ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
112ನೇ ಅಧ್ಯಾಯ
- Verse 1: ಅಲ್ಲೆಲೂಯ I ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು I ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು II
- Verse 2: ಬಲಿಷ್ಠವಾಗುವುದು ಜಗದೊಳು ಅವನ ಸಂತಾನ I ಸಜ್ಜನರ ಸಂತತಿ ಪಡೆವುದು ಆಶೀರ್ವಚನ II
- Verse 3: ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ಧಿಯಾಗಿ I ನೀತಿ ಫಲಿಸುವುದು ಆತನ ಮನದಲಿ ಶಾಶ್ವತವಾಗಿ II
- Verse 4: ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು I ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು II
- Verse 5: ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ I ನ್ಯಾಯದಿಂದ ವ್ಯವಹರಿಸುವಂಥಾ ಮನುಜನು ಭಾಗ್ಯವಂತ II
- Verse 6: ಅಚಲನಾಗಿರುವನು ನೀತಿವಂತನು I ಮರೆಯಲಾರರು ಎಂದಿಗೂ ಆತನನು II
- Verse 7: ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ I ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ II
- Verse 8: ದೃಢವಿದೆ ಅವನ ಮನ, ಎದೆಗುಂದನವನು I ಕಾಣುವನು ದುರುಳರಿಗಾಗುವ ದಂಡನೆಯನು II
- Verse 9: ಉದಾರತೆಯಿಂದ ಕೊಡುವನು ಬಡವರಿಗೆ I ಫಲಿಸುವುದು ಅವನಾ ನೀತಿ ಸದಾಕಾಲಕೆ I ಮಹಿಮೆತರುವ ಕೋಡುಮೂಡುವುದು ಅವನಿಗೆ II
- Verse 10: ಇದನು ಕಂಡು ಕೆರಳುವನಾ ದುರುಳನು I ಹೊಂದುವನು ಈ ಪರಿ ಆಶಾಭಂಗವನು I ಹಲ್ಲು ಕಡಿಯುತ ಅವನು ಹಾಳಾಗುವನು II