ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
29ನೇ ಅಧ್ಯಾಯ
- Verse 1: ತರುವಾಯ ಅರಸ ದಾವೀದನು, “ದೇವರು ನನ್ನ ಮಗ ಸೊಲೊಮೋನನನ್ನೇ ಆರಿಸಿಕೊಂಡಿದ್ದಾರೆ. ಆದರೆ ಅವನು ಇನ್ನೂ ಚಿಕ್ಕವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟ ತಕ್ಕ ಮಂದಿರ ದೇವರಾದ ಸರ್ವೇಶ್ವರನಿಗಾಗಿ!
- Verse 2: ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ, ಇವುಗಳನ್ನೂ ಗೋಮೇಧಕ ರತ್ನ ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪುಹರಳು, ವಿವಿಧ ವರ್ಣದ ಕಲ್ಲು, ತರತರದ ಮಣೆ, ಚಂದ್ರಕಾಂತ ಇವುಗಳನ್ನೂ ನನ್ನ ದೇವರ ಮಂದಿರಕ್ಕಾಗಿ ರಾಶಿರಾಶಿಯಾಗಿ ಸಂಗ್ರಹಿಸಿದ್ದೇನೆ.
- Verse 3: ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ, ನನ್ನ ದೇವರಾಲಯದ ಮೇಲಣ ಅಭಿಮಾನದಿಂದ ಅದಕ್ಕಾಗಿ ನನ್ನ ಸ್ವಂತ ಸೊತ್ತಿನಿಂದ
- Verse 4: ನೂರು ಮೆಟ್ರಿಕ್ ಟನ್ ಒಫೀರ್ ದೇಶದ ಬಂಗಾರವನ್ನೂ ಸುಮಾರು ಇನ್ನೂರ ನಲವತ್ತು ಮೆಟ್ರಿಕ್ ಟನ್ ಚೊಕ್ಕ ಬೆಳ್ಳಿಯನ್ನೂ ಕೊಡುತ್ತೇನೆ.
- Verse 5: ಈ ಬೆಳ್ಳಿಬಂಗಾರಗಳಿಂದ ಆಲಯದ ಗೋಡೆಗಳನ್ನು ಹೊದಿಸಬೇಕು, ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ಉದಾರಹಸ್ತದಿಂದ ಸರ್ವೇಶ್ವರನಿಗಾಗಿ ಕಾಣಿಕೆಯನ್ನರ್ಪಿಸುವುದಕ್ಕೆ ಯಾರಿಗೆ ಮನಸ್ಸಿದೆ?” ಎಂದು ನೆರೆದ ಸಭೆಯನ್ನು ಕೇಳಿದನು.
- Verse 6: ಇಸ್ರಯೇಲ್ ಗೋತ್ರ ಕುಟುಂಬಗಳ ಅಧ್ಯಕ್ಷರುಗಳು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಹಾಗೂ ಅರಸನ ಕೆಲಸದವರ ಮುಖ್ಯಸ್ಥರು ದೇವಾಲಯದ ಕೆಲಸಕ್ಕಾಗಿ ಸ್ವೇಚ್ಛೆಯಿಂದ
- Verse 7: 170 ಮೆಟ್ರಿಕ್ ಟನ್ ಬಂಗಾರವನ್ನೂ 340 ಮೆಟ್ರಿಕ್ ಟನ್ ಬೆಳ್ಳಿಯನ್ನೂ 3400 ಮೆಟ್ರಿಕ್ ಟನ್ ತಾಮ್ರವನ್ನೂ 3400 ಮೆಟ್ರಿಕ್ ಟನ್ ಕಬ್ಬಿಣವನ್ನೂ ಕೊಟ್ಟರು.
- Verse 8: ರತ್ನಗಳಿದ್ದವರು ಅವುಗಳನ್ನು ಸರ್ವೇಶ್ವರನ ಆಲಯದ ಭಂಡಾರಕ್ಕಾಗಿ ಗೇರ್ಷೋನ್ಯನಾದ ಯೆಹೀಯೇಲನ ವಶಕ್ಕೆ ಕೊಟ್ಟರು.
- Verse 9: ಅವರು ಪೂರ್ಣಮನಸ್ಸಿನಿಂದ ಹಾಗೂ ಸ್ವೇಚ್ಛೆಯಿಂದ ಸರ್ವೇಶ್ವರನಿಗೆ ಕಾಣಿಕೆ ಕೊಟ್ಟಿದ್ದಕ್ಕಾಗಿ ಜನರೆಲ್ಲರೂ ಸಂತೋಷಪಟ್ಟರು. ಅರಸನಾದ ದಾವೀದನಿಗೂ ಬಹಳ ಸಂತೋಷ ಆಯಿತು.
- Verse 10: ಅನಂತರ ದಾವೀದನು ನೆರೆದ ಸಭೆಯ ಮುಂದೆ ಸರ್ವೇಶ್ವರನನ್ನು ಹೀಗೆ ಸ್ತುತಿಸಿದನು:
- Verse 11: “ಹೇ ಸರ್ವೇಶ್ವರಾ, ನಮ್ಮ ಪಿತೃ ಯಕೋಬನ ದೇವರೇ, ಸದಾಕಾಲಕ್ಕೂ ಸ್ತುತಿಸ್ತೋತ್ರ ಸಲ್ಲಲಿ ನಿಮಗೆ! ಹೇ ಸರ್ವೇಶ್ವರಾ, ಮಹಿಮೆ, ಪ್ರತಾಪ, ವೈಭವ, ಪರಾಕ್ರಮ, ಪ್ರತಿಭೆ, ನಿಮ್ಮವೇ, ಭೂಮ್ಯಾಕಾಶಗಳಲ್ಲಿರುವ ಸಮಸ್ತವೂ ನಿಮ್ಮದೇ. ಸರ್ವೇಶ್ವರಾ, ರಾಜ್ಯಭಾರವೂ ನಿಮ್ಮದೇ. ಸರ್ವವನು ಮಹೋನ್ನತರಾಗಿ ಆಳುವವರೂ ನೀವೇ.
- Verse 12: ಆಸ್ತಿ - ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ. ಸರ್ವಾಧಿಕಾರ, ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ. ಪಟ್ಟ ಪದವಿಗೆ, ಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ.
- Verse 13: ಹೇ, ದೇವಾ, ಸಲ್ಲಿಸುವೆವು ಕೃತಜ್ಞತೆ ನಿಮಗೆ ಹಾಡುವೆವು ಕೀರ್ತನೆ ನಿಮ್ಮ ನಾಮ ಪ್ರತಿಭೆಗೆ!
- Verse 14: “ಈ ಪರಿ ಸ್ವೇಚ್ಛೆಯಿಂದ ಕಾಣಿಕೆ ಸಮರ್ಪಿಸಲು ನಾನಾಗಲಿ ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವು ನಿಮ್ಮಿಂದಲೇ; ನೀವು ಕೊಟ್ಟಿದ್ದನ್ನೇ ನಿಮಗೆ ಕೊಟ್ಟೆವು.
- Verse 15: ನಾವು ನಿಮ್ಮ ದೃಷ್ಟಿಯಲ್ಲಿ ಪರದೇಶಿಗಳು; ನಮ್ಮ ಪೂರ್ವಜರಂತೆ ಪ್ರವಾಸಿಗಳು. ನಮ್ಮ ಆಯುಷ್ಕಾಲ ನೆರಳಿನಂತೆ; ನಮಗಿಲ್ಲ, ಯಾವ ನಿರೀಕ್ಷೆ.
- Verse 16: ನಮ್ಮ ದೇವರಾದ ಸರ್ವೇಶ್ವರಾ, ನಿಮ್ಮ ಶ್ರೀನಾಮಕ್ಕೆ ಒಂದು ನಿಲಯ ನಿರ್ಮಿಸಲು ನಾವು ಸಂಗ್ರಹಿಸಿರುವ ಈ ಎಲ್ಲಾ ವಸ್ತುಗಳು ನಮಗೆ ದೊರಕಿರುವುದು ನಿಮ್ಮಿಂದಲೇ. ಇವೆಲ್ಲವೂ ನಿಮ್ಮವೇ.
- Verse 17: ನನ್ನ ದೇವರೇ, ನೀವು ಹೃದಯವನ್ನು ಪರೀಕ್ಷಿಸುವವರು ಹಾಗೂ ಯಥಾರ್ಥಚಿತ್ತರನ್ನು ಮೆಚ್ಚುವವರು ಎಂಬುವುದನ್ನು ನಾನು ಬಲ್ಲೆ. ನಾನಿದನ್ನೆಲ್ಲಾ ಅರ್ಪಿಸಿರುವುದು ಶುದ್ಧಮನಸ್ಸಿನಿಂದಲೇ, ಸ್ವಂತ ಇಷ್ಟದಿಂದಲೇ. ಇಲ್ಲಿ ಕೂಡಿರುವ ನಿಮ್ಮ ಪ್ರಜೆಗಳೂ ಸ್ವಂತ ಇಷ್ಟದಿಂದಲೇ ನಿಮಗೆ ಕಾಣಿಕೆಗಳನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.
- Verse 18: ನಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರ ದೇವರೇ, ಸರ್ವೇಶ್ವರಾ, ನಿಮ್ಮ ಪ್ರಜೆಗಳಲ್ಲಿ ಇಂಥ ಮನೋಭಾವ ಸದಾ ಇರುವಂತೆ ಮಾಡಿರಿ; ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ಇರಲು ಅವರಿಗೆ ಸ್ಥಿರಚಿತ್ತವನ್ನು ಅನುಗ್ರಹಿಸಿರಿ.
- Verse 19: ನನ್ನ ಮಗ ಸೊಲೊಮೋನನು ನಿಮ್ಮ ಆಜ್ಞಾವಿಧಿನಿಯಮಗಳನ್ನು ಅನುಸರಿಸುವಂತೆ ಮಾಡಿರಿ; ನಾನು ಯಾವ ಮಂದಿರ ನಿರ್ಮಾಣಕ್ಕಾಗಿ ಇದನ್ನೆಲ್ಲಾ ಸಂಗ್ರಹಿಸಿದ್ದೇನೋ ಆ ನಿಮ್ಮ ಮಂದಿರವನ್ನು ಇವನು ನಿಷ್ಠೆಯಿಂದ ಕಟ್ಟಿಸಿ ಮುಗಿಸುವಂತೆ ಅನುಗ್ರಹಿಸಿರಿ.”
- Verse 20: ತರುವಾಯ ದಾವೀದನು ನೆರೆದ ಸಭೆಯವರಿಗೆ, “ನಿಮ್ಮ ದೇವರಾದ ಸರ್ವೇಶ್ವರನನ್ನು ಸ್ತುತಿಸಿರಿ,” ಎಂದು ಹೇಳಿದನು. ಸಭೆಯವರೆಲ್ಲರೂ ತಮ್ಮ ಪಿತೃಗಳ ದೇವರಾದ ಸರ್ವೇಶ್ವರನನ್ನು ಸ್ತುತಿಸುತ್ತಾ ತಲೆಬಾಗಿ ಅವರನ್ನೂ ಅರಸನನ್ನೂ ನಮಸ್ಕರಿಸಿದರು.
- Verse 21: ಮರುದಿನ ಅವರು ಸರ್ವೇಶ್ವರನಿಗೆ ಬಲಿಗಳನ್ನೂ ದಹನಬಲಿಗಳನ್ನೂ ಸಮರ್ಪಿಸಿದರು. ಆ ದಿನ ಬಲಿದಾನಕ್ಕಾಗಿ ಸಾವಿರ ಹೋರಿಗಳನ್ನೂ ಸಾವಿರ ಟಗರುಗಳನ್ನೂ ಸಾವಿರ ಕುರಿಗಳನ್ನೂ ವಧಿಸಿದರು. ಇವುಗಳೊಡನೆ ಅರ್ಪಿಸತಕ್ಕ ಪಾನದ್ರವ್ಯಗಳನ್ನೂ ಇಸ್ರಯೇಲರೆಲ್ಲರಿಗೆ ಸಾಕಾಗುವಷ್ಟು ಸಮಾಧಾನ ಬಲಿಗಳನ್ನೂ ಸಮರ್ಪಿಸಿ
- Verse 22: ಸರ್ವೇಶ್ವರನ ಸನ್ನಿಧಿಯಲ್ಲಿ ಮಹಾಸಂತೋಷದಿಂದ ಅನ್ನಪಾನಗಳನ್ನು ತೆಗೆದುಕೊಂಡರು. ದಾವೀದನ ಮಗ ಸೊಲೊಮೋನನನ್ನು ಮತ್ತೆ ಅರಸನನ್ನಾಗಿ ಆರಿಸಿಕೊಂಡು, ಅವನು ರಾಜನಾಗುವುದಕ್ಕೂ ಚಾದೋಕನು ಯಾಜಕನಾಗುವುದಕ್ಕೂ ಅಭಿಷೇಕಿಸಿ, ಸರ್ವೇಶ್ವರನಿಗೆ ಪ್ರತಿಷ್ಠಿಸಿದರು.
- Verse 23: ಅಂದಿನಿಂದ ಸೊಲೊಮೋನನು ತನ್ನ ತಂದೆ ದಾವೀದನ ಸ್ಥಾನದಲ್ಲಿ ಅರಸನಾಗಿ, ಸರ್ವೇಶ್ವರನ ಸಿಂಹಾಸನದಲ್ಲಿ ಕುಳಿತುಕೊಂಡು, ವೃದ್ಧಿಯಾಗುತ್ತಾ ಬಂದನು. ಅರಸ ಸೊಲೊಮೋನನಿಗೆ ಇಸ್ರಯೇಲರೆಲ್ಲರೂ ವಿಧೇಯರಾಗಿ ನಡೆದರು.
- Verse 24: ಎಲ್ಲಾ ಅಧಿಪತಿಗಳು, ದಂಡಿನವರು, ಹಾಗೂ ಅರಸ ದಾವೀದನ ಎಲ್ಲಾ ಮಕ್ಕಳು ಅವನಿಗೆ ಅಧೀನರಾದರು.
- Verse 25: ಸರ್ವೇಶ್ವರ ಇಸ್ರಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿದರು; ಅವನಿಗಿಂತ ಮೊದಲು ಇಸ್ರಯೇಲರನ್ನಾಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದರು.
- Verse 26: ಜೆಸ್ಸೆಯನ ಮಗ ದಾವೀದನು ಇಸ್ರಯೇಲರ ಅರಸನಾಗಿ ಹೆಬ್ರೋನಿನಲ್ಲಿ ಏಳು ವರ್ಷ ಹಾಗೂ ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
- Verse 27: ಜೆಸ್ಸೆಯನ ಮಗ ದಾವೀದನು ಇಸ್ರಯೇಲರ ಅರಸನಾಗಿ ಹೆಬ್ರೋನಿನಲ್ಲಿ ಏಳು ವರ್ಷ ಹಾಗೂ ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
- Verse 28: ಸಿರಿಸಂಪತ್ತು, ಘನತೆ, ಗೌರವ ಹಾಗೂ ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದನಂತರ ದಾವೀದನು ಹಣ್ಣುಮುದುಕನಾಗಿ ಮರಣ ಹೊಂದಿದನು. ಅವನ ಉತ್ತರಾಧಿಕಾರಿಯಾಗಿ ಅವನ ಮಗ ಸೊಲೊಮೋನನು ಅರಸನಾದನು.
- Verse 29: ದಾವೀದನ ಪೂರ್ವೋತ್ತರ ಚರಿತ್ರೆ, ಅವನ ಆಳ್ವಿಕೆ, ಪರಾಕ್ರಮ ಹಾಗೂ ಅವನಿಗೂ ಇಸ್ರಯೇಲರಿಗೂ ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖ-ದುಃಖ, ಇವುಗಳ ವರದಿಯು
- Verse 30: ದರ್ಶಿ ಸಮುವೇಲ, ಪ್ರವಾದಿ ನಾತಾನ ಹಾಗೂ ದರ್ಶಿ ಗಾದ, ಇವರ ಚರಿತ್ರೆಗಳಲ್ಲಿ ಲಿಖಿತವಾಗಿವೆ.