ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಪೂರ್ವಕಾಲದ ಇತಿಹಾಸ
25ನೇ ಅಧ್ಯಾಯ
- Verse 1: ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಜೆರುಸಲೇಮಿನವಳಾದ ಯೆಹೋವದ್ಧಾನ್ ಎಂಬಾಕೆ ಅವನ ತಾಯಿ.
- Verse 2: ಅವನು ಸರ್ವೇಶ್ವರನ ಚಿತ್ತಾನುಸಾರ ನಡೆದನು; ಆದರೆ ತದೇಕಚಿತ್ತದಿಂದಲ್ಲ.
- Verse 3: ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ, ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು.
- Verse 4: ಆದರೆ ‘ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆ ಮಾಡಿದ ಪಾಪಕ್ಕೆ ಮಕ್ಕಳಿಗಾಗಲಿ ಮರಣ ಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪದ ಫಲವನ್ನು ತಾನೇ ಅನುಭವಿಸಬೇಕು’ ಎಂಬುದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಸರ್ವೇಶ್ವರನ ಅಪ್ಪಣೆಯನ್ನು ನೆನಪುಮಾಡಿಕೊಂಡು, ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.
- Verse 5: ಆಮೇಲೆ ಅಮಚ್ಯನು ಯೆಹೂದ್ಯರನ್ನು ಸಹಸ್ರಾಧಿಪತಿ ಹಾಗು ಶತಾಧಿಪತಿಗಳ ಕೈಕೆಳಗೆ ಒಟ್ಟುಗೂಡಿಸಿ, ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಜನರನ್ನು ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ, ಇಪ್ಪತ್ತು ವರ್ಷದವರು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರನ್ನು ಲೆಕ್ಕಮಾಡಿಸಿದನು. ಅವರಲ್ಲಿ ಬರ್ಜಿ, ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷಮಂದಿ ಸಿಕ್ಕಿದರು.
- Verse 6: ಇದಲ್ಲದೆ 3400 ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟು ಇಸ್ರಯೇಲರಿಂದಲೂ ಲಕ್ಷಮಂದಿ ಯೋಧರನ್ನು ತರಿಸಿದನು.
- Verse 7: ಆಗ ದೈವಪುರುಷನೊಬ್ಬನು ಅವನ ಬಳಿಗೆ ಬಂದು, “ಅರಸರೇ, ಇಸ್ರಯೇಲ್ ಸೈನ್ಯದವರು ನಿಮ್ಮ ಜೊತೆಯಲ್ಲಿ ಯುದ್ಧಕ್ಕೆ ಹೋಗಬಾರದು. ಸರ್ವೇಶ್ವರ ಎಫ್ರಯಿಮರಾದ ಇಸ್ರಯೇಲರನ್ನೆಲ್ಲಾ ಕೈಬಿಟ್ಟಿದ್ದಾರೆ.
- Verse 8: ನೀವೇ ಹೋಗಿ ಕಾರ್ಯವನ್ನು ನಿರ್ವಹಿಸಿರಿ. ಧೈರ್ಯದಿಂದ ಯುದ್ಧಮಾಡಿ. ಹಾಗೆ ಮಾಡದಿದ್ದರೆ ದೇವರು ಶತ್ರುಗಳಿಂದ ನಿಮ್ಮನ್ನು ಅಪಜಯಗೊಳಿಸುವರು. ಜಯಾಪಜಯಗಳನ್ನು ನೀಡಲು ಅವರು ಶಕ್ತರು ಆಗಿರುತ್ತಾರಲ್ಲವೆ?” ಎಂದನು.
- Verse 9: ಅಮಚ್ಯನು ಆ ದೈವಪುರುಷನನ್ನು, “ಹಾಗಾದರೆ ನಾನು ಇಸ್ರಯೇಲ್ ಸೈನ್ಯಕ್ಕಾಗಿ 3400 ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟುಬಿಟ್ಟೆನಲ್ಲಾ, ಏನು ಮಾಡುವುದು?,” ಎಂದು ಕೇಳಿದನು. ಅವನು, “ಸರ್ವೇಶ್ವರ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಕೊಡಬಲ್ಲರು,” ಎಂದನು.
- Verse 10: ಆಗ ಅಮಚ್ಯನು ಎಫ್ರಯಿಮರಿಂದ ಬಂದ ಸೈನಿಕರನ್ನು ಬೇರೆಮಾಡಿ, ಅವರನ್ನು ಅವರ ನಾಡಿಗೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಕಡುಕೋಪಗೊಂಡು, ಬಲುಸಿಟ್ಟಿನಿಂದ ತಮ್ಮ ನಾಡಿಗೆ ಹೋದರು.
- Verse 11: ಅಮಚ್ಯನಾದರೋ ಧೈರ್ಯದಿಂದ ತನ್ನ ಸೈನ್ಯವನ್ನು ಕರೆದುಕೊಂಡು, ಉಪ್ಪಿನ ಕಣಿವೆಗೆ ಹೋಗಿ, ಸೇಯೀರ್ಯರಲ್ಲಿ ಹತ್ತು ಸಾವಿರ ಮಂದಿಯನ್ನು ವಧಿಸಿದನು.
- Verse 12: ಯೆಹೂದ್ಯರು ಬೇರೆ ಹತ್ತು ಸಾವಿರಮಂದಿಯನ್ನು ಜೀವಸಹಿತವಾಗಿ ಹಿಡಿದು, ಕಡಿದಾದ ಬಂಡೆಯ ತುದಿಗೆ ಒಯ್ದು, ಅವರೆಲ್ಲರೂ ಚೂರುಚೂರಾಗುವ ಹಾಗೆ ಅವರನ್ನು ಕೆಳಕ್ಕೆ ದೊಬ್ಬಿದರು.
- Verse 13: ಅಷ್ಟರಲ್ಲಿ ಅಮಚ್ಯನು ತನ್ನ ಜೊತೆಯಲ್ಲಿ ಯುದ್ಧಕ್ಕೆ ಬರಬಾರದೆಂದು ಹಿಂದಕ್ಕೆ ಕಳುಹಿಸಿದ ಗುಂಪಿನವರು, ಸಮಾರಿಯಾಕ್ಕೂ ಬೇತ್ಹೋರೋನಿಗೂ ಮಧ್ಯದಲ್ಲಿರುವ ಜುದೇಯ ಪಟ್ಟಣಗಳ ಮೇಲೆ ದಾಳಿಮಾಡಿ, ಮೂರು ಸಾವಿರ ಜನರನ್ನು ಕೊಂದು, ದೊಡ್ಡ ಕೊಳ್ಳೆಯನ್ನು ಕೂಡಿಸಿಕೊಂಡು ಹೋದರು.
- Verse 14: ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ, ತಾನು ತೆಗೆದುಕೊಂಡು ಬಂದಿದ್ದ ಸೇಯೀರಿನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ನಿಲ್ಲಿಸಿ, ಅವುಗಳಿಗೆ ಅಡ್ಡಬಿದ್ದು ಧೂಪಾರತಿ ಎತ್ತುತ್ತಿದ್ದನು.
- Verse 15: ಆಗ ಸರ್ವೇಶ್ವರ ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು, ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ, “ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆಹೋದ ಅನ್ಯದೇವತೆಗಳಲ್ಲಿ ಏಕೆ ಇಷ್ಟು ಭಕ್ತಿ?” ಎಂದು ಹೇಳಿಸಿದರು.
- Verse 16: ಈ ಮಾತನ್ನು ಹೇಳಿದ ಪ್ರವಾದಿಗೆ ಅರಸನು, “ನಿನ್ನನ್ನು ನಾನು ಆಲೋಚನಾಮಂತ್ರಿಯನ್ನಾಗಿ ನೇಮಿಸಲಿಲ್ಲ; ಬಾಯಿಮುಚ್ಚುವಿಯೋ: ಅಥವಾ ಏಟು ತಿನ್ನುವಿಯೋ?’ ಎಂದನು. ಅದಕ್ಕೆ ಅವನು, “ನೀವು ನನ್ನ ಬುದ್ಧಿವಾದವನ್ನು ಆಲಿಸದೆ ಹೀಗೆ ಮಾಡುವುದರಿಂದ ದೇವರು ನಿಮ್ಮನ್ನು ನಾಶಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದಾರೆಂದು ನಾನು ಬಲ್ಲೆ,” ಎಂದು ಹೇಳಿ ಸುಮ್ಮನಾದನು.
- Verse 17: ಅನಂತರ ಜುದೇಯದ ಅರಸ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ,” ಎಂದು ದೂತರ ಮುಖಾಂತರ ಹೇಳಿಸಿದನು.
- Verse 18: ಆಗ ಇಸ್ರಯೇಲರ ಅರಸ ಯೋವಾಷನು ಯೆಹೂದ್ಯರ ಅರಸ ಅಮಚ್ಯನಿಗೆ, “ಲೆಬನೋನಿನ ಒಂದು ಮುಳ್ಳುಗಿಡ ಅಲ್ಲಿನ ದೇವದಾರು ಮರಕ್ಕೆ, ‘ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು’ ಎಂದು ಹೇಳಿಕಳುಹಿಸಿತು. ತುಸುಹೊತ್ತಾದ ಮೇಲೆ, ಲೆಬನೋನಿನ ಒಂದು ಕಾಡುಮೃಗ ಆ ಮಾರ್ಗವಾಗಿ ಹಾದುಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿದುಬಿಟ್ಟಿತು.
- Verse 19: ಅಹಹ! ಎದೋಮ್ಯರನ್ನು ಸೋಲಿಸಿ ಬಹುಕೀರ್ತಿ ಪಡೆದುಕೊಂಡೆ ಎಂದು ನೀನು ಹೆಮ್ಮೆಗೊಂಡಿರುವೆ! ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದೆ? ನನ್ನನ್ನು ಕೆಣಕಿ ನಿನಗೂ ನಿನ್ನ ರಾಜ್ಯಕ್ಕೂ ಏಕೆ ಕೇಡನ್ನು ತಂದುಕೊಳ್ಳುವೆ,” ಎಂದು ಉತ್ತರಕೊಟ್ಟನು.
- Verse 20: ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಹಾಗಾಗಬೇಕೆಂದೇ ದೇವರ ಸಂಕಲ್ಪವಾಗಿತ್ತು. ಯೆಹೂದ್ಯರೂ ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಪರಾಧೀನ ಮಾಡಬೇಕೆಂದು ದೇವರು ನಿರ್ಣಯಿಸಿದ್ದರು.
- Verse 21: ಇಸ್ರಯೇಲರ ಅರಸ ಯೋವಾಷನು ಯುದ್ಧಕ್ಕೆ ಹೊರಟನು; ಅವನೂ ಜುದೇಯದ ಅರಸ ಅಮಚ್ಯನೂ ಜುದೇಯ ಪ್ರಾಂತದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.
- Verse 22: ಯೆಹೂದ್ಯರು ಇಸ್ರಯೇಲರಿಗೆ ಸೋತು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
- Verse 23: ಇಸ್ರಯೇಲರ ಅರಸ ಯೋವಾಷನು, ಯೆಹೋವಹಾಜನ ಮೊಮ್ಮಗನೂ ಯೆಹೋವಾಷನ ಮಗನೂ ಜುದೇಯದ ಅರಸನೂ ಆದ ಅಮಚ್ಯನನ್ನು ಬೇತ್ಷೆಮೆಷಿನಲ್ಲಿ ಸೆರೆಹಿಡಿದನು. ಅವನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದು, ಎಫ್ರಯಿಮ್ ಬಾಗಿಲಿಗೂ ಮೂಲೆಯ ಬಾಗಿಲಿಗೂ ಮಧ್ಯದಲ್ಲಿದ್ದ ಜೆರುಸಲೇಮಿನ ಗೋಡೆಯನ್ನು ಸುಮಾರು ಇನ್ನೂರು ಮೀಟರಿನಷ್ಟು ಕೆಡವಿಬಿಟ್ಟನು.
- Verse 24: ಇದಲ್ಲದೆ, ಅವನು ಓಬೇದೆದೋಮನ ವಶದಲ್ಲಿದ್ದ ದೇವಾಲಯದ ಎಲ್ಲ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ಅರಮನೆಯ ಭಂಡಾರಗಳಲ್ಲಿದ್ದುದೆಲ್ಲವನ್ನೂ ತೆಗೆದುಕೊಂಡು, ಹೊಣೆಗಾರರನ್ನಾಗಿ ಕೆಲವರನ್ನು ಸೆರೆಹಿಡಿದು ಸಮಾರಿಯಕ್ಕೆ ಹಿಂದಿರುಗಿದನು.
- Verse 25: ಇಸ್ರಯೇಲರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತ ನಂತರ, ಜುದೇಯದ ಅರಸ ಯೆಹೋವಾಷನ ಮಗ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.
- Verse 26: ಉಳಿದ ಅವನ ಪೂರ್ವೋತ್ತರ ಚರಿತ್ರೆಯು ಯೆಹೂದ್ಯರ ಮತ್ತು ಇಸ್ರಯೇಲರ ರಾಜರ ಗ್ರಂಥದಲ್ಲಿ ಲಿಖಿತವಾಗಿದೆ.
- Verse 27: ಅಮಚ್ಯನು ಸರ್ವೇಶ್ವರನ ಭಕ್ತಿಯನ್ನು ಬಿಟ್ಟಂದಿನಿಂದ ಜೆರುಸಲೇಮಿನವರು ಅವನಿಗೆ ವಿರುದ್ಧ ಒಳಸಂಚು ಮಾಡುತ್ತಿದ್ದರು. ಆದುದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು.
- Verse 28: ಅವನ ಜನರು ಆ ಶವವನ್ನು ಕುದುರೆಯ ಮೇಲೆ ಜೆರುಸಲೇಮಿಗೆ ತಂದು, ಜುದೇಯದ ರಾಜಧಾನಿಯಲ್ಲಿ, ಅವನ ಪಿತೃ ಸ್ಮಶಾನದಲ್ಲಿ ಸಮಾಧಿಮಾಡಿದರು.