ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
17ನೇ ಅಧ್ಯಾಯ
- Verse 1: ಲಕ್ಷ್ಯವಿಡು, ಓ ಪ್ರಭು, ಎನ್ನ ನ್ಯಾಯವಾದ ಮೊರೆಗೆ I ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ II
- Verse 2: ನ್ಯಾಯತೀರ್ಪು ಬರಲಿ ಎನಗೆ, ನಿನ್ನಿಂದಲೆ I ನೀತಿಗನುಸಾರ ನೋಡುವಾತ, ನೀನಲ್ಲವೆ? II
- Verse 3: ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು I ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾನಿಸು II
- Verse 4: ಲೋಕವಿಚಾರಗಳಲಿ ಹಿಂಸಾತ್ಮಕ ಮಾರ್ಗ ಹಿಡಿದಿಲ್ಲ I ನಿನ್ನಧರ ವಚನವನು ನಾನೆಂದಿಗು ಮೀರಿ ನಡೆದಿಲ್ಲ II
- Verse 5: ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ I ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ II
- Verse 6: ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ I ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ II
- Verse 7: ಶರಣರನು ಶತ್ರುವಿಂದ ಸಂರಕ್ಷಿಸುವಾತ ನೀನಯ್ಯಾ I ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ I ನಿನ್ನಚಲ ಪ್ರೀತಿಯನ್ನಚ್ಚರಿಯಿಂದ ತೋರ್ಪಡಿಸಯ್ಯಾ II
- Verse 8: ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ I ಸುತ್ತುವರೆದಿರುವ ಪ್ರಾಣ ವೈರಿಗಳಿಂದ I ನಿನ್ನ ಕನೀನಿಕೆಯಂತೆ ಎನ್ನ ಕಾಪಾಡು I ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು II
- Verse 9: ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ I ಸುತ್ತುವರೆದಿರುವ ಪ್ರಾಣ ವೈರಿಗಳಿಂದ I ನಿನ್ನ ಕನೀನಿಕೆಯಂತೆ ಎನ್ನ ಕಾಪಾಡು I ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು II
- Verse 10: ಕರುಣೆಗೆಡೆಯಿಲ್ಲ ಕೊಬ್ಬಿದಾ ಹೃದಯಗಳಲಿ I ಗರ್ವ ತುಳುಕುತಿದೆ ಆ ಜನರ ಬಾಯಿಗಳಲಿ II
- Verse 11: ಹಿಂದೆಯೆ ಬಂದು ಸುತ್ತುವರೆದುಕೊಳ್ಳುವರು I ನೆಲಕ್ಕಪ್ಪಳಿಸಲು ಹೊಂಚು ಕಾಯುತ್ತಿರುವರು II
- Verse 12: ಇಹರು ಸೀಳಿಹಾಕಲಿರುವ ಕೇಸರಿಯಂತೆ I ಹೊಂಚು ಹಾಕುತಿಹರು ಪ್ರಾಯ ಸಿಂಹದಂತೆ II
- Verse 13: ಸದೆಬಡಿ ಪ್ರಭು, ಆ ದುರುಳರನು ಇದಿರ್ಗೊಂಡು I ಖಡ್ಗ ಹಿಡಿದೆನ್ನ ಪ್ರಾಣವನು ಕಾಪಾಡು II
- Verse 14: ಇಳೆಯ ಮಾನವರಿಂದ ಪ್ರಭು, ಎನ್ನನು ಕೈಯಾರೆ ಕಾಪಾಡು I ಜಗವೇ ತಮ್ಮ ಪಾಲಿನ ಪರಿಮಿತಿ ಎನ್ನುವವರಿಂದ ಕಾದಿಡು II ಅವರಾದರೊ ನಿನ್ನ ನಿಧಿಯಿಂದ ಉದರ ತುಂಬಿಸಿಕೊಳ್ಳಲಿ I ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ ಉಳಿಸಿಕೊಳ್ಳಲಿ II
- Verse 15: ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನ್ನಿಧ್ಯವನು I ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು II