ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
27ನೇ ಅಧ್ಯಾಯ
- Verse 1: ಯೋತಾಮನು ಪಟ್ಟಕ್ಕೆ ಬಂದಾಗ ಅವನಿಗೆ ಇಪ್ಪತ್ತೈದು ವರ್ಷ. ಅವನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಎಂಬಾಕೆ ಇವನ ತಾಯಿ.
- Verse 2: ತನ್ನ ತಂದೆಯಾದ ಉಜ್ಜೀಯನಂತೆ ಇವನು ಸರ್ವೇಶ್ವರನ ಚಿತ್ತಾನುಸಾರ ನಡೆದನು; ಆದರೆ ಅವನಂತೆ ಸರ್ವೇಶ್ವರನ ಆಲಯವನ್ನು ಪ್ರವೇಶಿಸಲಿಲ್ಲ. ಪ್ರಜೆಗಳಾದರೋ ದುರಾಚಾರಿಗಳಾಗಿಯೇ ಇದ್ದರು.
- Verse 3: ಸರ್ವೇಶ್ವರನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿ ಓಫೇಲ್ ಗೋಡೆಯ ಹೆಚ್ಚಿನ ಭಾಗವನ್ನು ಕಟ್ಟಿಸಿದವನು ಇವನೇ.
- Verse 4: ಇದಲ್ಲದೆ, ಇವನು ಜುದೇಯ ಪರ್ವತಪ್ರದೇಶದಲ್ಲಿ ಪಟ್ಟಣಗಳನ್ನೂ ಕಾಡುಗಳಲ್ಲಿ ದುರ್ಗಗಳನ್ನೂ ಬುರುಜುಗಳನ್ನೂ ಕಟ್ಟಿಸಿದನು.
- Verse 5: ಅಮ್ಮೋನಿಯರ ಅರಸನೊಡನೆ ಯುದ್ಧಮಾಡಿ ಅವರ ಮೇಲೆ ಜಯಗಳಿಸಿದನು; ಅಮ್ಮೋನಿಯರು ಆ ವರ್ಷದಲ್ಲಿ ಇವನಿಗೆ 3,400 ಕಿಲೋಗ್ರಾಂ ಬೆಳ್ಳಿ, 1000 ಮೆಟ್ರಿಕ್ ಟನ್ ಗೋದಿ, 100 ಮೆಟ್ರಿಕ್ ಟನ್ ಜವೆಗೋದಿ ಇವುಗಳನ್ನು ಕೊಡಬೇಕಾಯಿತು. ಅಮ್ಮೋನಿಯರು ಅವನಿಗೆ ಎರಡನೆಯ ಮತ್ತು ಮೂರನೆಯ ವರ್ಷಗಳಲ್ಲಿಯೂ ಹೀಗೆಯೇ ಕೊಟ್ಟರು.
- Verse 6: ಯೋತಾಮನು ತನ್ನ ದೇವರಾದ ಸರ್ವೇಶ್ವರನ ಚಿತ್ತಾನುಸಾರ ನಡೆದುಕೊಂಡಿದ್ದರಿಂದ ಶಕ್ತಿಶಾಲಿ ಆದನು.
- Verse 7: ಯೋತಾಮನ ಉಳಿದ ಚರಿತ್ರೆ ಅವನ ಯುದ್ಧಗಳು ಹಾಗು ಪ್ರವರ್ತನೆಗಳು ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ದಾಖಲಾಗಿರುತ್ತವೆ.
- Verse 8: ಅವನು ತನ್ನ ಇಪ್ಪತ್ತೈದನೆಯ ವರ್ಷ ತುಂಬಿದ ಮೇಲೆ ಪಟ್ಟಕ್ಕೆ ಬಂದು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು.
- Verse 9: ಮೃತನಾಗಿ ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಅಹಾಜನು ಅರಸನಾದನು.