಗಂತೂ ಕಳೆದ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ಆಮಂತ್ರಣವೇ ಬರಲಿಲ್ಲ,” ಎಂದು ತಿಳಿಸುವಂತೆ ಹೇಳಿದಳು.
- Verse 12: ಹತಾಕನು, ಎಸ್ತೇರಳ ಈ ಸಂದೇಶವನ್ನು ಮೊರ್ದೆಕೈಗೆ ತಿಳಿಸಲು ಅವನು ಪುನಃ ಎಸ್ತೇರಳಿಗೆ,
- Verse 13: “ನೀನು ಅರಮನೆಯಲ್ಲಿದ್ದ ಮಾತ್ರಕ್ಕೆ ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಉಳಿದುಕೊಳ್ಳುವೆಯೆಂದು ಭಾವಿಸಬೇಡ;
- Verse 14: ನೀನೀಗ ಸುಮ್ಮನಿದ್ದುಬಿಟ್ಟರೆ ಬೇರಾವ ಕಡೆಯಿಂದಲೂ ಯೆಹೂದ್ಯರಿಗೆ ಸಹಾಯವಾಗಲಿ, ವಿಮೋಚನೆಯಾಗಲಿ ದೊರಕದು. ನೀನಾದರೋ ನಿನ್ನ ತಂದೆಯ ಮನೆಯವರೊಡನೆ ನಾಶವಾಗಿಹೋಗುವೆ. ಇದಲ್ಲದೆ ಇಂಥ ಸಂದರ್ಭಕ್ಕಾಗಿಯೇ ನೀನು ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು?” ಎಂದು ಹೇಳಿಕಳುಹಿಸಿದನು.
- Verse 15: ಆಗ ಎಸ್ತೇರಳು ಮೊರ್ದೆಕೈಯನಿಗೆ, “ನೀನು ಹೋಗಿ ಶೂಷನ್ ನಗರದಲ್ಲಿ ಇರುವ ಯೆಹೂದ್ಯರನ್ನೆಲ್ಲಾ ಸಭೆಸೇರಿಸು. ಎಲ್ಲರೂ ಹಗಲಿರುಳೆನ್ನದೆ ಮೂರು ದಿನ ಅನ್ನಪಾನಗಳನ್ನು ತೊರೆದು ನನಗೋಸ್ಕರ ಉಪವಾಸವನ್ನು ಕೈಗೊಳ್ಳಲಿ. ನನ್ನ ದಾಸಿಯರೊಡನೆ ನಾನೂ ಉಪವಾಸ ಕೈಗೊಳ್ಳುವೆನು. ಅನಂತರ ಅರಸನ ಆಜ್ಞೆಯನ್ನು ಮೀರಿಯಾದರೂ ನಾನು ಆತನ ಬಳಿಗೆ ಹೋಗುವೆನು, ಸತ್ತರೂ ಸಾಯುವೆನು,” ಎಂದು ಹೇಳಿಕಳುಹಿಸಿದಳು.
- Verse 16: ಆಗ ಎಸ್ತೇರಳು ಮೊರ್ದೆಕೈಯನಿಗೆ, “ನೀನು ಹೋಗಿ ಶೂಷನ್ ನಗರದಲ್ಲಿ ಇರುವ ಯೆಹೂದ್ಯರನ್ನೆಲ್ಲಾ ಸಭೆಸೇರಿಸು. ಎಲ್ಲರೂ ಹಗಲಿರುಳೆನ್ನದೆ ಮೂರು ದಿನ ಅನ್ನಪಾನಗಳನ್ನು ತೊರೆದು ನನಗೋಸ್ಕರ ಉಪವಾಸವನ್ನು ಕೈಗೊಳ್ಳಲಿ. ನನ್ನ ದಾಸಿಯರೊಡನೆ ನಾನೂ ಉಪವಾಸ ಕೈಗೊಳ್ಳುವೆನು. ಅನಂತರ ಅರಸನ ಆಜ್ಞೆಯನ್ನು ಮೀರಿಯಾದರೂ ನಾನು ಆತನ ಬಳಿಗೆ ಹೋಗುವೆನು, ಸತ್ತರೂ ಸಾಯುವೆನು,” ಎಂದು ಹೇಳಿಕಳುಹಿಸಿದಳು.
- Verse 17: ಮೊರ್ದೆಕೈ ಹಿಂದಿರುಗಿ ಹೋಗಿ ಎಸ್ತೇರಳು ಹೇಳಿದಂತೆಯೇ ಮಾಡಿದನು.