ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
23ನೇ ಅಧ್ಯಾಯ
- Verse 1: ದಾವೀದನು ಹಣ್ಣುಹಣ್ಣು ಮುದುಕನಾದಾಗ ತನ್ನ ಮಗ ಸೊಲೊಮೋನನನ್ನು ಇಸ್ರಯೇಲರ ಅರಸನನ್ನಾಗಿ ಮಾಡಿದನು.
- Verse 2: ಆಗ ಇಸ್ರಯೇಲರ ಎಲ್ಲಾ ಅಧಿಪತಿಗಳನ್ನು, ಯಾಜಕರನ್ನು ಹಾಗು ಲೇವಿಯರನ್ನು ತನ್ನ ಬಳಿಯಲ್ಲಿ ಸಭೆ ಸೇರಿಸಿದನು.
- Verse 3: ಮೂವತ್ತು ವರ್ಷ ಮೊದಲ್ಗೊಂಡು ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆ ಮೂವತ್ತೆಂಟು ಸಾವಿರವಿತ್ತು.
- Verse 4: ಇವರಲ್ಲಿ ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತನಾಲ್ಕು ಸಾವಿರ, ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ,
- Verse 5: ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು.
- Verse 6: ಇದಲ್ಲದೆ, ಆ ಲೇವಿಯರನ್ನು ಗೇರ್ಷೋನ್ಯರು,ಮಕೆಹಾತ್ಯರು, ಮೆರಾರೀಯರು ಎಂಬ ಮೂರು ವರ್ಗಗಳಾಗಿ ವಿಂಗಡಿಸಿದನು.
- Verse 7: ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಹಾಗೂ ಶಿಮ್ಮೀ ಎಂಬವರು.
- Verse 8: ಲದ್ದಾನನ ಮಕ್ಕಳಾದ ಯೆಹೀಯೇಲ್, ಜೇತಾಮ್, ಯೋವೇಲ್ ಎಂಬ ಮೂರು ಮಂದಿ ಮುಖ್ಯಸ್ಥರಾಗಿದ್ದರು.
- Verse 9: ಶಿಮ್ಮೀಯ ಮಕ್ಕಳು ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿ. ಇವರು ಲದ್ದಾನ್ಯರ ಗೋತ್ರ ಪ್ರಧಾನರು.
- Verse 10: ಶಿಮ್ಮೀಗೆ ಯಹತ್, ಜೀನ, ಯೆಯೂಷ್, ಬೆರೀಯ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
- Verse 11: ಇವರಲ್ಲಿ ಯಹತನು ಮುಖ್ಯಸ್ಥನು. ಜೀಜನು ಎರಡನೆಯವನು. ಯೆಯೂಷ್, ಬೆರೀಯರಿಗೆ ಬಹಳ ಮಂದಿ ಮಕ್ಕಳು ಇರಲಿಲ್ಲವಾದ್ದರಿಂದ ಅವರಿಬ್ಬರೂ ಒಂದೇ ಕುಟುಂಬ ಹಾಗೂ ವರ್ಗವಾಗಿ ಎಣಿಕೆಯಾಗಿದ್ದರು.
- Verse 12: ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.
- Verse 13: ಅಮ್ರಾಮನ ಮಕ್ಕಳು ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾಪರಿಶುದ್ಧ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟಿದ್ದರು. ಇವರು ಸರ್ವೇಶ್ವರನ ಸನ್ನಿಧಿಯಲ್ಲಿ ಸದಾ ಧೂಪಾರತಿ ಎತ್ತುವವರೂ ಸೇವೆ ಮಾಡುವವರೂ ಸರ್ವೇಶ್ವರನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರಬೇಕಿತ್ತು.
- Verse 14: ದೈವಪುರುಷನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಲೆಕ್ಕಿತರಾಗಿದ್ದರು.
- Verse 15: ಮೋಶೆಯ ಮಕ್ಕಳು ಗೇರ್ಷೋಮ್ ಹಾಗೂ ಎಲೀಯೆಜೆರ್ ಎಂಬವರು.
- Verse 16: ಮುಖ್ಯಸ್ಥನಾದ ಶೆಬೂವೇಲನು ಗೇರ್ಷೋಮನ ಮಗ.
- Verse 17: ಮುಖ್ಯಸ್ಥನಾದ ರೆಹಬ್ಯ ಎಲೀಯೆಜೆರನ ಮಗ. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಂದಿ ಮಕ್ಕಳಿದ್ದರು.
- Verse 18: ಮುಖ್ಯಸ್ಥ ಶೆಲೋಮೋತನು ಇಚ್ಹಾರನ ಮಗ.
- Verse 19: ಹೆಬ್ರೋನನ ಮಕ್ಕಳಲ್ಲಿ ಯೇರಿಯ ಮುಖ್ಯಸ್ಥ; ಅಮರ್ಯ ಎರಡನೆಯವನು, ಯಹಜೀಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
- Verse 20: ಉಜ್ಜೀಯೇಲನ ಮಕ್ಕಳಲ್ಲಿ ಮೀಕನೂ ಮುಖ್ಯಸ್ಥ; ಇಷೀಯನು ಎರಡನೆಯವನು.
- Verse 21: ಮೆರಾರೀಯ ಮಕ್ಕಳು ಮಹ್ಲೀ ಹಾಗೂ ಮೂಷೀ ಎಂಬವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಹಾಗೂ ಕೀಷ್ ಇವರು.
- Verse 22: ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು.
- Verse 23: ಮೂಷಿಗೆ ಮೆಹ್ಲೀ, ಏದೆರ್, ಯೆರೇಮೋತ್ ಎಂಬ ಮೂರು ಮಂದಿ ಮಕ್ಕಳಿದ್ದರು.
- Verse 24: ಲೇವಿಯರ ಪಟ್ಟಿಯಲ್ಲಿ ಬರೆದಿರುವ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಮುಖ್ಯಸ್ಥರು. ಇವರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರು ಸರ್ವೇಶ್ವರನ ಆಲಯದಲ್ಲಿ ಸೇವೆಮಾಡಲು ಅರ್ಹರಾಗಿದ್ದರು.
- Verse 25: ಇಸ್ರಯೇಲ್ ದೇವರಾದ ಸರ್ವೇಶ್ವರ, ತಮ್ಮ ಪ್ರಜೆಗೆ ನೆಮ್ಮದಿಯನ್ನು ಅನುಗ್ರಹಿಸಿ, ಸದಾ ಜೆರುಸಲೇಮಿನಲ್ಲಿ ವಾಸಿಸುವವರಾದ ಕಾರಣ,
- Verse 26: ಲೇವಿಯರು ಇನ್ನು ಮುಂದೆ ಅವರ ಗುಡಾರವನ್ನೂ ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲವೆಂದುಕೊಂಡು, ದಾವೀದನು ಈ ಪ್ರಕಾರ ವಿಧಿಸಿದನು:
- Verse 27: ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷ ಮೊದಲ್ಗೊಂಡು ಹೆಚ್ಚು ವಯಸ್ಸುಳ್ಳವರೆಲ್ಲರೂ ಲೆಕ್ಕಿಸಲ್ಪಟ್ಟರು.
- Verse 28: ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಸರ್ವೇಶ್ವರನ ಆಲಯದ ಪರಿಚರ್ಯೆಯನ್ನು ನಡೆಸಬೇಕಾಗಿತ್ತು. ಅವರ ಕೆಲಸ ಕಾರ್ಯ ಇವು: ಅಂಗಳವನ್ನೂ ಅಲ್ಲಿಯ ಕೋಣೆಗಳನ್ನು ನೋಡಿಕೊಳ್ಳುವುದು, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದು, ದೇವಾಲಯದಲ್ಲಿ ಸೇವೆಮಾಡುವುದು;
- Verse 29: ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯ ಇವುಗಳನ್ನು ಒದಗಿಸುವುದು; ಸೇರು, ಅಳತೆಗೋಲು ಇವುಗಳನ್ನು ಪರೀಕ್ಷಿಸುವುದು;
- Verse 30: ಪ್ರತಿದಿನ ಬೆಳಿಗ್ಗೆ, ಸಂಜೆ ಮತ್ತು ನಿಯಮಿತ ಸಂಖ್ಯೆಗೆ ಸರಿಯಾಗಿ ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ, ಸರ್ವೇಶ್ವರನ ಮುಂದೆ ತಪ್ಪದೆ ನಡೆಯುವ ದಹನಬಲಿ ಸಮರ್ಪಣೆಯ ಹೊತ್ತಿನಲ್ಲಿ, ಸರ್ವೇಶ್ವರನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದು.
- Verse 31: ಪ್ರತಿದಿನ ಬೆಳಿಗ್ಗೆ, ಸಂಜೆ ಮತ್ತು ನಿಯಮಿತ ಸಂಖ್ಯೆಗೆ ಸರಿಯಾಗಿ ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ, ಸರ್ವೇಶ್ವರನ ಮುಂದೆ ತಪ್ಪದೆ ನಡೆಯುವ ದಹನಬಲಿ ಸಮರ್ಪಣೆಯ ಹೊತ್ತಿನಲ್ಲಿ, ಸರ್ವೇಶ್ವರನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದು.
- Verse 32: ಹೀಗೆ ಅವರು ತಮ್ಮ ಸಹೋದರರಾದ ಆರೋನ್ಯರ ಸಹಾಯಕರಾಗಿದ್ದು, ದೇವದರ್ಶನದ ಗುಡಾರವನ್ನೂ ಪರಿಶುದ್ಧವಾದ ಎಲ್ಲಾ ಸಾಮಾನುಗಳನ್ನೂ ನೋಡಿಕೊಳ್ಳುವುದೇ ಸರ್ವೇಶ್ವರನ ಆಲಯದಲ್ಲಿ ಅವರು ಮಾಡಬೇಕಾಗಿದ್ದ ಪರಿಚರ್ಯೆ.