ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
30ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿಯ ನುಡಿಯಿದು : “ದ್ರೋಹಿಗಳಾದ ಈ ಪೀಳಿಗೆಗೆ ಧಿಕ್ಕಾರ ! ಇವರು ನನ್ನನ್ನು ಕೇಳದೆ ತಮ್ಮದೇ ಆದ ಯೋಜನೆಯನ್ನು ಸಾಧಿಸುತ್ತಾರೆ. ನನ್ನಾತ್ಮಪ್ರೇರಣೆಯಿಲ್ಲದೆ ತಂತ್ರೋಪಾಯಗಳನ್ನು ಹೂಡುತ್ತಾರೆ. ಪಾಪದ ಮೇಲೆ ಪಾಪವನ್ನು ಸೇರಿಸಿಕೊಳ್ಳುತ್ತಾರೆ.
- Verse 2: ನನ್ನ ಸಲಹೆಯನ್ನು ಕೇಳದೆ ಈಜಿಪ್ಟಿಗೆ ಪ್ರಯಾಣ ಬೆಳೆಸಿದ್ದಾರೆ. ಫರೋಹನ ಆಶ್ರಯವನ್ನು ಬಯಸುತ್ತಾರೆ. ಈಜಿಪ್ಟಿನವರನ್ನು ಮರೆಹೋಗಬೇಕೆಂದಿದ್ದಾರೆ.
- Verse 3: ಆದರೆ ಫರೋಹನ ಆಶ್ರಯದಿಂದ ಅವರಿಗೆ ನಾಚಿಕೆಯಾಗುವುದು. ಈಜಿಪ್ಟಿನವರನ್ನು ಮರೆಹೋಗುವುದರಿಂದ ಅವರಿಗೆ ಅವಮಾನ ಉಂಟಾಗುವುದು.
- Verse 4: ಫರೋಹನ ಸಾಮಂತರಾಜರು ಚೊವನಿನಲ್ಲಿದ್ದಾರೆ. ಅವನ ರಾಯಭಾರಿಗಳು ಹಾನೇಸನ್ನು ತಲುಪಿದ್ದಾರೆ.
- Verse 5: ಆದರೂ ಅವರು ಯಾವ ಸಹಾಯವನ್ನಾಗಲೀ ಸೌಕರ್ಯವನ್ನಾಗಲೀ ನೀಡಲಾರರು. ಬದಲಿಗೆ, ಈ ಪೀಳಿಗೆಯವರಿಗೆ ನಾಚಿಕೆಯಾಗುವುದು, ಅವಮಾನವಾಗುವುದು, ಆ ನಿಷ್ಪ್ರಯೋಜಕ ರಾಷ್ಟ್ರದ ಬಗ್ಗೆ ಎಲ್ಲರೂ ವಿಷಾದಿಸುವರು.
- Verse 6: ನೆಗೇಬಿನ ಮೃಗಗಳನ್ನು ಕುರಿತ ದೈವವಾಣಿ : ಸಿಂಹಸಿಂಹಿಣಿಗಳಿಂದಲೂ ವಿಷಸರ್ಪ - ಘಟಸರ್ಪಗಳಿಂದಲೂ ಕೂಡಿದ ಭಯಂಕರ ಹಾಗೂ ಸಂಕಟಕರವಾದ ಆ ನಾಡಿನ ಮಾರ್ಗವಾಗಿ ತಮ್ಮ ಧನಕನಕಗಳನ್ನು ಕತ್ತೆಗಳ ಮೇಲೂ ಆಸ್ತಿಪಾಸ್ತಿಗಳನ್ನು ಒಂಟೆಗಳ ಮೇಲೂ ಹೊರಿಸಿಕೊಂಡು ನಿಷ್ಪ್ರಯೋಜಕವಾದ ಆ ರಾಷ್ಟ್ರಕ್ಕೆ ಹೋಗುತ್ತಾರೆ.
- Verse 7: ಈಜಿಪ್ಟ್ ನೀಡುವ ಸಹಾಯ ನಿರರ್ಥಕ, ನಿಷ್ಫ್ರಯೋಜಕ. ಆದುದರಿಂದಲೇ ಅದಕ್ಕೆ ನಾನು ಜಡವಾಗಿ ಬಿದ್ದಿರುವ ಘಟಸರ್ಪ ಎಂದು ಹೆಸರು ಇಟ್ಟಿದ್ದೇನೆ.
- Verse 8: ಸರ್ವೇಶ್ವರ ನನಗೆ ಇಂತೆಂದರು : “ನೀನು ಈಗಲೇ ಹೋಗಿ, ನಾನು ಹೇಳುವುದನ್ನು ಅವರೆದುರಿನಲ್ಲಿಯೆ ಹಲಗೆಯ ಮೇಲೆ ಕೆತ್ತು, ಪುಸ್ತಕದಲ್ಲಿ ಬರೆ. ಅದು ಮುಂದಿನ ಕಾಲಕ್ಕೆ - ಶಾಶ್ವತ ಸಾಕ್ಷಿಯಾಗಿರಲಿ.
- Verse 9: ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ,
- Verse 10: ಇವರು ದಿವ್ಯದರ್ಶಿಗಳನ್ನು ನೋಡಿ : “ನಿಮಗೆ ದರ್ಶನವಾಗದಿರಲಿ,” ಎನ್ನುತ್ತಾರೆ. ಪ್ರವಾದಿಗಳಿಗೆ : “ನಯವಾದುದ್ದನ್ನು ನಮಗೆ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದನೆ ಮಾಡಿರಿ.
- Verse 11: ನಮಗೆ ಅಡ್ಡ ಬರಬೇಡಿ. ನಮ್ಮ ದಾರಿಯಿಂದ ದೂರವಿರಿ. ಇಸ್ರಯೇಲರ ಪರಮಪಾವನ ಸ್ವಾಮಿಯ ವಿಷಯವನ್ನು ನಮ್ಮ ಮುಂದೆ ಎತ್ತಬೇಡಿ,” ಎಂದು ಹೇಳುತ್ತಾರೆ.
- Verse 12: ಆದಕಾರಣ, ಇಸ್ರಯೇಲಿನ ಪರಮಪಾವನ ಸ್ವಾಮಿ ಹೀಗೆನ್ನುತ್ತಾರೆ : “ನೀವು ನನ್ನ ಮಾತನ್ನು ತಿರಸ್ಕರಿಸಿ ಹಿಂಸೆ ಕುತಂತ್ರಗಳನ್ನೇ ನೆಚ್ಚಿಕೊಂಡಿದ್ದೀರಿ.
- Verse 13: ಇದ್ದಕ್ಕಿದ್ದಂತೆ ಆ ಗೋಡೆ ತಟ್ಟನೆ ಬಿದ್ದುಹೋಗುವುದು. ಅಂತೆಯೇ ನಿಮ್ಮ ಅಪರಾಧ ನಿಮಗೆ ಅಪಾಯಕರವಾಗಿರುವುದು.
- Verse 14: ಆ ಗೋಡೆಯೆಂಬ ಕುಂಬಾರನ ಮಡಕೆಯ ಚೂರಿನಿಂದ, ಬೆಂಕಿಯ ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲೀ ತೊಟ್ಟಿಯ ನೀರನ್ನು ತೋಡಿಕೊಳ್ಳುವುದಕ್ಕಾಗಲೀ ಸಾಧ್ಯವಾಗದು.”
- Verse 15: ಪರಮಪಾವನವಾಗಿರುವ ಇಸ್ರಯೇಲಿನ ಸರ್ವೇಶ್ವರ ಸ್ವಾಮಿಯಾದ ನಾನು ನಿಮಗೆ ಹೇಳುವುದೇನೆಂದರೆ : “ನೀವು ಪಶ್ಚಾತ್ತಾಪಪಟ್ಟು ನನಗೆ ಅಭಿಮುಖವಾಗಿ ನೆಮ್ಮದಿಯಿಂದಿದ್ದರೆ ಉದ್ಧಾರವಾಗುವಿರಿ. ಶಾಂತಿಸಮಾಧಾನ ಮತ್ತು ಭಕ್ತಿಭರವಸೆಯಲ್ಲೇ ಶಕ್ತಿಯನ್ನು ಪಡೆಯುವಿರಿ.” ಆದರೆ ನೀವು ಒಪ್ಪಿಕೊಂಡಿಲ್ಲ.
- Verse 16: ಬದಲಿಗೆ, “ಬೇಡ ಬೇಡ, ನಾವು ಕುದುರೆಗಳ ಮೇಲೆ ಓಡಿಹೋಗುತ್ತೇವೆ,” ಎಂದುಕೊಂಡಿರಿ. ಅಂತೆಯೇ ಓಡಿಹೋಗುವಿರಿ.” ನಾವು ದೌಡೋಡುವ ಕುದುರೆಗಳ ಮೇಲೆ ಸವಾರಿಮಾಡುತ್ತೇವೆ,” ಎಂದುಕೊಂಡಿರಿ. ಅಂತೆಯೇ ದೌಡೋಡುವವರೇ ನಿಮ್ಮನ್ನು ಅಟ್ಟಿಕೊಂಡುಬರುವರು.
- Verse 17: ಒಬ್ಬ ಸೈನಿಕನ ಬೆದರಿಕೆಗೆ ಸಾವಿರ ಜನರು ಪರಾರಿಯಾಗುವರು. ಐದು ಸೈನಿಕರ ಬೆದರಿಕೆಗೆ ನೀವೆಲ್ಲರೂ ಓಡಿಹೋಗುವಿರಿ. ಕಟ್ಟಕಡೆಗೆ ಬೆಟ್ಟದ ತುದಿಯಲ್ಲಿರುವ ಧ್ವಜಸ್ತಂಭದಂತೆ, ಗುಡ್ಡದ ಮೇಲಿರುವ ಕೈಕಂಬದಂತೆ ಒಬ್ಬಂಟಿಗನಾಗಿ ಉಳಿಯುವಿರಿ.
- Verse 18: ಆದರೆ ಸರ್ವೇಶ್ವರ ನಿಮಗೆ ಕೃಪೆತೋರಬೇಕೆಂದು ಕಾದಿರುತ್ತಾರೆ. ನಿಮ್ಮನ್ನು ಕರುಣಿಸಲು ಎದ್ದುನಿಂತಿದ್ದಾರೆ. ಅವರು ನ್ಯಾಯಪರರಾದ ದೇವರು, ಅವರಿಗಾಗಿ ಕಾದಿರುವವರೆಲ್ಲರೂ ಧನ್ಯರು.
- Verse 19: ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು.
- Verse 20: ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ.
- Verse 21: ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ, ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ,’ ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು.
- Verse 22: ಆಗ ಬೆಳ್ಳಿಯ ಕವಚಗಳಿಂದ ಕೂಡಿದ ನಿಮ್ಮ ವಿಗ್ರಹಗಳನ್ನೂ ಚಿನ್ನದಿಂದ ಲೇಪಿತವಾದ ನಿಮ್ಮ ಬೊಂಬೆಗಳನ್ನೂ ಬಿಸಾಡುವಿರಿ. ಅವುಗಳನ್ನು ಹೊಲೆಮಾಡಿ ‘ತೊಲಗಿ’ ಎಂದು ಹೇಳುತ್ತಾ ಎಸೆದುಬಿಡುವಿರಿ.
- Verse 23: ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.
- Verse 24: ಹೊಲಗೇಯುವ ನಿಮ್ಮ ಎತ್ತುಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು.
- Verse 25: ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು.
- Verse 26: ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು.
- Verse 27: ಇಗೋ, ಸರ್ವೇಶ್ವರ ನಾಮಧೇಯನು ಬರುತಿಹನು ದೂರದಿಂದ; ಭುಗಿಲೇರುತಿದೆ ಆತನ ಕೋಪ ಏಳುತಿದೆ ದಟ್ಟವಾದ ಧೂಮ ಅದರಿಂದ. ದಹಿಸುವ ಅಗ್ನಿಯಂತಿದೆ ಆತನ ನಾಲಗೆ. ಭರಿತವಾಗಿದೆ ಆತನ ತುಟಿಗಳು ರೋಷದಿಂದ.
- Verse 28: ತುಂಬಿತುಳುಕಿ ಕಂಠದವರೆಗೆ ಏರುವ ತೊರೆಯಂತಿದೆ ಆತನ ಶ್ವಾಸ ಆತನ ಕೈಯಲ್ಲಿದೆ ಜನಾಂಗಗಳನ್ನು ಜಾಲಿಸುವ ಜರಡಿಯ ವಿನಾಶ ಜನರ ಕಟಿಬಾಯಲ್ಲಿರುವುದು ದಾರಿ ತಪ್ಪಿಸುವ ಕಡಿವಾಣದ ಪಾಶ.
- Verse 29: ನೀವಾದರೋ ಹಾಡುವಿರಿ ಹಬ್ಬದ ರಾತ್ರಿಯಲ್ಲೋ ಎಂಬಂತೆ ಹೃದಯಾನಂದ ಪಡುವಿರಿ, ಇಸ್ರಯೇಲರ ರಕ್ಷಣೆಯ ಕೋಟೆಗೆ, ಸರ್ವೇಶ್ವರನ ಶಿಖರಕ್ಕೆ ಕೊಳಲನೂದುತ ಹೋಗುವವರಂತೆ.
- Verse 30: ಆಗ ಸರ್ವೇಶ್ವರ ತಮ್ಮ ಗಂಭೀರವಾದ ವಾಣಿಯನ್ನು ಕೇಳುವಂತೆ ಮಾಡುವರು. ತೀವ್ರಕೋಪ, ದಹಿಸುವ ಅಗ್ನಿಜ್ವಾಲೆ, ಸಿಡಿಯುವ ಮೋಡ, ಚಂಡಮಾರುತ, ಕಲ್ಮಳೆ - ಇವುಗಳಿಂದ ತಮ್ಮ ಶಿಕ್ಷಾಹಸ್ತವನ್ನು ಪ್ರದರ್ಶಿಸುವರು.
- Verse 31: ಹೀಗೆ ಸರ್ವೇಶ್ವರ ಸ್ವಾಮಿಯ ವಾಣಿಯನ್ನು ಕೇಳಿದ ಅಸ್ಸೀರಿಯಾದವರು ದಿಗ್ಬ್ರಮೆಗೊಳ್ಳುವರು. ರಾಜದಂಡದ ಶಿಕ್ಷೆಯನ್ನು ಸವಿಯುವರು.
- Verse 32: ಸರ್ವೇಶ್ವರ ಸ್ವಾಮಿ ವಿಧಿಸುವ ಪ್ರತಿಯೊಂದು ಪೆಟ್ಟು ತಾಳ ತಮ್ಮಟೆಯಂತೆ ಅವರ ಮೇಲೆ ಬೀಳುವುದು. ಸರ್ವೇಶ್ವರ ತಾವೇ ಅವರ ವಿರುದ್ಧವಾಗಿ ಕೈಬೀಸಿ ಯುದ್ಧಮಾಡುವರು.
- Verse 33: ಪುರಾತನ ಕಾಲದಿಂದಲೇ ಅಸ್ಸೀರಿಯದ ಅರಸನಿಗೆ ಅಗ್ನಿಕುಂಡವು ಅಣಿಯಾಗಿದೆ. ಅದನ್ನು ಆಳವಾಗಿಯೂ ಅಗಲವಾಗಿಯೂ ಮಾಡಲಾಗಿದೆ. ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಸೌದೆಯೂ ತುಂಬಿದೆ. ಗಂಧಕದ ಪ್ರವಾಹದೋಪಾದಿಯಲ್ಲಿ ಸರ್ವೇಶ್ವರ ಸ್ವಾಮಿ ತಮ್ಮ ಶ್ವಾಸವನ್ನೂದಿ ಅದನ್ನು ಭುಗಿಲೆಬ್ಬಿಸುವರು.