ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
5ನೇ ಅಧ್ಯಾಯ
- Verse 1: “ಕೂಗಿ ನೋಡು, ಯಾರಿದ್ದಾರೆ ಉತ್ತರಕೊಡುವವರು ನಿನಗೆ? ಈಗ ಯಾರ ಕಡೆಗೆ, ಯಾವ ದೇವದೂತರ ಕಡೆಗೆ ತಿರುಗುವೆ?
- Verse 2: ಮೂರ್ಖನಿಗೆ ನಾಶ ಕೋಪದಿಂದ ಮೂಢನಿಗೆ ಮರಣ ರೋಷದಿಂದ.
- Verse 3: ಮೂರ್ಖನು ಬೇರೂರುವುದನು ನೋಡಿದೆ ಕೂಡಲೆ ಅವನ ನಿವಾಸ ಶಾಪಕ್ಕೀಡಾಗುವುದನು ಕಂಡೆ.
- Verse 4: ಆಶ್ರಯ ಎಂಬುದು ಅವನ ಮಕ್ಕಳಿಗಿಲ್ಲ ನ್ಯಾಯಸ್ಥಾನದಲ್ಲಿ ಗೆಲುವು ಅವರಿಗಿಲ್ಲ ಅವರನ್ನು ಬಿಡಿಸತಕ್ಕವರಾರೂ ಇಲ್ಲ.
- Verse 5: ಹಸಿದವರು ಅವನ ಬೆಳೆಯನು ತಿಂದುಬಿಡುವರು ಮುಳ್ಳುಬೇಲಿ ಹಾಕಿದ್ದರೂ ಅದನು ತಿಂದುಬಿಡುವರು ಅವನ ಸೊತ್ತನು ನುಂಗಲು ಬಾಯ್ದೆರೆದು ಕಾದಿರುವರು.
- Verse 6: ಕೇಡುಹುಟ್ಟುವುದು ಮಣ್ಣಿನಿಂದಲ್ಲ ದುಃಖ ಮೊಳೆವುದು ಭೂಮಿಯಿಂದಲ್ಲ.
- Verse 7: ಜ್ವಾಲೆಗಳು ಏರುವುದು ಮೇಲಕೆ ಜನರು ಹುಟ್ಟಿರುವುದು ದುಃಖಕೆ.
- Verse 8: ನಾನು ನೀನಾಗಿದ್ದರೆ ದೇವರಿಗೆ ಮೊರೆಯಿಡುತ್ತಿದ್ದೆ ನನ್ನ ವಿಷಯವನು ಆತನ ಕೈಗೆ ಬಿಡುತ್ತಿದ್ದೆ.
- Verse 9: ದೇವರೆಸಗುತ್ತಾನೆ ಅಸಾಧ್ಯ ಅತಿಶಯಗಳನು ಅಸಂಖ್ಯವಾದ ಅದ್ಭುತಕಾರ್ಯಗಳನು.
- Verse 10: ಮಳೆಗರೆಯುತ್ತಾನೆ ಭೂಮಿಯ ಮೇಲೆ ನೀರೊದಗಿಸುತ್ತಾನೆ ಹೊಲಗದ್ದೆಗಳಿಗೆ.
- Verse 11: ಉನ್ನತಿಗೇರಿಸುತ್ತಾನೆ ದೀನದಲಿತರನು ಸುರಕ್ಷತೆಗೊಯ್ಯುತ್ತಾನೆ ದುಃಖಿತರನು.
- Verse 12: ಭಂಗಪಡಿಸುತ್ತಾನೆ ವಂಚಕರ ಉಪಾಯಗಳನು ಕೈಗೂಡಗೊಳಿಸನು ಅವರ ಪ್ರಯತ್ನಗಳನು.
- Verse 13: ನಿರರ್ಥಕಗೊಳಿಸುತ್ತಾನೆ ವಕ್ರಿಗಳ ತಂತ್ರೋಪಾಯಗಳನು ಸಿಕ್ಕಿಸಿಬಿಡುತ್ತಾನೆ ಅವರವರ ಯೋಜನೆಗಳಲ್ಲೆ ಜ್ಞಾನಿಗಳನು.
- Verse 14: ಕತ್ತಲು ಅಂಥವರನು ಸುತ್ತುವರೆದಿರುತ್ತದೆ ಹಾಡುಹಗಲಲ್ಲೆ ರಾತ್ರಿಯಲ್ಲೋ ಎಂಬಂತೆ ತಡಕಾಡುತ್ತಾರೆ ಅವರು ನಡುಹಗಲಲ್ಲೇ.
- Verse 15: ದಿಕ್ಕಿಲ್ಲದವರನು ರಕ್ಷಿಸುತ್ತಾನೆ ದೇವರು ಅಂಥವರ ಬಾಯಿಗತ್ತಿಯಿಂದ ಬಿಡಿಸುತ್ತಾನೆ ಅವರನ್ನು ಬಲಾಢ್ಯರ ಕೈಯಿಂದ.
- Verse 16: ಎಂತಲೇ ಬಡವನಿಗೆ ನಿರೀಕ್ಷೆ ಇರುತ್ತದೆ. ಅನ್ಯಾಯ ಆಡುವ ಬಾಯಿ ಮುಚ್ಚಿಕೊಳ್ಳುತ್ತದೆ.
- Verse 17: ದೇವರು ಯಾರನ್ನು ತಿದ್ದುತ್ತಾನೋ ಅವನು ಧನ್ಯನು ಅಲಕ್ಷ್ಯಮಾಡಬೇಡ ನೋಡು, ಸರ್ವಶಕ್ತನ ದಂಡನೆಯನು.
- Verse 18: ಗಾಯಮಾಡುವವನೂ ಗಾಯಕಟ್ಟುವವನೂ ದೇವರೇ ಹೊಡೆಯುವುದೂ, ಗುಣಪಡಿಸುವುದೂ ಆತನ ಕೈಯೇ.
- Verse 19: ಐದಾರು ಇಕ್ಕಟ್ಟುಗಳಿಂದ ನಿನ್ನನು ಬಿಡಿಸುವನು ಏಳನೆಯದು ಬಂದರೂ ನಿನ್ನನು ಕೇಡು ಮುಟ್ಟದು.
- Verse 20: ಬರಗಾಲದಲ್ಲಿ ಮರಣದಿಂದ ಕಾಪಾಡುವನು ಯುದ್ಧಕಾಲದಲ್ಲಿ ಕತ್ತಿಯಿಂದ ರಕ್ಷಿಸುವನು.
- Verse 21: ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ ಪರಿವಿನಾಶ ಬಂದರೂ ನೀನು ಹೆದರದಿರುವೆ.
- Verse 22: ಕ್ಷಾಮಡಾಮರದಲ್ಲೂ ನೀನು ನಗುತ್ತಿರುವೆ ಕಾಡುಮೃಗಗಳಿಗೂ ನೀನು ಅಂಜದಿರುವೆ.
- Verse 23: ಹೊಲದ ಕಲ್ಲುಬಂಡೆಗಳೊಡನೆ ಒಪ್ಪಂದಮಾಡಿಕೊಳ್ಳುವೆ ಆ ಕಾಡುಪ್ರಾಣಿಗಳೊಂದಿಗೆ ನೆಮ್ಮದಿಯಿಂದ ಬಾಳುವೆ.
- Verse 24: ನಿನ್ನ ಗುಡಾರಕ್ಕೆ ಗಂಡಾಂತರವಿಲ್ಲವೆಂಬ ನೆಮ್ಮದಿ ನಿನಗಿರುವುದು ನಿನ್ನ ಮಂದೆಯನು ನೀನು ನೋಡಬಂದಾಗ ಕೊರತೆ ಕಾಣಬರದು.
- Verse 25: ನಿನ್ನ ಸಂತತಿ ದೊಡ್ಡದೆಂಬುದನು ನೀನು ತಿಳಿಯುವೆ ಅದು ಇಳೆಯ ಹುಲ್ಲಿನಂತೆ ಹುಲುಸಾಗಿ ಬೆಳೆವುದನು ಕಾಣುವೆ.
- Verse 26: ಸುಗ್ಗಿಕಾಲದಲ್ಲಿ ಕಾಳುತೆನೆ ಕಣ ಸೇರುವಂತೆ ವೃದ್ಧಾಪ್ಯ ಕಳೆದ ಮೇಲೆ ನೀನು ಸಮಾಧಿ ಸೇರುವೆ.
- Verse 27: ಇದನು ನಾವು ಪರಿಶೋಧಿಸಿದ್ದೇವೆ, ಇದು ಯಥಾರ್ಥ ಇದನು ಕೇಳಿ ತಿಳಿದುಕೊ - ಇದು ನಿನಗೆ ಹಿತಕರ.”