P. O. C ബൈബിള്
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
31ನೇ ಅಧ್ಯಾಯ
- Verse 1: ಇದಾದನಂತರ ನೆರೆದುಬಂದ ಇಸ್ರಯೇಲರೆಲ್ಲರು ಜುದೇಯ ನಾಡಿನ ಪಟ್ಟಣಗಳಿಗೆ ಹೋಗಿ ಕಲ್ಲುಕಂಬಗಳನ್ನು ಒಡೆದು, ಆಶೇರ ವಿಗ್ರಹಸ್ತಂಭಗಳನ್ನು ಕಡಿದುಹಾಕಿ, ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಜುದೇಯ ಹಾಗು ಬೆನ್ಯಾಮೀನ್ ಪ್ರಾಂತಗಳಲ್ಲಿ ಮಾತ್ರವಲ್ಲ, ಎಫ್ರಯಿಮ್, ಮನಸ್ಸೆ ಪ್ರಾಂತಗಳಲ್ಲೂ ಯಾವುದೊಂದನ್ನೂ ಉಳಿಸಲಿಲ್ಲ. ಆಮೇಲೆ ಇಸ್ರಯೇಲರೆಲ್ಲರೂ ತಮ್ಮ ತಮ್ಮ ಆಸ್ತಿಪಾಸ್ತಿಯಿದ್ದ ಪಟ್ಟಣಗಳಿಗೆ ಹೋದರು.
- Verse 2: ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ, ದಹನಬಲಿ, ಶಾಂತಿಸಮಾಧಾನ ಬಲಿ ಇವುಗಳನ್ನು ಸಮರ್ಪಿಸುವುದಕ್ಕೂ ಸರ್ವೇಶ್ವರನ ಪಾಳೆಯದ ದ್ವಾರಗಳಲ್ಲಿ ಸೇರಿ ಸರ್ವೇಶ್ವರನನ್ನು ಆರಾಧಿಸುತ್ತಾ ಕೀರ್ತಿಸುತ್ತಾ ಕೃತಜ್ಞತಾಸ್ತುತಿ ಮಾಡುತ್ತಾ ಇರುವುದಕ್ಕೂ ಹಿಜ್ಕೀಯನು ನೇಮಿಸಿದನು.
- Verse 3: ಇದಲ್ಲದೆ, ಅವನು ಸರ್ವೇಶ್ವರನ ಧರ್ಮಶಾಸ್ತ್ರ ವಿಧಿಗನುಸಾರ ಬೆಳಿಗ್ಗೆ, ಸಂಜೆ, ಸಬ್ಬತ್ದಿನ, ಅಮಾವಾಸ್ಯೆ ಹಾಗು ಜಾತ್ರೆಗಳಲ್ಲಿ ಸಮರ್ಪಣೆ ಆಗತಕ್ಕ ದಹನ ಬಲಿಗಳಿಗೆ ಬೇಕಾದುದನ್ನೆಲ್ಲಾ ತನ್ನ ಆಸ್ತಿಯಿಂದಲೇ ಸಲ್ಲಿಸಲಾಗುವುದೆಂದು ಸೂಚಿಸಿದನು.
- Verse 4: ಯಾಜಕರು ಮತ್ತು ಲೇವಿಯರು ಸರ್ವೇಶ್ವರನ ಧರ್ಮದಲ್ಲಿ ಆಸಕ್ತರಾಗಿರುವುದಕ್ಕಾಗಿ ಅವರಿಗೆ ಸಲ್ಲತಕ್ಕ ಜೀವನಾಂಶವನ್ನು, ಜೆರುಸಲೇಮಿನಲ್ಲಿ ವಾಸಿಸುವ ಜನರು ಕೊಡಬೇಕೆಂತಲೂ ಗೊತ್ತುಮಾಡಿದನು.
- Verse 5: ಈ ರಾಜಾಜ್ಞೆಯು ಪ್ರಕಟವಾದ ಕೂಡಲೆ ಇಸ್ರಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು ಮುಂತಾದವೆಲ್ಲಾ ಹುಟ್ಟುವಳಿಯಿಂದ ಪ್ರಥಮಫಲವನ್ನು ರಾಶಿರಾಶಿಯಾಗಿ ತಂದುಕೊಟ್ಟರು; ಮತ್ತು ತಮ್ಮ ಎಲ್ಲಾ ಆದಾಯದ ದಶಮಾಂಶವನ್ನೂ ಉದಾರವಾಗಿ ಸಲ್ಲಿಸಿದರು.
- Verse 6: ಜುದೇಯದ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಯೇಲರೂ ಯೆಹೂದ್ಯರೂ ಕುರಿದನಗಳಲ್ಲಿ ದಶಮಾಂಶವನ್ನೂ ಕೊಟ್ಟದ್ದಲ್ಲದೆ, ದೇವರಾದ ಸರ್ವೇಶ್ವರನಿಗೆ ಸಮರ್ಪಣೆಯಾಗತಕ್ಕ ಪರಿಶುದ್ಧ ದ್ರವ್ಯಗಳಲ್ಲಿಯೂ ದಶಮಾಂಶವನ್ನು ತಂದು ರಾಶಿಹಾಕಿದರು.
- Verse 7: ಹೀಗೆ ರಾಶಿಹಾಕುವುದು ಮೂರನೆಯ ತಿಂಗಳಲ್ಲಿ ಪ್ರಾರಂಭವಾಗಿ ಏಳನೆಯ ತಿಂಗಳಲ್ಲಿ ಮುಗಿಯಿತು.
- Verse 8: ಹಿಜ್ಕೀಯನೂ ಪದಾಧಿಕಾರಿಗಳೂ ಬಂದು ಆ ರಾಶಿಗಳನ್ನು ನೋಡಿದಾಗ ಸರ್ವೇಶ್ವರನನ್ನು ಕೊಂಡಾಡಿ ಅವರ ಪ್ರಜೆಗಳಾದ ಇಸ್ರಯೇಲರನ್ನು ಹರಸಿದರು.
- Verse 9: ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಬಳಿ ಆ ರಾಶಿಗಳ ಬಗ್ಗೆ ವಿಚಾರಿಸಿಧಾಗ,
- Verse 10: ಚಾದೋಕ್ ಸಂತಾನದ ಮಹಾಯಾಜಕ ಅಜರ್ಯನು, “ಜನರು ದೇವರಾದ ಸರ್ವೇಶ್ವರನಿಗೆ ಪ್ರತ್ಯೇಕಿಸತಕ್ಕದ್ದನ್ನು ಅವರ ಆಲಯಕ್ಕೆ ತಂದಂದಿನಿಂದ ಸರ್ವೇಶ್ವರ ತಮ್ಮ ಪ್ರಜೆಗೆ ಸಮೃದ್ಧಿಯನ್ನು ಅನುಗ್ರಹಿಸಿದ್ದಾರೆ. ನಾವು ಉಂಡು ತೃಪ್ತರಾಗಿ, ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತೇವೆ,” ಎಂದನು.
- Verse 11: ಬಳಿಕ ಹಿಜ್ಕೀಯನು ಸರ್ವೇಶ್ವರನ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.
- Verse 12: ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು, ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು; ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.
- Verse 13: ಅರಸ ಹಿಜ್ಕೀಯನ ಮತ್ತು ಸರ್ವೇಶ್ವರನ ಆಲಯದ ಅಧಿಪತಿಯಾದ ಅಜರ್ಯನ ನಿಯಮದಂತೆ ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ ಇವರು ಕೋನನ್ಯನ ಮತ್ತು ಅವನ ತಮ್ಮನಾದ ಶಿಮ್ಮಿಯ ಕೈಕೆಳಗಿನ ಪಾರುಪತ್ಯಗಾರರಾಗಿದ್ದರು.
- Verse 14: ಪೂರ್ವದಿಕ್ಕಿನ ದ್ವಾರಪಾಲಕನಾಗಿದ್ದ ಇಮ್ಲನ ಮಗ ಕೋರೆ ಎಂಬ ಲೇವಿಯನು, ಜನರು ಸ್ವಂತ ಇಚ್ಛೆಯಿಂದ ದೇವರಿಗೆ ಕಾಣಿಕೆಯಾಗಿ ಸಮರ್ಪಿಸುತ್ತಿದ್ದ ವಸ್ತುಗಳ ಮೇಲ್ವಿಚಾರಕನಾಗಿದ್ದನು. ಅದು ಮಾತ್ರವಲ್ಲ, ಸರ್ವೇಶ್ವರನಿಗೆ ಪ್ರತ್ಯೇಕಿಸಲ್ಪಟ್ಟ ದ್ರವ್ಯ, ಮಹಾಪರಿಶುದ್ಧ ವಸ್ತು, ಇವುಗಳನ್ನು ಹಂಚಿಕೊಡುವವನೂ ಆಗಿದ್ದನು.
- Verse 15: ಇವನ ಕೈಕೆಳಗೆ ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ, ಶೆಕನ್ಯ ಎಂಬವರಿದ್ದರು. ಇವರು ಯಾಜಕರ ಪಟ್ಟಣಗಳಲ್ಲಿದ್ದು, ತಮ್ಮ ಬಂಧುಗಳಿಗೆ ದೊಡ್ಡವರು ಚಿಕ್ಕವರು ಎಂಬ ವ್ಯತ್ಯಾಸಮಾಡದೆ, ಅವರವರ ವರ್ಗಗಳ ಪ್ರಕಾರ ಪಾಲುಕೊಡುತ್ತಿದ್ದರು.
- Verse 16: (ಆಯಾ ಉದ್ಯೋಗ ವರ್ಗಗಳಿಗನುಸಾರ ಅನುದಿನ ಸೇವೆಗಾಗಿ ಸರ್ವೇಶ್ವರನ ಆಲಯಕ್ಕೆ ಬರುತ್ತಿದ್ದ ಗಂಡಸರಲ್ಲಿ ಮೂವತ್ತು ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸು ಉಳ್ಳವರಿಗೆ ಪಟ್ಟಿಯಲ್ಲಿ ಬರೆದಿದ್ದ ಹಾಗೆ ಕೊಡುತ್ತಿದ್ದರು.
- Verse 17: ಆ ಪಟ್ಟಿಯಲ್ಲಿ ಗೋತ್ರಗಳಿಗನುಸಾರ ಹಾಗು ಆಯಾ ಉದ್ಯೋಗ ವರ್ಗಗಳಿಗನುಸಾರ ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಯಾಜಕರು, ಲೇವಿಯರು,
- Verse 18: ಅವರವರ ಹೆಂಡತಿಯರು, ಗಂಡು-ಹೆಣ್ಣು ಮಕ್ಕಳು, ಅಂತು ತಮ್ಮ ಉದ್ಯೋಗದ ನಿಮಿತ್ತ ತಮ್ಮನ್ನೇ ದೇವರಿಗೆ ಪ್ರತಿಷ್ಠಿಸಿಕೊಂಡ ಸಮೂಹದವರೂ ಅವರಿಗೆ ಸೇರಿದವರೆಲ್ಲರೂ ಲಿಖಿತರಾಗಿದ್ದರು.)
- Verse 19: ಇದಲ್ಲದೆ ಆಯಾ ಪಟ್ಟಣಗಳಿಗೆ ಸೇರಿದ ಗೋಮಾಳಗಳಲ್ಲಿದ್ದ ಆರೋನನ ಸಂತಾನದ ಯಾಜಕರಿಗೆ ಪಾಲುಕೊಡುತ್ತಿದ್ದರು. ಯಾಜಕ ಸಂತಾನದ ಎಲ್ಲ ಗಂಡಸರಿಗೂ, ಪಟ್ಟಿಯಲ್ಲಿ ಲಿಖಿತರಾದ ಎಲ್ಲ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಹಂಚಿಕೊಡುವುದಕ್ಕೆ ಹೆಸರಿಸಲಾದ ಪುರುಷರಿದ್ದರು.
- Verse 20: ಹಿಜ್ಕೀಯನು ಜುದೇಯದಲ್ಲೆಲ್ಲಾ ಇದೇ ವ್ಯವಸ್ಥೆಯನ್ನು ಮಾಡಿದನು. ಅವನು ತನ್ನ ದೇವರಾದ ಸರ್ವೇಶ್ವರನಿಗೆ ಒಳ್ಳೆಯವನು, ನೀತಿವಂತನು ಹಾಗು ನಂಬಿಗಸ್ತನು ಆಗಿ ನಡೆದನು.
- Verse 21: ದೇವಾಲಯದ ಸೇವಾಸಂಬಂಧದಲ್ಲೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲೂ ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಮುಗಿಸಿ, ತನ್ನ ದೇವರ ಒಲುಮೆಯನ್ನು ಗಳಿಸಿಕೊಂಡನು.