ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ದಾನಿಯೇಲನು
3ನೇ ಅಧ್ಯಾಯ
- Verse 1: ರಾಜ ನೆಬೂಕದ್ನೆಚ್ಚರನು 27 ಮೀಟರ್ ಎತ್ತರದ 3 ಮೀಟರ್ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ ಬಾಬಿಲೋನ್ ಸಂಸ್ಥಾನದ ‘ದೂರಾ’ ಎಂಬ ಬಯಲಿನಲ್ಲಿ ನಿಲ್ಲಿಸಿದನು.
- Verse 2: ಬಳಿಕ ರಾಜ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ್ದ ಆ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭವನ್ನು ಏರ್ಪಡಿಸಿ, ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಸಭೆ ಸೇರಿಸುವಂತೆ ದೂತರನ್ನು ಕಳುಹಿಸಿದನು.
- Verse 3: ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿಷ್ಠಾಪನಾ ಸಮಾರಂಭಕ್ಕೆ ನೆರೆದುಬಂದು ಆ ಪ್ರತಿಮೆಯ ಮುಂದೆ ನಿಂತುಕೊಂಡರು.
- Verse 4: ಆಗ, ಸಾರುವವರು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ-ಕುಲ-ಭಾಷೆಗಳವರೇ, ನಿಮಗೆ ಹೀಗೆಂದು ರಾಜಾಜ್ಞೆಯಾಗಿದೆ:
- Verse 5: ನೀವು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು ರಾಜ ನೆಬೂಕದ್ನೆಚ್ಚರರು ನಿಲ್ಲಿಸಿರುವ ಈ ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕು.
- Verse 6: ಯಾರು ಅಡ್ಡಬಿದ್ದು ಆರಾಧಿಸುವುದಿಲ್ಲವೋ ಅಂಥವರನ್ನು ತಕ್ಷಣವೇ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು,” ಎಂದು ಸಾರಿದನು.
- Verse 7: ಅಂತೆಯೇ ಸಮಸ್ತ ಜನಾಂಗ-ಕುಲ-ಭಾಷೆಗಳವರು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಎಲ್ಲರು ಅದೇ ಸಮಯದಲ್ಲಿ ಅಡ್ಡಬಿದ್ದು ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದ್ದ ಆ ಬಂಗಾರದ ಪ್ರತಿಮೆಯನ್ನು ಆರಾಧಿಸಿದರು.
- Verse 8: ಆಗ ಕೆಲವು ಮಂದಿ ಬಾಬಿಲೋನಿಯರು ಯೆಹೂದ್ಯರ ಮೇಲೆ ದೂರು ಹೊರಿಸಲು ರಾಜ ನೆಬೂಕದ್ನೆಚ್ಚರನ ಬಳಿಗೆ ಬಂದರು.
- Verse 9: “ಅರಸರೇ, ನೀವು ಚಿರಂಜೀವಿಯಾಗಿರಿ!”
- Verse 10: ಪ್ರಭುವೇ, ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಲಿ;
- Verse 11: ಯಾವನು ಅಡ್ಡಬಿದ್ದು ಆರಾಧಿಸುವುದಿಲ್ಲವೋ ಅಂಥವನು ಧಗಧಗಿಸುವ ಆವಿಗೆಯೊಳಗೆ ಹಾಕಲ್ಪಡಲಿ ಎಂದು ತಾವು ಆಜ್ಞೆ ಮಾಡಿದಿರಲ್ಲವೆ?
- Verse 12: ತಾವು ಬಾಬಿಲೋನಿನ ಸಂಸ್ಥಾನಾಧಿಕಾರತ್ವವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್ ಹಾಗೂ ಅಬೇದ್ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜರೇ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ. ನಿಮ್ಮ ದೇವರುಗಳಿಗೆ ಸೇವೆಮಾಡುವುದಿಲ್ಲ, ನೀವು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಆಪಾದಿಸಿದರು.
- Verse 13: ನೆಬೂಕದ್ನೆಚ್ಚರನು ಉಗ್ರಕೋಪಗೊಂಡು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬವರನ್ನು ಹಿಡಿದುತರಲು ಆಜ್ಞಾಪಿಸಿದನು.
- Verse 14: ಅದರಂತೆಯೇ ಅವರನ್ನು ಹಿಡಿದುತರಲಾಯಿತು. ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎಂಬವರೇ, ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ?
- Verse 15: ಈಗಲಾದರು ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ದಾನೆ?” ಎಂದು ಹೇಳಿದನು.
- Verse 16: ಇದನ್ನು ಕೇಳಿದ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬುವರು ರಾಜನಿಗೆ: “ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ.
- Verse 17: ನಾವು ಸೇವೆಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು.
- Verse 18: ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಉತ್ತರಕೊಟ್ಟರು.
- Verse 19: ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು.
- Verse 20: ಇದಲ್ಲದೆ ತನ್ನ ಸೈನ್ಯದ ಕೆಲವುಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು.
- Verse 21: ಅದರಂತೆಯೇ ಉಡಿಗೆತೊಡಿಗೆ, ಪೇಟ ಮುಂತಾದ ಬಟ್ಟೆಬರೆಗಳನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಿಬಿಟ್ಟರು.
- Verse 22: ರಾಜಾಜ್ಞೆಯು ಖಡಾಖಂಡಿತವಾಗಿದ್ದರಿಂದಲೂ ಆವಿಗೆಯ ಕಾವು ಅತಿ ತೀಕ್ಷ್ಣವಾಗಿದ್ದರಿಂದಲೂ ಅಗ್ನಿಕುಂಡವು ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬುವರನ್ನು ಎತ್ತಿ ತಂದವರನ್ನೇ ಭಸ್ಮಮಾಡಿಬಿಟ್ಟಿತು.
- Verse 23: ಅತ್ತ ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಿನೊಂದಿಗೆ ಧಗಧಗನೆ ಉರಿಯುವ ಆವಿಗೆಯ ನಡುವೆ ಬಿದ್ದರು.
- Verse 24: ಇತ್ತ ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, “ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?” ಎಂದು ಕೇಳಿದನು. ಅವರು ರಾಜನಿಗೆ, “ಹೌದು ಪ್ರಭೂ, ಅದು ಸತ್ಯ,” ಎಂದು ಉತ್ತರಕೊಟ್ಟರು.
- Verse 25: ಅದಕ್ಕೆ ಅವರು, “ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ.
- Verse 26: ನಾಲ್ಕನೆಯವನ ರೂಪ ದೇವಪುತ್ರನ ರೂಪದಂತಿದೆ!” ಎಂದು ಹೇಳಿ ಧಗಧಗನೆ ಉರಿಯುತ್ತಿದ್ದ ಆವಿಗೆಯ ಬಾಯಿಯ ಬಳಿಗೆಹೋಗಿ, “ಪರಾತ್ಪರ ದೇವರ ದಾಸರಾದ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬುವರೇ, ಬನ್ನಿ, ಹೊರಗೆ ಬನ್ನಿ,” ಎಂದು ಕೂಗಿಕೊಂಡನು. ಅಂತೆಯೇ ಶದ್ರಕ್, ಮೇಶಕ್ ಹಾಗು ಅಬೇದ್ನೆಗೋ ಅವರು ಬೆಂಕಿಯಿಂದ ಹೊರಟುಬಂದರು.
- Verse 27: ಅವರನ್ನು ನೋಡಲು ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ ಇವರೆಲ್ಲರು ಕೂಡಿಬಂದರು. ಅವರಿಗೆ ಬೆಂಕಿಯ ತಾಪವೂ ತಟ್ಟಿಲ್ಲ. ತಲೆಗೂದಲೂ ಸುಟ್ಟಿಲ್ಲ, ಅವರ ಬಟ್ಟೆಬರೆಗೆ ಏನೂ ಆಗಿಲ್ಲ, ಬೆಂಕಿಯ ವಾಸನೆಯೂ ಇಲ್ಲ, ಎಂದು ತಿಳಿದುಕೊಂಡರು.
- Verse 28: ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್ ಹಾಗು ಅಬೇದ್ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟ ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು!
- Verse 29: ಸಕಲ ದೇಶ-ಕುಲ-ಭಾಷೆಗಳವರಲ್ಲಿ ಯಾರಾದರು ಶದ್ರಕ್, ಮೇಶಕ್ ಹಾಗು ಅಬೇದ್ನೆಗೋ ಎಂಬುವರ ದೇವರ ವಿಷಯದಲ್ಲಿ ಅಲ್ಲಸಲ್ಲದ ಮಾತನಾಡಿದರೆ ಅಂಥವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಗುಂಡಿಯನ್ನಾಗಿಸಬೇಕೆಂದು ಆಜ್ಞೆ ವಿಧಿಸುತ್ತೇನೆ. ಹೀಗೆ ರಕ್ಷಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲವೇ ಇಲ್ಲ,” ಎಂದು ಹೇಳಿದನು.
- Verse 30: ಇದಾದ ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವರನ್ನು ಸಂಸ್ಥಾನದಲ್ಲಿ ಉನ್ನತಪದವಿಗೆ ಏರಿಸಿದನು.