पवित्र बाइबिल
ಹಳೆಯ ಒಡಂಬಡಿಕೆ
ಧರ್ಮೋಪದೇಶಕಾಂಡ
32ನೇ ಅಧ್ಯಾಯ
- Verse 1: ಆಕಾಶಮಂಡಲವೇ, ಕೇಳು ನಾ ಹೇಳುವುದನು ಭೂಮಂಡಲವೇ, ಆಲಿಸು ನನ್ನ ಮಾತುಗಳನು.
- Verse 2: ನನ್ನ ಉಪದೇಶ ಹಸಿಹುಲ್ಲಿನ ಮೇಲೆ ಮೆಲ್ಲನೆ ಸುರಿವ ತುಂತುರುಗಳಂತೆ ನನ್ನ ಬೋಧೆ ಕಾಯಿಪಲ್ಯಗಳ ಮೇಲೆ ಮಂಜಿನಂತೆ ಬೀಳುವ ಹದಮಳೆಯಂತೆ.
- Verse 3: ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು ಕೊಂಡಾಡಿ ನೀವು ಆ ದೇವನ ಮಹಾಮಹಿಮೆಯನು.
- Verse 4: “ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”
- Verse 5: ಅವರಾದರೋ ದ್ರೋಹಿಗಳು, ಮಕ್ಕಳೆನಿಸಿಕೊಳ್ಳಲು ಅಯೋಗ್ಯರು ವಕ್ರಬುದ್ಧಿಯುಳ್ಳವರು, ಮೂರ್ಖಜಾತಿಯವರು.
- Verse 6: ದುರಾಚಾರಿಗಳೇ, ಅವಿವೇಕಿಗಳೇ, ಸರ್ವೇಶ್ವರನ ಬಗ್ಗೆ ಹೀಗೆ ವರ್ತಿಸಬಹುದೇ? ಆತ ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೆ? ನಿಮ್ಮನ್ನೊಂದು ರಾಷ್ಟ್ರವಾಗಿ ಸ್ಥಾಪಿಸಿದವನಲ್ಲವೆ?
- Verse 7: ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.
- Verse 8: ಪರಾತ್ಪರ ದೇವರು ಜನಾಂಗಗಳನು ಬೇರೆಬೇರೆಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರರ ಸಂಖ್ಯಾನುಸಾರ ಪ್ರದೇಶಗಳನು ಗೊತ್ತುಮಾಡಿದಾಗ.
- Verse 9: ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು ಆ ಯಕೋಬ ವಂಶಜರು ಆತನಿಗೆ.
- Verse 10: ಬರಿದಾದ ಭೀಕರ ಮರುಭೂಮಿಯಲಿ ಅವರನು ಕಂಡು ಕಣ್ಣಗುಡ್ಡೆಯಂತೆ ಕಾಪಾಡಿದ ಪ್ರೀತಿಯಿಂದವರನು ಅಪ್ಪಿಕೊಂಡು.
- Verse 11: ಗೂಡಿನಿಂದ ಮರಿಗಳನು ಹೊರಡಿಸಿದಾ ಗರುಡಪಕ್ಷಿ ಹಾರಾಡಿ ಅವು ಬೀಳದಂತೆ ಕಾಯುತ್ತದೆ ರೆಕ್ಕೆಗಳನು ಚಾಚಿ. ಅಂತೆಯೆ ಸರ್ವೇಶ್ವರ ಕಾಪಾಡಿದ ಇಸ್ರಯೇಲರನು ಕೈಚಾಚಿ.
- Verse 12: ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.
- Verse 13: ಹತ್ತಿಸಿದವರನು ಎತ್ತರದ ಪ್ರದೇಶಗಳಿಗೆ ಇತ್ತನವರಿಗೆ ಅಲ್ಲಿಯೆ ಬೆಳೆದ ಪೈರುಫಸಲನೆ. ಗಿಟ್ಟಿತವರಿಗೆ ಗುಡ್ಡದ ಜೇನು, ಗಿರಿಯ ಎಣ್ಣೆಯು.
- Verse 14: ಆಹಾರಕ್ಕಿತ್ತು, ಆಕಳಿನ ಮೊಸರೋಗರ ಆಡುಕುರಿಗಳ ಕ್ಷೀರ ಬಾಷಾನಿನ ಪುಷ್ಟಪಶು, ಹೋತ, ಕೊಬ್ಬಿದ ಕುರಿಟಗರಿನ ಮಾಂಸ, ಉತ್ತಮವಾದ ಗೋಧೂಮ; ಪಾನಕ್ಕಿತ್ತು ರಕ್ತಗೆಂಪಾದ ದ್ರಾಕ್ಷಾರಸ.
- Verse 15: “ತೃಪ್ತಿಯಾಗಿ ತಿಂದನು ಯಕೋಬನು, ಕೊಬ್ಬಿಹೋದನು ಆ ಯೆಶೂರನು; ತೊರೆದುಬಿಟ್ಟನು ತನ್ನ ಪೊರೆಬಂಡೆಯನು ಮರೆತುಬಿಟ್ಟನು ತನ್ನ ಸೃಷ್ಟಿಕರ್ತನನು.
- Verse 16: ರೇಗಿಸಿದರಾತನನು ಅನ್ಯದೇವರುಗಳನು ಪೂಜಿಸುತ ಸಿಟ್ಟಿಗೇರಿಸಿದರು ನಿಷಿದ್ಧಾಚಾರಗಳನು ನಡೆಸುತ.
- Verse 17: ಬಲಿಯನರ್ಪಿಸಿದರು ನೂತನಾ ದೇವತೆಗಳಿಗೆ, ದೇವರಲ್ಲದಾ ಅಸುರರಿಗೆ, ಪಿತೃಗಳು ಭಜಿಸದಾ, ತಮಗೇ ತಿಳಿಯದಾ ಹೊಸ ದೇವತೆಗಳಿಗೆ.
- Verse 18: ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು ಸ್ಮರಿಸಲಿಲ್ಲ ನೀವು ಹೆತ್ತತಾಯಂತಿದ್ದಾ ದೇವರನು.
- Verse 19: ಇದ ಕಂಡು ಸರ್ವೇಶ್ವರ ಬೇಸರಗೊಂಡ ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ.
- Verse 20: ಎಂದೇ ಇಂತೆಂದುಕೊಂಡನು; ಇವರಿಗೆ ವಿಮುಖನಾಗುವೆನು, ಇವರಿಗೊದಗಲಿರುವ ಗತಿಯನು ನೋಡುವೆನು. ಸತ್ಯವರಿತೂ ಅನುಸರಿಸದೆ ಹೋದರು ಈ ವಿದ್ರೋಹ ಮಕ್ಕಳಂತವರು.
- Verse 21: ‘ರೇಗಿಸಿದರೆನ್ನನು ದೇವರಲ್ಲದವುಗಳ ಮೂಲಕ, ಸಿಟ್ಟೇರಿಸಿದರು ಅಚೇತ ವಿಗ್ರಹಗಳ ಮೂಲಕ. ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ, ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದಾ ಜನರ ಮುಖಾಂತರ.
- Verse 22: ‘ಉರಿದೇಳುತ್ತಿದೆ ಕೆಳಲೋಕದ ತನಕ ಎನ್ನ ಕೋಪಾಗ್ನಿ ದಹಿಸಿಬಿಡುವುದದು ಭೂಮಿಯನು ಬೆಳೆಸಹಿತವಾಗಿ ಭಸ್ಮಮಾಡುವುದದು ಬೆಟ್ಟಗಳನು ಬುಡಸಮೇತವಾಗಿ.
- Verse 23: ‘ಉಪದ್ರವಗಳನು ಬರಮಾಡುವೆನು ಒಂದರ ಮೇಲೊಂದಾಗಿ ಬಿಲ್ಲುಬಾಣಗಳನು ಪ್ರಯೋಗಿಸುವೆನು ಅವರಿಗೆ ವಿರುದ್ಧವಾಗಿ.
- Verse 24: ಕ್ಷಯಿಸಿಹೋಗುವರವರು ಕ್ಷಾಮಡಾಮರದಿಂದ ಸಾಯುವರು ಶಾಪದಿಂದ, ಅಂಟುರೋಗಗಳಿಂದ, ನಾ ಕಳುಹಿಸುವ ಕಾಡುಮೃಗ, ವಿಷಸರ್ಪಗಳಿಂದ.
- Verse 25: ಹೊರಗೆ ಕತ್ತಿ, ಒಳಗೆ ಭಯಭೀತಿ ಇವರಲ್ಲಿರುವುವು. ಯುವಕ ಯುವತಿಯರು, ಮಕ್ಕಳು ಮುದುಕರು ಕತ್ತಿಕಠಾರಿಗಳಿಗೆ ತುತ್ತಾಗುವರು ಇವರೆಲ್ಲರು.
- Verse 26: ನಾಶ ಮಾಡುತ್ತಿದ್ದೆ ನಾನವರನು ಸಂಪೂರ್ಣವಾಗಿ ಅವರಿಲ್ಲದಂತೆ ಮಾಡುತ್ತಿದ್ದೆ ಯಾರೊಬ್ಬರ ನೆನಪಿನಲಿ.
- Verse 27: ಆದರೆ ತಪ್ಪು ತಿಳಿಯುತ್ತಿದ್ದರು ಅವರ ವಿರೋಧಿಗಳು; ‘ಇದಾಯಿತು ನಮ್ಮ ಶಕ್ತಿಯಿಂದ, ಸರ್ವೇಶ್ವರನಿಂದಲ್ಲ’ವೆಂದುಕೊಂಡು ಈ ಕಾರಣ ಹಿಂತೆಗೆದುಕೊಂಡೆನು ನನ್ನ ನಿಗದಿನಿರ್ಣಯವನು.
- Verse 28: “ಆಲೋಚನೆಯಿಲ್ಲದ ಜನರಿವರು ಸ್ವಲ್ಪವಾದರೂ ವಿವೇಕವಿಲ್ಲದವರು.
- Verse 29: ಜ್ಞಾನವಿದ್ದಿದ್ದರೆ ಗ್ರಹಿಸುತ್ತಿದ್ದರು ಈ ಸಂಗತಿಗಳನು ತಿಳಿಯುತ್ತಿದ್ದರು, ಅಂತ್ಯದೊಳು ತಮಗಾಗುವ ದುರವಸ್ಥೆಯನು.
- Verse 30: ಒಬ್ಬನಿಂದ ಸಾವಿರ ಮಂದಿ ಸೋತುಹೋದುದು’ ಒಬ್ಬರಿಗಂಜಿ ಹತ್ತುಸಾವಿರ ಓಡಿಹೋದುದು, ಅವರ ಪೊರೆಬಂಡೆಯಾತ ಅವರನು ವೈರಿಗೊಪ್ಪಿಸಿದ್ದರಿಂದಲ್ಲವೆ? ಅವರ ಸರ್ವೇಶ್ವರನು ಅವರನು ಕೈಬಿಟ್ಟುದರಿಂದಲ್ಲವೆ?
- Verse 31: ‘ನಮ್ಮಾಶ್ರಯ ದುರ್ಗ ಅವರ ಆಶ್ರಯದುರ್ಗದಂತಲ್ಲ’ ಎಂದು ಅವರ ಶತ್ರುಗಳೇ ಒಪ್ಪಿಕೊಳ್ಳುತ್ತಾರಲ್ಲವೆ?
- Verse 32: ಅವರೋ ಸೊದೋಮ್ಯರೆಂಬ ದ್ರಾಕ್ಷಾಲತೆ ಅವರೋ ಗೊಮೋರ್ಯರೆಂಬ ತೋಟದಬೆಳೆ.
- Verse 33: ಅವುಗಳ ಹಣ್ಣಿನ ಗೊಂಚಲು ವಿಷ ಅವುಗಳ ರಸ ಮರಣಕರ ಸರ್ಪವಿಷ.
- Verse 34: “ಇಸ್ರಯೇಲನನು ಇಟ್ಟಿದ್ದೇನೆ ಮುದ್ರೆಹಾಕಿ ಉಗ್ರಾಣದೊಳು ಇಟ್ಟಿದ್ದೇನೆ ಭದ್ರವಾಗಿ.
- Verse 35: ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸಮೀಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ಧವಾದ ದುರ್ಗತಿಕಾಲ!
- Verse 36: ಸ್ವತಂತ್ರರು, ಪರತಂತ್ರರು ನಿರಾಶ್ರಯರಾದಾಗ ಅವರೆಲ್ಲರು ನಿಶ್ಯೇಷರಾದವರು ಎಂದು ತಿಳಿದುಬಂದಾಗ ದೊರಕಿಸುವನು ಸರ್ವೇಶ್ವರನು ನ್ಯಾಯವನು ತನ್ನ ಪ್ರಜೆಗೆ ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ.
- Verse 37: ಆಗ ನುಡಿವನು ಸ್ವಾಮಿ ಸರ್ವೇಶ್ವರ ಇಂತೆಂದು; ಎಲ್ಲಿಗೆ ಹೋದರು ಅವರು ಪೂಜಿಸುತ್ತಿದ್ದ ದೇವರುಗಳು? ಎಲ್ಲಿರುವನು ಅವರು ಆಶ್ರಯಿಸಿಕೊಂಡಿದ್ದ ದುರ್ಗವಾದವನು.
- Verse 38: ಅವರು ಬಲಿಕೊಟ್ಟ ಕೊಬ್ಬು ಮಾಂಸವನು ತಿಂದವರೆಲ್ಲಿ? ಸಮರ್ಪಿಸಿದ ಪಾನಗಳನು ಕುಡಿದ ದೇವತೆಗಳೆಲ್ಲಿ? ಅವರೇ ನಿಮಗೆ ನೆರವಾಗಲಿ, ನಿಮ್ಮನೀಗ ಕಾಯಲಿ!
- Verse 39: “ಇರುವಾತನು ನಾನೇ, ನಾನೊಬ್ಬನೇ ಬದುಕಿಸುವವನು, ಕೊಲ್ಲುವವನು ನಾನೇ, ಗಾಯಗೊಳಿಸುವವನು, ವಾಸಿಮಾಡುವವನು ನಾನೇ. ಇಂದಾದರು ತಿಳಿಯಿರಿ: ನನ್ನ ವಿನಾ ದೇವರಿಲ್ಲ ನನ್ನ ಕೈಯಿಂದ ತಪ್ಪಿಸಬಲ್ಲ ಶಕ್ತನಾರೂ ಇಲ್ಲ.
- Verse 40: ಆಕಾಶದತ್ತ ಕೈಯೆತ್ತಿ ಪ್ರಮಾಣಮಾಡುವೆ, ಚಿರಂಜೀವಿಯಾದೆನ್ನ ಮೇಲೆ ಆಣೆಯಿಟ್ಟು ಹೇಳುವೆ:
- Verse 41: ಥಳಥಳಿಸುವ ಕತ್ತಿಯನು ಹದಮಾಡಿ ನ್ಯಾಯಸ್ಥಾಪಿಸುವೆನು ಮುನ್ನುಗ್ಗಿ. ಮುಯ್ಯಿ ತೀರಿಸುವೆನು ನನ್ನ ಶತ್ರುಗಳಿಗೆ ಪ್ರತಿದಂಡಿಸುವೆನು ನನ್ನ ದ್ವೇಷಿಸಿದವಗೆ.
- Verse 42: ಮತ್ತವಾಗುವುವು ನನ್ನ ಬಾಣಗಳು ರಕ್ತಕುಡಿದು; ನನ್ನ ಕತ್ತಿಯು ತಿನ್ನುವುದು ಸತ್ತವರ, ಖೈದಿಗಳ ರಕ್ತಮಾಂಸವನು; ಚೆಂಡಾಡುವುವು ಶತ್ರುವೀರರ ತಲೆಬುರುಡೆಗಳು.
- Verse 43: “ಜನಾಂಗಗಳೇ ಕೊಂಡಾಡಿರಿ ದೇವಜನರೊಡನೆ! ತನ್ನ ಭಕ್ತಾದಿಗಳ ರಕ್ತ ಚೆಲ್ಲಿದಾ ಶತ್ರುಗಳಿಗೆ ದಂಡಿಸಿ ಮುಯ್ಯಿತೀರಿಸುವವನು ಸರ್ವೇಶ್ವರನೇ. ತನ್ನ ಜನರಾ ನಾಡಿಗೆ ದೋಷಪರಿಹಾರಮಾಡುವವನು ಆತನೇ.”
- Verse 44: ಜನರಿಗೆ ಕೇಳಿಸುವಂತೆ ಹೇಳಿದರು ಈ ಗೀತವಚನಗಳನು ಮೋಶೆಯು ಮತ್ತು ನೂನನ ಮಗನಾದ ಯೆಹೋಶುವನು.
- Verse 45: ಮೋಶೆ ಈ ಮಾತುಗಳನ್ನೆಲ್ಲ ಇಸ್ರಯೇಲರಿಗೆ ಹೇಳಿ ಮುಗಿಸಿದನಂತರ ಅವರಿಗೆ,
- Verse 46: “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಿರಿ; ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸಿರಿ.
- Verse 47: ಇದು ನಿರರ್ಥಕವೆಂದು ಭಾವಿಸಬೇಡಿ; ಇದರಿಂದ ನೀವು ಬಾಳುವಿರಿ; ನೀವು ಜೋರ್ಡನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ಇದನ್ನು ಅನುಸರಿಸುವುದರಿಂದಲೇ ಬಹುಕಾಲ ಇರುವಿರಿ,” ಎಂದು ಹೇಳಿದನು.
- Verse 48: ಆ ದಿನದಲ್ಲೇ ಸರ್ವೇಶ್ವರ ಮೋಶೆಗೆ, “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ, ಮೋವಾಬ್ಯರ ದೇಶದಲ್ಲಿ ಜೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ ನಾನು ಇಸ್ರಯೇಲರಿಗೆ ಸ್ವದೇಶವಾಗಲೆಂದು ಕೊಡುವ ಕಾನಾನ್ ನಾಡನ್ನು ನೋಡು.
- Verse 49: ಆ ದಿನದಲ್ಲೇ ಸರ್ವೇಶ್ವರ ಮೋಶೆಗೆ, “ನೀನು ಈ ಅಬಾರೀಮ್ ಬೆಟ್ಟಗಳನ್ನು ಅಂದರೆ, ಮೋವಾಬ್ಯರ ದೇಶದಲ್ಲಿ ಜೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಬೆಟ್ಟವನ್ನು ಹತ್ತಿ ನಾನು ಇಸ್ರಯೇಲರಿಗೆ ಸ್ವದೇಶವಾಗಲೆಂದು ಕೊಡುವ ಕಾನಾನ್ ನಾಡನ್ನು ನೋಡು.
- Verse 50: ಅನಂತರ, ನಿನ್ನ ಅಣ್ಣನಾದ ಆರೋನನು ಹೇಗೆ ಹೋರೆಂಬ ಬೆಟ್ಟದಲ್ಲಿ ದೇಹವನ್ನು ಬಿಟ್ಟು ತನ್ನ ಪಿತೃಗಳಲ್ಲಿಗೆ ಸೇರಿದನೋ ಹಾಗೆಯೇ ನೀನೂ ಈ ಬೆಟ್ಟದಲ್ಲಿ ದೇಹವನ್ನು ಬಿಟ್ಟು ಪಿತೃಗಳಲ್ಲಿಗೆ ಸೇರಬೇಕು.
- Verse 51: ನೀವಿಬ್ಬರೂ ಚಿನ್ ಮರುಭೂಮಿಯಲ್ಲಿನ ಮೆರೀಬಾ ಕಾದೇಶಿನಲ್ಲಿ ನೀರು ಹೊರಟು ಬಂದ ಸ್ಥಳದ ಬಳಿಯಲ್ಲಿ, ಇಸ್ರಯೇಲರ ಮಧ್ಯೆ ನನಗೆ ವಿರೋಧವಾಗಿ ದ್ರೋಹಮಾಡಿದಿರಿ; ಅವರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದಲೇ ಹೀಗೆ ಆಗಬೇಕು.
- Verse 52: ನಾನು ಇಸ್ರಯೇಲರಿಗೆ ಕೊಡುವ ನಾಡನ್ನು ನೀನು ದೂರದಿಂದ ನೋಡಬಹುದೇ ಹೊರತು, ಅದರಲ್ಲಿ ಪ್ರವೇಶಿಸಕೂಡದು,” ಎಂದು ಆಜ್ಞಾಪಿಸಿದರು.