ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಧರ್ಮೋಪದೇಶಕಾಂಡ
12ನೇ ಅಧ್ಯಾಯ
- Verse 1: “ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ನಾಡಿನಲ್ಲೆ ನೀವು ಜೀವಮಾನ ಪರಿಯಂತರ ಅನುಸರಿಸಬೇಕಾದ ಆಜ್ಞಾವಿಧಿಗಳು ಇವು:
- Verse 2: “ನೀವು ಸ್ವಾಧೀನಮಾಡಿಕೊಳ್ಳುವ ನಾಡಿನ ಜನಾಂಗಗಳು ದೊಡ್ಡ ಬೆಟ್ಟಗಳ ಮೇಲೂ ದಿಣ್ಣೆಗಳ ಮೇಲೂ ಹರಡಿಕೊಂಡ ಮರಗಳ ಕೆಳಗೂ ತಮ್ಮ ದೇವರುಗಳನ್ನು ಪೂಜಿಸುತ್ತಾರೆ; ಆ ಸ್ಥಳಗಳನ್ನೆಲ್ಲಾ ನೀವು ಅಗತ್ಯವಾಗಿ ನಾಶಮಾಡಬೇಕು.
- Verse 3: ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಕಲ್ಲುಕಂಬಗಳನ್ನು ಒಡೆಯಬೇಕು; ಅಶೇರ ಎಂಬ ವಿಗ್ರಹಸ್ತಂಭಗಳನ್ನು ಸುಟ್ಟು, ಅವರ ದೇವತಾ ಪ್ರತಿಮೆಗಳನ್ನು ಪುಡಿಪುಡಿಮಾಡಿ ಆ ದೇವರುಗಳ ಹೆಸರೇ ಉಳಿಯದಂತೆ ಮಾಡಿಬಿಡಬೇಕು.
- Verse 4: “ಅವರು ಅನುಸರಿಸುವ ರೀತಿಯಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪೂಜಿಸಬಾರದು.
- Verse 5: ನಿಮ್ಮ ದೇವರಾದ ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳಲು ಹಾಗು ತಾವು ವಾಸಮಾಡಲು ನಿಮ್ಮ ಎಲ್ಲಾ ಕುಲಗಳಿಂದ ಆರಿಸಿಕೊಳ್ಳುವ ಸ್ಥಳದಲ್ಲೇ ನೀವು ಅವರ ದರ್ಶನಕ್ಕಾಗಿ ಸಭೆಸೇರಬೇಕು.
- Verse 6: ನೀವು ಸಮರ್ಪಿಸುವ ದಹನಬಲಿ ಮುಂತಾದ ಯಜ್ಞಗಳ ಪಶುಪ್ರಾಣಿಗಳನ್ನು, ನಿಮ್ಮ ಬೆಳೆಯಲ್ಲಿ ದಶಮಾಂಶವನ್ನು ಪ್ರತ್ಯೇಕಿಸುವ ಪದಾರ್ಥಗಳನ್ನು ಮತ್ತು ಹರಕೇಮುಡುಪುಗಳನ್ನು, ಕಾಣಿಕೆಗಳನ್ನು ಹಾಗು ದನಕುರಿಗಳ ಚೊಚ್ಚಲು ಮರಿಗಳನ್ನು ಆ ಸ್ಥಳಕ್ಕೆ ಮಾತ್ರ ತರಬೇಕು.
- Verse 7: ಅಲ್ಲಿಯೇ ಅವರ ಸನ್ನಿಧಿಯಲ್ಲಿ ಊಟಮಾಡಿ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ನಿಮ್ಮ ಮನೆಗಳವರೂ ಸಂತೋಷದಿಂದಿರಬೇಕು.
- Verse 8: “ನಾವು ಈಗ ಈ ಸ್ಥಳದಲ್ಲಿ ವರ್ತಿಸುವಂತೆ ಎಲ್ಲರೂ ನಡೆದುಕೊಳ್ಳಬೇಕೇ ವಿನಃ ತಮ್ಮ ತಮ್ಮ ಮನಸ್ಸಿಗೆ ತೋರಿದಂತೆ ವರ್ತಿಸಕೂಡದು;
- Verse 9: ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ, ನೀವು ಇನ್ನು ವಿಶ್ರಾಂತಿಹೊಂದಿಲ್ಲ.
- Verse 10: ಆದರೆ ನೀವು ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸೊತ್ತಾಗಿ ಕೊಡುವ ಆ ನಾಡಿನಲ್ಲಿ ಮನೆಮಾಡಿಕೊಂಡಿರುವಾಗ ನಿಮ್ಮ ಸುತ್ತಲು ಶತ್ರುಗಳು ಯಾರೂ ಇಲ್ಲದಂತೆ ಸರ್ವೇಶ್ವರ ಮಾಡುವರು;
- Verse 11: ಆಗ ನೀವು ನಿರ್ಭಯರಾಗಿ ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ಕಾಣಿಕೆಗಳನ್ನು ಅಂದರೆ, ದಹನಬಲಿ ಮುಂತಾದ ಯಜ್ಞಪಶುಗಳನ್ನು, ಬೆಳೆಯ ದಶಮಾಂಶಗಳನ್ನು, ಸರ್ವೇಶ್ವರನಿಗಾಗಿ ಪ್ರತ್ಯೇಕಿಸುವ ಪದಾರ್ಥಗಳನ್ನು, ಹರಕೆಮಾಡಿದ ವಿಶೇಷ ಕಾಣಿಕೆಗಳನ್ನು, ಇವುಗಳನ್ನೆಲ್ಲ ನಿಮ್ಮ ದೇವರಾದ ಸರ್ವೇಶ್ವರ ತಮ್ಮ ನಾಮಸ್ಥಾಪನೆಗಾಗಿ ಆರಿಸಿಕೊಳ್ಳುವ ಸ್ಥಳಕ್ಕೇ ತರಬೇಕು.
- Verse 12: ನೀವು, ನಿಮ್ಮ ಗಂಡು ಹೆಣ್ಣು ಮಕ್ಕಳು, ದಾಸದಾಸಿಯರು ಹಾಗು ನಿಮ್ಮೊಡನೆ ಸೊತ್ತನ್ನು ಹೊಂದದೆ ಇರುವ ನಿಮ್ಮ ಊರಿನ ಲೇವಿಯರು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷವಾಗಿರಬೇಕು.
- Verse 13: “ನಿಮಗೆ ಇಷ್ಟಬಂದ ಸ್ಥಳಗಳಲ್ಲಿ ದಹನಬಲಿಗಳನ್ನು ಸಮರ್ಪಿಸಬಾರದು. ಎಚ್ಚರಿಕೆ!
- Verse 14: ನಿಮ್ಮ ಯಾವುದಾದರೊಂದು ಕುಲದಲ್ಲಿ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲೇ ನಿಮ್ಮ ದಹನಬಲಿಗಳನ್ನು ಸಮರ್ಪಿಸಬೇಕು; ಅಲ್ಲಿಯೇ ನಾನು ಆಜ್ಞಾಪಿಸುವ ಎಲ್ಲಾ ಆಚಾರಗಳನ್ನು ನಡೆಸಬೇಕು.
- Verse 15: ಆದರೆ ನೀವು ಎಲ್ಲ ಊರುಗಳಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಅಭಿವೃದ್ಧಿಪಡಿಸುವ ಮೇರೆಗೆ ಪಶುಪ್ರಾಣಿಗಳನ್ನು ಇಷ್ಟಾನುಸಾರ ಕೊಯ್ದು ಊಟಮಾಡಬಹುದು. ಶುದ್ಧರೂ ಅಶುದ್ಧರೂ ಜಿಂಕೆದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
- Verse 16: ರಕ್ತವನ್ನು ಮಾತ್ರ ಸೇವಿಸಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
- Verse 17: “ಧಾನ್ಯ, ದ್ರಾಕ್ಷಿ, ಎಣ್ಣೇಕಾಯಿ ಈ ಬೆಳೆಗಳ ದಶಮಾಂಶಗಳನ್ನು, ದನಕುರಿಗಳ ಚೊಚ್ಚಲು ಮರಿಗಳನ್ನು, ಹರಕೆಮಾಡಿದ ಪದಾರ್ಥಗಳನ್ನು, ಕಾಣಿಕೆಗಳನ್ನು ಹಾಗು ಯಾಜಕರಿಗಾಗಿ ಪ್ರತ್ಯೇಕಿಸಿದ ಪದಾರ್ಥಗಳನ್ನು ನಿಮ್ಮ ನಿಮ್ಮ ಊರುಗಳಲ್ಲಿ ತಿನ್ನಬಾರದು.
- Verse 18: ನಿಮ್ಮ ದೇವರಾದ ಸರ್ವೇಶ್ವರ ಆರಿಸಿಕೊಳ್ಳುವ ಸ್ಥಳದಲ್ಲಿ, ಅವರ ಸನ್ನಿಧಿಯಲ್ಲೇ ಅವುಗಳನ್ನು ಊಟಮಾಡಬೇಕು. ನಿಮ್ಮ ಎಲ್ಲ ಪ್ರಯತ್ನಗಳು ಕೈಗೂಡಿದ್ದಕ್ಕಾಗಿ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಂತೋಷದಿಂದಿರಬೇಕು; ನೀವು, ನಿಮ್ಮ ಗಂಡುಹೆಣ್ಣು ಮಕ್ಕಳು, ಆಳುಗಳು ಹಾಗು ನಿಮ್ಮ ಊರಲ್ಲಿರುವ ಲೇವಿಯರು ಇಂಥವುಗಳನ್ನು ಊಟಮಾಡಬೇಕು.
- Verse 19: ನೀವು ನಿಮ್ಮ ನಾಡಿನಲ್ಲಿ ಇರುವ ತನಕ ಲೇವಿಯರನ್ನು ಕೈಬಿಡಬಾರದು; ಇದು ನೆನಪಿರಲಿ.
- Verse 20: “ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ವಾಗ್ದಾನ ಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿದಾಗ ನೀವು ಮಾಂಸಾಹಾರವನ್ನು ಮಾಡುವುದಕ್ಕೆ ಇಷ್ಟಪಟ್ಟರೆ ಮಾಡಬಹುದು.
- Verse 21: ನಿಮ್ಮ ದೇವರಾದ ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸಲು ಆರಿಸಿಕೊಳ್ಳುವ ಸ್ಥಳ ನಿಮಗೆ ದೂರವಾದರೆ, ಅವರು ನಿಮಗೆ ಅನುಗ್ರಹಿಸಿದ ದನಕುರಿಗಳಲ್ಲಿ ಬೇಕಾದಷ್ಟನ್ನು, ನಾನು ಅಪ್ಪಣೆಕೊಟ್ಟ ಮೇರೆಗೆ, ನೀವು ಕೊಯ್ದು ನಿಮ್ಮ ಊರಲ್ಲೇ ಊಟಮಾಡಬಹುದು.
- Verse 22: ಜಿಂಕೆ ದುಪ್ಪಿಗಳನ್ನು ಶುದ್ಧರೂ ಅಶುದ್ಧರೂ ತಿನ್ನುವ ಪ್ರಕಾರ ದನಕುರಿಗಳನ್ನೂ ತಿನ್ನಬಹುದು.
- Verse 23: “ಆದರೆ ರಕ್ತ ಜೀವಾಧಾರವಾದುದರಿಂದ ಮಾಂಸದೊಡನೆ ರಕ್ತವನ್ನು ಸೇವಿಸಲೇಕೂಡದೆಂಬುದನ್ನು ಜ್ಞಾಪಕದಲ್ಲಿಡಿ. ಮಾಂಸದೊಡನೆ ಅದರ ಜೀವಾಧಾರವನ್ನು ತಿನ್ನಬಾರದು.
- Verse 24: ಅದನ್ನು ಭುಜಿಸದೆ ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
- Verse 25: ನೀವು ಅದನ್ನು ಸೇವಿಸದೆ ಸರ್ವೇಶ್ವರನಿಗೆ ಮೆಚ್ಚಿಗೆಯಾಗಿರುವುದನ್ನೇ ಮಾಡಿದರೆ ನಿಮಗೂ ನಿಮ್ಮ ಸಂತತಿಯವರಿಗೂ ಶುಭವುಂಟಾಗುವುದು.
- Verse 26: “ಆದರೆ ನಿಮ್ಮ ಬಳಿಯಿರುವ ದೇವರ ವಸ್ತುಗಳನ್ನು ಹಾಗು ಹರಕೆಮಾಡಿದ್ದನ್ನೂ ಸರ್ವೇಶ್ವರ ಆರಿಸಿಕೊಂಡ ಸ್ಥಳಕ್ಕೇ ತೆಗೆದುಕೊಂಡು ಹೋಗಬೇಕು.
- Verse 27: ದಹನಬಲಿಗಳನ್ನು ಸಮರ್ಪಿಸುವಾಗ ರಕ್ತಮಾಂಸಗಳೆರಡನ್ನೂ ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠದಲ್ಲಿ ದಹಿಸಿಬಿಡಬೇಕು. ಮಿಕ್ಕಬಲಿಗಳನ್ನು ಅರ್ಪಿಸುವಾಗ ರಕ್ತವನ್ನು ಸರ್ವೇಶ್ವರನ ಬಲಿಪೀಠದ ಮೇಲೆ ಸುರಿದುಬಿಟ್ಟು, ಮಾಂಸವನ್ನು ಊಟಮಾಡಬೇಕು.
- Verse 28: “ನಾನು ಬೋಧಿಸುವ ಈ ಎಲ್ಲಾ ಆಜ್ಞೆಗಳಿಗೆ ನೀವು ಚೆನ್ನಾಗಿ ಕಿವಿಗೊಟ್ಟು, ಅವುಗಳನ್ನು ಅನುಸರಿಸಿದರೆ ನಿಮಗೂ ನಿಮ್ಮ ಸಂತತಿಯವರಿಗೂ ಸದಾಕಾಲ ಶುಭವುಂಟಾಗುವುದು. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಸರಿಯಾದುದನ್ನೂ ಸೂಕ್ತವಾದುದನ್ನೂ ಮಾಡುತ್ತೀರಿ.
- Verse 29: “ನೀವು ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡಿನ ಜನಾಂಗಗಳನ್ನು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಮುಂದೆ ನಾಶಮಾಡಿದ ತರುವಾಯ, ನೀವು ಅವರ ನಾಡನ್ನು ತೆಗೆದುಕೊಂಡು ಅದರಲ್ಲಿ ವಾಸವಾಗಿರುವಿರಿ.
- Verse 30: ಆಗ ನೀವು ಭ್ರಮೆಗೊಂಡು, ನಿಮ್ಮ ಮುಂದೆ ನಾಶವಾದವರ ದುಷ್ಟ ಪದ್ಧತಿಗಳನ್ನು ಅನುಸರಿಸದಂತೆ ಜಾಗರೂಕರಾಗಿರಿ; ‘ಈ ನಾಡಿನ ಜನರು ತಮ್ಮ ದೇವರುಗಳನ್ನು ಹೇಗೆ ಪೂಜಿಸುತ್ತಿದ್ದರೋ ಹಾಗೆಯೇ ನಾವೂ ಪೂಜಿಸುವೆವು’ ಎಂದು ಹೇಳಿಕೊಂಡು ಅವರ ದೇವರುಗಳ ಬಗ್ಗೆ ಎಷ್ಟು ಮಾತ್ರವೂ ಕೇಳಿತಿಳಿದುಕೊಳ್ಳಬೇಡಿ.
- Verse 31: ಸರ್ವೇಶ್ವರನಿಗೆ ಅಸಹ್ಯವಾಗಿರುವ ಹಲವು ಹೇಸಿಗೆ ಕೆಲಸಗಳನ್ನು ಅವರು ತಮ್ಮ ದೇವತೆಗಳಿಗೆ ಮಾಡುತ್ತಾರೆ; ತಮ್ಮ ಗಂಡುಹೆಣ್ಣು ಮಕ್ಕಳನ್ನು ತಮ್ಮ ದೇವತೆಗಳಿಗೆ ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಮಾಡುವ ಸೇವೆ ಹಾಗಿರಬಾರದು.