ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
40ನೇ ಅಧ್ಯಾಯ
- Verse 1: ಯೋಬನಿಗೆ ಸರ್ವೇಶ್ವರ ಮತ್ತೆ ಇಂತೆಂದನು:
- Verse 2: “ಸರ್ವಶಕ್ತನೊಡನೆ ವ್ಯಾಜ್ಯವಾಡುವುದನು ಈಗಲಾದರು ನಿಲ್ಲಿಸುವೆಯಾ? ದೇವರೊಡನೆ ತರ್ಕಮಾಡುವಂಥ ನೀನು ಉತ್ತರಕೊಡುವೆಯಾ?”
- Verse 3: ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು:
- Verse 4: “ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.
- Verse 5: ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”
- Verse 6: ಸರ್ವೇಶ್ವರ ಬಿರುಗಾಳಿಯೊಳಗಿಂದ ಯೋಬನಿಗೆ ಕೊಟ್ಟ ಪ್ರತ್ಯುತ್ತರವಿದು:
- Verse 7: “ಶೂರನಂತೆ ನಡುಕಟ್ಟಿಕೊಂಡು ನನ್ನ ಪ್ರಶ್ನೆಗೆ ಉತ್ತರಕೊಡು:
- Verse 8: ಏನು, ನನ್ನ ನಿರ್ಣಯವನ್ನು ನೀನು ಖಂಡಿಸುತ್ತೀಯೋ? ನೀನು ನಿರ್ದೋಷಿಯೆನಿಸಿಕೊಳ್ಳಲು ನನ್ನನ್ನು ದೋಷಿಯನ್ನಾಗಿಸುತ್ತೀಯೋ?
- Verse 9: ದೇವರಾದ ನನಗಿರುವಂಥ ಭುಜಬಲ ನಿನಗಿದೆಯೋ? ನನ್ನ ಧ್ವನಿಗೆ ಸಮನಾಗಿ ನೀನು ಗುಡುಗಬಲ್ಲೆಯೋ?
- Verse 10: ಮಹಿಮೆ ಘನತೆಗಳಿಂದ ಅಲಂಕರಿಸಿಕೊ! ಗೌರವ ಪ್ರಭಾವಗಳನು ಧರಿಸಿಕೊ!
- Verse 11: ನಿನ್ನ ಕಡುಕೋಪವನು ಎಲ್ಲೆಡೆಯೂ ಹರಡಿಸು ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು.
- Verse 12: ಹೌದು, ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು ದುಷ್ಟರನು ನಿಂತಲ್ಲೇ ತುಳಿದುಬಿಡು.
- Verse 13: ಅವರೆಲ್ಲರನು ಧೂಳಿನಲ್ಲಿ ಒಟ್ಟಿಗೆ ಅಡಗಿಸಿಬಿಡು ಅವರ ಮುಖಕ್ಕೆ ಅಧೋಲೋಕದಲಿ ಮುಸುಕುಹಾಕು.
- Verse 14: ಆಗ ನಿನ್ನ ಬಲ ನಿನ್ನನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.
- Verse 15: ಸೃಷ್ಟಿಮಾಡಿದೆನು ನೀರಾನೆಯನು ನಿನ್ನ ಹಾಗೆ ಅದು ಹುಲ್ಲನು ಮೇಯುತ್ತದೆ ಎತ್ತಿನ ಹಾಗೆ.
- Verse 16: ಅದರ ಬಲ ಇರುವುದು ಸೊಂಟದಲಿ ಅದರ ತ್ರಾಣ ಹೊಟ್ಟೆಯ ನರಗಳಲಿ.
- Verse 17: ಬಾಲವನ್ನು ಬಾಗಿಸುತ್ತದೆ ದೇವದಾರು ಮರದಂತೆ ಅದರ ನರಗಳೋ ಹೆಣೆದುಕೊಂಡಿವೆ.
- Verse 18: ಅದರ ಮೂಳೆಗಳಿವೆ ಕಂಚಿನ ನಳಿಕೆಗಳಂತೆ ಅದರ ಎಲುಬುಗಳಿವೆ ಕಬ್ಬಿಣದ ಹಾರೆಗಳಂತೆ.
- Verse 19: ದೈವಸೃಷ್ಟಿಗಳಲ್ಲಿ ಅದು ಮುಖ್ಯವಾದುದು ಸೃಷ್ಟಿಕರ್ತನು ಅದಕ್ಕೆ ಕೊಟ್ಟಿರುವನು ಕೋರೆಹಲ್ಲಿನ ಖಡ್ಗವನ್ನು.
- Verse 20: ಅದಕ್ಕೆ ಮೇವು ಕೊಡುತ್ತವೆ ಬೆಟ್ಟಗುಡ್ಡಗಳು ಅಲ್ಲಿ ಅಲೆದಾಡುತ್ತಿರುತ್ತವೆ ಕಾಡು ಮೃಗಗಳು.
- Verse 21: ಅದು ಮಲಗುತ್ತದೆ ತಾವರೆ ಗಿಡಗಳಡಿಯಲಿ ವಿಶ್ರಮಿಸುತ್ತದೆ ಆಪಿನ ಮರೆಯಲಿ, ಕೆಸರು ಭೂಮಿಯಲಿ.
- Verse 22: ಅದಕ್ಕೆ ನೆರಳನ್ನೀಯುತ್ತವೆ ತಾವರೆ ಎಲೆಗಳು ಅದರ ಸುತ್ತಲಿರುತ್ತವೆ ನದಿಯ ನೀರವಂಜಿಗಳು.
- Verse 23: ಹೊಳೆ ಉಕ್ಕಿಬಂದರೂ ಅದು ಹೆದರುವುದಿಲ್ಲ ನೋಡು ಜೋರ್ಡನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು!
- Verse 24: ಅದು ನೋಡುವಾಗ ಯಾವನಾದರು ಅದನು ಹಿಡಿಯಬಲ್ಲನೆ? ಗಾಳದಿಂದ ಯಾವನಾದರು ಅದರ ಮೂಗನು ಚುಚ್ಚಬಲ್ಲನೆ?”