పరిశుద్ధ గ్రంథము
ಹಳೆಯ ಒಡಂಬಡಿಕೆ
ಯೋನ
2ನೇ ಅಧ್ಯಾಯ
- Verse 1: ಆ ಮೀನಿನ ಹೊಟ್ಟೆಯೊಳಗಿಂದಲೇ ಯೋನನು ಸರ್ವೇಶ್ವರಸ್ವಾಮಿ ದೇವರಿಗೆ ಈ ರೀತಿ ಪ್ರಾರ್ಥನೆ ಮಾಡಿದನು:
- Verse 2: “ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ ಮೊರೆಯಿಟ್ಟೆ ನೀನೆನ್ನ ಮೊರೆಗೆ ಕಿವಿಗೊಟ್ಟೆ. ಪಾತಾಳದಂತರಾಳದಿಂದ ನಿನ್ನ ನೆರವನ್ನು ಬೇಡಿದೆ ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ.
- Verse 3: ಸಾಗರದ ಉದರಕೆ ನೀನೆನ್ನ ತಳ್ಳಿರುವೆ ಅಗಾಧ ಜಲದೊಳಗೆ ದೂಡಿರುವೆ. ಸುತ್ತಮುತ್ತಲಿದೆ ಪ್ರವಾಹದ ಹೊಡೆತ ಮೇಲ್ಗಡೆ ಅಬ್ಬರಿಪ ಅಲೆಗಳ ಭೋರ್ಗರೆತ!
- Verse 4: ನಿನ್ನ ಸನ್ನಿಧಿಯಿಂದ ನಾನಿನ್ನು ಬಹಿಷ್ಕೃತ ಕಾಣೆನೆಂದೂ ನಿನ್ನ ಪವಿತ್ರಾಲಯ ನಿರುತ. ಈ ಭಾಗ್ಯಗಳೆಲ್ಲ ಎನಗಿಲ್ಲವೆಂದು ಪರಿಪರಿಯಾಗಿ ಮರುಗುತಿರುವೆನಿಂದು.
- Verse 5: ಸುತ್ತುವರಿಯೆ ಜಲರಾಶಿ, ಉಸಿರು ಕಟ್ಟಿದಂತಾಯ್ತು ಸಾಗರವು ಸಂಪೂರ್ಣವಾಗೆನ್ನ ಆವರಿಸಿತು; ಎನ್ನ ಶಿರವನು ಜೊಂಡು ಸುತ್ತುಗಟ್ಟಿತು.
- Verse 6: ಪರ್ವತಗಳ ತಳಹದಿಗೆ ದೇವಾ, ನಾನಿಳಿದೆ ಮುಚ್ಚಿಕೊಂಡವು ಜಗದ ದ್ವಾರಗಳು ನನ್ನ ಹಿಂದೆ. ಎನ್ನ ಕಾಪಾಡಿದೆ ಅಂಥ ಕೋಪದಿಂದ ಸರ್ವೇಶ್ವರಾ, ಮೇಲಕ್ಕೆತ್ತಿದೆಯೆನ್ನ ಜೀವಸಹಿತ.
- Verse 7: ನಂದಿದಂತಾಗಲು ಎನ್ನ ಪ್ರಾಣ ದೀವಿಗೆ ಮೊರೆಯಿಟ್ಟೆ, ಸರ್ವೇಶ್ವರಾ, ನಾ ನಿನಗೆ ನಿನ್ನ ಪರಿಶುದ್ಧ ಆಲಯದಲಿ ನೀನಾಸೀನನಿದ್ದೆ ಎನ್ನ ಪ್ರಾರ್ಥನೆಯನು ನೀನಾಲಿಸಿದೆ.
- Verse 8: ನಿರರ್ಥಕ ವಿಗ್ರಹಗಳನಾರಾಧಿಪ ಜನರು ತೊರೆದಿಹರು ಹಾರ್ದಿಕ ಭಕ್ತಿಯನು
- Verse 9: ನಾನಾದರೋ ಹಾಡಿ ಹೊಗಳುವೆ ನಿನ್ನನು ನಿನಗರ್ಪಿಸುವೆ ಸಮರ್ಪಕ ಬಲಿಯನು ಬಿಡದೆ ಸಲ್ಲಿಸುವೆ ಹೊತ್ತ ಹರಕೆಯನು ಹೊಂದುವೆ ಸ್ವಾಮಿಯಿಂದಲೆ ರಕ್ಷಣೆಯನು.”
- Verse 10: ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು.