ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆದಿಕಾಂಡ
39ನೇ ಅಧ್ಯಾಯ
- Verse 1: ಅತ್ತ ಜೋಸೆಫನನ್ನು ತೆಗೆದುಕೊಂಡುಹೋದ ಇಷ್ಮಾಯೇಲ್ಯರು ಈಜಿಪ್ಟ್ ದೇಶವನ್ನು ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಆಸ್ಥಾನದ ಒಬ್ಬ ಉದ್ಯೋಗಿ ಮತ್ತು ಅಂಗರಕ್ಷಕರ ದಳಪತಿ.
- Verse 2: ಸರ್ವೇಶ್ವರ ಸ್ವಾಮಿ ಜೋಸೆಫನ ಸಂಗಡ ಇದ್ದ ಕಾರಣ, ಅವನು ಏಳಿಗೆಯಾಗಿ ತನ್ನ ಈಜಿಪ್ಟಿನ ದಣಿಯ ಮನೆಯಲ್ಲಿ ಒಬ್ಬ ಸೇವಕನಾದ.
- Verse 3: ಜೋಸೆಫನ ಸಂಗಡ ಸರ್ವೇಶ್ವರ ಇದ್ದು ಅವನು ಮಾಡುವ ಕೆಲಸವನ್ನೆಲ್ಲ ಫಲಕಾರಿಯಾಗಿ ಮಾಡುತ್ತಾರೆಂಬುದು ಅವನ ದಣಿಗೆ ತಿಳಿಯಿತು.
- Verse 4: ಜೋಸೆಫ್ ಅವನ ಕೃಪೆಗೆ ಪಾತ್ರನಾದ. ದಣಿ ಅವನನ್ನು ತನ್ನ ಆಪ್ತಸೇವಕನನ್ನಾಗಿ ನೇಮಿಸಿಕೊಂಡ. ಅದು ಮಾತ್ರವಲ್ಲ, ತನ್ನ ಮನೆಯಲ್ಲೇ ಮೇಲ್ವಿಚಾರಕನನ್ನಾಗಿ ಮಾಡಿ, ತನ್ನ ಆಸ್ತಿಪಾಸ್ತಿಯನ್ನೆಲ್ಲ ಅವನ ವಶಕ್ಕೆ ಒಪ್ಪಿಸಿದ.
- Verse 5: ಹೀಗೆ ತನ್ನ ಮನೆಮಂದಿರದ ಮೇಲೂ ಆಸ್ತಿಪಾಸ್ತಿಯ ಮೇಲೂ ಜೋಸೆಫನನ್ನೇ ಆಡಳಿತಗಾರನನ್ನಾಗಿ ನೇಮಿಸಿದ. ಜೋಸೆಫನ ಪ್ರಯುಕ್ತ ಸರ್ವೇಶ್ವರ ಆ ಈಜಿಪ್ಟಿನವನ ಮನೆತನವನ್ನು ಹರಸಿದರು. ಮನೆಯಲ್ಲೂ ಸರ್ವೇಶ್ವರ ಸ್ವಾಮಿಯ ಆಶೀರ್ವಾದವಿತ್ತು.
- Verse 6: ಪೋಟೀಫರನು ಹೀಗೆ ತನ್ನದನ್ನೆಲ್ಲ ಜೋಸೆಫನ ವಶಕ್ಕೆ ಒಪ್ಪಿಸಿ, ‘ಅವನು ಇದ್ದಾನಲ್ಲಾ’ ಎಂದುಕೊಂಡು, ತಾನು ತಿನ್ನುತ್ತಿದ್ದ ಆಹಾರ ಒಂದನ್ನು ಬಿಟ್ಟು, ಬೇರೆ ಏನನ್ನೂ ಕುರಿತು ಚಿಂತಿಸದೆ ಇದ್ದ.
- Verse 7: ಜೋಸೆಫನದು ಸೊಗಸಾದ ಮೈಕಟ್ಟು, ಸುಂದರವಾದ ರೂಪು. ಹೀಗಿರಲು ಅವನ ದಣಿಯ ಪತ್ನಿ ಅವನ ಮೇಲೆ ಕಣ್ಣುಹಾಕಿದಳು. "ನನ್ನೊಡನೆ ಹಾಸಿಗೆಗೆ ಬಾ,” ಎಂದು ಕರೆದಳು.
- Verse 8: ಜೋಸೆಫನು ಒಪ್ಪಲಿಲ್ಲ. “ನನ್ನ ಒಡೆಯ ತನ್ನ ಆಸ್ತಿಪಾಸ್ತಿಯನ್ನೆಲ್ಲ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ನಾನಿರುವುದರಿಂದ ಮನೆಯ ಎಲ್ಲ ವಿಷಯಗಳಲ್ಲಿ ನಿಶ್ಚಿಂತರಾಗಿದ್ದಾರೆ.
- Verse 9: ಈ ಮನೆಯಲ್ಲಿ ನನಗಿಂತ ಹೆಚ್ಚಿನ ಅಧಿಕಾರ ಪಡೆದವರು ಒಬ್ಬರೂ ಇಲ್ಲ; ನಿಮ್ಮನ್ನು ಬಿಟ್ಟು ಮಿಕ್ಕ ಎಲ್ಲವನ್ನು ನನಗೆ ಅಧೀನಮಾಡಿದ್ದಾರೆ. ನೀವು ಅವರ ಧರ್ಮಪತ್ನಿ ಅಲ್ಲವೆ? ಹೀಗಿರುವಲ್ಲಿ, ನಾನು ಇಂತಹ ಮಹಾದುಷ್ಕೃತ್ಯವೆಸಗಿ ದೇವರಿಗೆ ವಿರುದ್ಧ ಹೇಗೆ ಪಾಪಮಾಡಲಿ?” ಎಂದು ಆಕೆಗೆ ಉತ್ತರಕೊಟ್ಟ.
- Verse 10: ಆಕೆ ಜೋಸೆಫನ ಸಂಗಡ ದಿನದಿನವೂ ಅದೇ ಮಾತನ್ನು ಎತ್ತುತ್ತಿದ್ದಳು. ಆದರೆ ಅವನು ಅವಳಿಗೆ ಕಿವಿಗೊಡಲಿಲ್ಲ. ಇವಳ ಸಂಸರ್ಗಕ್ಕಾಗಲಿ ಅವಳ ಬಳಿ ಇರುವುದಕ್ಕಾಗಲಿ ಒಪ್ಪಲಿಲ್ಲ.
- Verse 11: ಇಂತಿರಲು, ಒಂದು ದಿನ ಜೋಸೆಫನು ತನ್ನ ಕೆಲಸದ ಮೇಲೆ ಬಂದಾಗ ಮನೆಯ ಸೇವಕರಾರೂ ಒಳಗೆ ಇರಲಿಲ್ಲ. ಆಕೆ ಅವನ ಬಟ್ಟೆಯನ್ನು ಹಿಡುಕೊಂಡು “ಹಾಸಿಗೆಗೆ ಬಾ,” ಎಂದು ಕರೆದಳು. ಅವನು ತನ್ನ ಬಟ್ಟೆಯನ್ನು ಅವಳ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದ.
- Verse 12: “ಬಟ್ಟೆಯನ್ನು ನನ್ನ ಕೈಯಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋಗಿಬಿಟ್ಟನಲ್ಲಾ!” ಎಂದುಕೊಂಡ ಆಕೆ,
- Verse 13: ಮನೆಯ ಸೇವಕರನ್ನು ಕರೆದಳು.
- Verse 14: “ನೋಡಿ, ನನ್ನ ಯಜಮಾನರು ಮಾಡಿರುವ ಕೆಲಸ, ಒಬ್ಬ ಹಿಬ್ರಿಯನನ್ನು ಮನೆಗೆ ಸೇರಿಸಿಕೊಂಡು ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾರೆ. ಅವನು ಅತ್ಯಾಚಾರಕ್ಕಾಗಿ ನನ್ನ ಹತ್ತಿರಕ್ಕೆ ಬಂದ; ನಾನು ಗಟ್ಟಿಯಾಗಿ ಕೂಗಿಕೊಂಡೆ.
- Verse 15: ನಾನು ಕೂಗುವುದನ್ನು ಕೇಳಿ ತನ್ನ ಬಟ್ಟೆಯನ್ನು ನನ್ನ ಬಳಿಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದ,” ಎಂದು ಅವರಿಗೆ ಹೇಳಿದಳು.
- Verse 16: ಜೋಸೆಫನ ದಣಿ ಮನೆಗೆ ಬರುವವರೆಗೂ ಆ ಬಟ್ಟೆಯನ್ನು ತನ್ನಲ್ಲೇ ಇಟ್ಟುಕೊಂಡಿದ್ದಳು.
- Verse 17: ಪತಿ ಬಂದಾಗ ಆಕೆ ಅವನಿಗೆ ಅದೇ ಮಾತನ್ನು ಹೇಳುತ್ತಾ, “ನೀವು ಮನೆಗೆ ಸೇರಿಸಿಕೊಂಡ ಆ ಹಿಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವುದಕ್ಕಾಗಿ ನನ್ನ ಬಳಿಗೆ ಬಂದ. ನಾನು ಕೂಗಿಕೊಂಡೆ.
- Verse 18: ಕೂಗುತ್ತಲೇ ತನ್ನ ಬಟ್ಟೆಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿಹೋದ,” ಎಂದು ದೂರು ಇತ್ತಳು.
- Verse 19: “ನಿಮ್ಮ ಸೇವಕ ನನಗೆ ಹೀಗೆ ಮಾಡಿದ,” ಎಂಬ ಆಕೆಯ ಮಾತನ್ನು ಕೇಳಿ ಜೋಸೆಫನ ದಣಿ ಕಿಡಿಕಿಡಿಯಾದ.
- Verse 20: ಅವನನ್ನು ಬಂಧಿಸಿದ. ರಾಜಖೈದಿಗಳನ್ನು ಕಟ್ಟಿಹಾಕಿಸುತ್ತಿದ್ದ ಸೆರೆಮನೆಯಲ್ಲಿ ಅವನನ್ನು ಹಾಕಿಸಿದ. ಜೋಸೆಫನು ಸೆರೆಯಲ್ಲಿ ಇರಬೇಕಾಯಿತು.
- Verse 21: ಆದರೂ ಸರ್ವೇಶ್ವರ, ಜೋಸೆಫನ ಸಂಗಡ ಇದ್ದರು. ಅವನಿಗೆ ಅಪಾರ ಪ್ರೀತಿ ತೋರಿಸಿ, ಅವನಿಗೆ ಸೆರೆಯಜಮಾನನ ದಯೆ ದೊರಕುವಂತೆ ಮಾಡಿದರು.
- Verse 22: ಆ ಸೆರೆಯಜಮಾನ ಸೆರೆಯಲ್ಲಿದ್ದ ಎಲ್ಲರನ್ನು ಜೋಸೆಫನ ವಶಕ್ಕೆ ಬಿಟ್ಟನು. ಅಲ್ಲಿಯ ಕೆಲಸಕಾರ್ಯವೆಲ್ಲ ಜೋಸೆಫನ ನೇತೃತ್ವದಲ್ಲಿ ನಡೆಯುವಂತಾಯಿತು.
- Verse 23: ಸರ್ವೇಶ್ವರ ಜೋಸೆಫನೊಂದಿಗೆ ಇದ್ದರು. ಅವನು ಕೈಗೊಂಡ ಕೆಲಸವೆಲ್ಲ ಜಯವಾಗುವಂತೆ ಮಾಡುತ್ತಿದ್ದರು. ಈ ಕಾರಣ ಸೆರೆಮನೆಯ ಯಜಮಾನ ಅಲ್ಲಿಯ ಎಲ್ಲ ವಿಷಯದಲ್ಲೂ ನಿಶ್ಚಿಂತನಾಗಿದ್ದನು.