ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಧರ್ಮೋಪದೇಶಕಾಂಡ
28ನೇ ಅಧ್ಯಾಯ
- Verse 1: “ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ, ಅವರು ಜಗದ ಎಲ್ಲ ಜನಾಂಗಗಳಿಗಿಂತ ನಿಮ್ಮನ್ನು ಉನ್ನತಸ್ಥಿತಿಗೆ ತರುವರು.
- Verse 2: ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಕೆಳಕಂಡ ಶುಭಗಳೆಲ್ಲ ನಿಮಗೆ ಪ್ರಾಪ್ತವಾಗುವುವು:
- Verse 3: “ನಿಮಗೆ ಊರಲ್ಲೂ ಅಡವಿಯಲ್ಲೂ ಶುಭವುಂಟಾಗುವುದು.
- Verse 4: ನಿಮ್ಮ ಸಂತಾನಕ್ಕೂ ವ್ಯವಸಾಯಗಳಿಗೂ ದನಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವುದು.
- Verse 5: ನಿಮ್ಮ ಧಾನ್ಯಕ್ಕೂ ಅದರಿಂದ ಮಾಡುವ ಭೋಜನಕ್ಕೂ ಶುಭ ಉಂಟಾಗುವುದು.
- Verse 6: ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭವುಂಟಾಗುವುದು.
- Verse 7: “ನಿಮ್ಮ ಮೇಲೆ ಎರಗುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಸರ್ವೇಶ್ವರ ಮಾಡುವರು; ಅವರು ಒಂದೇ ದಾರಿಯಿಂದ ನಿಮ್ಮ ಮೇಲೆ ಬಂದರೂ ಏಳು ದಾರಿಗಳಿಂದ ಓಡಿಹೋಗುವರು.
- Verse 8: “ನಿಮ್ಮ ಕಣಜಗಳು ಯಾವಾಗಲೂ ತುಂಬಿ ಇರುವಂತೆ ಹಾಗು ನಿಮ್ಮ ಪ್ರಯತ್ನಗಳೆಲ್ಲಾ ಸಫಲವಾಗುವಂತೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶುಭವನ್ನು ಅನುಗ್ರಹಿಸುವರು. ಅವರು ನಿಮಗೆ ಕೊಡುವ ನಾಡಿನಲ್ಲಿ ನಿಮಗೆ ಶುಭವನ್ನೇ ಉಂಟುಮಾಡುವರು.
- Verse 9: “ನೀವು ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನು ಅನುಸರಿಸಿ, ಅವರು ಹೇಳಿದ ಮಾರ್ಗದಲ್ಲೇ ನಡೆದರೆ ಅವರು ವಾಗ್ದಾನಮಾಡಿದಂತೆ ನಿಮ್ಮನ್ನು ತಮ್ಮ ಮೀಸಲಾದ ಜನರನ್ನಾಗಿ ನೆಲೆಗೊಳಿಸುವರು.
- Verse 10: ಜಗದ ಜನರೆಲ್ಲರು ನಿಮ್ಮನ್ನು ಸರ್ವೇಶ್ವರನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.
- Verse 11: “ಸರ್ವೇಶ್ವರ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಮೇರೆಗೆ, ನಿಮಗೆ ಕೊಡುವ ನಾಡಿನಲ್ಲಿ ಅವರು ನಿಮಗೆ ಸಂತಾನ, ಪಶು, ವ್ಯವಸಾಯಗಳ ಸಮೃದ್ಧಿಯನ್ನುಂಟುಮಾಡುವರು.
- Verse 12: ಸರ್ವೇಶ್ವರ ಆಕಾಶದಲ್ಲಿರುವ ತಮ್ಮ ಜಲನಿಧಿಯನ್ನು ತೆರೆದು ನಿಮ್ಮ ನಾಡಿನ ಮೇಲೆ, ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ, ನಿಮ್ಮ ಎಲ್ಲ ವ್ಯವಸಾಯವನ್ನೂ ಫಲಭರಿತವಾಗಿ ಮಾಡುವರು. “ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಸಾಲತೆಗೆದುಕೊಳ್ಳುವುದಿಲ್ಲ.
- Verse 13: ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ನೀವು ಬಿಟ್ಟು ಎಡಬಲಕ್ಕೆ ಹೋಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಲ್ಲೇ ಲಕ್ಷ್ಯವಿಟ್ಟು ಅವುಗಳನ್ನೇ ಅನುಸರಿಸಿ ನಡೆದರೆ ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು; ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.
- Verse 14: ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ನೀವು ಬಿಟ್ಟು ಎಡಬಲಕ್ಕೆ ಹೋಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳಲ್ಲೇ ಲಕ್ಷ್ಯವಿಟ್ಟು ಅವುಗಳನ್ನೇ ಅನುಸರಿಸಿ ನಡೆದರೆ ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು; ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ.
- Verse 15: “ಆದರೆ ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದೆ, ನಾನು ಈಗ ನಿಮಗೆ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದರೆ, ಈ ಕೆಳಕಂಡ ಅಶುಭಗಳು ನಿಮಗೆ ಪ್ರಾಪ್ತವಾಗುವುವು:
- Verse 16: “ನಿಮಗೆ ಊರಲ್ಲೂ ಅಡವಿಯಲ್ಲೂ ಅಶುಭವುಂಟಾಗುವುದು.
- Verse 17: ನಿಮ್ಮ ಧಾನ್ಯಗಳಿಗೂ ಅವುಗಳಿಂದಾದ ಭೋಜನಗಳಿಗೂ ಅಶುಭ ಉಂಟಾಗುವುದು.
- Verse 18: ನಿಮ್ಮ ಸಂತಾನಗಳಿಗೆ, ವ್ಯವಸಾಯಗಳಿಗೆ, ಹಾಗು ದನಕುರಿಗಳಿಗೆ ಅಶುಭ ಉಂಟಾಗುವುದು.
- Verse 19: ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಅಶುಭವುಂಟಾಗುವುದು.
- Verse 20: “ನೀವು ದುರ್ನಡತೆಯುಳ್ಳವರಾಗಿ ಸರ್ವೇಶ್ವರನನ್ನು ಬಿಟ್ಟದ್ದರಿಂದ ಅವರು ನಿಮ್ಮ ಎಲ್ಲ ಪ್ರಯತ್ನಗಳಲ್ಲೂ ವಿಪತ್ತು, ಕಳವಳ, ಶಾಪ, ಇವುಗಳನ್ನುಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವರು.
- Verse 21: ವ್ಯಾಧಿ ನಿಮಗೆ ಹತ್ತಿಕೊಂಡೇ ಇರುವಂತೆ ಮಾಡಿ ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮಲ್ಲಿ ಒಬ್ಬರೂ ಉಳಿಯದಂತೆ ಸರ್ವೇಶ್ವರ ಮಾಡುವರು.
- Verse 22: ನಿಮ್ಮನ್ನು ಕ್ಷಯರೋಗ, ಚಳಿಜ್ವರ, ಉರಿತ, ಉಷ್ಣಜ್ವರ ಇವುಗಳಿಂದಲೂ, ನಾಡನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಗಳಿಂದಲೂ ಪೀಡಿಸುವರು. ನೀವು ಸಾಯುವ ತನಕ ಈ ಪೀಡೆಗಳು ನಿಮ್ಮನ್ನು ಬೆನ್ನತ್ತುವುವು.
- Verse 23: ಆಮೇಲೆ ಆಕಾಶ ಮಳೆ ಸುರಿಸದೆ ತಾಮ್ರದಂತೆಯೂ ಕೆಳಗೆ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವುವು.
- Verse 24: ನಿಮ್ಮ ನಾಡಿನ ಮೇಲೆ ಆಕಾಶದಿಂದ ಮಳೆಗೆ ಬದಲಾಗಿ ಧೂಳಿಯನ್ನೂ ಉಸುಬನ್ನೂ ಸರ್ವೇಶ್ವರ ಸುರಿಸುವರು; ಇದರಿಂದ ನೀವು ನಾಶವಾಗಿ ಹೋಗುವಿರಿ.
- Verse 25: ಶತ್ರುಗಳಿಂದ ನೀವುಪರಾಜಯವನ್ನು ಹೊಂದುವಂತೆ ಸರ್ವೇಶ್ವರ ಮಾಡುವರು; ನೀವು ಒಂದೇ ದಾರಿಯಿಂದ ಅವರ ಮೇಲೆ ದಾಳಿಮಾಡಲು ಹೋಗಿ ಏಳು ದಾರಿ ಹಿಡಿದು ಓಡಿಹೋಗುವಿರಿ. ಜಗದ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವುವು.
- Verse 26: ನಿಮ್ಮ ಹೆಣಗಳು ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುವು; ಅವುಗಳನ್ನು ಬೆದರಿಸಿ ಓಡಿಸುವುದಕ್ಕೂ ಯಾರೂ ಇರುವುದಿಲ್ಲ.
- Verse 27: “ಈಜಿಪ್ಟರನ್ನು ಬಾಧಿಸಿದಂತೆ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಸರ್ವೇಶ್ವರ ನಿಮ್ಮನ್ನು ಬಾಧಿಸುವರು.
- Verse 28: ಹುಚ್ಚುತನ, ಕುರುಡುತನ, ಬೆಪ್ಪುತನ ಇವುಗಳಿಂದ ಸರ್ವೇಶ್ವರ ನಿಮ್ಮನ್ನು ಪೀಡಿಸುವರು.
- Verse 29: ಕುರುಡರಂತೆ ನಡುಮಧ್ಯಾಹ್ನದಲ್ಲೂ ಕತ್ತಲಾಯಿತೆಂದು ನೀವು ತಡವರಿಸುವಿರಿ; ನೀವು ಮಾಡುವ ಕೆಲಸ ಯಾವುದೂ ಕೈಗೂಡುವುದಿಲ್ಲ. ಅನ್ಯರು ನಿಮ್ಮನ್ನು ನಿರಂತರವಾಗಿ ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು. ನಿಮಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.
- Verse 30: “ನೀವು ಮದುವೆಮಾಡಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿದ ದ್ರಾಕ್ಷಿತೋಟದ ಬೆಳೆ ನಿಮಗೆ ದೊರಕದು.
- Verse 31: ನಿಮ್ಮ ಪಶುಗಳನ್ನು ನಿಮ್ಮ ಕಣ್ಣಮುಂದೆಯೇ ಕೊಯ್ಯುವರು; ಆದರೆ ಅವುಗಳ ಮಾಂಸ ನಿಮಗೆ ಸಿಕ್ಕದು. ನಿಮ್ಮ ಕತ್ತೆಯನ್ನು ನಿಮ್ಮೆದುರಿಗೇ ಬಲಾತ್ಕಾರದಿಂದ ಹಿಡಿದುಕೊಂಡು ಹೋಗುವರು. ಆದರೆ ಅದನ್ನು ನಿಮಗೆ ಹಿಂದಕ್ಕೆ ಕೊಡುವುದಿಲ್ಲ. ನಿಮ್ಮ ಆಡುಕುರಿಗಳು ಶತ್ರುಗಳ ಪಾಲಾಗುವುವು. ನಿಮಗೆ ರಕ್ಷಕರು ಯಾರೂ ಇರುವುದಿಲ್ಲ.
- Verse 32: ನಿಮ್ಮ ಗಂಡು ಹೆಣ್ಣು ಮಕ್ಕಳನ್ನು ನಿಮ್ಮ ಮುಂದೆಯೇ ಹಿಡಿದು ಅನ್ಯರಿಗೆ ವಶಪಡಿಸುವರು; ನೀವು ಹಗಲೆಲ್ಲಾ ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಕಂಗೆಡುವಿರಿ; ಆದರೆ ನಿಮ್ಮ ಯತ್ನವೇನೂ ಸಾಗುವುದಿಲ್ಲ.
- Verse 33: ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ನಾಡಿನ ಬೆಳೆಯನ್ನೂ ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ನಿರಂತರ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗುವಿರಿ.
- Verse 34: ನಿಮ್ಮ ಮುಂದೆ ನಡೆಯುವ ದೃಶ್ಯಗಳನ್ನು ನೋಡಿ ಹುಚ್ಚರಾಗಿಹೋಗುವಿರಿ.
- Verse 35: “ನಿಮ್ಮ ಮೊಣಕಾಲುಗಳಲ್ಲೂ ತೊಡೆಗಳಲ್ಲೂ ಮತ್ತು ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ವಾಸಿಯಾಗದ ಕೆಟ್ಟಕೆಟ್ಟ ಹುಣ್ಣುಗಳನ್ನು ಸರ್ವೇಶ್ವರ ಹುಟ್ಟಿಸಿ ಬಾಧಿಸುವರು;
- Verse 36: ನಿಮಗೂ ನಿಮ್ಮ ಪಿತೃಗಳಿಗೂ ಗೊತ್ತಿಲ್ಲದ ಜನಾಂಗದವರ ದೇಶಕ್ಕೆ ನಿಮ್ಮನ್ನೂ ನೀವು ನೇಮಿಸಿಕೊಳ್ಳುವ ಅರಸರನ್ನೂ ಒಯ್ಯಿಸುವರು; ಅಲ್ಲಿ ನೀವು ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.
- Verse 37: ಸರ್ವೇಶ್ವರ ನಿಮ್ಮನ್ನು ಒಯ್ಯಿಸುವ ಜನಾಂಗಗಳಲ್ಲಿ ನೀವು ಭೀಕರತೆಗೂ ನಿಂದೆಲಾವಣಿಗೂ ಪರಿಹಾಸ್ಯಕ್ಕೂ ಗುರಿಯಾಗುವಿರಿ.
- Verse 38: “ಹೊಲದಲ್ಲಿ ನೀವು ಎಷ್ಟು ಬೀಜ ಬಿತ್ತಿದರೂ ಮಿಡತೆಯ ದಂಡುಬಂದು ಅದನ್ನು ತಿಂದುಬಿಡುವುದು; ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು;
- Verse 39: ದ್ರಾಕ್ಷಾವ್ಯವಸಾಯವನ್ನು ನೀವು ಎಷ್ಟುಮಾಡಿದರೂ ಅದರ ಹಣ್ಣುಗಳನ್ನು ಹುಳುಗಳೇ ತಿಂದುಹಾಕುವುವು; ನೀವು ಕೂಡಿಸಿಕೊಳ್ಳಲು ನಿಮಗೆ ಬಿಡವು. ಅವುಗಳ ರಸವನ್ನು ರುಚಿನೋಡಗೊಡಿಸವು.
- Verse 40: ನಿಮ್ಮ ದೇಶಪ್ರದೇಶಗಳಲ್ಲಿ ಎಣ್ಣೇಮರಗಳು ಎಷ್ಟಿದ್ದರೂ ಅವುಗಳ ಕಾಯಿಗಳು ಉದುರಿಹೋಗುವುವು; ಮೈಗೆ ಹಚ್ಚಿಕೊಳ್ಳಲು ಎಣ್ಣೆ ಸಿಗದು.
- Verse 41: ನಿಮಗೆ ಗಂಡುಹೆಣ್ಣು ಮಕ್ಕಳು ಎಷ್ಟು ಹುಟ್ಟಿದರೂ ಅವರು ಸೆರೆಯವರಾಗಿ ಒಯ್ಯಲ್ಪಡುವರು; ನಿಮ್ಮ ಬಳಿ ಅವರು ಇರರು.
- Verse 42: ನಿಮ್ಮ ಗಿಡಮರಗಳೂ ಪಚ್ಚೆಪೈರುಗಳೂ ಮಿಡತೆಯ ಪಾಲಾಗುವುವು.
- Verse 43: ನಿಮ್ಮ ಮಧ್ಯೆಯಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಿಮೆ ಆಗುತ್ತಾ ಹೀನಸ್ಥಿತಿಗೆ ಇಳಿಯುವಿರಿ.
- Verse 44: ಅವರು ನಿಮಗೆ ಸಾಲಕೊಡುವರೇ ಹೊರತು ನೀವು ಅವರಿಗೆ ಕೊಡುವುದಿಲ್ಲ. ನೀವು ಅವರಿಗೆ ಅಧೀನರಾಗುವಿರಿ; ಅವರು ನಿಮಗೆ ಶಿರಸ್ಸಾಗುವರು.
- Verse 45: “ನೀವು ನಿಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದೆ ಅವರು ನೇಮಿಸಿದ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದುದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ, ನಿಮ್ಮನ್ನು ಹಿಂದಟ್ಟಿ ಹಿಡಿದು, ಕಡೆಗೆ ನಾಶಮಾಡುವುವು.
- Verse 46: ಇವು ನಿಮಗೂ ನಿಮ್ಮ ಸಂತತಿಯವರಿಗೂ ನಿರಂತರವಾಗಿ ಪ್ರಾಪ್ತವಾಗುವುವು; ಸರ್ವರಿಗೆ ಬೆರಗನ್ನೂ ಎಚ್ಚರಿಕೆಯನ್ನೂ ಉಂಟುಮಾಡುವುವು.
- Verse 47: “ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಹರ್ಷಾನಂದದಿಂದ ಸೇವೆಮಾಡದೆಹೋದಿರಿ.
- Verse 48: ಆದುದರಿಂದ ಸರ್ವೇಶ್ವರ ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವರು; ಆಗ ನೀವು ಹಸಿವು ಬಾಯಾರಿಕೆಗಳಿಗೆ ಗುರಿಯಾಗಿ ಬಟ್ಟೆಬರೆ ಏನೂ ಇಲ್ಲದೆ, ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಕಬ್ಬಿಣದ ನೊಗವನ್ನು ಹೇರಿಸಿ ಸರ್ವೇಶ್ವರ ನಿಮ್ಮನ್ನು ನಾಶಮಾಡುವರು;
- Verse 49: ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗ, ರಣಹದ್ದು ಹೇಗೆ ದೂರದಿಂದ ಹಾರಿಬರುವುದೊ ಹಾಗೆಯೇ ದೂರದಿಂದ ನಿಮ್ಮ ಮೇಲೆ ಬರುವಂತೆ ಮಾಡುವರು.
- Verse 50: ಆ ಜನಾಂಗದವರು ಕ್ರೂರಮುಖವುಳ್ಳವರು; ನೀವು ವೃದ್ಧರೆಂದು ಮರ್ಯಾದೆ ತೋರಿಸುವುದಿಲ್ಲ, ಚಿಕ್ಕವರೆಂದು ಕನಿಕರಿಸುವುದಿಲ್ಲ.
- Verse 51: ಅವರು ನಿಮ್ಮ ದನಗಳನ್ನೂ ಬೆಳೆಗಳನ್ನೂ ತಿಂದುಬಿಡುವರು. ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನಕುರಿಗಳ ಸಂತಾನವನ್ನಾಗಲಿ, ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.
- Verse 52: ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ನಾಡಿನ ಪಟ್ಟಣಗಳಿಗೆಲ್ಲಾ ಅವರು ಮುತ್ತಿಗೆ ಹಾಕುವರು; ನೀವು ನೆಚ್ಚಿಕೊಳ್ಳುವ ಎತ್ತರವಾದ ಕೊತ್ತಲುಗಳುಳ್ಳ ಗೋಡೆಗಳನ್ನು ಕೆಡವಿಬಿಡುವರು.
- Verse 53: “ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಎಂಥ ಇಕ್ಕಟ್ಟಿಗೆ ಸಿಕ್ಕಿಸುವರೆಂದರೆ, ನೀವು ನಿಮ್ಮ ಸಂತಾನವನ್ನೇ, ಅಂದರೆ, ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.
- Verse 54: ಶತ್ರುಗಳು ನಿಮ್ಮ ಪಟ್ಟಣಗಳಿಗೆಲ್ಲಾ ಮುತ್ತಿಗೆ ಹಾಕಿ, ನಿಮ್ಮನ್ನು ಭೀಕರವಾದ ಬಿಕ್ಕಟ್ಟಿಗೆ ಸಿಕ್ಕಿಸುವರು. ಆಗ ನಿಮ್ಮಲ್ಲಿ ಮೃದುಸ್ವಭಾವಿ ಹಾಗು ಅತಿ ಸುಕುಮಾರ ಆದವನೂ ಕೂಡ ತನಗೇ ತಿನ್ನಲಿಕ್ಕೆ ಏನೂ ಉಳಿಯದೆ, ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು, ಅಣ್ಣತಮ್ಮಂದಿರಿಗೂ ಪ್ರಾಣಪ್ರಿಯ ಹೆಂಡತಿಗೂ ಉಳಿದ ಮಕ್ಕಳಿಗೂ ಮೋರೆಸಿಂಡರಿಸಿಕೊಂಡು ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.
- Verse 55: ಶತ್ರುಗಳು ನಿಮ್ಮ ಪಟ್ಟಣಗಳಿಗೆಲ್ಲಾ ಮುತ್ತಿಗೆ ಹಾಕಿ, ನಿಮ್ಮನ್ನು ಭೀಕರವಾದ ಬಿಕ್ಕಟ್ಟಿಗೆ ಸಿಕ್ಕಿಸುವರು. ಆಗ ನಿಮ್ಮಲ್ಲಿ ಮೃದುಸ್ವಭಾವಿ ಹಾಗು ಅತಿ ಸುಕುಮಾರ ಆದವನೂ ಕೂಡ ತನಗೇ ತಿನ್ನಲಿಕ್ಕೆ ಏನೂ ಉಳಿಯದೆ, ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು, ಅಣ್ಣತಮ್ಮಂದಿರಿಗೂ ಪ್ರಾಣಪ್ರಿಯ ಹೆಂಡತಿಗೂ ಉಳಿದ ಮಕ್ಕಳಿಗೂ ಮೋರೆಸಿಂಡರಿಸಿಕೊಂಡು ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.
- Verse 56: ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಆ ಭೀಕರ ಇಕ್ಕಟ್ಟಿಗೆ ಸಿಕ್ಕಿಸಿದ ಕಾಲದಲ್ಲಿ ಅಂಗಾಲನ್ನೂ ನೆಲಕ್ಕೆ ಇಡದಷ್ಟು ಕೋಮಲ ಹಾಗು ಸುಕುಮಾರಿಯಾದ ಸ್ತ್ರೀ ತಿನ್ನಲಿಕ್ಕೆ ಏನೂ ಇಲ್ಲದವಳಾಗಿ, ತಾನು ಆಗಲೇ ಹೆತ್ತ ಮಗುವನ್ನೂ ಅದರ ಮೇಲಣ ಮಾಸನ್ನೂ ಗುಟ್ಟಾಗಿ ತಿನ್ನಲಾಶಿಸುವಳು; ಪ್ರಾಣಪ್ರಿಯರಾದ ಗಂಡನಿಗು, ಮಗನಿಗು, ಮಗಳಿಗು ಕೊಡಲಿಚ್ಛಿಸದೆ ಮೋರೆಯನ್ನು ಸಿಂಡರಿಸಿಕೊಳ್ಳುವಳು.
- Verse 57: ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಆ ಭೀಕರ ಇಕ್ಕಟ್ಟಿಗೆ ಸಿಕ್ಕಿಸಿದ ಕಾಲದಲ್ಲಿ ಅಂಗಾಲನ್ನೂ ನೆಲಕ್ಕೆ ಇಡದಷ್ಟು ಕೋಮಲ ಹಾಗು ಸುಕುಮಾರಿಯಾದ ಸ್ತ್ರೀ ತಿನ್ನಲಿಕ್ಕೆ ಏನೂ ಇಲ್ಲದವಳಾಗಿ, ತಾನು ಆಗಲೇ ಹೆತ್ತ ಮಗುವನ್ನೂ ಅದರ ಮೇಲಣ ಮಾಸನ್ನೂ ಗುಟ್ಟಾಗಿ ತಿನ್ನಲಾಶಿಸುವಳು; ಪ್ರಾಣಪ್ರಿಯರಾದ ಗಂಡನಿಗು, ಮಗನಿಗು, ಮಗಳಿಗು ಕೊಡಲಿಚ್ಛಿಸದೆ ಮೋರೆಯನ್ನು ಸಿಂಡರಿಸಿಕೊಳ್ಳುವಳು.
- Verse 58: “ಈ ಗ್ರಂಥದಲ್ಲಿ ಬರೆದಿರುವ ಧರ್ಮಶಾಸ್ತ್ರ ವಾಕ್ಯಗಳನ್ನೆಲ್ಲಾ ನೀವು ಅನುಸರಿಸಲೊಲ್ಲದೆ, ನಿಮ್ಮ ದೇವರಾದ ಸರ್ವೇಶ್ವರನೆಂಬ ಮಹಾಮಹಿಮೆಯುಳ್ಳ ಪೂಜ್ಯನಾಮದಲ್ಲಿ ನೀವು ಭಯಭಕ್ತಿಯುಳ್ಳವರಾಗಿರದೇ ಹೋದರೆ
- Verse 59: ಅವರು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವರು. ದೀರ್ಘಕಾಲ ವಾಸಿಯಾಗದ ಘೋರವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವರು.
- Verse 60: ನೀವು ಅಂಜಿಕೊಳ್ಳುತ್ತಿದ್ದ ಈಜಿಪ್ಟ್ ದೇಶದ ರೋಗಗಳನ್ನೆಲ್ಲ ಮತ್ತೆ ನಿಮ್ಮ ಮೇಲೆ ಬರಮಾಡುವರು; ಅವು ನಿಮಗೆ ಅಂಟಿಕೊಂಡೇ ಇರುವುವು.
- Verse 61: ಇಷ್ಟುಮಾತ್ರವಲ್ಲದೆ, ಈ ಧರ್ಮಶಾಸ್ತ್ರಗ್ರಂಥದಲ್ಲಿ ಬರೆಯದೆ ಇರುವ ವಿಧವಿಧವಾದ ರೋಗಗಳನ್ನೂ ವ್ಯಾಧಿಗಳನ್ನೂ ನಿಮ್ಮ ಮೇಲೆ ಬರಮಾಡಿ ನಿಮ್ಮನ್ನು ನಾಶಮಾಡುವರು.
- Verse 62: ನಕ್ಷತ್ರಗಳಷ್ಟು ಅಸಂಖ್ಯರಾಗಿರುವ ನೀವು, ನಿಮ್ಮ ದೇವರಾದ ಸರ್ವೇಶ್ವರನ ಮಾತಿನಲ್ಲಿ ಲಕ್ಷ್ಯವಿಡದೆ ಹೋದುದರಿಂದ ಸ್ವಲ್ಪ ಮಂದಿಯೇ ಉಳಿಯುವಿರಿ.
- Verse 63: ಸರ್ವೇಶ್ವರ ಈಗ ನಿಮ್ಮನ್ನು ಅಭಿವೃದ್ಧಿಪಡಿಸುವುದರಲ್ಲೂ ಹೆಚ್ಚಿಸುವುದರಲ್ಲೂ ಹೇಗೆ ಸಂತೋಷಪಡುತ್ತಾರೋ ಹಾಗೆಯೇ ಆಗ ನಿಮ್ಮನ್ನು ಕೆಡಿಸಿ ನಾಶಮಾಡುವುದರಲ್ಲಿ ಸಂತೋಷಪಡುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನೊಳಗಿಂದ ನಿಮ್ಮನ್ನು ಕಿತ್ತುಹಾಕುವರು.
- Verse 64: “ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲ ಜನಾಂಗಗಳಲ್ಲಿಯೂ ಸರ್ವೇಶ್ವರ ನಿಮ್ಮನ್ನು ಚದುರಿಸುವರು; ಅಲ್ಲಿ ನಿಮಗಾಗಲಿ ನಿಮ್ಮ ಪಿತೃಗಳಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.
- Verse 65: ಆ ದೇಶಗಳಲ್ಲಿ ನಿಮಗೆ ಯಾವ ವಿಶ್ರಾಂತಿಯೂ ದೊರೆಯುವುದಿಲ್ಲ. ಸ್ವಂತದ್ದು ಎಂದು ಹೇಳಿಕೊಳ್ಳಲು ಅಂಬೆಗಾಲಿಡುವಷ್ಟು ಸ್ಥಳಸಿಕ್ಕುವುದಿಲ್ಲ. ನೀವು ಗಡಗಡನೆ ನಡುಗುವ ಹೃದಯವುಳ್ಳವರಾಗಿ, ದಿಕ್ಕುತೋರದೆ ಕಂಗೆಟ್ಟವರಾಗಿ ಹಾಗು ಮನಗುಂದಿದವರಾಗಿ ಇರುವಂತೆ ಸರ್ವೇಶ್ವರ ಮಾಡುವರು.
- Verse 66: ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ಹಗಲಿರುಳು ಪ್ರಾಣಭಯದಲ್ಲಿರುವಿರಿ; ಪ್ರಾಣದ ಮೇಲಣ ನಂಬಿಕೆಯನ್ನು ಬಿಟ್ಟೇಬಿಡುವಿರಿ.
- Verse 67: ಮನಸ್ಸಿನಲ್ಲಿ ನಿರಂತರ ಪ್ರಾಣಭಯವಿರುವುದರಿಂದ ಹಾಗು ಕಣ್ಣಿನಿಂದ ಭಯಂಕರವಾದ ಸಂಗತಿಗಳನ್ನು ನೋಡುವುದರಿಂದ ನೀವು ಹೊತ್ತಾರೆಯಲ್ಲೇ, ‘ಅಯ್ಯೋ, ಅಯ್ಯೋ, ಸಾಯಂಕಾಲ ಯಾವಾಗ ಬರುವುದೋ?’ ಎಂದೂ ಸಾಯಂಕಾಲದಲ್ಲಿ, ‘ಅಯ್ಯೋ, ಅಯ್ಯೋ, ಮರುದಿನ ಯಾವಾಗ ಬರುವುದೋ?’ ಎಂದೂ ಕೊರಗುವಿರಿ.
- Verse 68: ನೀವು ಈಜಿಪ್ಟ್ ದೇಶವನ್ನು ಮರಳಿ ಎಂದಿಗೂ ನೋಡುವುದಿಲ್ಲವೆಂದು ಸರ್ವೇಶ್ವರ ಹೇಳಿದ್ದರೂ ಅವರು ನಿಮ್ಮನ್ನು ಹಡಗುಗಳನ್ನೇರಿಸಿ ಅಲ್ಲಿಗೆ ತಿರುಗಿ ಹೋಗಮಾಡುವರು. ಅಲ್ಲಿ ನೀವು ಶತ್ರುಗಳಿಗೆ ನಿಮ್ಮನ್ನೇ ಗಂಡು ಹೆಣ್ಣು ಎನ್ನದೆ ಗುಲಾಮರನ್ನಾಗಿ ಮಾರಿಕೊಳ್ಳಬೇಕೆಂದು ಅಪೇಕ್ಷಿಸಿದರೂ ಯಾರೂ ನಿಮ್ಮನ್ನು ಕೊಂಡುಕೊಳ್ಳುವುದಿಲ್ಲ.”