P. O. C ബൈബിള്
ಹಳೆಯ ಒಡಂಬಡಿಕೆ
ಯೆಶಾಯ
33ನೇ ಅಧ್ಯಾಯ
- Verse 1: ಹಾಳುಮಾಡುತ್ತಿರುವವನೇ, ನಿನಗೆ ಧಿಕ್ಕಾರ ! ನಿನ್ನನ್ನು ಯಾರೂ ಹಾಳುಮಾಡದಿದ್ದರೂ ನೀನು ಹಾಳುಮಾಡುತ್ತಿರುವೆ. ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳುಮಾಡುತ್ತಿರುವ ನೀನು ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ.
- Verse 2: ಸರ್ವೇಶ್ವರಾ, ನಮಗೆ ಕೃಪೆತೋರಿ. ನಿಮಗಾಗಿ ಕಾದಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಬೆಂಬಲವಾಗಿರಿ. ಆಪತ್ಕಾಲದಲ್ಲಿ ನಮಗೆ ರಕ್ಷಣೆ ನೀಡಿರಿ.
- Verse 3: ನಿಮ್ಮ ಮೇಘಗರ್ಜನೆಗೆ ಜನಾಂಗಗಳು ಓಡುತ್ತವೆ. ನೀವು ಎದ್ದುನಿಂತಾಗ ರಾಷ್ಟ್ರಗಳು ದಿಕ್ಕುಪಾಲಾಗುತ್ತವೆ.
- Verse 4: ಅವರು ಕೊಳ್ಳೆಗೆ ಒಳಗಾಗುವರು; ಜನ ಮಿಡತೆಗಳಂತೆ ಆ ಕೊಳ್ಳೆಗೆ ಹಾರಿಬೀಳುವರು.
- Verse 5: ಸರ್ವೇಶ್ವರ ಸ್ವಾಮಿ ಉನ್ನತೋನ್ನತರು, ಮೇಲಿನ ಲೋಕದಲ್ಲಿ ಆಸೀನರು. ಅವರು ಜೆರುಸಲೇಮನ್ನು ನ್ಯಾಯನೀತಿಯಿಂದಲೂ ಸತ್ಯಸಂಧತೆಯಿಂದಲೂ ತುಂಬಿಸುವರು.
- Verse 6: ನಿಮ್ಮ ಕಾಲಕ್ಕೆ ಬೇಕಾದ ಸ್ಥಿರತೆಯನ್ನು ನೀಡುವರು. ರಕ್ಷಣೆಗೆ ಬೇಕಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುವರು. ಸರ್ವೇಶ್ವರ ಸ್ವಾಮಿಯಲ್ಲಿ ನಿಮಗಿರುವ ಭಯಭಕ್ತಿಯೇ ನಿಮ್ಮ ನಿಧಿಯಾಗಿರುವುದು.
- Verse 7: ಇಗೋ, ವೀರರು ಹೊರಗೆ ಹಾಹಾಕಾರ ಮಾಡುತಿಹರು. ಶಾಂತಿದೂತರಾದ ರಾಯಭಾರಿಗಳು ಘೋರವಾಗಿ ಅಳುತಿಹರು.
- Verse 8: ರಾಜಮಾರ್ಗಗಳು ಬರಿದಾಗಿವೆ. ದಾರಿಗರೇ ಇಲ್ಲ.. ಶತ್ರುಗಳು ಒಪ್ಪಂದವನ್ನು ಮುರಿದಿದ್ದಾರೆ. ಸಾಕ್ಷಿಗಳನ್ನು ತಿರಸ್ಕರಿಸಿದ್ದಾರೆ. ಮಾನವರನ್ನು ಗಣನೆಗೆ ತಂದುಕೊಳ್ಳದವರಾಗಿದ್ದಾರೆ.
- Verse 9: ನಾಡು ದುಃಖದಿಂದ ಸೊರಗುತ್ತಿದೆ. ಲೆಬನೋನ್ ನಾಚಿಕೆಯಿಂದ ಒಣಗುತ್ತಿದೆ. ಶಾರೋನ್ ಬೆಂದು ಬೆಂಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳಿಲ್ಲದೆ ಬೋಳಾಗಿವೆ.
- Verse 10: ಸರ್ವೇಶ್ವರ ಹೀಗೆನ್ನೆತ್ತಾರೆ : “ಈಗ ಏಳುವೆನು. ಈಗಲೇ ಎದ್ದು ಸಿದ್ಧನಾಗುವೆನು. ಇದೀಗಲೇ ನನ್ನ ಮಹಿಮೆಯನ್ನು ತೋರಿಸುವೆನು.
- Verse 11: ನೀವು ಹೊಟ್ಟನ್ನು ಗರ್ಭದಲ್ಲಿ ಬೆಳೆಸಿ ಕೂಳೆಯನ್ನು ಹೆರುವಿರಿ. ನಿಮ್ಮ ನಿಟ್ಟುಸಿರು ನಿಮ್ಮನ್ನೇ ನುಂಗುವ ಬೆಂಕಿಯಾಗುವುದು.
- Verse 12: ನೀವು ಸುಟ್ಟ ಸುಣ್ಣದಂತಾಗುವಿರಿ.
- Verse 13: ದೂರ ಇರುವವರೇ, ನಾನು ಎಸಗಿದ ಕಾರ್ಯಗಳನ್ನು ಕೇಳಿ ತಿಳಿದುಕೊಳ್ಳಿರಿ. ಹತ್ತಿರ ಇರುವವರೇ, ನನ್ನ ಪರಾಕ್ರಮವನ್ನು ಒಪ್ಪಿಕೊಳ್ಳಿರಿ.”
- Verse 14: ಸಿಯೋನಿನಲ್ಲಿರುವ ಪಾಪಾತ್ಮರು ಭಯಪಡುತ್ತಾರೆ. ಭಕ್ತಿಹೀನರು ಗಡಗಡನೆ ನಡುಗುತ್ತಾರೆ. ‘ನಮ್ಮಲ್ಲಿ ಯಾರು ತಾನೇ ಕಬಳಿಸುವ ಕಿಚ್ಚಿನ ಬಳಿ ವಾಸಿಸಬಲ್ಲರು?’ ಎಂದು ಹೇಳಿಕೊಳ್ಳುತ್ತಾರೆ.
- Verse 15: ಸನ್ಮಾರ್ಗದಲ್ಲಿ ನಡೆವವನು, ಸತ್ಯವನ್ನೇ ನುಡಿವವನು, ಬಲಾತ್ಕಾರ್ಯದಿಂದ ಲಭಿಸಿದ್ದನ್ನು ತಿರಸ್ಕರಿಸುವವನು, ಲಂಚಕ್ಕೆ ಕೈಚಾಚದೆ ಹಿಂದಕ್ಕೆ ಸರಿವವನು, ಕೊಲೆ ಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವವನು, ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನು - ಇಂಥವನೇ ಉನ್ನತ ಸ್ಥಾನದಲ್ಲಿ ವಾಸಿಸುವನು.
- Verse 16: ಅಂಥವನಿಗೆ ಗಿರಿದುರ್ಗವೇ ಆಶ್ರಯ, ಅನ್ನ ಆಹಾರ ಉಚಿತ, ನೀರುನಿಡಿ ನಿಸ್ಸಂದೇಹ.
- Verse 17: ಅಲಂಕೃತ ರಾಜನನ್ನು ನಿಮ್ಮ ಕಣ್ಣುಗಳು ಕಾಣುವುವು. ಸವಿಸ್ತಾರವಾದ ನಾಡೊಂದನ್ನು ನಿಮ್ಮ ಕಣ್ಣುಗಳು ನೋಡಿ ನಲಿಯುವುವು.
- Verse 18: ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ - “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕಮಾಡಿದವನು ಎಲ್ಲಿ? ಗೋಪುರಗಳನ್ನು ಗಣಿಸಿದವನು ಎಲ್ಲಿ?” ಎಂದು ಹೇಳಿಕೊಳ್ಳುವಿರಿ.
- Verse 19: ನಿಮಗೆ ತಿಳಿಯಲಾಗದ ಅನ್ಯಭಾಷೆಯನ್ನು, ನೀವು ಗ್ರಹಿಸಲಾಗದ ಅಸ್ಪಷ್ಟ ಮಾತುಗಳನ್ನು ಆಡುವ ಅಹಂಕಾರದ ಜನರನ್ನು ಇನ್ನು ಮೇಲೆ ಕಾಣಲಾರಿರಿ.
- Verse 20: ನಮ್ಮ ಹಬ್ಬ ಆಚರಣೆಗಳ ನಗರವಾದ ಸಿಯೋನನ್ನು ದೃಷ್ಟಿಸಿನೋಡಿ. ಆ ಜೆರುಸಲೇಮನ್ನು ಕಣ್ಣಿಟ್ಟು ನೋಡಿ. ಅದು ನೆಮ್ಮದಿಯ ನಿವಾಸವಾಗಿ, ಕೀಳಲಾಗದ, ಕೆಡವಲಾಗದ ದೃಢವಾದ ಗುಡಾರದಂತೆ ನಿಂತಿರುವುದನ್ನು ನೀವು ಕಣ್ಣಾರೆ ಕಾಣುವಿರಿ.
- Verse 21: ಅಲ್ಲಿ ಸರ್ವೇಶ್ವರ ತಮ್ಮ ಶಕ್ತಿಯನ್ನು ತೋರ್ಪಡಿಸುವರು. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟವು.
- Verse 22: ಸರ್ವೇಶ್ವರ ಸ್ವಾಮಿಯೇ ನಮ್ಮ ನ್ಯಾಯಾಧಿಪತಿ, ಸರ್ವೇಶ್ವರ ಸ್ವಾಮಿಯೇ ನಮಗೆ ಶಾಸನದಾಯಕ, ಸರ್ವೇಶ್ವರ ಸ್ವಾಮಿಯೇ ನಮ್ಮ ರಾಜ. ಅವರೇ ನಮ್ಮ ಉದ್ಧಾರಕ.
- Verse 23: ಶತ್ರು ಹಡಗುಗಳ ಹಗ್ಗಗಳು ಸಡಿಲ, ಅದರ ಕೂವೆಯ ಬುಡ ಸಡಿಲ; ಅದರ ಹಾಯಿಯನ್ನು ಮುದುರದಂತೆ ಹಿಡಿದುಕೊಳ್ಳಲು ಅಸಾಧ್ಯ. ಅವುಗಳನ್ನು ಸೂರೆಮಾಡಿ ಕೊಳ್ಳೆಹೊಡೆದು, ಸಮನಾಗಿ ಹಂಚಿಕೊಳ್ಳಲು ಎಲ್ಲರಿಗೂ ಆಸ್ಪದವುಂಟು. ಕುಂಟರು ಕೂಡ ತಮ್ಮ ಪಾಲನ್ನು ಪಡೆಯಬಲ್ಲರು.
- Verse 24: ಸಿಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನು” ಎಂದು ಹೇಳನು, ಅಲ್ಲಿಯ ಜನರ ಪಾಪವು ಪರಿಹಾರವಾಗುವುದು.